ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs MUM: ಕೆಎಲ್‌ ರಾಹುಲ್‌ ಭರ್ಜರಿ ಶತಕ, ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!

Karnataka vs Mumbai: ಕೆಎಲ್‌ ರಾಹುಲ್‌ ಶತಕ ಹಾಗೂ ಸ್ಮರಣ್‌ ರವಿಚಂದ್ರನ್‌ ಅರ್ಧಶತಕದ ಬಲದಿಂದ ಕರ್ನಾಟಕ ತಂಡ, ಮುಂಬೈ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ 2025-26ರ ಸಾಲಿನ ಸರಣಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಈ ಪಂದ್ಯದಲ್ಲಿ ಶತಕ ಬಾರಿಸಿದ ಕೆಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೆಎಲ್‌ ರಾಹುಲ್‌ ಶತಕ; ರಣಜಿ ಟ್ರೋಫಿ ಸೆಮಿಫೈನಲ್‌ಗೇರಿದ ಕರ್ನಾಟಕ!

ಮುಂಬೈ ವಿರುದ್ಧ ಶತಕ ಸಿಡಿಸಿದ ಕೆಎಲ್‌ ರಾಹುಲ್‌. -

Profile
Ramesh Kote Feb 9, 2026 4:38 PM

ಮುಂಬೈ: ಕೆಎಲ್‌ ರಾಹುಲ್‌ ಶತಕ (KL Rahul) ಹಾಗೂ ಎಸ್‌ ರವಿಚಂದ್ರನ್‌ ಅರ್ಧಶತಕದ ಬಲದಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ (KAR vs MUM) ಮುಂಬೈ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಫೆಬ್ರವರಿ 15 ರಂದು ಉತ್ತರಾಖಂಡ ವಿರುದ್ಧ ಆರಂಭವಾಗಲಿರುವ ಮೊದಲನೇ ಸೆಮಿಫೈನಲ್‌ ಪಂದ್ಯದಲಿ ದೇವದತ್‌ ಪಡಿಕ್ಕಲ್‌ ನಾಯಕತ್ವದ ಕರ್ನಾಟಕ ತಂಡ ಕಾದಾಟ ನಡೆಸಲಿದೆ. ಅಂದ ಹಾಗೆ 182 ಎಸೆತಗಳಲ್ಲಿ 130 ರನ್‌ ಗಳಿಸಿ ತಂಡದ ಗೆಲುವಿಗೆ ನೆರವು ನೀಡಿದ ಟೀಮ್‌ ಇಂಡಿಯಾ ಬ್ಯಾಟರ್‌ ಕೆಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಫೆಬ್ರವರಿ 6 ರಿಂದ ಇಲ್ಲಿನ ಶರದ್‌ ಪವಾರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯುತ್ತಿದ್ದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡ ನೀಡಿದ್ದ 325 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಮಯಾಂಕ್‌ ಅಗರ್ವಾಲ್‌ ಅವರ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡಿತ್ತು. ಆದರೂ ಕೆಎಲ್‌ ರಾಹುಲ್‌ ಹಾಗೂ ಸ್ಮರಣ್‌ ರವಿಚಂದ್ರನ್‌ ಅವರ ಬ್ಯಾಟಿಂಗ್‌ ಬಲದಿಂದ ಪಂದ್ಯದ ನಾಲ್ಕನೇ ದಿನವೇ ಗೆದ್ದು ಬೀಗಿತು. ಆದರೆ, ತವರು ನೆಲದಲ್ಲಿಯೂ ಸೋಲು ಅನುಭವಿಸಿದ ಮುಂಬೈ ತಂಡ ಆಘಾತಕ್ಕೆ ಒಳಗಾಯಿತು.

ಭಾರತದ ವಿರುದ್ಧ ಆಡಲು 3 ಷರತ್ತು ವಿಧಿಸಿದ ಪಾಕಿಸ್ತಾನ! ಫೆ. 15 ಕ್ಕೆ ನಡೆಯುತ್ತಾ ಹೈವೋಲ್ಟೇಜ್‌ ಮ್ಯಾಚ್‌ ?

ಕರ್ನಾಟಕ ಪರ ಇನಿಂಗ್ಸ್‌ ಆರಂಭಿಸಿದ್ದ ಮಯಾಂಕ್‌ ಅಗರ್ವಾಲ್‌ ಕೇವಲ 3 ರನ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಕೆಎಲ್‌ ರಾಹುಲ್‌ ಮತ್ತು ದೇವದತ್‌ ಪಡಿಕ್ಕಲ್‌ 84 ರನ್‌ ಕಲೆ ಹಾಕಿದರು. 39 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ದೇವದತ್‌ ಪಡಿಕ್ಕಲ್‌, ತನುಷ್‌ ಕೋಟ್ಯಾನ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಕರುಣ್‌ ನಾಯರ್‌ ಕೇವಲ 13 ರನ್‌ಗೆ ಔಟ್‌ ಆದರು. ಆ ಮೂಲಕ ಕರ್ನಾಟಕ ತಂಡ 119 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕೆಎಲ್‌ ರಾಹುಲ್‌ 24ನೇ ಶತಕ

ಅದ್ಭುತವಾಗಿ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌, ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 182 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 130 ರನ್‌ಗಳನ್ನು ಕಲೆ ಹಾಕಿದರು. ಇದು ಇವರ ಪ್ರಥಮ ದರ್ಜೆ ಕ್ರಿಕೆಟ್‌ಗೆ 24ನೇ ಶತಕವಾಗಿದೆ. ಕರ್ನಾಟಕ ತಂಡವನ್ನು ಗೆಲುವಿನ ಸನಿಹ ತಂದ ಬಳಿಕ ಕೆಎಲ್‌ ರಾಹುಲ್‌ ತುಷಾರ್‌ ದೇಶಪಾಂಡೆಗೆ ವಿಕೆಟ್‌ ಒಪ್ಪಿಸಿದರು. ಕೆಎಲ್‌ ರಾಹುಲ್‌ ಔಟ್‌ ಆದ ಬಳಿಕ ಶ್ರೇಯಸ್‌ ಗೋಪಾಲ್‌ ಹಾಗೂ ಕೃತಿಕ್‌ ಕೃಷ್ಣನ್‌ ಕೂಡ ಬೇಗ ಔಟ್‌ ಆದರು.



ಸ್ಮರಣ್‌ ರವಿಚಂದ್ರನ್-ವಿದ್ಯಾದರ್‌ ಪಾಟೀಲ್‌ ಜುಗಲ್‌ಬಂದಿ

ಕೆಎಲ್‌ ರಾಹುಲ್‌ ಔಟ್‌ ಆದ ಬಳಿಕ ಸ್ಮರಣ್‌ ರವಿಚಂದ್ರನ್‌ ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 123 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 83 ರನ್‌ ಗಳಿಸಿ ಕರ್ನಾಟಕ ತಂಡವನ್ನು ಗೆಲ್ಲಿಸಿದರು. ಅಲ್ಲದೆ ಅಜೇಯ 30 ರನ್‌ ಗಳಿಸಿದ್ದ ವಿದ್ಯಾದರ್‌ ಪಾಟೀಲ್‌ ಅವರ ಜೊತೆಗೆ 40 ರನ್‌ ನಿರ್ನಾಯಕ ಜೊತೆಯಾಟವನ್ನು ಆಡಿದರು. ಅಂತಿಮವಾಗಿ ಕರ್ನಾಟಕ ತಂಡ, 73.4 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು.



ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಕರ್ನಾಟಕ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಪ್ರಥಮ ಇನಿಂಗ್ಸ್‌ನಲ್ಲಿ 120 ರನ್‌ಗೆ ಆಲ್‌ಔಟ್‌ ಆಗಿತ್ತು. ಬಳಿಕ ಕರ್ನಾಟಕ ತಂಡ 173 ರನ್‌ಗೆ ಆಲ್‌ಔಟ್‌ ಆಗಿತ್ತು. ಆದರೂ ಪ್ರಥಮ ಇನಿಂಗ್ಸ್‌ನಲ್ಲಿ ಕನ್ನಡಿಗರು ಅಲ್ಪ ಮುನ್ನಡೆಯನ್ನು ಪಡೆದಿದ್ದರು. ನಂತರ ಮುಂಬೈ ತಂಡ ಸ್ವಿತೀಯ ಇನಿಂಗ್ಸ್‌ನಲ್ಲಿ 377 ರನ್‌ ಗಳಿಸಿ ಕಮ್‌ಬ್ಯಾಕ್‌ ಮಾಡಿತ್ತು. ಆ ಮೂಲಕ ಕರ್ನಾಟಕ ತಂಡಕ್ಕೆ 325 ರನ್‌ಗಳ ಗುರಿಯನ್ನು ನೀಡಿತ್ತು.