ಪಂಜಾಬ್ ರೈಲು ಹಳಿ ಸಮೀಪ ಸ್ಫೋಟ: ತನಿಖೆ ಚುರುಕು, ಸ್ಥಳದಲ್ಲಿ ಅಪರಿಚಿತ ಮೃತದೇಹ ಪತ್ತೆ; ಉಗ್ರರ ಕೃತ್ಯವೆ?
ಪಂಜಾಬ್ನ ಪಟಿಯಾಲದಲ್ಲಿ ರೈಲು ಹಳಿ ಸಮೀಪ ಲಘು ತೀವ್ರತೆಯ ಸ್ಫೋಟ ಸಂಭವಿಸಿ ಹಳಿ ಹಾನಿಗೊಳಗಾಗಿದೆ. ಘಟನಾ ಸ್ಥಳದ ಬಳಿ ಅಪರಿಚಿತ ಮೃತದೇಹವೂ ಪತ್ತೆಯಾಗಿದ್ದು, ಸಾವಿಗೂ ಸ್ಫೋಟಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್, ಜಿಆರ್ಪಿ, ಆರ್ಪಿಎಫ್ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ವಿಧ್ವಂಸಕ ಕೃತ್ಯದ ಕೋನವನ್ನೂ ಪರಿಶೀಲಿಸಲಾಗುತ್ತಿದೆ. ಈ ಘಟನೆ ಹಿನ್ನೆಲೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಅಕಾಲಿದಳ ಸರ್ಕಾರವನ್ನು ಟೀಕಿಸಿದೆ.
ಪಂಜಾಬ್ನಲ್ಲಿ ರೈಲ್ವೆ ಹಳಿ ಬಳಿ ಬಾಂಬ್ ಸ್ಪೋಟ -
ಪಂಜಾಬ್, ಏ. 28: ಪಂಜಾಬ್ನ ಪಟಿಯಾಲದಲ್ಲಿ ಸೋಮವಾರ ತಡರಾತ್ರಿ ರೈಲ್ವೆ ಹಳಿ ಸಮೀಪ ಸಂಭವಿಸಿದ ಲಘು ತೀವ್ರತೆಯ ಸ್ಫೋಟವು ಹಳಿಯ ಒಂದು ಭಾಗವನ್ನು ಹಾನಿಗೊಳಿಸಿದ್ದು, ಈ ಘಟನೆಯು ಬಹು ಸಂಸ್ಥೆಗಳ ತನಿಖೆಗೆ ಕಾರಣವಾಗಿದೆ. ಅಂದಾಜು ರಾತ್ರಿ 10 ಗಂಟೆಗೆ ಈ ಸ್ಫೋಟ ಸಂಭವಿಸಿದ್ದು, ಪ್ರಮುಖವಾಗಿ ಸರಕು ಸಾಗಣೆಗೆ ಬಳಸುವ ಹಳಿಯಲ್ಲಿ ಈ ಅವಘಡ ನಡೆದಿದೆ. ಘಟನೆಯ ಬೆನ್ನಲ್ಲೇ ಪಟಿಯಾಲ ಎಸ್ಎಸ್ಪಿ ವರುಣ್ ಶರ್ಮಾ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸ್ (ಜಿಆರ್ಪಿ) ಮತ್ತು ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ತಂಡಗಳೊಂದಿಗೆ ಶಂಭು-ಅಂಬಾಲಾ ಮಾರ್ಗದ ಸ್ಥಳಕ್ಕೆ ಧಾವಿಸಿದರು. ಹಾನಿಗೊಳಗಾದ ಹಳಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, "ಲಘು ತೀವ್ರತೆಯ ಸ್ಫೋಟ ಸಂಭವಿಸಿದ್ದು, ಹಳಿಗೆ ಹಾನಿಯಾಗಿದೆ. ಹಾನಿಯ ಪ್ರಮಾಣವನ್ನು ಅಳೆಯಲಾಗುತ್ತಿದೆ" ಎಂದು ತಿಳಿಸಿದರು.
ಸ್ಫೋಟದ ಸ್ಥಳದ ಹತ್ತಿರವೇ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ. ಆದರೆ ಈ ಸಾವಿಗೂ ಸ್ಫೋಟಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದು, ಸ್ಫೋಟದ ಸ್ವರೂಪ ಮತ್ತು ಕಾರಣವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ವಿಧ್ವಂಸಕ ಕೃತ್ಯದ ಕೋನವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪಂಜಾಬ್ನಲ್ಲಿ ಲಘು ಸ್ಫೋಟ:
#WATCH | Punjab: A detonation was attempted at a railway track in Rajpura city of Patiala last night. Visuals from the spot. Police say that the person who was carrying out the detonation attempt died while doing it. An investigation has begun.
— ANI (@ANI) April 28, 2026
SSP Patiala Varun Sharma says,… pic.twitter.com/gdbAMl7wTU
2ನೇ ಹಂತದ ಮತದಾನದ ಸಿದ್ಧತೆಯಲ್ಲಿರುವ ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್ ಪತ್ತೆ
ಸರ್ಕಾರದ ವಿರುದ್ಧ ಅಕಾಲಿದಳ ವಾಗ್ದಾಳಿ
ಈ ಘಟನೆಯ ಕುರಿತು ಶಿರೋಮಣಿ ಅಕಾಲಿದಳವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಮಾತನಾಡಿ, ʼʼಇಂತಹ ಸರಣಿ ಘಟನೆಗಳು ರಾಜ್ಯದಲ್ಲಿ ಗಂಭೀರ ಭದ್ರತಾ ಕಳವಳವನ್ನು ಉಂಟುಮಾಡುತ್ತಿವೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ರಾಜಕೀಯ ಕಾರಣಗಳಿಗಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಸರ್ಕಾರದ ಬಳಿ ಯಾವುದೇ ಸ್ಪಷ್ಟ ಕ್ರಿಯಾ ಯೋಜನೆ ಇಲ್ಲ ಎಂದು ಟೀಕಿಸಿದರು. ಕಳೆದ ಜನವರಿಯಲ್ಲಿ ಸಿರಿಹಿಂದ್ನಲ್ಲಿ ನಡೆದ ಇಂತಹುದೇ ಘಟನೆಯನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು. ಈ ಪ್ರಕರಣವು ರಾಜ್ಯದಲ್ಲಿ ಹಳೆಯ ಭೀತಿಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಅವರು ಕಿಡಿಕಾರಿದರು.