Yagati Raghu Naadig Column: ಕಳ್ಳಬೆಕ್ಕಿನ ಕಥಾನಕದಲ್ಲಿ ಕಾಲೂರಿದ ಖಾದಿ-ಖಾಕಿ...!
“ನಮ್ಮ ಸಮಾಜದಲ್ಲಿ, ನಿಯೋಜಿತ ಕಾರ್ಯಭಾರದ ನೆರವೇರಿಕೆಗೆಂದು ಖಾಕಿ, ಖಾದಿ ಮತ್ತು ಕಾವಿ ವಸ್ತ್ರಗಳನ್ನು ಆಯ್ಕೆ ಮಾಡಿಕೊಂಡವರು ಭಾರಿ ಹುಷಾರಾಗಿರಬೇಕು; ಇವು ನಿರ್ದಿಷ್ಟ ಸ್ಥಾನಮಾನ ಅಥವಾ ಅಧಿಕಾರ ಭಾಗ್ಯವನ್ನು ದಕ್ಕಿಸಿಕೊಡುವ ದಿರಿಸುಗಳು ಎಂದೇ ಬಹುತೇಕರು ಭಾವಿಸಿದ್ದಾರೆ. ಒಂದು ಮಟ್ಟಕ್ಕೆ ಆ ಗ್ರಹಿಕೆ ನಿಜವೂ ಹೌದು.


ರಸದೌತಣ
naadigru@gmail.com
(ಭಾಗ-6)
ಮನೆಯ ಹಿತ್ತಲಲ್ಲಿ ಹಾಸಿದ್ದ ಜಮಖಾನದ ಮೇಲೆ ಶಿಷ್ಯರೊಂದಿಗೆ ನಿರಾಳರಾಗಿ ಕೂತಿದ್ದು ಬಿಸಿಬಿಸಿ ಪಕೋಡಾದೊಂದಿಗೆ ಕಾಫಿಯನ್ನು ಸವಿಯುತ್ತಿದ್ದ ಅವಧೂತರು, ನಡುನಡುವೆ ಅರೆಕ್ಷಣ ಕಣ್ಣು ಮುಚ್ಚಿಕೊಂಡು ಏನನ್ನೋ ಧೇನಿಸುತ್ತಿದ್ದರು, ಕೆಲವೊಮ್ಮೆ ಅಸ್ಪಷ್ಟವಾಗಿ ಗೊಣಗುತ್ತಾ ಬಲಗೈ ಬೆರಳುಗಳನ್ನು ವಿಶಿಷ್ಟವಾಗಿ ಆಡಿಸುತ್ತಿದ್ದರು. ನೋಡಿದವರಿಗೆ ‘ಅವಧೂತರು ಮಾತಾಡುತ್ತಲೇ ಕೋಳಿನಿದ್ರೆಗೆ ಜಾರಿಕೊಂಡರಾ, ಅವರೀಗ ಕನವರಿಸುತ್ತಿದ್ದಾರಾ?’ ಅನಿಸುವಂತಿತ್ತು ಆ ಭಂಗಿ. ವಾಡಿಕೆ ‘ದೃಷ್ಟಿಕೋನ’ದಲ್ಲಿ ನೋಡಿದಾಗ ಯಾರಿಗಾದರೂ ಹಾಗೆ ಅನಿಸುವುದು ಸಹಜವೂ ಆಗಿತ್ತು. ಆದರೆ, ಅವಧೂತರು ಹಿತ್ತಲಲ್ಲಿ ಜಮೆಯಾಗಿದ್ದ ತಮ್ಮ ಶಿಷ್ಯರೊಂದಿಗೆ ಸರಸ-ಸಂಭಾಷಣೆ ನಡೆಸುತ್ತಿದ್ದುದರ ಜತೆಜತೆಗೇ, ದೂರದ ಅದ್ಯಾವುದೋ ಅಜ್ಞಾತ ನೆಲೆಯಿಂದ ಹೊಮ್ಮುತ್ತಿದ್ದ ಅಳಲು-ಅಹವಾಲುಗಳಿಗೂ ಕಿವಿಯಾಗಿದ್ದರು. ‘ನೀವು ಅಲವತ್ತುಕೊಂಡ ಸಮಸ್ಯೆ ನನ್ನ ಕಿವಿಗೆ ಬಿದ್ದಿದೆ; ಅದರ ಸಂಬಂಧವಾಗಿ ಸದ್ಯದಲ್ಲೇ ಪರಿಹಾರೋಪಾಯ ಸಿಗಲಿದೆ’ ಎಂಬುದರ ದ್ಯೋತಕ ವಾಗಿ ಅವಧೂತರು ‘ಟೆಲಿಪತಿ’ ಮೂಲಕ ಸಂದೇಶವನ್ನು ಸಂತ್ರಸ್ತರಿಗೆ ರವಾನಿಸುವಾಗ ಹಾಗೆ ಕಣ್ಣು ಮುಚ್ಚಿಕೊಳ್ಳುತ್ತಿದ್ದರು, ಅಸ್ಪಷ್ಟವಾಗಿ ಗೊಣಗುತ್ತಾ ಕೈಬೆರಳುಗಳನ್ನು ಆಡಿಸುತ್ತಿದ್ದರು. ಅವಧೂತ ರೊಂದಿಗೆ ಸಾಕಷ್ಟು ಪಳಗಿದ್ದ ಶಿಷ್ಯರಿಗೆ ಇದು ವಾಡಿಕೆಯ ದೃಶ್ಯವಾಗಿದ್ದರೆ, ಹೊಸದಾಗಿ ಅವರ ತೆಕ್ಕೆಗೆ ಬಂದಿದ್ದವರಿಗೆ ಅದು ಕೌತುಕದ ಮೂಟೆಯಾಗಿ ಗೋಚರಿಸುತ್ತಿತ್ತು.
ಕೆಲವು ಕ್ಷಣದ ನಂತರ, “ಆಯಿತು... ಆಯಿತು. ಚಿಂತೆ ಬೇಡ, ಎಲ್ಲ ಸರಿಹೋಗುತ್ತೆ" ಎಂದು ಮೆಲುದನಿಯಲ್ಲಿ ಹೇಳಿ ಕಣ್ಣುಗಳನ್ನು ತೆರೆದ ಅವಧೂತರು, ಕಾಫಿಯ ಲೋಟವನ್ನು ಜಮಖಾನದ ಮೇಲಿಟ್ಟು, ತಮ್ಮ ಶಿಷ್ಯವೃಂದಕ್ಕೆ ಹೊಸದಾಗಿ ಸೇರಿಕೊಂಡಿದ್ದ ಹದಿಹರೆಯದ ಹುಡುಗನೆಡೆಗೆ ನೋಡಿ, “ಏನು ರಾಯರೇ? ‘ಈ ತಾತಪ್ಪ ಒಂಥರಾ ಎಡವಟ್ಟು ಆಸಾಮಿ’ ಅಂತ ಮನಸ್ಸಿನಲ್ಲೇ ಅಂದ್ಕೊಂಡ್ರಾ?" ಎಂದು ಹೇಳುತ್ತಾ ಹುಬ್ಬು ಕುಣಿಸಿದರು. ಅವಧೂತರ ಅದುವರೆಗಿನ ಚರ್ಯೆಯನ್ನು ಕಂಡು, ಮನದಲ್ಲಿ ಹಾಗೇ ಕಲ್ಪಿಸಿಕೊಂಡಿದ್ದ ಆ ಹೊಸಶಿಷ್ಯರು ಈ ಮಾತಿಗೆ ವಿಚಲಿತರಾಗಿದ್ದರ ಜತೆಗೆ ನಾಚಿಕೆಯಿಂದ ತಲೆ ತಗ್ಗಿಸಿದರು.
ಇದನ್ನೂ ಓದಿ: Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !
ಅದನ್ನು ಕಂಡ ಅವಧೂತರು “ಸಂದೇಹದ ಗಂಟನ್ನು ಬಿಚ್ಚದೆ ಹಾಗೇ ಬಿಟ್ಟರೆ ಅದು ಕಗ್ಗಂಟಾಗಿ ನಿಮ್ಮ ಇಡೀ ಮನಸ್ಸೇ ‘ಗೊಂದಲಪುರ’ ಆಗಿಬಿಡುತ್ತಲ್ವೇ ಸ್ವಾಮೀ? ಅದೇನೋ ಕೇಳಬೇಕು ಅಂದ್ಕೊಂಡಿದ್ರಲ್ಲಾ, ಕೇಳಿ" ಎಂದರು.
ಇದಕ್ಕೆ ಆ ಹೊಸ ಶಿಷ್ಯರು, “ಇಲ್ಲಿ ನಮ್ಮೊಂದಿಗೆ ಮಾತಾಡುತ್ತಲೇ, ನೀವು ಅರೆಕ್ಷಣ ಕಣ್ಣು ಮುಚ್ಚಿ ಅದ್ಯಾರೊಂದಿಗೋ ಮಾತಾಡಿದಂತೆ ಇತ್ತಲ್ಲಾ ಗುರುಗಳೇ? ಅದೇನು ಮತ್ತು ಅದು ಹೇಗೆ ಅಂತ ಕೇಳಬಹುದಾ?" ಎಂದು ಪ್ರಶ್ನಿಸಿದರು, ಧೈರ್ಯಮಾಡಿ.
ಆಗ ಅವಧೂತರು, “ಅಯ್ಯಾ, ನಾನಿಲ್ಲಿ ನಿಮ್ಮೊಂದಿಗೆ ಇರುವುದೂ ಸತ್ಯವೇ. ಒಂದೇ ಕಾಲಕ್ಕೆ ಹತ್ತಾರು ಕಡೆ ಯಾನ ಮಾಡಿಬರುವುದೂ ನಿಜವೇ. ಸಾಧನೆಗೆ ಇಳಿದು ಸಿದ್ಧಿಸಿಕೊಂಡವರಿಗೆ ಇವೆಲ್ಲಾ ಕಷ್ಟವೇ ಅಲ್ಲ, ಪವಾಡಗಳು ಅಂಗೈಯಲ್ಲಿನ ನೆಲ್ಲಿಕಾಯಿ ಆಗಿಬಿಡುತ್ತವೆ. ಆದರೆ, ಸಾಧಕ ಅಷ್ಟಕ್ಕೇ ಸೀಮಿತನಾಗಿ ತೃಪ್ತನಾಗಿ ಲೋಕಪ್ರಸಿದ್ಧಿಯ ಮತ್ತು ಪ್ರಚಾರದ ಹುಕಿಗೆ ಬಿದ್ದುಬಿಟ್ಟರೆ, ಅವನ ಸಾಧನೆಯೂ ಅಲ್ಲಿಗೇ ನಿಂತು ಬಿಡುತ್ತದೆ. ಹೀಗಾಗಿ, ಸಾಧನೆಯ ಪಥದಲ್ಲಿ ಸಿಗುವ ‘ಪವಾಡ ಮಾಡುವ ಸಾಮರ್ಥ್ಯ’, ಅಣಿಮಾ-ಗರಿಮಾ-ಲಮಾ ಮುಂತಾದ ಅಷ್ಟಸಿದ್ಧಿಗಳ ಲಭ್ಯತೆ ಇವನ್ನೆಲ್ಲಾ, ಅಂತಿಮ ಸತ್ಯದೆಡೆಗಿನ ಪಯಣದ ಮಾರ್ಗ ಮಧ್ಯದಲ್ಲಿನ ‘ಆಕರ್ಷಣೆಗಳು’ ಅಥವಾ ‘ಪ್ರಲೋಭನೆ ಗಳು’ ಎಂಬ ಪರಿಗಣಿಸಿ, ಅವನ್ನು ಅಲ್ಲಲ್ಲೇ ಬಿಟ್ಟು ಮುಂದೆ ಸಾಗಬೇಕೇ ವಿನಾ, ಅವನ್ನೇ ‘ಅಂತಿಮ ನಿಲ್ದಾಣ’ ಎಂದು ಪರಿಗಣಿಸಿಬಿಡಬಾರದು. ಹಾಗಂತ, ಪವಾಡ ಎಸಗುವ ಸಾಮರ್ಥ್ಯ, ಏಕಕಾಲದಲ್ಲಿ ಹತ್ತಾರು ಕಡೆ ಪ್ರಕಟವಾಗುವ ಸಿದ್ಧಿ ಇತ್ಯಾದಿಗಳೆಲ್ಲಾ ವರ್ಜ್ಯ ಅಂತ ನಾನು ಹೇಳುತ್ತಿಲ್ಲ; ಲವಲೇಶ ಸ್ವಾರ್ಥವಿಲ್ಲದೆ ಮನುಕುಲದ ಒಳಿತಿಗಾಗಿ ಮಾತ್ರವೇ ಅವನ್ನು ಯಥೋಚಿತ ಪ್ರಮಾಣದಲ್ಲಿ ಬಳಸಿ, ನಂತರ ಅದರಿಂದ ಹೊರಗೆ ಬಂದುಬಿಡಬೇಕು..." ಎಂದು ಹೇಳಿ ಅರೆಕ್ಷಣ ನಿಲ್ಲಿಸಿದರು.
ಇದನ್ನು ಆಲಿಸುತ್ತಿದ್ದ ಹೊಸಶಿಷ್ಯರು ನಿಬ್ಬೆರಗಾಗಿ ನೋಡುತ್ತಿದ್ದರು. ಆಗ ನಸುನಕ್ಕ ಅವಧೂತರು ಅವರ ಅರಿವಿಗೆ ಸಾಣೆ ಹಿಡಿಯುವ ಯತ್ನವಾಗಿ, ತಮ್ಮ ಹಳೆಯ ಶಿಷ್ಯರೊಬ್ಬರಿಗೆ ಇಶಾರೆ ಮಾಡಿ, “ಸ್ವಾಮೀ, ಪಟ್ಟಣದ ಆ ಅಡಕೆ ಮಂಡಿ ಶೆಟ್ಟರಿಗೆ ಕರೆ ಮಾಡಿ, ‘ನಿಮ್ಮ ಮನೆಯಲ್ಲಿ ಈಗ ಏನು ನಡೀತಿದೆ?’ ಎಂದಷ್ಟೇ ಕೇಳಿನೋಡಿ ಒಮ್ಮೆ" ಎಂದರು ಹಾಗೂ ಮೊಬೈಲ್ನ ಸ್ಪೀಕರ್ ಆನ್ ಮಾಡುವಂತೆಯೂ ಸೂಚಿಸಿದರು. ಹಾವಾಡಿಗನ ಪುಂಗಿಯಾಟಕ್ಕೆ ಹೆಡೆಯಾಡಿಸುವ ಹಾವಿನಂತೆ ಯೇ ತಲೆಯಾಡಿಸಿದ ಆ ಶಿಷ್ಯರು ಹಾಗೇ ಪ್ರಶ್ನಿಸಿದಾಗ, ಆ ಕಡೆಯಿಂದ ಮಾತನಾಡಿದ ಶೆಟ್ಟರು, “ಅಪರೂಪಕ್ಕೆಂಬಂತೆ ಅವಧೂತರು ಮನೆಗೆ ಬಂದ್ರು ಸ್ವಾಮೀ. ಈಗಷ್ಟೇ ಪಾದಪೂಜೆ ಮುಗೀತು. ಎಲ್ಲರೂ ಬಾಳೆಹಣ್ಣಿನ ರಸಾಯನ, ಹೆಸರುಕಾಳು ಕೋಸಂಬರಿ ತಿಂತಾ ಇದ್ದೀವಿ. ಅವಧೂತರಿಗೆ ಫೋನ್ ಕೊಡಬೇಕಾ?" ಎಂದು ಉತ್ತರಿಸಿದರು...! ಈ ಮಾತಿಗೆ ಹಳೆಯ ಶಿಷ್ಯರು, “ಬೇಡ ಬೇಡ, ಸುಮ್ಮನೇ ಕೇಳಿದೆ" ಎಂದಷ್ಟೇ ಹೇಳಿ ಕರೆಯನ್ನು ತುಂಡರಿಸಿದರು.
ಅವಧೂತರ ಸಿದ್ಧಿ-ಸಾಧನೆ, ಅವುಗಳ ಸಾಧ್ಯತೆಗಳ ಕುರಿತಾಗಿ ನಿಬ್ಬೆರಗಾಗಿ ಪ್ರಶ್ನಿಸಿದ್ದ ಹೊಸಶಿಷ್ಯರು, ಶೆಟ್ಟರ ಮಾತು ಕೇಳಿ ಮತ್ತಷ್ಟು ರೋಮಾಂಚನಗೊಂಡರು. ನಿಜದ ಅರಿವು ಮೂಡಿಸುವ ಗುರುವನ್ನು ಹುಡುಕಿಕೊಂಡು ಬಂದಿರುವ ತಮಗೆ ಒಬ್ಬ ‘ಮಹಾಗುರು’ವಿನ, ಅಸೀಮ ಸಾಧಕನ ಸಾಂಗತ್ಯವೇ ಸಿಕ್ಕಿ ಬಿಟ್ಟಿದೆ, ಸತ್ಯದ ಸಾಕ್ಷಾತ್ಕಾರ ಆಗುವ ಹಾದಿಯಲ್ಲಿದೆ ಎಂಬ ಅರಿವಾಗಿ ಆದ ರೋಮಾಂಚನವದು. ಆ ಕ್ಷಣದಲ್ಲಿ ಅವಧೂತರೆಡೆಗೆ ನಮಸ್ಕಾರದ ಮುದ್ರೆಯನ್ನು ತೋರಿದ್ದ ಹೊಸಶಿಷ್ಯರ ಕಂಗಳಲ್ಲಿ ಅವರಿಗೇ ಅರಿವಾಗದಂತೆ ‘ದಳದಳ’ ನೀರು ಸುರಿಯುತ್ತಿತ್ತು...
ಆ ಹೊಸಶಿಷ್ಯರ ಕಣ್ಣೀರು ಒರೆಸಿ ಶಿರವನ್ನು ಒಮ್ಮೆ ಸವರಿದ ಅವಧೂತರು, “ನಾನೀಗ ನಿಮ್ಮೆದುರು ಇರುವುದೂ ನಿಜವೇ, ಪಟ್ಟಣದ ಅಡಕೆ ಮಂಡಿಯ ಶೆಟ್ಟರ ಮನೆಯಲ್ಲಿ ಪಾದಪೂಜೆ ಮಾಡಿಸಿ ಕೊಂಡಿದ್ದೂ ನಿಜವೇ, ಅಂತೆಯೇ ಕಾಫಿ ಕುಡಿಯುವಾಗ ಅಪ್ಪಳಿಸಿದ ಅಮಾಯಕಿಯೊಬ್ಬಳ ಅಹವಾಲಿಗೆ ಕಿವಿಯಾಗಿ ‘ಆಯಿತು... ಆಯಿತು. ಚಿಂತೆ ಬೇಡ, ಎಲ್ಲ ಸರಿಹೋಗುತ್ತೆ’ ಅಂತ ಸಾಂತ್ವನ ಹೇಳಿದ್ದೂ ನಿಜವೇ! ಸಾಧನೆಯಿಂದ ದಕ್ಕುವ ಹಲವು ಸಿದ್ಧಿಗಳಲ್ಲಿ ಇಂಥವೆಲ್ಲ ಸೇರಿರುತ್ತವೆ ಕಣ್ರಯ್ಯಾ. ಹಾಗಂತ ಅವನ್ನು ಪರರ ಹಿತಕ್ಕೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಅವುಗಳ ತೆಕ್ಕೆಯಿಂದ ಆಚೆಗೆ ಜಿಗಿದುಬಿಡಬೇಕೇ ವಿನಾ, ಅವಕ್ಕೇ ಅಂಟಿಕೊಂಡಿರಬಾರದು. ಕಾಲಿನ ಯಾವುದೋ ಭಾಗದಲ್ಲಿ ಇರುವೆ ಕಚ್ಚಿದಾಗ ಒಂದಿಡೀ ದೇಹಕ್ಕೇ ಅದರ ಅರಿವಾಗುತ್ತದೆ, ನಮ್ಮ ಕೈ ಅಪ್ರಯತ್ನವಾಗಿ ಆ ಕಚ್ಚಿದ ಜಾಗಕ್ಕೆ ಸಾಗಿ ಇರುವೆಯನ್ನು ಅಲ್ಲಿಂದ ನಿವಾರಿಸಲು ಯತ್ನಿಸುತ್ತದೆ ಅಲ್ಲವೇ? ಹಾಗೆಯೇ ಸಾಧನೆಯಿಂದ ಸಿದ್ಧಿಯನ್ನು ದಕ್ಕಿಸಿಕೊಂಡವರಿಗೆ, ತಮ್ಮನ್ನು ನೆಚ್ಚಿರುವ ಯಾರೇ ಆಗಲಿ ಜಗತ್ತಿನ ಯಾವುದೇ ಮೂಲೆಯಿಂದ ಆರ್ತರಾಗಿ ಪ್ರಾರ್ಥಿಸಿದರೂ ಆ ದನಿ ಕೇಳುತ್ತದೆ. ಪಟ್ಟುಹಿಡಿದು ಏಕಾಗ್ರತೆಯಿಂದ ಸಾಧನೆಗೆ ಇಳಿದರೆ ಇವನ್ನೆಲ್ಲಾ ನೀವೂ ಹಂತಹಂತವಾಗಿ ಕಲಿಯ ಬಲ್ಲಿರಿ..." ಎಂದು ಹೇಳಿ ನಿಲ್ಲಿಸಿದರು.
ಅದುವರೆಗೂ, ಅವಧೂತರ ಮಹಿಮೆಯನ್ನು ಅಷ್ಟಾಗಿ ಅರಿಯದಿದ್ದ ಆ ಹೊಸಶಿಷ್ಯರಲ್ಲಿ ಸಾರ್ಥಕಭಾವ ಮೂಡಿತ್ತು. ಆ ಭಾವದಲ್ಲಿ ತೇಲುತ್ತಲೇ ಆಲಾಪನೆಗೆ ಶುರುವಿಟ್ಟುಕೊಂಡ ಅವರು, “ಮುಚ್ಚುಮರೆ ಇಲ್ಲದೆ ನಿನ್ನ ಮುಂದೆಲ್ಲವನು, ಬಿಚ್ಚಿಡುವೆ ಓ ಗುರುವೇ ಅಂತರಾತ್ಮ | ಪಾಪವಿದೆ ಪುಣ್ಯವಿದೆ, ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ |" ಎಂಬ ಗೀತೆಯನ್ನು ಮನದುಂಬಿ ಹಾಡಿದರು. ಹಾಡು ಮುಗಿಯುವ ಹೊತ್ತಿಗೆ ಅವಧೂತರ ತಾಯಿ ಹಿತ್ತಲಿಗೆ ಬಂದು ನಿಂತಿದ್ದರು. ಅವರನ್ನು ಎಲ್ಲರೂ ‘ಗುರುಮಾತೆ’ ಅಂತಲೇ ಕರೆಯುತ್ತಿದ್ದುದು...
ಕಣ್ಣುಮುಚ್ಚಿಕೊಂಡು ತಲೆದೂಗುತ್ತಾ ಹಾಡನ್ನು ಸಂಪೂರ್ಣವಾಗಿ ಆಸ್ವಾದಿಸಿದ ಅವಧೂತರು ತಮ್ಮ ತಾಯಿಯನ್ನು ಕಾಣುತ್ತಲೇ ಅವರ ಪಾದಗಳಿಗೆ ಎರಗಿದರು. ಅದನ್ನು ಕಂಡ ಶಿಷ್ಯರ ಮನದಲ್ಲಿ ‘ಅಧ್ಯಾತ್ಮ ಸಾಮ್ರಾಜ್ಯಕ್ಕೆ ಸಾಮ್ರಾಟನಾದರೂ, ತಾಯಿಗೆ ಮಗನೇ ಅಲ್ಲವೇ?’ ಎಂಬ ಮಿಂಚು ಹಾದುಹೋಯಿತು...
ಗುರುಮಾತೆ ಬರುವಾಗ ಸುಮ್ಮನೆ ಬಂದಿರಲಿಲ್ಲ, ಜತೆಯಲ್ಲಿ ಹಿತ್ತಾಳೆ ಕೊಳದಪ್ಪಲೆಯನ್ನೂ ತಂದಿದ್ದರು. ಅದರಲ್ಲಿ ಏನಿರುತ್ತದೆ ಎಂಬುದು ಹಳಬರಿಗೆ ಗೊತ್ತಿತ್ತು. ಅಂದು ಹುಣ್ಣಿಮೆಯ ರಾತ್ರಿಯಾಗಿದ್ದರಿಂದ ಅವಧೂತರೂ ಸೇರಿದಂತೆ ಎಲ್ಲ ಶಿಷ್ಯರಿಗೂ ಅಂದು ಗುರುಮಾತೆಯ ಕೈತುತ್ತಿನ ರೂಪದಲ್ಲಿ ‘ಬೆಳದಿಂಗಳ ಊಟ’ವನ್ನು ಸವಿಯುವ ಸೌಭಾಗ್ಯ. ಸಾಕ್ಷಾತ್ ಅನ್ನಪೂರ್ಣೆ ಯಿಂದಲೇ ಹಾಗೆ ತುತ್ತು ಉಣಿಸಿಕೊಂಡ ಸಂತೃಪ್ತಿ ಎಲ್ಲರಿಗೂ...
ಊಟದ ನಂತರ ಹಿತ್ತಲಲ್ಲೇ ಒಂದಿಷ್ಟು ಹೊತ್ತು ಸುತ್ತು ಹಾಕಿದ ಅವಧೂತರು, ನಂತರ ಜಮಖಾನದ ಮೇಲೆ ನಿರಾಳವಾಗಿ ಕೈಕಾಲು ಚಾಚಿಕೊಳ್ಳುವುದಕ್ಕೆ ಸಜ್ಜಾದರು. ಅದೇ ಕ್ಷಣಕ್ಕಾಗಿ ಕಾತರಿಸುತ್ತಿದ್ದ ಶಿಷ್ಯರೂ ಅವರ ಸುತ್ತ ಕೂತರು. ಆ ‘ಬೆಳದಿಂಗಳ ರಾತ್ರಿ’ಯಲ್ಲಿ ಶಾರದೆ ಎಂಬ ‘ಬೆಳದಿಂಗಳ ಬಾಲೆ’ಯ ಕಥೆಯನ್ನು ಮುಂದುವರಿಸಲು ಅವಧೂತರು ಶುರುವಿಟ್ಟುಕೊಂಡರು...
“ನಮ್ಮ ಸಮಾಜದಲ್ಲಿ, ನಿಯೋಜಿತ ಕಾರ್ಯಭಾರದ ನೆರವೇರಿಕೆಗೆಂದು ಖಾಕಿ, ಖಾದಿ ಮತ್ತು ಕಾವಿ ವಸ್ತ್ರಗಳನ್ನು ಆಯ್ಕೆ ಮಾಡಿಕೊಂಡವರು ಭಾರಿ ಹುಷಾರಾಗಿರಬೇಕು; ಇವು ನಿರ್ದಿಷ್ಟ ಸ್ಥಾನಮಾನ ಅಥವಾ ಅಧಿಕಾರ ಭಾಗ್ಯವನ್ನು ದಕ್ಕಿಸಿಕೊಡುವ ದಿರಿಸುಗಳು ಎಂದೇ ಬಹುತೇಕರು ಭಾವಿಸಿದ್ದಾರೆ. ಒಂದು ಮಟ್ಟಕ್ಕೆ ಆ ಗ್ರಹಿಕೆ ನಿಜವೂ ಹೌದು. ಆದರೆ ಅದಕ್ಕಿಂತ ಮಿಗಿಲಾಗಿ ಈ ಮೂರೂ ದಿರಿಸುಗಳು ಸಮವಸ್ತ್ರಗಳಷ್ಟೇ ಅಲ್ಲ, ‘ಸೆರಗಿನ ಕೆಂಡಗಳೂ’ ಹೌದು ಎಂಬ ಅಪ್ರಿಯ ಸತ್ಯವನ್ನು ಸಂಜೆ ಹೇಳಿದ್ದೆ ನಲ್ಲವೇ? ಅಮಾಯಕಿ ಶಾರದೆಯ ಕಥನದಲ್ಲಿ ‘ಕಾವಿ-ಖಾಕಿ-ಖಾದಿ’ ಈ ಮೂರೂ ವಸ್ತ್ರಗಳು ತಮ್ಮದೇ ಆದ ರೀತಿಯಲ್ಲಿ ವಿಲಕ್ಷಣ ಪಾತ್ರವನ್ನು ವಹಿಸಿಬಿಟ್ಟವು.
ವಿಹ್ವಲಗೊಂಡ ಶಾರದೆ, ಏನು ಮಾಡುವುದೆಂದು ತೋಚದೆ ‘ಅನ್ಯಥಾ ಶರಣಂ ನಾಸ್ತಿ’ ಎನ್ನುವಂತೆ ತನ್ನನ್ನು ರಕ್ಷಿಸುವಂತೆ ತಾನು ನಂಬಿದ್ದ ಅಸೀಮ ಶಕ್ತಿಯಲ್ಲಿ ಮೊರೆಯ್ಟಿಟಳು..." ಎಂದರು ಅವಧೂತರು. ಅವರು ಹಾಗೆ ಹೇಳುತ್ತಿರುವಾಗಲೇ ಮನೆಯ ಮುಂಬಾಗಿಲ ಬಳಿ ಕಾರೊಂದು ಬಂದು ನಿಂತ ಸದ್ದಾಯಿತು. ಅದನ್ನು ಕೇಳಿ ಅವಧೂತರು ಕಥನಕ್ಕೆ ಕೊಂಚ ‘ಬ್ರೇಕ್’ ಹಾಕಿದರು...
ಮನೆಯ ಬೀದಿ ಬಾಗಿಲಿನಿಂದ ಓಡಿಬಂದ ಅವಧೂತರ ಆಪ್ತಸಹಾಯಕರು, “ಗುರುಗಳೇ... ಸ್ವಾಮೀಜಿಯ ಮಠ ಇರೋ ಕ್ಷೇತ್ರದ ರಾಜಕಾರಣಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಬಂದಿದ್ದಾರೆ..." ಎಂದರು ಗಡಿಬಿಡಿಯ ದನಿಯಲ್ಲಿ.
ಶಾರದೆಯ ಕಥನದಲ್ಲಿ ಇದುವರೆಗೆ ಸೇವಾಸಂಸ್ಥೆಯ ಮ್ಯಾನೇಜರ್, ಮಠದ ಸ್ವಾಮೀಜಿಯ ಹೆಜ್ಜೆ ಗುರುತುಗಳು ಇದ್ದುದನ್ನು ಲಘುವಾಗಿ ಗ್ರಹಿಸಿದ್ದ ಶಿಷ್ಯರು, ಈಗ ಮತ್ತೆರಡು ಪಾತ್ರಗಳು ಪ್ರವೇಶಿಸಿ ದ್ದನ್ನು ಕಂಡು, “ಸಫಾರಿ ಮತ್ತು ಕಾವಿ ಬಂದದ್ದಾಯಿತು, ಈಗ ಖಾದಿ ಮತ್ತು ಖಾಕಿಯ ಸರದಿಯಾ?" ಎಂದು ಗೊಣಗಿದರು. ಅವಧೂತರು ನಿಗೂಢವಾಗಿ ನಕ್ಕರು...!
(ಮುಂದುವರಿಯುವುದು)