Dr Vijay Darda Column: ತರೂರ್ ಬಗ್ಗೆ ಕಾಂಗ್ರೆಸ್ಗೇಕೆ ಇಷ್ಟೊಂದು ಚಿಂತೆ ?
2015ರ ಮೇ 28ರಂದು ಆಕ್ಸ್ ಫರ್ಡ್ ಯೂನಿಯನ್ನಲ್ಲಿ ಭಾಷಣ ಮಾಡಿದ್ದ ತರೂರ್, ಬ್ರಿಟಿಷರು ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳನ್ನು ತಮ್ಮ ವಸಾಹತು ಮಾಡಿಕೊಂಡು ಹೇಗೆ ದೌರ್ಜನ್ಯ ಎಸಗಿದ್ದರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು ಎಂಬುದನ್ನು ನಾವು ಮರೆತು ಬಿಟ್ಟಿದ್ದೇವಾ? ತರೂರ್ಗೆ ವಿದೇಶಾಂಗ ವ್ಯವಹಾರಗಳ ಮೇಲೆ ಅಪರಿಮಿತ ಹಿಡಿತವಿದೆ.


ಸಂಗತ
ಡಾ.ವಿಜಯ್ ದರಡಾ
ಇದು ನಿಜಕ್ಕೂ ವಿಚಿತ್ರ. ಒಬ್ಬ ಬುದ್ಧಿವಂತ ನಾಯಕ ಮತ್ತು ಹರಿತ ಮಾತುಗಾರನಾಗಿರುವ ಶಶಿ ತರೂರ್ ಅವರ ಮಹತ್ವವನ್ನು ಭಾರತ ಸರಕಾರ ಗುರುತಿಸಿದರೂ ಅವರದೇ ಪಕ್ಷವಾದ ಕಾಂಗ್ರೆಸ್ಗೆ ಗುರುತಿಸಲು ಆಗುತ್ತಿಲ್ಲ. ಕಾಂಗ್ರೆಸಿಗರಿಗೆ ತಾವು ತಮ್ಮದೇ ಪಕ್ಷಕ್ಕೆ ಎಷ್ಟು ದೊಡ್ಡ ಹಾನಿ ಉಂಟು ಮಾಡುತ್ತಿದ್ದೇವೆಂಬುದರ ಅರಿವಾದರೂ ಇದೆಯೆ? ಬಹಳ ವರ್ಷಗಳಿಂದ ನನಗೆ ಶಶಿ ತರೂರ್ ಪರಿಚಯವಿದೆ. ತುಂಬಾ ಹತ್ತಿರದಿಂದ ಅವರೊಂದಿಗೆ ಒಡನಾಡಿದ್ದೇನೆ. ಅವರು ನಮ್ಮ ಕಾಲದ ಅತ್ಯಂತ ನುರಿತ ಜಾಗತಿಕ ವಿದ್ಯಮಾನಗಳ ವಿಶ್ಲೇಷಕರಲ್ಲಿ ಒಬ್ಬರು ಎಂದು ಖಡಾಖಂಡಿತವಾಗಿ ಹೇಳಬಲ್ಲೆ. ತರೂರ್ ಅವರ ಒಳನೋಟ ಮತ್ತು ವಿಶ್ಲೇಷಣಾತ್ಮಕ ಜಾಣ್ಮೆ ಎಂತಹವರನ್ನೂ ಬೆರಗುಗೊಳಿಸುತ್ತದೆ. ಅವರಿಗೆ ಕೊಡಬೇಕಾದ ಗೌರವವನ್ನು ಕಾಂಗ್ರೆಸ್ ಪಕ್ಷ ಕೊಡಬೇಕಿತ್ತು.
ಆದರೆ ಅದರ ಬದಲಿಗೆ ಹೈಕಮಾಂಡ್ನ ಕಣ್ಣು, ಕಿವಿ ಹಾಗೂ ಧ್ವನಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು ತರೂರ್ಗೆ ಮೇಲಿಂದ ಮೇಲೆ ಅವಮಾನವನ್ನೇ ಮಾಡುತ್ತಿದ್ದಾರೆ. ತರೂರ್ಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡುತ್ತಿರುವ ಲೇಟೆಸ್ಟ್ ವಿದ್ಯಮಾನವೆಂದರೆ ಭಾರತ ಸರ್ಕಾರ ವಿದೇಶಗಳಿಗೆ ಕಳುಹಿಸುತ್ತಿರುವ ಸರ್ವಪಕ್ಷಗಳ ನಿಯೋಗದ ಸುತ್ತ ಎಬ್ಬಿಸಿರುವ ರಾಜಕೀಯ ರಾಡಿ.
ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ತಾನದ ಕಳ್ಳಾಟಗಳ ಕುರಿತು 33 ದೇಶಗಳಿಗೆ ಮಾಹಿತಿ ನೀಡಲು ಕೇಂದ್ರ ಸರಕಾರ ಸರ್ವಪಕ್ಷ ನಿಯೋಗಗಳನ್ನು ಕಳುಹಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯರಾಗಿರುವ ಹಾಗೂ ಭಾರತದ ಜೊತೆಗೆ ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳಿಗೆ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸಿದ ಮಹತ್ವದ ಕಾರ್ಯಾಚರಣೆಯ ಬಗ್ಗೆ ತಿಳಿಸುವು ದಷ್ಟೇ ಇದರ ಉದ್ದೇಶ.
ಇದನ್ನೂ ಓದಿ:Dr Vijay Darda Column: ದೀರ್ಘಾಯಸ್ಸಿಗಿಂತ ಗುಣಮಟ್ಟದ ಬದುಕು ಮುಖ್ಯ
ಎಲ್ಲಾ ಪಕ್ಷಗಳ ಸಂಸದರೂ ಈ ನಿಯೋಗಗಳಲ್ಲಿದ್ದಾರೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿಷಯದಲ್ಲಿ ಭಾರತದ ನಿಲುವೇನೆಂಬುದನ್ನು ವಿದೇಶಗಳಿಗೆ ತಿಳಿಸುವ ಈ ನಿಯೋಗಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಲ್ವರ ಹೆಸರನ್ನು ಸೂಚಿಸುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಂಸದೀಯ ವ್ಯವಹಾರ ಗಳ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದರು.
ಕಾಂಗ್ರೆಸ್ ಪಕ್ಷ ಆನಂದ ಶರ್ಮಾ, ಗೌರವ್ ಗೊಗೊಯ್, ಡಾ.ಸಯ್ಯದ್ ನಾಸೀರ್ ಹುಸೇನ್ ಮತ್ತು ರಾಜಾ ಬ್ರಾರ್ ಅವರ ಹೆಸರುಗಳನ್ನು ಸೂಚಿಸಿತ್ತು. ಇವರ ಪೈಕಿ ಗೊಗೊಯ್, ನಾಸೀರ್ ಹುಸೇನ್ ಮತ್ತು ಬ್ರಾರ್ ಅವರ ಹೆಸರುಗಳನ್ನು ಸರಕಾರ ಕೈಬಿಟ್ಟು, ಕೇವಲ ಆನಂದ ಶರ್ಮಾ ಅವರ ಹೆಸರನ್ನು ಮಾತ್ರ ಆಯ್ಕೆ ಮಾಡಿಕೊಂಡಿತು.
ತಿರಸ್ಕರಿಸಿದ ಮೂವರ ಜಾಗಕ್ಕೆ ಶಶಿ ತರೂರ್, ಮನೀಶ್ ತಿವಾರಿ, ಸಲ್ಮಾನ್ ಖುರ್ಷೀದ್ ಮತ್ತು ಅಮರ್ ಸಿಂಗ್ ಹೀಗೆ ನಾಲ್ವರ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿತು. ತರೂರ್ರನ್ನು ಅಮೆರಿಕಕ್ಕೆ ತೆರಳುವ ಪ್ರಮುಖ ನಿಯೋಗಕ್ಕೆ ನಾಯಕರನ್ನಾಗಿ ಮಾಡಿತು. ಕಾಂಗ್ರೆಸ್ ಸೂಚಿಸದೆ ಇದ್ದ ಮೂವರ ಹೆಸರಿನ ಬಗ್ಗೆ ಯಾವ ವಿವಾದವೂ ಆಗಲಿಲ್ಲ. ಆದರೆ, ತರೂರ್ರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ವಿರೋಧ ಕೇಳಿ ಬಂತು. ಕಾಂಗ್ರೆಸ್ ಪಕ್ಷ ತಾನು ಶಶಿ ತರೂರ್ರ ಹೆಸರನ್ನು ಕಳಿಸಿರಲೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತು. ಮೇಲ್ನೋಟಕ್ಕೆ ಸರಕಾರವು ಕಾಂಗ್ರೆಸ್ ಪಕ್ಷದ ಶಿಫಾರಸಿಗೆ ಅಗೌರವ ತೋರಿದಂತೆ ಕಂಡುಬಂದಿದ್ದು ನಿಜ. ಆದರೆ, ಶಶಿ ತರೂರ್ರ ಹೆಸರನ್ನು ಕಾಂಗ್ರೆಸ್ ಪಕ್ಷ ಏಕೆ ಶಿಫಾರಸು ಮಾಡಲಿಲ್ಲ ಎಂಬುದೇ ಮೂಲಭೂತ ಪ್ರಶ್ನೆ.
2015ರ ಮೇ 28ರಂದು ಆಕ್ಸ್ ಫರ್ಡ್ ಯೂನಿಯನ್ನಲ್ಲಿ ಭಾಷಣ ಮಾಡಿದ್ದ ತರೂರ್, ಬ್ರಿಟಿಷರು ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳನ್ನು ತಮ್ಮ ವಸಾಹತು ಮಾಡಿಕೊಂಡು ಹೇಗೆ ದೌರ್ಜನ್ಯ ಎಸಗಿದ್ದರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು ಎಂಬುದನ್ನು ನಾವು ಮರೆತು ಬಿಟ್ಟಿದ್ದೇವಾ? ತರೂರ್ಗೆ ವಿದೇಶಾಂಗ ವ್ಯವಹಾರಗಳ ಮೇಲೆ ಅಪರಿಮಿತ ಹಿಡಿತವಿದೆ.
ಯಾವ ದೇಶದ ಜೊತೆಗೆ ಹೇಗೆ ವ್ಯವಹರಿಸಬೇಕು ಮತ್ತು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಹೇಗೆ ಪ್ರದರ್ಶಿಸಬೇಕು ಎಂಬುದು ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಅಂತಹವರನ್ನು ಈ ರೀತಿಯ ನಿಯೋಗಕ್ಕೆ ಆಯ್ಕೆ ಮಾಡದೆ ಇನ್ನಾರನ್ನು ಕಳುಹಿಸಲು ಸಾಧ್ಯ? ನಿಜಕ್ಕೂ ಅವರನ್ನು ಅವಮಾನ ಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಇಷ್ಟಕ್ಕೂ ತರೂರ್ಗೆ ಆ ಪಕ್ಷದವರು ಅವಮಾನ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ.
ಮನಮೋಹನ ಸಿಂಗ್ರ ಸರಕಾರದಲ್ಲಿ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರನ್ನಾಗಿ ಮಾಡಲಾಗಿತ್ತು. ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವರಾಗುವುದಕ್ಕೆ ಶಶಿಗೆ ಅರ್ಹತೆ ಇರಲಿಲ್ಲವೇ? ವಿದೇಶಗಳಿಗೆ ತೆರಳುವ ನಿಯೋಗದಲ್ಲಿ ತಮ್ಮ ಹೆಸರು ಪ್ರಕಟವಾದ ಬಳಿಕ ತರೂರ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದರು. ‘ಭಾರತ ಸರಕಾರದ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿಕೊಂಡು ಐದು ಪ್ರಮುಖ ದೇಶಗಳ ರಾಜಧಾನಿಗೆ ತೆರಳಲು ನನಗೆ ಆಹ್ವಾನ ಬಂದಿದೆ.
ಇದು ನನಗೆ ಲಭಿಸಿದ ಗೌರವವೆಂದೇ ಭಾವಿಸಿದ್ದೇನೆ. ಇತ್ತೀಚಿನ ಅಯಾಚಿತ ಘಟನೆಗಳ ಬಳಿಕ ಭಾರತದ ನಿಲುವನ್ನು ವಿದೇಶಗಳ ಮುಂದೆ ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ನನಗೆ ನೀಡ ಲಾಗಿದೆ. ದೇಶದ ಹಿತದ ಪ್ರಶ್ನೆ ಬಂದಾಗ, ಅದಕ್ಕೆ ನನ್ನ ಸೇವೆಯ ಅಗತ್ಯವಿದೆ ಅನ್ನಿಸಿದಾಗ, ಯಾರು ಕರೆದರೂ ನಾನು ಬರುತ್ತೇನೆ.
ಅವರ ಮಾತು ಕೇಳಿ ನನಗೆ ವೈಯಕ್ತಿಕ ಘಟನೆಯೊಂದು ನೆನಪಾಯಿತು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಅಂದಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ಗೆ ಸಂಸತ್ತಿನಲ್ಲಿ ಯಾವುದೇ ಪ್ರಶ್ನೆ ಕೇಳದಿರಲು ನಿರ್ಧರಿಸಿದ್ದವು. ಆದರೆ ನನ್ನ ಪ್ರಶ್ನೆ ಮೊದಲೇ ಲಿಸ್ಟ್ ಆಗಿತ್ತು. ಹೀಗಾಗಿ ಪೂರ್ವನಿಗದಿಯಂತೆ ನಾನು ಪ್ರಶ್ನೆ ಕೇಳಲು ಎದ್ದುನಿಂತೆ. ಆಗ ಡಾ.ಮನಮೋಹನ ಸಿಂಗ್, ನಂತರ ಪ್ರಣಬ್ ಮುಖರ್ಜಿಯವರು ನನ್ನತ್ತ ನೋಡಿ, ಪಕ್ಷದಿಂದ ಯಾವುದೇ ಪ್ರಶ್ನೆ ಕೇಳದಿರಲು ನಿರ್ಧರಿಸಲಾಗಿದೆ ಎಂಬಂತೆ ಸಂಜ್ಞೆ ಮಾಡಿದರು.
ಆದರೂ ನಾನು ಕೇಳಿದೆ: ‘ಬುಲೆಟ್ಪ್ರೂಫ್ ಜಾಕೆಟ್ ತೊಟ್ಟಿದ್ದರೂ ನಮ್ಮ ದೇಶದ ಯೋಧರು ಯುದ್ಧಭೂಮಿಯಲ್ಲಿ ಶತ್ರುಗಳ ಗುಂಡಿಗೆ ಸಿಲುಕಿ ಏಕೆ ಹುತಾತ್ಮರಾಗುತ್ತಿದ್ದಾರೆ? ಇದಲ್ಲದೆ, ಮೃತ ಯೋಧರನ್ನು ಮನೆಗೆ ತರಲು ಬಳಸುವ ಶವಪೆಟ್ಟಿಗೆಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಕೇಳಿದ್ದೆ. ಈ ಎರಡೂ ಪ್ರಶ್ನೆಗಳಿಗೆ ದೇಶ ಉತ್ತರ ನಿರೀಕ್ಷಿಸುತ್ತಿತ್ತು. ಕೆಲವೊಮ್ಮೆ ಹೀಗೆ ನಿರ್ಭೀತಿಯಿಂದ ವರ್ತಿಸುವ ಅಗತ್ಯವಿರುತ್ತದೆ. ಹೀಗಾಗಿ ಶಶಿ ತರೂರ್ ಸರಿಯಾದ ನಿರ್ಧಾರವನ್ನೇ ಮಾಡಿದ್ದಾರೆ.
ವಿದೇಶಗಳಿಗೆ ತೆರಳುವ ನಿಯೋಗಗಳನ್ನು ಆಯ್ಕೆ ಮಾಡುವಾಗ ಕೇಂದ್ರ ಸರಕಾರ ಸಾಕಷ್ಟು ಅಳೆದು ತೂಗಿ ನಿರ್ಧಾರ ಕೈಗೊಂಡಿದೆ. ನಿಯೋಗಕ್ಕೆ ಆಯ್ಕೆಯಾದವರಲ್ಲಿ 51 ಸಂಸದರು, ಮಾಜಿ ಕೇಂದ್ರ ಸಚಿವರು, ಎಂಟು ಮಂದಿ ಮಾಜಿ ರಾಜತಾಂತ್ರಿಕ ಅಧಿಕಾರಿಗಳಿದ್ದಾರೆ. ಇವರೆಲ್ಲರಿಗೂ ವಿದೇಶಾಂಗ ವ್ಯವಹಾರಗಳ ಬಗ್ಗೆ ಜ್ಞಾನವಿದೆ. ವಿದೇಶಗಳಲ್ಲಿ ಭಾರತವನ್ನು ಹೇಗೆ ಪ್ರತಿನಿಧಿಸಬೇಕು ಎಂಬುದು ಇವರಿಗೆ ಗೊತ್ತಿದೆ. ತಾವು ಯಾರ ಜೊತೆಗೆ ಮಾತುಕತೆ ನಡೆಸುತ್ತಾರೋ ಅವರಿಗೆ ತಮ್ಮ ನಿಲುವು ಸ್ಪಷ್ಟವಾಗಿ ಮನವರಿಕೆಯಾಗುವಂತೆ ನೋಡಿಕೊಳ್ಳುವ ಸಾಮರ್ಥ್ಯ ಇವರಿಗಿದೆ.
ಈ ನಿಯೋಗಗಳು ಈಗಾಗಲೇ ತಮ್ಮ ಪ್ರವಾಸ ಆರಂಭಿಸಿವೆ. ಇವು 33 ದೇಶಗಳಿಗೆ ಭೇಟಿ ನೀಡಲಿವೆ. ಈ ದೇಶಗಳನ್ನು ಕೂಡ ಕೇಂದ್ರ ಸರಕಾರ ಬಹಳ ಮುಂದಾಲೋಚನೆಯಿಂದಲೇ ಆಯ್ಕೆ ಮಾಡಿದೆ. 33ರ ಪೈಕಿ 15 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಥವಾ ತಾತ್ಕಾಲಿಕ ಸದಸ್ಯ ರಾಷ್ಟ್ರಗಳು. ಐದು ದೇಶಗಳು ಸದ್ಯದಲ್ಲೇ ಸದಸ್ಯರಾಗಲಿವೆ.
ಇನ್ನುಳಿದ ದೇಶಗಳ ಮಾತಿಗೆ ಜಾಗತಿಕ ವೇದಿಕೆಯಲ್ಲಿ ಸಾಕಷ್ಟು ತೂಕವಿರುತ್ತದೆ. ಈ ನಡುವೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಳಿರುವ ಮೂರು ಪ್ರಶ್ನೆಗಳು ಎಲ್ಲೆಡೆ ಸುದ್ದಿಯಾಗುತ್ತಿವೆ.
ಅವರ ಮೊದಲ ಪ್ರಶ್ನೆ: ಅಮೆರಿಕ ಏಕೆ ಭಾರತವನ್ನು ಪಾಕಿಸ್ತಾನದ ಜೊತೆಗಿರಿಸಿ ನೋಡುತ್ತಿದೆ? ಎರಡು: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಧಾನ ಮಾಡುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಕೇಳಿದವರು ಯಾರು? ಮೂರು: ಪಾಕಿಸ್ತಾನವನ್ನು ವಿರೋಧಿಸಲು ಏಕೆ ಜಗತ್ತಿನ ಒಂದೇ ಒಂದು ದೇಶವೂ ಭಾರತದ ಜೊತೆಗೆ ಕೈಜೋಡಿಸಿಲ್ಲ? ಭಾರತದ ವಿದೇಶಾಂಗ ನೀತಿ ಸೋತು ಹೋಗಿದೆಯೇ? ಹೀಗಂತ ರಾಹುಲ್ ಗಾಂಧಿ ಕೇಳಿದ್ದಾರೆ. ನನ್ನ ಪ್ರಕಾರ ಇವೆಲ್ಲವೂ ಪ್ರಮುಖ ಪ್ರಶ್ನೆಗಳು.
ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಕೆಲ ವರ್ಷಗಳಿಂದ ಜಗತ್ತಿನ ನಾನಾ ದೇಶಗಳ ಜೊತೆಗೆ ಸ್ನೇಹ ವೃದ್ಧಿಸಿಕೊಳ್ಳಲು ಸಾಕಷ್ಟು ಕೆಲಸ ಮಾಡಿದ್ದಾರೆ. ಆ ಪೈಕಿ ಹಲವಾರು ದೇಶಗಳ ಜೊತೆಗೆ ಭಾರತದ ಸಂಬಂಧ ಮೊದಲಿಗಿಂತ ಈಗ ಬಲಿಷ್ಠವಾಗಿದೆ. ಹೀಗಾಗಿ ಸಹಜವಾಗಿಯೇ ಆ ದೇಶಗಳು ನಮ್ಮ ಜೊತೆಗೆ ನಿಲ್ಲಬೇಕೆಂದೂ, ನಮ್ಮ ಒಳ್ಳೆಯ ಉದ್ದೇಶಗಳಿಗೆ ಬೆಂಬಲ ನೀಡಬೇಕೆಂದೂ ನಾವು ಬಯಸುತ್ತೇವೆ.
ಈಗ ನಿಯೋಗಗಳನ್ನು ಕಳುಹಿಸಿ ಭಾರತದ ನಿಲುವೇನು ಎಂಬುದನ್ನು ತಿಳಿಸಿದ ಮೇಲೆ ಭಾರತದ ಸ್ನೇಹಿತ ರಾಷ್ಟ್ರಗಳು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಉಪದ್ವ್ಯಾಪಗಳ ಮೇಲೆ ಬೆಳಕು ಚೆಲ್ಲಲು ಸಹಕರಿಸುತ್ತವೆ ಎಂಬ ನಂಬಿಕೆ ನನ್ನದು. ಹಾಗೆ ಆದಾಗ ಅದರಲ್ಲಿ ಶಶಿ ತರೂರ್ ಅವರ ಕೊಡುಗೆ ಯೂ ಇದ್ದಿರುತ್ತದೆ. ಅವರ ಪಕ್ಷವಾದ ಕಾಂಗ್ರೆಸ್ ಗೂ ಅದರ ಕ್ರೆಡಿಟ್ ಸಿಗುತ್ತದೆ.
ಹೀಗಾಗಿ ಕಾಂಗ್ರೆಸ್ ಪಕ್ಷ ತನ್ನಲ್ಲಿ ಶಶಿ ತರೂರ್ರಂತಹ ಅಪರೂಪದ ಸಂಸದರಿದ್ದಾರೆಂದು ಹೆಮ್ಮೆ ಪಡಬೇಕು. ತರೂರ್ ಒಂದು ಮುತ್ತು. ಅಮೆರಿಕದಂತಹ ಪ್ರಮುಖ ರಾಷ್ಟ್ರಕ್ಕೆ ಅತ್ಯಂತ ಮಹತ್ವದ ವಿಚಾರವನ್ನು ತಿಳಿಸಲು ಭಾರತ ಸರಕಾರವು ತನ್ನ ಪಕ್ಷದ ಸಂಸದನ ನೇತೃತ್ವದಲ್ಲಿ ನಿಯೋಗವನ್ನು ಕಳುಹಿಸಿಕೊಟ್ಟಿದೆ ಎಂದು ಕಾಂಗ್ರೆಸ್ ಖುಷಿಪಡಬೇಕಲ್ಲವೇ? ಅದನ್ನು ಬಿಟ್ಟು ಹೀಗೆ ಕೊರಗುವು ದಾದರೂ ಏಕೆ?