ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಭಾರತೀಯರ ಕಥಾವಾಚನ ಅಥವಾ ಶ್ರವಣ ಪರಂಪರೆಗೆ ಇವೇ ಮೂಲವಿರಬೇಕು ಅನಿಸುತ್ತದೆ. ಭಾರತ ದಲ್ಲಿ ವಿಶೇಷವಾಗಿ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ, ಪುರಾಣಗಳ ಮತ್ತು ಮಹಾಕಾವ್ಯಗಳ ಕಥೆಯನ್ನು ಸಾರ್ವಜನಿಕವಾಗಿ ಹೇಳುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪದ್ದತಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, ಭಗವಂತನ ಲೀಲಾವಿನೋದದ ಕಥೆ ಹೇಳುವುದು ಒಂದು ಪವಿತ್ರ ಸಂಪ್ರದಾಯವಾಗಿದ್ದು, ಅದು ತಲೆಮಾರುಗಳಿಂದ ನಡೆದುಬಂದಿದೆ.

ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ವಿದ್ಯಮಾನ

vinayakvbhat@autoaxle.com

ಕಥೆ ಹೇಳುವುದು ಮತ್ತು ಕೇಳುವುದು ಭಾರತೀಯರಿಗೆ ಪರಂಪರೆಯಿಂದ ಬಂದ ವಿಷಯ. ನಾನು ಇಲ್ಲಿ ಹೇಳಹೊರಟಿರುವ ‘ಕಥೆ’ ಎಂದರೆ ನಮಗೆ ಅಜ್ಜಿ ಹೇಳುತ್ತಿದ್ದ ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ. ಅದು ಶ್ರೀಮದ್ ಭಾಗವತ, ರಾಮಾಯಣ, ಮಹಾಭಾರತ ಅಥವಾ ಭಕ್ತಮಾಲಾ ಮುಂತಾದ ಭಗವತ್ಕಥೆಯ ವಾಚನದ ಅಥವಾ ವಾಚಕರ ಕಥೆ.

ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶ ಮೊದಲ ಬಾರಿಗೆ ಶ್ರೀರಾಮನ ಆಸ್ಥಾನದಲ್ಲಿ ಆದಿಕವಿ ವಾಲ್ಮೀಕಿ ರಚಿಸಿದ್ದ ರಾಮಕಥೆಯನ್ನು ಮೊದಲ ಬಾರಿಗೆ ಅವನ ಎದುರೇ ಹೇಳಿರುವುದನ್ನು ನಾವು ಕೇಳಿದ್ದೇವೆ. ಪ್ರಾಯಶ: ಕಥಾವಾ ಚನಕ್ಕೆ ಇದೇ ನಾಂದಿಯಾಗಿರಲಿಕ್ಕೆ ಸಾಕು. ‘ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕ್ರತ ಮಸ್ತಕಾಂಜಲಿಂ, ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ’ ಅಂದರೆ, ‘ಎಲ್ಲಿ ಶ್ರೀ ರಾಮಕಥೆಗಳು ಹೇಳಲ್ಪಡುತ್ತವೆಯೋ, ಅ ಚಿರಂಜೀವಿಯಾಗಿರುವ ಆಂಜನೇಯನು ನತಮಸ್ತಕನಾಗಿ ವಿಧೇಯತೆಯಿಂದ ಹಾಜರಿರುತ್ತಾನೆ’ ಎನ್ನುವ ನಂಬಿಕೆಯೂ ಆಸ್ತಿಕರಲ್ಲಿದೆ.

ಆಮೇಲೆ, ಚಂದ್ರವಂಶದ ರಾಜರಾದ ಪಾಂಡವರ ಮೊಮ್ಮಗ, ಪರೀಕ್ಷಿತ ಎನ್ನುವ ಧರ್ಮಿಷ್ಠನಾದ ರಾಜನಿಗೆ ತನ್ನ ಸಾವಿಗೆ ಇನ್ನು ಕೆಲವೇ ದಿನಗಳು ಉಳಿದಿವೆ ಎನ್ನುವುದು ಸ್ಪಷ್ಟವಾಗಿ ತಿಳಿದು ಹೋಗಿರುತ್ತದೆ. ಆ ಸಂದರ್ಭದಲ್ಲಿ, ಮರಣಭಯ ಪರಿಹಾರಕ್ಕಾಗಿ ಹರಿದ್ವಾರದ ಗಂಗಾ ತಟದಲ್ಲಿ ಆತ ತನ್ನ ಕೊನೆಯ ದಿನಗಳನ್ನು ಕಳೆಯುತ್ತಿದ್ದ.

ಇದನ್ನೂ ಓದಿ: Vinayak V Bhat Column: ನರೆದಲೆಗ ಮತ್ತು ವ್ರಿಹಿಗಗಳಲ್ಲಿ ಶ್ರೇಷ್ಠರು ಯಾರು ?

ಆ ಸಂದರ್ಭದಲ್ಲಿ, ಪರಮ ವಿರಾಗಿಯೂ, ಜನ್ಮತ: ಜ್ಞಾನಿಯೂ ಆಗಿದ್ದ ವೇದವ್ಯಾಸ ಪುತ್ರ, ಶುಕಮುನಿಗಳಿಂದ ಮರಣ ಭಯ ದೂರಕವೂ ಹಾಗೂ ಮುಕ್ತಿ ಹೇತುವೂ ಆದ ವ್ಯಾಸಕೃತ ಶ್ರೀಮದ್ಭಾಗವತ ಮಹಾ ಪುರಾಣವನ್ನು ಸತತ ಏಳುದಿನಗಳ ಕಾಲ ಸಪ್ತಾಹ ಕ್ರಮದಲ್ಲಿ ಶ್ರವಣ ಮಾಡಿದ್ದ ಎನ್ನುವುದನ್ನೂ ಕೇಳುತ್ತೇವೆ.

ಭಾರತೀಯರ ಕಥಾವಾಚನ ಅಥವಾ ಶ್ರವಣ ಪರಂಪರೆಗೆ ಇವೇ ಮೂಲವಿರಬೇಕು ಅನಿಸುತ್ತದೆ. ಭಾರತದಲ್ಲಿ ವಿಶೇಷವಾಗಿ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ, ಪುರಾಣಗಳ ಮತ್ತು ಮಹಾ ಕಾವ್ಯಗಳ ಕಥೆಯನ್ನು ಸಾರ್ವಜನಿಕವಾಗಿ ಹೇಳುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪದ್ದತಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, ಭಗವಂತನ ಲೀಲಾವಿನೋದದ ಕಥೆ ಹೇಳುವುದು ಒಂದು ಪವಿತ್ರ ಸಂಪ್ರದಾಯವಾಗಿದ್ದು, ಅದು ತಲೆಮಾರುಗಳಿಂದ ನಡೆದುಬಂದಿದೆ. ಓದಲು ಬರೆಯಲು ಬಾರದಿದ್ದವರಿಗೆ ಅಥವಾ ಮಹಾಕಾವ್ಯಗಳನ್ನು ಸ್ವಂತ ಸಾಮರ್ಥ್ಯದಿಂದ ಅರಿತುಕೊಳ್ಳಲಾಗದಿದ್ದವರಿಗೆ ಈ ಕಥಾವಾಚನ ಬಹಳವಾಗಿ ಸಹಾಯ ಮಾಡುತ್ತಿತ್ತು ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಜೀವಂತವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

71 R1

ಇದೇ ಮಹಾಕಾವ್ಯಗಳ ಕಥೆಯನ್ನು ದ್ರಶ್ಯಮಾಧ್ಯಮಗಳಾದ ಮತ್ತು ಸಂಭಾಷಣೆಗಳನ್ನು ಒಳಗೊಂಡಿರುವ ನಾಟಕ, ಯಕ್ಷಗಾನ ಮುಂತಾದವುಗಳ ಮೂಲಕ ಆಡಿ ತೋರಿಸುವುದು ಒಂದು ದೃಷ್ಟಿಯಿಂದ ಸುಲಭವಾದ ಮಾರ್ಗ. ಆದರೆ, ಬರೇ ಮಾತಿನಿಂದ ಕಥಾನಕದ ದೃಶ್ಯಗಳನ್ನು ಪ್ರೇಕ್ಷಕನಿಗೆ ಕಟ್ಟಿಕೊಟ್ಟು ಅವನನ್ನು ಅದರಲ್ಲಿ ತಲ್ಲೀನನನ್ನಾಗಿಸುವುದು ಅಷ್ಟು ಸುಲಭದ ಮಾತಲ್ಲ.

ಅದಕ್ಕೇ ಹೇಳುವುದು ‘ವಕ್ತಾ ದಶ ಸಹಸ್ರೇಷು’ ಎಂದು. ಹತ್ತು ಸಾವಿರರಕ್ಕೊಬ್ಬ ಮಾತುಗಾರ ಹುಟ್ಟುತ್ತಾನೆ ಎಂದು. ನೂರಕ್ಕೊಬ್ಬ ಶೂರ ಸಿಗಬಹುದು. ಸಾವಿರಕ್ಕೊಬ್ಬ ಪಂಡಿತನಾಗಬಹುದು ಆದರೆ, ಹತ್ತು ಸಾವಿರಕ್ಕೊಬ್ಬ ಮಾತ್ರ ವಾಗ್ಮಿ ಸಿಗಲು ಸಾಧ್ಯ ಎನ್ನುವುದಿದೆ. ಮಾತನಾಡುವ ಕಲೆ ಅಂದರೆ ಅದು ಅಷ್ಟು ಕಷ್ಟದ ಕೆಲಸವಾಗಿದೆ ಎಂದರ್ಥ.

ನಮ್ಮ ಆದಿಕಾವ್ಯಗಳಲ್ಲಿ ಹೇಳಿದ ಆದರ್ಶಗಳನ್ನು ಜನರಿಗೆ ತಿಳಿಸಬೇಕು ಮತ್ತು ಆಮೂಲಕ ಆ ಕಾವ್ಯಗಳ ಪ್ರಸ್ತುತತೆಯನ್ನು ಉಳಿಸಬೇಕು ಎನ್ನುವ ಉದ್ದೇಶಕ್ಕಾಗಿ ಬಳಸುವ ‘ಹರಿ ಕೀರ್ತನೆ’ ಎನ್ನುವ ಪ್ರಾಕಾರ ನಮ್ಮ ಕರ್ನಾಟಕದಲ್ಲಿಯೂ ಇತ್ತು.

ಕೀರ್ತನ ಕೇಸರಿ ಸಂತ ಭದ್ರಗಿರಿ ಅಚ್ಯುತ ದಾಸರು,ಕೇಶವದಾಸರು ಹಾಗೂ ಶ್ರೀ ಗುರುರಾಜುಲು ನಾಯ್ಡು ಮುಂತಾದವರು ಈ ಹರಿಕಿರ್ತನೆಗೆ ಪ್ರಸಿದ್ಧರಾಗಿದ್ದವರು. ಒಂದು ಕಥೆಯನ್ನು ತೆಗೆದು ಕೊಂಡು ಅದನ್ನು ಜನರಿಗೆ ಮನಮುಟ್ಟುವ ಹಾಗೆ ವಿಸ್ತಾರಮಾಡುವುದು ಮತ್ತು ಅದರಲ್ಲಿ ಮಧ್ಯ ಮಧ್ಯ, ಸಂಗೀತವನ್ನು ಸಾತ್ ಸಂಗತ್ ನ ಜೊತೆಗೆ ಬಳಸುವುದು ರೂಢಿಯಾಗಿತ್ತು.

ಹಾಗೆ ಸಂಗೀತವನ್ನು ಬಳಸುವಾಗ ಸಂದರ್ಭಕ್ಕೆ ಮತ್ತು ಕಥಾನದ ರಸಭಾವಕ್ಕೆ ತಕ್ಕಂತೆ ವಿವಿಧ ರಾಗಗಳನ್ನು ಶ್ರೀ ಅಚ್ಯುತದಾಸರು ಬಳಸುತ್ತಿದ್ದುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಅವರ ಕೀರ್ತನೆಗಳೆಂದರೆ ಅದೊಂಥರಾ ಸಿನಿಮಾ ನೋಡಿದ ಹಾಗಿರುತ್ತಿತ್ತು. ಅಷ್ಟು ಪ್ರಭಾವ ಶಾಲಿಯಾಗಿ ಆ ಮಾಧ್ಯಮವನ್ನು ಬಳಸಿಕೊಂಡವರು ಇನ್ನೊಬ್ಬರಿಲ್ಲವೇನೊ!

ಇನ್ನು, ರಾಮಾಯಣ ಮಹಾಭಾರತ ಹಾಗೂ ಶ್ರೀಮದ್ಭಾಗವತ ಪುರಾಣಗಳ ಪ್ರವಚನಗಳನ್ನು ಡಾ. ಕೆ ಎಸ್ ನಾರಾಯಣಾಚಾರ್ಯರು, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ರಾಜ್ಯಾ ದ್ಯಂತ ಸಾರ್ವಜನಿಕವಾಗಿ ನಡೆಸಿಕೊಟ್ಟಿರುವುದೂ ಇದೆ. ಸರಳ ಸಂತ ಸಿದ್ದೇಶ್ವರ ಸ್ವಾಮಿಗಳು ಸಹ, ಹೆಚ್ಚಾಗಿ ಉತ್ತರ ಕರ್ನಾಟಕಭಾಗಗಳಲ್ಲಿ ಸತ್ಸಂಗ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ವಾಗಿ ನೀತಿ ಬೋಧನೆ ಮಾಡುತ್ತಿದ್ದುದನ್ನೂ ನಾವು ಕಾಣುತ್ತೇವೆ. ಅಷ್ಟೇ ಅಲ್ಲದೇ, ಅನೇಕ ಮಠಮಾನ್ಯ ಗಳಲ್ಲೂ, ಗುರುಗಳು ತಮ್ಮ ಶಿಷ್ಯ ವೃಂದದಲ್ಲಿ ಪ್ರವಚಾನಾದಿಗಳನ್ನು ಏರ್ಪಡಿಸುವುದನ್ನು ನಾವು ಗಮನಿಸುತ್ತೇವೆ. ಆದರೆ, ಈ ಪ್ರವಚನದ ಪರಂಪರೆ ಎನ್ನುವುದು ನಮ್ಮಲ್ಲಿ ಅಷ್ಟು ಜನಜನಿತವಾಗಿರ ಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಉತ್ತರಭಾರತದಲ್ಲಿ ಹಾಗಲ್ಲ. ಅಲ್ಲಿ ಈ ಕಥಾವಾಚನದ ಕಾರ್ಯಕ್ರಮಗಳನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಾರೆ. ಅಲ್ಲಿ, ಈ ಕಥಾವಾಚನದ ಕಾರ್ಯಕ್ರಮಗಳಿಗೆ ತೇರು ಜಾತ್ರೆಗಳಿಗೆ ಸೇರುವಂತೆ ಲಕ್ಷಗಟ್ಟಲೇ ಜನ ಸೇರುತ್ತಾರೆ. ಭಗವತ್ಕಥಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅತ್ಯಂತ ಶ್ರೇಯಸ್ಕರ ಎಂದು ಅಲ್ಲಿನ ಜನ ಭಾವಿಸುತ್ತಾರೆ.

ಆಬಾಲ ವೃದ್ಧರು, ಮಹಿಳೆಯರು ಯುವಕರಷ್ಟೇ ಅಲ್ಲದೇ, ಪ್ರಸಿದ್ಧ ಕ್ರೀಡಾ ಪಟುಗಳು, ಸಿನೆಮಾ ತಾರೆಯರೂ ಹಾಗೂ ಸ್ಥಾನಿಕ ರಾಜಕಾರಣಿಗಳೂ ಸಹ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಮಾಧಾನದಿಂದ ತಾಸುಗಟ್ಟಲೇ ಕುಳಿತು ಪ್ರವಚನಗಳನ್ನು ಕೇಳುತ್ತಾರೆ.

ಉತ್ತರದ ಕಥಾವಾಚಕನು ಹಂಚಿಕೊಳ್ಳುವ ಕಥೆಗಳು, ಹೆಚ್ಚಾಗಿ ನೈತಿಕ, ನೈತಿಕ ಅಥವಾ ಧಾರ್ಮಿಕ ಬೋಧನೆಗಳನ್ನು ಒಳಗೊಂಡಿರುತ್ತವೆ. ಇವು ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ ಗಳ ಕಥೆಗಳಾಗಿರಬಹುದು ಅಥವಾ ಸತ್ಯ, ಕರ್ತವ್ಯ (ಧರ್ಮ), ಹಿರಿಯರಿಗೆ ಗೌರವ, ಭಕ್ತಿ ಮತ್ತು ಸಹಾನುಭೂತಿಯಂತಹ ಪರಿಕಲ್ಪನೆಗಳನ್ನು ವಿವರಿಸುತ್ತಾರೆ.

ಈ ಕಥೆಗಳನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ, ಆಧ್ಯಾತ್ಮಿಕ ಜ್ಞಾನ ಮತ್ತು ತಿಳುವಳಿಕೆಯನ್ನು ನೀಡಲು ಬಳಸಲ್ಪಡುತ್ತವೆ. ಉದಾಹರಣೆಗೆ, ಕಥಾವಾಚಕನು ಭಗವಾನ್ ರಾಮ ಅಥವಾ ಭಗವಾನ್ ಕೃಷ್ಣನ ಜೀವನವನ್ನು ನಿರೂಪಿಸುವಾಗ, ಅವರ ಸದ್ಗುಣಗಳು, ಮಾನುಷೀಯವಾದ ಸವಾಲುಗಳನ್ನೂ ವಿವರಿಸುತ್ತಾರೆ. ಮಹಾ ಕಾವ್ಯಗಳಲ್ಲಿ ಉಕ್ತವಾಗಿರುವ ಸುಪ್ತ ತತ್ವಗಳನ್ನು ಜನಮಾನಸಕ್ಕೆ ಮುಟ್ಟುವ ರೀತಿಯಲ್ಲಿ ನಿರೂಪಿಸುತ್ತಾರೆ.

ಭವ್ಯ ಮಹಾಕಾವ್ಯಗಳು ಮತ್ತು ಧಾರ್ಮಿಕ ಗ್ರಂಥಗಳ ಜೊತೆಜೊತೆಗೆ, ಹಿಂದಿ ಕಥಾವಾಚಕರು ಪ್ರಾದೇಶಿಕ ಜಾನಪದ ಕಥೆಗಳು, ಕಾಲ್ಪನಿಕ ನೀತಿ ಕಥೆಗಳು ಮತ್ತು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಅನುರಣಿಸುವ ಐತಿಹಾಸಿಕ ಕಥೆಗಳನ್ನು ಸಹ ನಿರೂಪಿಸುತ್ತಾರೆ.

ಕಥಾ ವಾಚಕರುಗಳಿಗೆ ಕೆಲವು ಅಗತ್ಯ ಗುಣಗಳಿರಬೇಕಾಗುತ್ತವೆ. ಶುದ್ಧ ಚಾರಿತ್ರ್ಯ, ತಾನು ಸಾರುವ ವಿಷಯಗಳ ಕುರಿತ ಆಳವಾದ ಅಧ್ಯಯನ ಮತ್ತು ತಿಳುವಳಿಕೆ, ಆಕರ್ಷಕ ವ್ಯಕ್ತಿತ್ವ, ಆಧ್ಯಾತ್ಮಿಕತೆ ಯಲ್ಲಿನ ನಂಬಿಕೆ, ಭಾಷಾ ಪಾಂಡಿತ್ಯ, ಭಾವನಾತ್ಮಕ ಅನುರಣನ, ಅಭಿವ್ಯಕ್ತಿಯ ಸ್ಪಷ್ಟತೆ, ನಿರಂತರ ಕಲಿಕೆ ಮತ್ತು ಬೆಳವಣಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಸಾಹ ಆತನಿಗಿರಬೇಕಾದ ಗುಣಗಳಾಗಿವೆ.

ಆದರ್ಶ ಕಥಾ ವಾಚಕನಿಗೆ ವಿಷಯದ ಆಳವಾದ ಗ್ರಹಿಕೆ ಇರಬೇಕಾಗುತ್ತದೆ. ಇದು ಕೇವಲ ಸಂಸ್ಕೃತ ಶ್ಲೋಕಗಳನ್ನು ಪಠಿಸುವುದರ ಬಗ್ಗೆ ಅಲ್ಲ; ಅವುಗಳ ಅರ್ಥವನ್ನು ಕೇಳುಗರಿಗೆ ಜೀವಂತಗೊಳಿಸಿ, ಇಂದಿನ ಜಗತ್ತಿನ ಸಂಬಂಧಿತ ಉದಾಹರಣೆಗಳೊಂದಿಗೆ ಸಂಯೋಜಿಸಿ ಹೇಳಬೇಕಾಗುತ್ತದೆ.

ಆವಾಗ ಮಾತ್ರ ಕೇಳುಗರು ಕಥೆಯ ಸಾರದೊಂದಿಗೆ ಆಳವಾಗಿ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ. ಪ್ರೇಕ್ಷಕರನ್ನು ತನ್ನ ಕಥಾಪ್ರಸಂಗದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವು ಒಂದು ಆಧ್ಯಾತ್ಮಿಕ ಕೊಡುಗೆಯಾಗಿದೆ. ಆಕರ್ಷಕ ವಾಚಕನು ಕಥೆಗಳನ್ನು ಹೇಗೆ ನಿರೂಪಿಸುತ್ತಾನೆಂದರೆ, ಅದು ಕೇಳುಗರಿಗೆ ಪುರಾಣಕಾಲದ ಘಟನೆಗಳನ್ನು ನೈಜ ಸಮಯದಲ್ಲಿ ವೀಕ್ಷಿಸುತ್ತಿರುವಂತೆ ಭಾಸವಾಗುತ್ತದೆ. ಆಗ ಮಾತ್ರ ಕೇಳುಗರು ಸ್ವಾಭಾವಿಕವಾಗಿಯೇ ವಾಚಕನೊಂದಿಗೆ ಅನುರಣಿಸುತ್ತಾರೆ ಮತ್ತು ಅವನು ಬೋಧಿಸುವುದನ್ನು ಪಾಲಿಸಲು ಪ್ರಯತ್ನಿಸುತ್ತಾನೆ.

ಭಾಷೆಯಲ್ಲಿನ ಪ್ರಾವೀಣ್ಯತೆಯು ಕಥಾವಾಚನಿಗಿರಬೇಕಾದ ಇನ್ನೊಂದು ಪ್ರಮುಖ ಗುಣವಾಗಿದೆ. ಅಷ್ಟೇ ಮುಖ್ಯವೆಂದರೆ, ಭಾಷೆಯನ್ನು ಸರಳೀಕರಿಸಿ ಕೇಳುಗನೊಂದಿಗೆ ಸೊಗಸಾಗಿ ಸಂವಹನ ಮಾಡುವ ಅವನ ಸಾಮರ್ಥ್ಯ. ಒಳ್ಳೆಯ ವಾಚಕನು, ಕೇಳುಗರನ್ನು ಭಾವನಾತ್ಮಕ ಉತ್ತುಂಗಕ್ಕೆ ಕರೆದೊಯ್ಯುತ್ತಾನೆ ಮತ್ತು ಆಗ ಮಾತ್ರ ಕಥೆಯು ಕೇವಲ ಉಪನ್ಯಾಸಕ್ಕಿಂತ ಹೆಚ್ಚಿನದಾಗುತ್ತದೆ ಮತ್ತು ಅದು ಒಂದು ಒಂದು ಅನುಭವವಾಗುತ್ತದೆ.

ಇದು ಕೆಳುಗನ ವೈಯಕ್ತಿಕ ಪರಿವರ್ತನೆಗೂ ಕಾರಣವಾಗುತ್ತದೆ. ನಿಜವಾದ ಕಥಾ ವಾಚಕರು, ವೇದಿಕೆಯ ಹೊರಗೆಯೂ ಸಮುದಾಯದೊಂದಿಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಕೌಶಲ್ಯಪೂರ್ಣ ಕಥಾ ವಾಚಕನು ಆಳವಾದ ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಹೊದಿದ್ದು, ಎಲ್ಲಾ ವಯೋಮಾನದವರಿಗೆ ಅರ್ಥವಾಗುವ ರೀತಿಯಲ್ಲಿ ತಲುಪುತ್ತಾನೆ. ಬದ್ಧತೆಯುಳ್ಳ ಪ್ರವಚನಕಾರನು ಹಳೆಯ ಬೋಧನೆಗಳಲ್ಲಿ ಹೊಸ ಒಳನೋಟಗಳನ್ನು ಸೇರಿಸಿಕೊಂಡು ಪ್ರಸ್ತುತಪಡಿಸುತ್ತಾನೆ.

ಎಲ್ಲಕ್ಕಿಂತ ಹೆಚ್ಚಾಗಿ, ಕಥಾ ವಾಚಕವನ್ನು ನಿಜವಾಗಿಯೂ ಪ್ರಭಾವಶಾಲಿಯಾಗಿಸುವುದು ಪರಮಾತ್ಮನ ಸಂದೇಶವನ್ನು ಹಂಚಿಕೊಳ್ಳುವುದರಲ್ಲಿನ ಅವನ ಆಳವಾದ ಪ್ರೀತಿ (ಉತ್ಕಟತೆ ). ಇದು ಒಂದು ವೃತ್ತಿ ಮಾತ್ರ ಆಗುವುದಲ್ಲ, ಪ್ರವೃತ್ತಿಯೂ ಆಗಿರಬೇಕಾಗುತ್ತದೆ.

ಕಥಾವಾಚಕನಿಗಿರಬೇಕಾದ ಮತ್ತೊಂದು ಪ್ರಮುಖ ಅಗತ್ಯವೆಂದರೆ, ಅದು ಪ್ರೇಕ್ಷಕರೊಂದಿಗಿನ ಸಂವಹನ. ಈ ಸಂವಹನವು ಪ್ರಶ್ನೋತ್ತರಗಳು, ಹಾಡುಗಳು, ಮಂತ್ರಗಳು ಅಥವಾ ಕಥೆಯಲ್ಲಿ ಪ್ರೇಕ್ಷಕರನ್ನು ಸೇರಿಸಿಕೊಳ್ಳುವ ಮೂಲಕ, ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಈ ಅಂಶಗಳು ಕಥಾವಾಚಕ ಮತ್ತು ಕೇಳುಗರ ನಡುವಿನ ಬಂಧವನ್ನು ಬಲಪಡಿಸುತ್ತದೆ. ಅಲ್ಲಿ ಸೇರುವ ವಿಭಿನ್ನ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲು ಕಥಾವಾಚಕನು ಹೆಚ್ಚು ಹೊಂದಿಕೊಳ್ಳಬೇಕಾದ ಅಗತ್ಯವಿರುತ್ತದೆ. ಸಂದರ್ಭ ಮತ್ತು ಕೇಳುಗರ ಭಾವನಾತ್ಮಕ ಸ್ಥಿತಿಯನ್ನು ಅವಲಂಬಿಸಿ, ತಮ್ಮ ಭಾಷೆ, ಧ್ವನಿ ಮತ್ತು ವಿಷಯವನ್ನು ಹೇಗೆ ಹೊಂದಿಸುವುದು ಎಂದು ತಿಳಿದಿರಬೇಕಾಗಿರುತ್ತದೆ.

ಉತ್ತರ ಭಾರತದ ಕಥಾವಾಚನ ಕ್ಷೇತ್ರದಲ್ಲಿ, ಶ್ರೀ ಮುರಾರಿ ಬಾಪು, ರಮೇಶ್ ಭಾಯಿ ಓಝಾ ಹಾಗೂ ಸಂತ ರಾಜೇಂದ್ರದಾಸ್ ಜಿ ಮುಂತಾದ ಹಿರಿಯರಿದ್ದಾರೆ. ಇಂದ್ರೇಶ್ ಉಪಾಧ್ಯಾಯ, ಧೀರೇಂದ್ರ ಕೃಷ್ಣ ಶಾಸ್ತ್ರೀ, ಅನಿರುದ್ಧ ಆಚಾರ್ಯ, ಪ್ರದೀಪ್ ಮಿಶ್ರಾ ಮುಂತಾಗಿ ಅನೇಕ ಯುವಕರು ಬಹಳ ಬೇಡಿಕೆಯಲ್ಲಿರುವ ಕಥಾವಾಚಕರಾಗಿದ್ದು, ಈ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.

ಸಾಧ್ವಿ ಜಯ ಕಿಶೋರಿ, ದೇವಿ ಚಿತ್ರಲೇಖಾ, ದೇವಿ ಪಲಕ್ ಕಿಶೋರಿ ಹಾಗೂ ಕೃಷ್ಣಪ್ರಿಯಾ ಮುಂತಾದ ಮಹಿಳೆಯರೂ ಈ ವೃತ್ತಿಯಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿರುವುದು ವಿಶೇಷ ವಾಗಿದೆ. ಸಂಘಟಕರು ಇವರುಗಳ ಸಮಯಕ್ಕಾಗಿ ವರ್ಷಗಟ್ಟಲೇ ಕಾಯುವುದೂ ಇದೆ. ಈ ಕಥಾ ವಾಚಕರುಗಳನ್ನು ಇಂದಿಗೂ ಉತ್ತರ ಭಾರತದಲ್ಲಿ ವ್ಯಾಪಕವಾಗಿ ಗೌರವಿಸಲಾಗುತ್ತದೆ ಮತ್ತು ಅನುಸರಿಸಲಾಗುತ್ತದೆ.

ಇವರು ವರ್ಷಪೂರ್ತಿ ತಮ್ಮನ್ನು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಲಕ್ಷಗಳಲ್ಲಿ ದುಡಿಯುತ್ತಾರೆ. ಒಂದು ಪ್ರವಚನ ಸರಣಿಗೆ ಕೋಟಿಯಷ್ಟು ಗೌರವ ಸಂಭಾವನೆ ಪಡೆಯುವ ಕಥಾ ವಾಚಕರೂ ಇದ್ದಾರೆ. ಬಹುತೇಕ ಕಥಾವಾಚಕರುಗಳು ಹಾಗೆ ಸಂಪಾದಿಸಿದ ಹಣವನ್ನು ಸಮಾಜ ಸೇವೆ ಮತ್ತು ಗೋಸೇವೆಯಲ್ಲಿ ತೊಡಗಿಸುತ್ತಿದ್ದಾರೆ.

ಪರಸ್ಪರ ಕಥಾವಾಚಕರುಗಳು ಗೌರವಿಸುತ್ತಾರಾದರೂ, ಅವರ ನಡುವೆ ಆರೋಗ್ಯಕರ ಸ್ಪರ್ಧೆಯೂ ಇದೆ. ಉತ್ತರ ಭಾರತದಲ್ಲಿ ಪ್ರತಿಭಾವಂತರುಗಳಿಗೆ ಈ ಕಥಾವಾಚನ ಎನ್ನುವುದು, ಒಂದು ಹೊಸ ಅವಕಾಶವಾಗಿ ಪರಿಣಮಿಸಿದೆ. ಸಮಕಾಲೀನ ಸನ್ನಿವೇಶಗಳಲ್ಲಿ, ಕಥಾವಾಚಕರು ತಮ್ಮ ನಿರೂಪಣೆ ಯನ್ನು ಪ್ರಭಾವಶಾಲಿಯಾಗಿ ಹೆಚ್ಚಿಸಲು ಸಾಂಪ್ರದಾಯಿಕ ಪದ್ಧತಿಯನ್ನು ಮೀರಿ, ಮಲ್ಟಿ ಮೀಡಿಯಾ ಪ್ರಸ್ತುತಿಗಳು, ಅನಿಮೇಟೆಡ್ ದೃಶ್ಯಗಳು ಮತ್ತು ಡಿಜಿಟಲ್ ಕಥೆ ಹೇಳುವಿಕೆಯಂತಹ ಆಧುನಿಕ ಸಾಧನಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.

ಇಂದಿಗೂ ಸಾಂಪ್ರದಾಯಿಕವಾಗಿ ಕಥಾಪ್ರವಚನಗಳನ್ನು ಹೇಳುವುದು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿ ಉಳಿದಿದ್ದರೂ, ಬದಲಾಗುತ್ತಿರುವ ಸಮಯದಂತೆ ಕಥಾವಾಚಕನ ಪಾತ್ರವೂ ವಿಕಸನಗೊಳ್ಳುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ, ಕಥಾವಾಚಕರು ಕೆಲವೊಮ್ಮೆ ಯೂಟ್ಯೂಬ, ಪಾಡ್‌ಕಾಸ್ಟ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ವೇದಿಕೆಗಳನ್ನೂ ಯಶಸ್ವಿಯಾಗಿ ಬಳಸಿ ತಮ್ಮ ಪ್ರೇಕ್ಷಕರನ್ನು ತಲುಪುತ್ತಿದ್ದಾರೆ.

ಇಂದು ಉತ್ತರದ ಕಥಾವಾಚಕರುಗಳು ಕೇವಲ ಪ್ರವಚನಕಾರನಾಗಿ ಉಳಿದಿಲ್ಲ ; ಅವರು ಸಾಂಸ್ಕೃತಿಕ ರಾಯಭಾರಿ, ನೈತಿಕ ಮಾರ್ಗದರ್ಶಿ ಮತ್ತು ತಮ್ಮ ಸಮುದಾಯದ ಧಾರ್ಮಿಕತೆಯ ಭಂಡಾರವಾಗಿದ್ದಾರೆ. ತಮ್ಮ ಕಥಾವಾಚನದ ಮಾಧ್ಯಮದ ಮೂಲಕ, ಭಾರತದ ಶ್ರೀಮಂತ ಸಾಂಸ್ಕೃತಿಕ ರಚನೆಗಳನ್ನು ಭವಿಷ್ಯದ ಪೀಳಿಗೆಗೆ ಜೀವಂತವಾಗಿ ಉಳಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.