ಬಿಜೆಪಿ ಶಾಸಕ ಗೋಲು ಶುಕ್ಲಾ ಪುತ್ರನ ಅದ್ಧೂರಿ ಮದುವೆಯ ವಿಡಿಯೊ ವೈರಲ್; ಪಟಾಕಿಗೆ ಖರ್ಚು ಮಾಡಿದ್ದು ಬರೋಬ್ಬರಿ 70 ಲಕ್ಷ ರೂ.!
BJP MLA Golu Shukla’s son wedding: ಮಧ್ಯ ಪ್ರದೇಶದ ಇಂದೋರ್ನ ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರನ ಅದ್ಧೂರಿ ವಿವಾಹ ಸಮಾರಂಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಮದುವೆಯಲ್ಲಿ ನಡೆದ ಭರ್ಜರಿ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆದಿದ್ದು, ಅದಕ್ಕಾಗಿ ಮಾಡಿದ ಖರ್ಚು ಕೇಳಿ ನೆಟ್ಟಿಗರು ದಂಗಾಗಿದ್ದು, ಟೀಕೆ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಡಿ. 16: ಮಧ್ಯ ಪ್ರದೇಶದ ಇಂದೋರ್ನ (Indore) ಬಿಜೆಪಿ ಶಾಸಕ ಗೋಲು ಶುಕ್ಲಾ (BJP MLA Golu Shukla) ಅವರ ಪುತ್ರ ಅಂಜನೇಶ್ ಶುಕ್ಲಾ (Anjanesh Shukla) ಅವರ ವಿವಾಹವು ಅದ್ಧೂರಿಯಾಗಿ ನೆರವೇರಿದೆ. ಅವರ ವಿವಾಹದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ವೈಭವದ ಮದುವೆಯ ದೃಶ್ಯ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ದಿಗ್ಭ್ರಮೆಗೊಂಡಿದ್ದಾರೆ. ವಿವಾಹ ಸ್ಥಳವು ಬಹಳ ವೈಭವದಿಂದ ಕೂಡಿತ್ತು. ಕೇವಲ ಪಟಾಕಿಗಳಿಗಾಗಿಯೇ ಸುಮಾರು 70 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.
ಮದುವೆ ಸ್ಥಳವನ್ನು ಬಹಳ ವಿಭಿನ್ನವಾಗಿ ಚಿತ್ರಿಸಲಾಗಿತ್ತು. ಆವರಣದಾದ್ಯಂತ ಹಿಂದೂ ದೇವತೆಗಳ ವಿಗ್ರಹಗಳನ್ನು ಪ್ರದರ್ಶಿಸಲಾಗಿತ್ತು. ಮುಖ್ಯ ವೇದಿಕೆಯಲ್ಲಿ ಈಶ್ವರನ ಪ್ರತಿಮೆಯನ್ನು ಪ್ರದರ್ಶಿಸಲಾಗಿದೆ. ಅದಕ್ಕೂ ಮೊದಲು ಅದ್ಧೂರಿಯಾಗಿ ಹೂಮಾಲೆ ಬದಲಾಯಿಸುವ ಸಮಾರಂಭ ನೆರವೇರಿತು.
ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿ; ಅನುಮಾನವೇ ಬಾರದಂತೆ ಒಂದು ವರ್ಷ ಸಂಸಾರ ಮಾಡಿದ ಮಹಿಳೆ
ತನ್ನ ವಿಶೇಷ ದಿನಕ್ಕೆ ಅಂಜನೇಶ್ ಕಸೂತಿ ಕೆಲಸದಿಂದ ಅಲಂಕರಿಸಲ್ಪಟ್ಟ ಶೇರ್ವಾನಿಯನ್ನು ಆರಿಸಿಕೊಂಡರೆ, ವಧುವು ಸಾಂಪ್ರದಾಯಿಕ ಸಿಮರ್ ಉಡುಪನ್ನು ಧರಿಸಿದ್ದಳು. ವಧುವಿನ ಉಡುಪನ್ನು ಫ್ಯಾಷನ್ ಡಿಸೈನರ್ಸ್ ರಿಂಪಲ್ ಮತ್ತು ಹರ್ಪ್ರೀತ್ ವಿನ್ಯಾಸಗೊಳಿಸಿದ್ದಾರೆ .
ಮದುವೆ ಸಂಭ್ರಮದ ಪ್ರಮುಖ ಅಂಶಗಳಲ್ಲಿ ವರ್ಮಾಲ ಸಮಾರಂಭದ ನಂತರ ನಡೆದ ದೊಡ್ಡ ಪ್ರಮಾಣದ ಪಟಾಕಿ ಪ್ರದರ್ಶನವೂ ಒಂದು. ರಾತ್ರಿ ವೇಳೆ ಆಕಾಶದಲ್ಲಿ ಪಟಾಕಿಗಳು ಬೆಳಗುತ್ತಿರುವುದನ್ನು ವೀಕ್ಷಿಸಲು ಅತಿಥಿಗಳು ಒಟ್ಟುಗೂಡಿದರು. ಆ ಕ್ಷಣವನ್ನು ವಿವಾಹದ ದೃಶ್ಯ ಕೇಂದ್ರಬಿಂದುವನ್ನಾಗಿ ಪರಿವರ್ತಿಸಿದರು. ಬರೋಬ್ಬರಿ 70 ಲಕ್ಷ ರೂ. ಪಟಾಕಿಗೆಂದೇ ಖರ್ಚು ಮಾಡಲಾಗಿದೆ ಎನ್ನಲಾಗಿದ್ದು, ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಲ್ಪಟ್ಟಿವೆ.
ಇಲ್ಲಿದೆ ಮದುವೆಯ ವಿಡಿಯೊ:
इन्दौर खजराना मंदिर गर्भगृह जो सभी के प्रवेश के लिय बंद होता है, वहां विधायक गोलू शुक्ला के पुत्र-बहू ने किया वरमाला समारोह। ... समरथ को नहीं दोष गोसाईं pic.twitter.com/HgVU1lDzwn
— SanjayGupta_Journalist (@sanjaygupta1304) December 15, 2025
ಮತ್ತೊಂದು ವಿಡಿಯೊದಲ್ಲಿ, ಇಂದೋರ್ನ ಖಜ್ರಾನಾ ದೇವಸ್ಥಾನದಲ್ಲಿ ಪ್ರಧಾನ ದೇವರ ಮುಂದೆ ವಧು-ವರರು ಹೂಮಾಲೆ ವಿನಿಮಯ ಮಾಡಿಕೊಳ್ಳುವುದನ್ನು ತೋರಿಸಲಾಗಿದೆ. ವಿವಾಹದ ವಿಡಿಯೊವನ್ನು ಅಂಜನೇಶ್ ಸಹೋದರ ರುದ್ರಾಕ್ಷ ಶುಕ್ಲಾ ಹಂಚಿಕೊಂಡಿದ್ದಾರೆ. ಅವರ ಕೆಲವು ಅನುಯಾಯಿಗಳು ದಂಪತಿಗೆ ಅಭಿನಂದನೆ ಸಲ್ಲಿಸಿದರೆ, ಇನ್ನು ಕೆಲವರು ಈ ಅದ್ಧೂರಿ ಕಾರ್ಯಕ್ರಮವನ್ನು ಟೀಕಿಸಿ, ಸಾರ್ವಜನಿಕ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಪಟಾಕಿ ಸಿಡಿಸಲೆಂದು ಖರ್ಚು ಮಾಡಲಾದ 70 ಲಕ್ಷ ರೂ.ಗಳು ತೆರಿಗೆದಾರರ ಹಣವಾಗಿತ್ತು ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಸಣ್ಣ ಉದ್ಯಮಿಗಳ ಮನೆ ಮೇಲೆ ಮಾತ್ರ ಯಾಕೆ ದಾಳಿಯಾಗುತ್ತೆ? ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇವರ ಮೇಲೆ ಯಾಕೆ ದಾಳಿ ಮಾಡಲ್ಲ ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ನ ಹಲವು ಮುಖಂಡರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು.