Book Release: ಪತ್ರಕರ್ತ ಹರೀಶ್ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಸೇರಿ 3 ಪುಸ್ತಕಗಳ ಲೋಕಾರ್ಪಣೆ
Book Release: ಲೇಖಕ, ವಿಶ್ವವಾಣಿ ಹಿರಿಯ ಪತ್ರಕರ್ತ ಹರೀಶ್ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಕಾದಂಬರಿ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ʼನೀಲಿ ಹೂವು ಖಾಲಿ ಹೃದಯʼ ಕಾದಂಬರಿ ಮತ್ತು ವಿಕಾಸ್ ನೇಗಿಲೋಣಿ ಅವರ ಕಥೆಗಳ ಸಂಕಲನ ʼರುಕುಮಣಿ ರುಕುಮಣಿʼ ಪುಸ್ತಕ ಭಾನುವಾರ ಲೋಕಾರ್ಪಣೆಯಾಗಿದೆ.

-

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ನೆರವೇರಿತು. ಲೇಖಕ, ವಿಶ್ವವಾಣಿ ಹಿರಿಯ ಪತ್ರಕರ್ತ ಹರೀಶ್ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಕಾದಂಬರಿ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ʼನೀಲಿ ಹೂವು ಖಾಲಿ ಹೃದಯʼ ಕಾದಂಬರಿ ಮತ್ತು ವಿಕಾಸ್ ನೇಗಿಲೋಣಿ ಅವರ ಕಥೆಗಳ ಸಂಕಲನ ʼರುಕುಮಣಿ ರುಕುಮಣಿʼ ಪುಸ್ತಕವನ್ನು ಸುವರ್ಣ ನ್ಯೂಸ್- ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಬಿಡುಗಡೆ ಮಾಡಿದರು.
ಈ ಮೂರು ಪುಸ್ತಕಗಳನ್ನು ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರು ಪ್ರಕಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರಿಯ ಸ್ಟಾಂಡಪ್ ಕಾಮೆಡಿಯನ್ ಶ್ರದ್ಧಾ ಜೈನ್ ಅವರು ಉಪಸ್ಥಿತರಿದ್ದರು.
ಸುವರ್ಣ ನ್ಯೂಸ್- ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಮಾತನಾಡಿ, ಇತ್ತೀಚೆಗೆ ದೀಪಾ ಭಾಸ್ತಿ ಮತ್ತು ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಿದೆ. ಬೂಕರ್ ಪ್ರಶಸ್ತಿಯಂತ ಗೌರವ ಪಡೆಯುವ ಸಾಮರ್ಥ್ಯವುಳ್ಳ ಕನ್ನಡದ ಹಲವು ಲೇಖಕರು, ಸಾಹಿತಿಗಳು ನಮ್ಮ ನಡುವೆ ಇದ್ದಾರೆ. ಕನ್ನಡದಲ್ಲೇ ಸಾಹಿತ್ಯ ರಚನೆಯಾಗಬೇಕು ಎಂಬುವುದು ನಿಜ, ಆದರೆ, ಕನ್ನಡ ಸಾಹಿತ್ಯ ನಿಂತ ನೀರಾಗಬಾರದು. ನಮ್ಮ ಸಾಹಿತ್ಯ ಬೇರೆ ಭಾಷೆಗಳ ಓದುಗರನ್ನು ತಲುಪಬೇಕು. ಇದಕ್ಕಾಗಿ ವಿವಿಧ ಭಾಷೆಗಳಿಗೆ ಅನುವಾದಬೇಕಿದೆ. ಇದಕ್ಕೆ ಕನ್ನಡಕ್ಕೆ ಬಂದಿರುವ ಬೂಕರ್ ಪ್ರಶಸ್ತಿ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಇವತ್ತು ಕಾದಂಬರಿ ಎನ್ನುವ ಸಾಹಿತ್ಯ ಪ್ರಕಾರ ಕಡಿಮೆಯಾಗುತ್ತಿದೆ. ಯಾಕೆಂದರೆ ದೀರ್ಘವಾಗಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಮಾಹಿತಿ 90 ಸೆಂಕೆಡ್ಗಳ ರೀಲ್ಸ್ನಲ್ಲಿ ಸಿಗಬೇಕು ಎಂಬ ಹೊಸ ಮನಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಮೂರು ಕಾದಂಬರಿಗಳು ಬಿಡುಗಡೆಯಾಗಿರುವುದು ಸಂತಸದ ವಿಚಾರ.
ಓದುವವರೆಲ್ಲರೂ ಸಂಪೂರ್ಣವಾಗಿ ಪುಸ್ತಕವನ್ನೇ ಓದುತ್ತಾರಾ? ಅಂದರೆ, ಇಲ್ಲ ಎನ್ನಬಹುದು. ಈಗ ಇ ಬುಕ್, ವಾಯ್ಸ್, ಪಾಡ್ಕಾಸ್ಟ್... ಹೀಗೆ ಡಿಜಿಟಲ್ ರೂಪದಲ್ಲಿ ಸಾಹಿತ್ಯ ತಲುಪುತ್ತಿದೆ. ಇನ್ನು ಎಐ ಬೆಳೆಯುತ್ತಿರುವ ಕಾಲದಲ್ಲಿ ಪುಸ್ತಕ ಸಂಸ್ಕೃತಿ, ಸೃಜನೆಶೀಲನೆ ಉಳಿಸಿಕೊಳ್ಳುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಶ್ರದ್ಧಾ ಜೈನ್ ಮಾತನಾಡಿ, ನನ್ನ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿದರೆ, ನನ್ನ ಮೇಲೆ ಕನ್ನಡದ ದೊಡ್ಡ ಸಾಲ ಇದೆ ಎನಿಸುತ್ತದೆ. ಈ ಜನ್ಮದಲ್ಲಿ ಆ ಸಾಲ ತೀರಿಸಲೇ ಬೇಕು ನಾನು. ನನಗೆ ಜೀವನ ಮೊದಲು ಅವಕಾಶ ನೀಡುತ್ತದೆ. ಮತ್ತೆ ಅದನ್ನು ತೀರಿಸಬೇಕು. ಹೀಗಾಗಿ ಕನ್ನಡದಲ್ಲಿ ಏನೋ ಸಾಧನೆ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇವತ್ತು ಟಿ.ಎನ್.ಸೀತಾರಾಮ್ ಅವರು ಭೇಟಿಯಾದಾಗ ನಿಮ್ಮ ಮಾತುಗಳು ತುಂಬಾ ಇಷ್ಟ ಎಂದು ಹೇಳಿದ್ದಾರೆ. ಪ್ರಕಾಶ್ ಕಂಬತ್ತಳ್ಳಿ ಅವರು ನೀವು ಕನ್ನಡದಲ್ಲಿ ಏನಾದರೂ ಬರೆಯಿರಿ, ನಾವು ಪಬ್ಲಿಷ್ ಮಾಡುತ್ತೀವಿ ಎಂದು ಹೇಳಿದ್ದಾರೆ. ಇದನ್ನೂ ನಾನು ಸಾಲ ಅಂತಲೇ ಪಡೆದಿದ್ದೀನಿ. ಹೀಗಾಗಿ ಇದನ್ನು ತೀರಿಸಬೇಕು, ಕನ್ನಡದಲ್ಲಿ ಏನೋ ಒಂದು ಸಾಧನೆ ಮಾಡುವೆ ಎಂದು ತಿಳಿಸಿದರು.
ನಾನು ಹುಟ್ಟಿದ್ದು ಬೆಳೆದಿದ್ದು ಮುಂಬೈನಲ್ಲಿ. ಕರ್ನಾಟಕಕ್ಕೆ ಬಂದು, ಇಲ್ಲಿನ ಜನರ ಒಡನಾಟ ಬೆಳೆಯುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಕನ್ನಡ ಶಿಕ್ಷಕಿ ಆಗಿದ್ದರು. ನಾನು ದಕ್ಷಿಣ ಕನ್ನಡದವಳು, ಆದರೆ ನನಗೆ ಕನ್ನಡ ಗಂಧ ಗಾಳಿ ಗೊತ್ತಿರಲಿಲ್ಲ. ನಾನು ಎಂಜಿನಿಯರಿಂಗ್ ಓದಲು ಹಾಸನಕ್ಕೆ ಬಂದೆ. ಅಲ್ಲಿ ನಾನು ಕನ್ನಡ ಕಲಿತೆ. ನನ್ನ ಮೊದಲ ಕನ್ನಡದ ಗುರು ರವಿಚಂದ್ರನ್. ಕಾಶಿನಾಥ್, ಟೈಗರ್ ಪ್ರಭಾಕರ್ ಅವರಂತಹ ನಟರ ಸಿನಿಮಾಗಳಿಂದ ಕನ್ನಡ ಕಲಿತೆ. ಅವರಿವರು ಮಾತನಾಡೋದನ್ನು ಕೇಳುತ್ತಾ ಕೇಳುತ್ತಾ ಕನ್ನಡ ಕಲಿತೆ ಎಂದು ಹೇಳಿದರು.
ಎಂಜಿನಿಯರಿಂಗ್ ಬಳಿಕ ಕನ್ನಡದ ಜತೆ ಸಂಪರ್ಕ ಕಡಿತವಾಗಿತ್ತು. ಮುಂಬೈನಲ್ಲಿ ಹಿಂದಿ ರೇಡಿಯೋ ಸ್ಟೇಷನ್ನಲ್ಲಿ ಕೆಲಸಕ್ಕೆ ಹೋದಾಗ, ನಾನು ಕರ್ನಾಟಕದವಳು, ಕನ್ನಡ ಮಾತೃ ಭಾಷೆ ಎಂದು ಹೇಳಿದ್ದರಿಂದ ನನಗೆ ಕೆಲಸ ಸಿಕ್ಕಿತು. ನಾನು ರೇಡಿಯೋ ಜಾಕಿಯಾಗಿದ್ದೆ. ನನ್ನ ಕನ್ನಡ ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೂ ಅದೃಷ್ಟದಿಂದ ಕೆಲಸ ಸಿಕ್ಕಿತು ಎಂದರು.
ನಂತರ ನನಗೆ ಕನ್ನಡ ಚಾನೆಲ್ನಿಂದ ಕರೆ ಬಂತು. ಕನ್ನಡ ಚಾನೆಲ್ನ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನ ನಿರೂಪಕಿಯಾಗಿದ್ದೆ. ಕನ್ನಡದ ಕೋಟ್ಯಧಿಪತಿ ಪ್ರೋಮೊ ಮಾಡಿದ್ದೆ. ನನ್ನ ಫಸ್ಟ್ ಸ್ಟಾಂಡಪ್ ಕಾಮಿಡಿ ಕನ್ನಡದಲ್ಲೇ ನಡೆಯಿತು. ಈ ರೀತಿ ನನಗೆ ಕನ್ನಡದ ಜತೆ ಸಂಬಂಧ ಬೆಳೆಯಿತು. ಕೆಲವರ ಜೀವನದಲ್ಲಿ ಈ ರೀತಿ ನಡೆಯುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Roopa Gururaj Column: ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ
ರವಿ ಹೆಗಡೆ ಅವರು ಎಐ ಬಗ್ಗೆ ಹೇಳಿದರು. ಎಐಗೆ ಹಸಿವಿಲ್ಲ, ನಮಗೆ ಹಸಿವಿದೆ. ಎಐಗೆ ಕಾದಂಬರಿ ಬರೆಯಬೇಕು ಎಂದು ಅನಿಸಲ್ಲ, ಹೇಳಿದರೆ ಬರೆಯುತ್ತದೆ. ಈ ಹಸಿವು ನಮಗೆ ಮತ್ತು ಎಐ ನಡುವೆ ಇರುವ ದೊಡ್ಡ ವ್ಯತ್ಯಾಸ. ಹೀಗಾಗಿ ಏನಾದರೂ ಮಾಡಬೇಕು, ಬರೆಯಬೇಕು ಎಂಬ ಹಸಿವು ನಮ್ಮಲ್ಲಿ ಇರುವತನಕ ಎಐಗೆ ಬರುವುದು ಅಸಾಧ್ಯ ಎಂದು ಶ್ರದ್ಧಾ ಜೈನ್ ಹೇಳಿದರು.