ಮೀನುಗಾರಿಕೆ ನಡೆಸುತ್ತಿದ್ದಾಗ ಗಂಟಲಿನಲ್ಲಿ ಜೀವಂತ ಮೀನು ಸಿಲುಕಿ ವ್ಯಕ್ತಿ ದುರ್ಮರಣ
fish got stuck in throat: ಮೀನು ಹಿಡಿಯುತ್ತಿದ್ದಾಗ ಜೀವಂತ ಮೀನೊಂದು ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೀನು ಹಿಡಿಯಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹಿಡಿದಿದ್ದ ಮೀನು ಕೈತಪ್ಪುತ್ತೆ ಎಂದು ಬಾಯಲ್ಲಿ ಇಟ್ಟುಕೊಂಡಿದ್ದ.
ಸಾಂದರ್ಭಿಕ ಚಿತ್ರ -
ಭುವನೇಶ್ವರ, ಏ.4: ಮೀನು (fish) ಹಿಡಿಯುತ್ತಿದ್ದಾಗ ಜೀವಂತ ಮೀನೊಂದು ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ (Odisha) ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಬಂಗ್ರಿಪೋಸಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಘಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅಬಿನಾಶ್ ಬಿಜುಲಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಅಬಿನಾಶ್ ಬೆಳಿಗ್ಗೆ ಹಳ್ಳಿಯ ಕೊಳದಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ 'ಕಾವ್' (Indian Koi) ಮೀನು ಸಿಕ್ಕಿತು. ಮೀನು ಜಾರಿಬೀಳುವುದನ್ನು ತಡೆಯುವುದಕ್ಕಾಗಿ, ಅವನು ಜೀವಂತ ಮೀನನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡಿದ್ದಾನೆ.
ಆದರೆ, ಮೀನು ಹೊರಳಾಡುತ್ತಾ ಅವನ ಗಂಟಲಿನೊಳಗೆ ಸಿಲುಕಿಕೊಂಡಿದೆ. ಇದರಿಂದ ಅಬಿನಾಶ್ಗೆ ಉಸಿರುಗಟ್ಟಿದೆ. ಮೀನನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಅಬಿನಾಶ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಡಿಜಿಬಂಧದಲ್ಲಿ ಮೀನು ಹಿಡಿಯುತ್ತಿದ್ದಾಗ ನನ್ನ ಸೋದರಳಿಯ ಗಂಟಲಿನಲ್ಲಿ ಆಕಸ್ಮಿಕವಾಗಿ 'ಕಾವ್' ಮೀನು ಸಿಲುಕಿಕೊಂಡಿತು. ನಾವು ತಕ್ಷಣ ಅವನನ್ನು ಬಂಗಿರಿಪೋಶಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದೆವು. ಅಲ್ಲಿ ವೈದ್ಯರು ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು. ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಮೃತನ ಮಾವ ಆರೋಪಿಸಿದರು.
ಮದುವೆಯ ಉಡುಪಿನಲ್ಲೇ ನೇಣಿಗೆ ಶರಣಾದ ನವ ದಂಪತಿ
ಮದುವೆಯ ಉಡುಪಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಏಪ್ರಿಲ್ 1ರ ರಾತ್ರಿ ನಡೆದಿದೆ. ಮೃತ ಮಹಿಳೆ ಸುಮಾರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಷಯ ಮರಣೋತ್ತರ ಪರೀಕ್ಷೆಯ ವೇಳೆ ಬಯಲಾಗಿದೆ.
ಮೃತರನ್ನು 22 ವರ್ಷದ ರಾಜೇಂದ್ರ (ಗೋಲು) ಮತ್ತು ಅವರ ಪತ್ನಿ 21 ವರ್ಷದ ಕಾಜಲ್ ಪಟೇಲ್ ಎಂದು ಗುರುತಿಸಲಾಗಿದೆ. ಕಾಜಲ್ ಮದುವೆಯ ಸೀರೆಯನ್ನು ಧರಿಸಿದ್ದರೆ, ರಾಜೇಂದ್ರ ವರನ ಸೂಟ್ ಧರಿಸಿದ್ದರು. ಮನೆಯ ಫ್ಯಾನ್ಗೆ ಒಂದೇ ಹಗ್ಗದಲ್ಲಿ ಇಬ್ಬರೂ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಅತ್ಯಂತ ಸಂತೋಷವಾಗಿ ಜೀವನ ನಡೆಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬುಧವಾರ ರಾತ್ರಿ ಎಂದಿನಂತೆ ಕುಟುಂಬದವರೊಂದಿಗೆ ರಾತ್ರಿ ಊಟ ಮುಗಿಸಿದ ದಂಪತಿ ತಮ್ಮ ಕೋಣೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಅವರು ಹೊರಬಾರದಿದ್ದಾಗ, ಅನುಮಾನಗೊಂಡ ರಾಜೇಂದ್ರನ ತಂದೆ ಕೋಣೆಯ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪಂಚನಾಮೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರೇಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.