Bengaluru stampede: ಕಾಲ್ತುಳಿತ ಪ್ರಕರಣ; 2 ಸುಮೋಟೋ ಕೇಸ್ ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ
Bengaluru stampede: ಮಾನವ ಹಕ್ಕುಗಳ ಆಯೋಗದಿಂದ 2 ಕೇಸ್ ದಾಖಲಿಸಿಕೊಂಡಿದ್ದೇವೆ. ಬೆಂಗಳೂರು ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಕ್ರೀಡಾಂಗಣದವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂಭಟ್ ತಿಳಿಸಿದ್ದಾರೆ.


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ (Bengaluru stampede) ಸಂಬಂಧಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಎರಡು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ನಗರ ಪೊಲೀಸ್ ಕಮಿಷನರ್, ಕೆಎಸ್ಸಿಎ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂಭಟ್, ಸದಸ್ಯ ಸುರೇಶ್, ಡಿವೈಎಸ್ಪಿಗಳಾದ ಸುಧೀರ್ ಹೆಗ್ಡೆ, ಮೋಹನ್ ನೇತೃತ್ವದ ನಿಯೋಗ ಭೇಟಿ ನೀಡಿ, ಪರಿಶೀಲಿಸಿದೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಅವರು, ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದು, 70 ಜನ ಗಾಯಗೊಂಡಿದ್ದಾರೆ. ಬೌರಿಂಗ್ ಮತ್ತು ವೈದೇಹಿಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬ್ಯುಲೆನ್ಸ್ ಇರಲಿಲ್ಲ, ಸರಿಯಾದ ಸಮಯಕ್ಕೆ ಗೇಟ್ ತೆಗೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಮಾನವ ಹಕ್ಕುಗಳ ಆಯೋಗದಿಂದ 2 ಕೇಸ್ ದಾಖಲಿಸಿಕೊಂಡಿದ್ದೇವೆ. ಬೆಂಗಳೂರು ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಕ್ರೀಡಾಂಗಣದವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ ಎಂದು ತಿಳಿಸಿದರು.
ಮೃತರ ಕುಟುಂಬಕ್ಕೆ ಸರ್ಕಾರಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಹೇಳಿದೆ. ಹೆಚ್ಚಿನ ಪರಿಹಾರ ಏನಾದರೂ ಬೇಕಾಗಿದ್ದರೆ ನಾವು ಸರ್ಕಾರಕ್ಕೆ ತಿಳಿಸುತ್ತೇವೆ. ನ್ಯಾಯಾಲಯ ಸೂಚನೆ ಕೊಟ್ಟರೆ ಆಯೋಗದಿಂದ ತನಿಖೆ ಮಾಡಿಸುತ್ತೇವೆ ಎಂದರು.
ಬೆಂಗಳೂರು ಕಾಲ್ತುಳಿತ ತನಿಖೆ ಹೊಣೆ ಹೊತ್ತ ನ್ಯಾ. ಡಿʼಕುನ್ಹಾ ಆಯೋಗದ ಅವಧಿ ವಿಸ್ತರಣೆ
ಬೆಂಗಳೂರು: ಐಪಿಎಲ್ ಟ್ರೋಫಿಯನ್ನು (IPL Trophy) ಆರ್ಸಿಬಿ (RCB) ತಂಡ ಗೆದ್ದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ (Bengaluru Stampede, Chinnaswamy Stampede) ದುರಂತದ ತನಿಖೆಯ ಹೊಣೆಯನ್ನು ಜಸ್ಟೀಸ್ ಮೈಕೆಲ್ ಡಿʼಕುನ್ಹಾ ಆಯೋಗಕ್ಕೆ (Justice D'Cunha commission) ವಹಿಸಲಾಗಿದೆ. ಈಗಾಗಲೇ ಜ. ಡಿʼಕುನ್ಹಾ ಆಯೋಗ ನಡೆಸುತ್ತಿರುವ ಚಾಮರಾಜನಗರದ ಆಕ್ಸಿಜನ್ ದುರಂತದ ತನಿಖೆಯ ವರದಿ ಒದಗಿಸಲು ನೀಡಲಾದ ಅವಧಿಯನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿ ನಾಲ್ವರನ್ನು ಬಂಧಿಸಲಾಗಿದೆ. ಈ ಮಧ್ಯೆ ಜ. ಡಿʼಕುನ್ಹಾ ಆಯೋಗಕ್ಕೆ ಪ್ರಕರಣದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಹೊಣೆ ನೀಡಲಾಗಿದೆ. ಸದ್ಯ ಜಸ್ಟೀಸ್ ಮೈಕೆಲ್ ಡಿʼಕುನ್ಹಾ ಆಯೋಗವು ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ವಿಚಾರಣೆ ಮಾಡುತ್ತಿದೆ. ಆದರೆ ಅದಕ್ಕೂ ಮೊದಲು ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಬಳಿಕ ಚಾಮರಾಜನಗರ ಆಕ್ಸಿಜನ್ ದುರಂತದ ಕೇಸ್ ಪರಿಶೀಲನೆಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಆಗಸ್ಟ್ 31ರವರೆಗೆ ಕುನ್ಹಾ ಆಯೋಗದ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
2021ರ ಮೇ 2ರಂದು ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದ ಹಿನ್ನೆಲೆ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ವೆಂಟಿಲೇಟರ್, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ ರೋಗಿಗಳು ಸಾವನ್ನಪ್ಪಿದ್ದರು. ದುರಂತದಲ್ಲಿ 36 ಜನರು ಮೃತಪಟ್ಟಿದ್ದರು.
ಜೂನ್ 4ರಂದು ಆರ್.ಸಿ.ಬಿ. ತಂಡದ ವಿಜಯೋತ್ಸವ ಅಭಿನಂದನಾ ಸಮಾರಂಭ ನಡೆಯುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಿಂದ ಸಂಭವಿಸಿದ ಸಾವು ಹಾಗೂ ಗಾಯಕ್ಕೆ ಸಂಬಂಧಿಸಿದಂತೆ ಜ.ಜಾನ್ ಮೈಕೆಲ್ ಡಿʼಕುನ್ನಾ ಇವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ಜೂನ್ 05ರಂದು ಸರ್ಕಾರ ರಚಿಸಿದ್ದು, ಈ ವಿಷಯ ವ್ಯಾಪ್ತಿಯು ತುರ್ತಾಗಿರುವುದರಿಂದ, ಒಂದು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ಪ್ರಕರಣಕ್ಕೆ ಆದ್ಯತೆ ನೀಡಿ ಒಂದು ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಾಗಿರುವ ಕಾರಣ, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮರಣ ಹೊಂದಿರುವ ಘಟನೆಗೆ ಸಂಬಂಧಿಸಿದಂತೆ ಜಾನ್ ಮೈಕಲ್ ಡಿʼಕುನ್ಹಾ ಅವರ ವಿಚಾರಣಾ ಆಯೋಗದ ಅವಧಿಯನ್ನು ಆಗಸ್ಟ್ 1ರಿಂದ 31 ರವರೆಗೆ ಒಂದು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ; ಸುಮೋಟೋ ಕೇಸ್ ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ