ರಾಜ್ಯಕ್ಕೆ 40 ಕೋಟಿ ರು. ಪಟಾಕಿ ಆದಾಯ ಠುಸ್
ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇವಲ ಐದು ದಿನಗಳಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ವಾರ್ಷಿಕ ಅವಧಿಗೆ ಪಟಾಕಿ ದಾಸ್ತಾನು ಮಾಡುವುದನ್ನು ಕೇವಲ ಏಳೆಂಟು ಬೆರಳೆಣಿಕೆ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಹಬ್ಬದ ಕಾರಣಕ್ಕೆ ಈ ಐದು ದಿನಗಳಿಗೆ ರಾಜ್ಯಾದ್ಯಂತ ಸುಮಾರು ೧೦೦೦ ಮಂದಿಗೆ ಮಾತ್ರ ಮಾರಾಟದ ಅವಕಾಶ ಸಿಕ್ಕಿದೆ.

-

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಪಟಾಕಿ ಅಕ್ರಮ ಮಾರಾಟ; ತಮಿಳುನಾಡಿಗೆ ತೆರಿಗೆ, ರಾಜ್ಯಕ್ಕೆ ಬರೀ ಮದ್ದಿನ ಹೊಗೆ
ದೀಪಾವಳಿ ಬರುವ ಮುನ್ನವೇ ರಾಜ್ಯದಲ್ಲಿ ‘ಸದ್ದಿಲ್ಲದೆ’ ತಮಿಳುನಾಡು ಪಟಾಕಿ ಅಕ್ರಮ ಮಾರಾಟ ದಂಧೆ ಶುರುವಾಗಿದೆ. ಅಷ್ಟೇ ಅಲ್ಲ. ಅಕ್ರಮ ಮಾರಾಟದ ಮಾರಾಟದ ಮೇಲೆ ಸರಕಾರ ‘ಬೆಳಕು’ ಚೆಲ್ಲದ ಕಾರಣ ’ಪಟಾಕಿ ಹೊಗೆ’ಯಲ್ಲಿ ರಾಜ್ಯಸರಕಾರ ಸುಮಾರು 40 ಕೋಟಿ ರು.ಗಳಿಗೂ ಹೆಚ್ಚು ತೆರಿಗೆ ಆದಾಯ ಕಳೆದುಕೊಳ್ಳುತ್ತಿದೆ. ಇದರಿಂದ ಮುಂಬರುವ ದೀಪಾವಳಿ ಹೆಸರಿನಲ್ಲಿ ನಡೆಯುವ ಕೇವಲ ಐದು ದಿನಗಳ ವ್ಯವಹಾರಗಳಲ್ಲಿ ನೆರೆ ರಾಜ್ಯ ತಮಿಳುನಾಡು ಬೊಕ್ಕಸ ತುಂಬಿಸಿಕೊಂಡರೆ ರಾಜ್ಯಕ್ಕೆ ಮಾತ್ರ ಬರೀ ಪಟಾಕಿ ಹೊಗೆ ಹಾಗೂ ಪಟಾಕಿ ಸಿಡಿತದ ಕಸ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ.
ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇವಲ ಐದು ದಿನಗಳಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ವಾರ್ಷಿಕ ಅವಧಿಗೆ ಪಟಾಕಿ ದಾಸ್ತಾನು ಮಾಡುವುದನ್ನು ಕೇವಲ ಏಳೆಂಟು ಬೆರಳೆಣಿಕೆ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಹಬ್ಬದ ಕಾರಣಕ್ಕೆ ಈ ಐದು ದಿನಗಳಿಗೆ ರಾಜ್ಯಾದ್ಯಂತ ಸುಮಾರು ೧೦೦೦ ಮಂದಿಗೆ ಮಾತ್ರ ಮಾರಾಟದ ಅವಕಾಶ ಸಿಕ್ಕಿದೆ. ಆದರೆ ದೀಪಾವಳಿಗೂ ಮುನ್ನವೇ ರಾಜ್ಯಕ್ಕೆ ತಮಿಳುನಾಡು ಪಟಾಕಿಗಳ ಅಕ್ರಮ ಸಾಗಣೆಯಾಗಿದ್ದು ಇದರಿಂದ ಬೆಂಗಳೂರು ಸೇರಿದಂತೆ ಭಾರೀ ಸಿಡಿಮದ್ದಿನ ಪಟಾಕಿಗಳ ಅಕ್ರಮ ದಾಸ್ತಾನು ಮತ್ತು ಮಾರಾಟ ಹೆಚ್ಚಾಗಿದೆ.
ಈ ಅಕ್ರಮ ದಾಸ್ತಾನು ಮತ್ತು ಅನಧಿಕೃತ ಮಾರಾಟದಿಂದ ಪಟಾಕಿ ಸಂಬಂಧ ದುರಂತಗಳು ನಡೆಯಬಹುದಾದ ಆತಂಕಗಳಿದ್ದು, ಸಂಬಂಧಿಸಿದ ಇಲಾಖೆಗಳು ಮೌನವಾಗಿವೆ ಎಂದು ಅಧಿಕೃತ ಮಾರಾಟಗಾರರು ಹೇಳುತ್ತಿದ್ದಾರೆ.
ಇದನ್ನೂ ಓದಿ: Roopa Gururaj Column: ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು
೨೦೨೩ರ ಅಕ್ಟೋಬರ್ ೭ರಂದು ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಪಟಾಕಿ ಸ್ಫೋಟ ದುರಂತಕ್ಕೆ ೧೪ ಮಂದಿ ಬಲಿಯಾಗಿದ್ದರು. ನಾಲ್ವರು ಗಾಯಗೊಂಡಿದ್ದರು. ಈಗಾಗಲೇ ತಮಿಳುನಾಡಿನಿಂದ ಸುಮಾರು ೨೨೦ ಕೋಟಿ ರು. ಮೊತ್ತದ ವಿವಿಧ ಪಟಾಕಿಗಳು ತಿಂಗಳ ಹಿಂದೆಯೇ ಕರ್ನಾಟಕ ಪ್ರವೇಶಿಸಿದ್ದು ಇದರಲ್ಲಿ ಎಷ್ಟು ಅಧಿಕೃತ ಮತ್ತು ಕಾನೂನು ಬದ್ಧ ಎನ್ನುವುದನ್ನು ವಾಣಿಜ್ಯ ತೆರಿಗೆ ಇಲಾಖೆ ನಿಗಾ ವಹಿಸಿ ಪತ್ತೆ ಮಾಡಬೇಕಿತ್ತು.
ಹಾಗೆಯೇ ಪಟಾಕಿಗಳ ದಾಸ್ತಾನು ಮಾಡಲು ಅನುಮತಿ ನೀಡುವ ಕಂದಾಯ ಇಲಾಖೆ ಪೂರೈಕೆ ಮತ್ತು ದಾಸ್ತಾನು ಬಗ್ಗೆ ಕ್ರಮ ವಹಿಸಬೇಕಿತ್ತು. ಇನ್ನು ಪಟಾಕಿಗಳ ಅಕ್ರಮ ಸಾಗಣೆ ಮತ್ತು ಅಕ್ರಮ ಮಾರಾಟದ ಬಗ್ಗೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿತ್ತು. ಆದರೆ ಈ ಇಲಾಖೆಗಳು ಅಲ್ಲಲ್ಲಿ ಕಾಣಸಿಗುವ ಕೆಲವು ಸಣ್ಣಪುಟ್ಟ ಮಾರಾಟಗಾರರ ವಿರುದ್ಧ ಕ್ರಮಕೈಗೊಂಡಿರುವುದನ್ನು ಬಿಟ್ಟರೆ ಭಾರೀ ದಾಸ್ತಾನುಗಳ ಬಗ್ಗೆ ಗಮನ ನೀಡಿರುವಂತೆ ಕಾಣುತ್ತಿಲ್ಲ.
ಹೀಗಾಗಿ ಪಟಾಕಿ ಅಕ್ರಮಗಳು ಹೆಚ್ಚಾಗಿವೆ. ಈಗಲಾದರೂ ಸಂಬಂಧಿಸಿದ ಇಲಾಖೆಗಳು ಪಟಾಕಿ ಸಾಗಣೆ, ದಾಸ್ತಾನು ಮತ್ತು ಮಾರಾಟದ ಕ್ರಮಗಳನ್ನು ಗಂಭೀರವಾಗಿ ಪರಿಶೀಲಿಸಿದ್ದಾರೆಯೇ ಎಂದು ನೋಡಿದರೆ ಅದೂ ಕಾಣುತ್ತಿಲ್ಲ ಎಂದು ಮಾರಾಟಗಾರರು ಹೇಳಿದ್ದಾರೆ.
ಪ್ರತಿವರ್ಷ ದೀಪಾವಳಿ ಕಾಲಕ್ಕೆ ರಾಜ್ಯದಲ್ಲಿ ಸುಮಾರು 240 ಕೋಟಿ ರು. ಪಟಾಕಿ ವಹಿವಾಟು ನಡೆಯುತ್ತದೆ. ಬೆಂಗಳೂರು ಒಂದರ ಸುಮಾರು 150 ಕೋಟಿ ರು. ಪಟಾಕಿ ವಹಿವಾಟು ನಡೆಯುತ್ತದೆ. ಇಷ್ಟೂ ಪಟಾಕಿ ನೆರೆಯ ತಮಿಳುನಾಡಿನ ಶಿವಕಾಶಿ ಪ್ರದೇಶದಿಂದ ಪೂರೈಕೆಯಾಗುತ್ತಿದ್ದು, ಇಲ್ಲಿಂದಲೇ ಇಡೀ ದೇಶಕ್ಕೆ (ಹೆಚ್ಚಾಗಿ ಉತ್ತರ ಭಾರತಕ್ಕೆ) ಪೂರೈಕೆಯಾಗುತ್ತದೆ. ರಾಜ್ಯಕ್ಕೆ ಬೆಂಗಳೂ ರಿನ ಅತ್ತಿಬೆಲೆ ಸುತ್ತಮುತ್ತಲ ತಮಿಳುನಾಡು ಗಡಿ ಹಾಗೂ ಸರ್ಜಾಪುರದ ತಮಿಳುನಾಡು ಗಡಿಯ ಆಸುಪಾಸಿನಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಿವೆ. ಇಲ್ಲಿಂದ ಬೆಂಗಳೂರಿಗೆ ಹಾಗೆಯೇ ರಾಜ್ಯದ ಇತರ ಜಿಲ್ಲೆಗಳಿಗೆ ಮಾರಾಟವಾಗುತ್ತಿದೆ.
ಈಗಾಗಲೇ ತಮಿಳುನಾಡಿನಿಂದ ಪಟಾಕಿ ಬಂದು ದಾಸ್ತಾ ನಾಗಿದೆ. ಮಾರಾಟವೂ ಆಗಿದೆ. ಅನೇಕ ಕಡೆ ಅನುಮತಿ ಪಡೆ ಯದವರೂ ಇದರಲ್ಲಿ ಇದ್ದಾರೆ. ಇವರು ಸರಕಾರ ಅನುಮತಿ ನೀಡಿರುವ ಅವಧಿ (ಅ.೧೮ರಿಂದ ೨೨ )ಗೂ ಮುನ್ನವೇ ದಾಸ್ತಾನು ಮತ್ತು ಮಾರಾಟ ಮಾಡಲಾರಂಭಿಸಿದ್ದಾರೆ.
ವಿಚಿತ್ರವೆಂದರೆ, ಇಲ್ಲಿ ಖರೀದಿಸುವ ಪಟಾಕಿಗಳಿಗೆ ಬಿಲ್ ಸಿಗುವುದಿಲ್ಲ. ಅದು ಸಿಕ್ಕರೂ ನಕಲಿ ಬಿಲ್ ಗಳ ಹಾವಳಿ. ಇನ್ನು ಬಿಲ್ಗಳಲ್ಲಿ ಯಾವುದೆಲ್ಲ ಪಟಾಕಿಗಳಿವೆ ಎಂದ ನಮೂದು ಮಾಡಿರುವುದಿಲ್ಲ. ಬದಲಾಗಿ ಮಿಶ್ರ ಪಟಾಕಿ ಎಂಬ ಬಾಕ್ಸ್ ಗಳ ಹೆಸರಿನಲ್ಲಿ ಮಾರಾಟವಾ ಗುತ್ತದೆ. ಹೀಗಾಗಿ ಪಟಾಕಿ ಅಕ್ರಮ ಮಾರಾಟ ಮತ್ತು ಸಾಗಣೆ ಹೆಚ್ಚಾಗಿವೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.
ತಮಿಳುನಾಡಿಗೆ ಜಿಎಸ್ಟಿ ಸಂದಾಯ
ಕೋಟ್ಯಂತರ ರುಪಾಯಿಗಳ ಪಟಾಕಿ ರಾಜ್ಯದ ಮಾರಾಟವಾದರೂ ರಾಜ್ಯಕ್ಕೆ ಅದರ ತೆರಿಗೆ ಹಣ ಸಿಗುವುದಿಲ್ಲ. ಅಂದರೆ ಇಲ್ಲಿ ಜಿಎಸ್ಟಿ ನಿಯಮದ ಪ್ರಕಾರ ಪಟಾಕಿ ಬಳಕೆದಾರರು ತೆರಿಗೆ ಪಾವತಿಸುತ್ತಾರೆ. ಅಂದರೆ ಇಲ್ಲಿ ತಮಿಳುನಾಡಿನ (ಜಿಎಸ್ಟಿ ಬಿಲ್ ರಹಿತ) ಪಟಾಕಿ ಕರ್ನಾಟಕದಲ್ಲಿ ಮಾರಾಟವಾಗುತ್ತಿರುವುದರಿಂದ ತೆರಿಗೆ ತಮಿಳುನಾಡಿಗೆ ಸೇರುತ್ತಿದೆ. ಒಂದೊಮ್ಮೆ ವ್ಯಾಪಾರ ಜಿಎಸ್ಟಿ ಬಿಲ್ ಸಹಿತ ನಡೆದರೆ ತಮಿಳುನಾಡು ಪಡೆದಿದ್ದ ಜಿಎಸ್ಟಿಯನ್ನು (ಇಂಟಿಗ್ರೇಟೆಡ್) ಸಂಗ್ರಹಿಸಿ ಕರ್ನಾಟಕಕ್ಕೆ ನೀಡಬೇಕಾಗುತ್ತದೆ. ಆದರೆ ಇಲ್ಲಿ ತಮಿಳುನಾಡಿನ ಪಟಾಕಿ ವ್ಯಾಪಾರಿಗಳು ರಾಜ್ಯದವರಿಂದ ಜಿಎಸ್ಟಿ ಹಣ ಪಡೆಯುತ್ತಾರೆಯೋ ವಿನಾ ಅದನ್ನು ಬಿಲ್ ನಲ್ಲಿ ತೋರಿಸುತ್ತಿಲ್ಲ.
ಹೀಗಾಗಿ ರಾಜ್ಯಕ್ಕೆ ಸೇರಬೇಕಿದ್ದ ತೆರಿಗೆ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಹೀಗಾಗಿ ಕೇವಲ ಈ ಐದು ದಿನಗಳ ೨೪೦ ಕೋಟಿ ರು.ಗಳ ಪಟಾಕಿ ವಹಿವಾಟಿನಲ್ಲಿ ರಾಜ್ಯಕ್ಕೆ ಸುಮಾರು ೪೦ ಕೋಟಿ ರು.ಗಳಿಗೂ ಹೆಚ್ಚು ಆದಾಯ ಸೋರಿಕೆಯಾದಂತಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
*
ಪಟಾಕಿ ಮಾರಾಟದಲ್ಲಿ ತೆರಿಗೆ ವಂಚನೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ದಾಖಲೆಗಳನ್ನು ಪರಿಶೀಲಿಸಿ ಅಕ್ರಮಗಳನ್ನು ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ.
-ವಿಪುಲ್ ಬನ್ಸಾಲ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ