Murder Case: ಲೈಟ್ ಆಫ್ ವಿಚಾರಕ್ಕೆ ಗಲಾಟೆ; ಸಹೋದ್ಯೋಗಿಯನ್ನೇ ಹೊಡೆದು ಕೊಂದ ವ್ಯಕ್ತಿ
ಕಚೇರಿಯಲ್ಲಿ ಲೈಟ್ ಸ್ವಿಚ್ ಆಫ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ 40 ವರ್ಷದ ಭೀಮೇಶ್ ಬಾಬು ಕೊಲೆಯಾದ ವ್ಯಕ್ತಿ.
-
Vishakha Bhat
Nov 2, 2025 2:01 PM
ಬೆಂಗಳೂರು: ಕಚೇರಿಯಲ್ಲಿ ಲೈಟ್ ಸ್ವಿಚ್ ಆಫ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳ ಜಗಳ ನಡೆದು ಅದು ಕೊಲೆಯಲ್ಲಿ (Murder Case) ಅಂತ್ಯಗೊಂಡಿದೆ. ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ 40 ವರ್ಷದ ಭೀಮೇಶ್ ಬಾಬು ಕೊಲೆಯಾದ ವ್ಯಕ್ತಿ. ಆಂಧ್ರಪ್ರದೇಶದ ವಿಜಯವಾಡದ ನಿವಾಸಿ 24ರ ಹರೆಯದ ಸೋಮಾಲ ವಂಶಿ ಕೊಲೆ ಮಾಡಿದ ಯುವಕ. ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಲೈಟ್ ಆಫ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಶನಿವಾರ ಬೆಳಗಿನ ಜಾವ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. . ಈ ಇಬ್ಬರು ಯುವಕರು ಡಾಟಾ ಡಿಜಿಟಲ್ ಬ್ಯಾಂಕ್ ಎಂಬ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಡಾಟಾ ಡಿಜಿಟಲ್ ಬ್ಯಾಂಕ್ ಸಂಸ್ಥೆಯು ದಿನನಿತ್ಯದ ಚಿತ್ರೀಕರಣದ ವೀಡಿಯೊಗಳನ್ನು ಸಂಗ್ರಹಿಸುವ ಕೆಲಸ ಮಾಡುತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಮಾತಿನ ಚಕಮಕಿಯಿಂದ ಕೋಪಗೊಂಡ ಸೋಮಾಲ ವಂಶಿ ಅಲ್ಲೇ ಇದ್ದ ಡಂಬಲ್ಸ್ನಿಂದ ಭೀಮೇಶ್ ಅವರ ಹಣೆಗೆ ಹೊಡೆದಿದ್ದಾನೆ.
ಪರಿಣಾಮ ಭೀಮೇಶ್ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಸೋಮಾಲ ವಂಶಿ ಸೀದಾ ಬಂದು ಗೋವಿಂದರಾಜ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಆತನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರತ್ಯೇಕ ಘಟನೆಯಲ್ಲಿ, ಸ್ನೇಹಿತರ ಜೊತೆ ಸೇರಿ ಪುತ್ರಿಯೇ ತಾಯಿಯನ್ನು ಹತ್ಯೆಗೈದಿದ್ದ ಘಟನೆ ಇತ್ತೀಚೆಗೆ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು. ನೇತ್ರಾವತಿ (34) ಮೃತ ಮಹಿಳೆಯಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ಮೃತರ ಅಪ್ರಾಪ್ತ ಪುತ್ರಿ ಮತ್ತು ಆಕೆಯ ಸ್ನೇಹಿತರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಟ್ವಿಸ್ಟ್, ಅತ್ತೆಯೇ ಕೊಲೆಗಾತಿ!
ಅಕ್ಟೋಬರ್ 25ರಂದು ರಾತ್ರಿ ನೇತ್ರಾವತಿ ಮಲಗಿದ್ದಾಗ ಆಕೆಗೆ ತಿಳಿಯದಂತೆ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಬಾಲಕಿ ಮನೆಗೆ ಕರೆದುಕೊಂಡು ಬಂದು ಗದ್ದಲ ಮಾಡುತ್ತಿದ್ದಳು. ಆಗ ಎಚ್ಚರಗೊಂಡ ನೇತ್ರಾವತಿ, ಮಗಳು ಮತ್ತು ಆಕೆಯ ಸ್ನೇಹಿತರಿಗೆ ಬೈಯ್ದಿದ್ದರು. ಈ ವೇಳೆ ಜಗಳ ತಾರಕಕ್ಕೇರಿದ್ದು, ಅಪ್ರಾಪ್ತ ಪುತ್ರಿ ತನ್ನ ಸ್ನೇಹಿತರ ಜೊತೆ ಸೇರಿ ನೇತ್ರಾವತಿಯ ಬಾಯಿ ಮುಚ್ಚಿ ಟವಲ್ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನ್ಗೆ ನೇತು ಹಾಕಿ ಸ್ಥಳದಿಂದ ಪರಾರಿಯಾಗಿದ್ದರು.