ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Priyank Kharge: ಬ್ರಿಕ್ಸ್‌ ವೇದಿಕೆಯಲ್ಲಿ ಭಾರತದ ರೂಪಾಯಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ವ್ಯವಹರಿಸಬಹುದಾದ ಕರೆನ್ಸಿಯಾಗಿ ರೂಪಿಸುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇಂದು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದ್ದು, ಡಾಲರ್ ಎದುರು ರೂಪಾಯಿ ಹೊಸ ತಳಮಟ್ಟಗಳನ್ನು ತಲುಪುತ್ತಿರುವುದು ಆರ್ಥಿಕ ನೀತಿಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರೂಪಾಯಿ ಮೌಲ್ಯ ಕುಸಿಯಲು ಕೇಂದ್ರ ಕಾರಣ ಎಂದ ಪ್ರಿಯಾಂಕ್ ಖರ್ಗೆ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (ಸಂಗ್ರಹ ಚಿತ್ರ). -

Profile
Siddalinga Swamy Sep 11, 2026 5:39 PM

ಬೆಂಗಳೂರು, ಸೆ. 11: ಒಂದು ದಶಕದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ನಿರೀಕ್ಷಿತ ದಿಕ್ಕಿನಲ್ಲಿ ಸಾಗುತ್ತಿಲ್ಲ. ದೇಶದ ಆರ್ಥಿಕ ಹಾಗೂ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಿಲುವು ಗೊಂದಲದಿಂದ ಕೂಡಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟೀಕಿಸಿದ್ದಾರೆ. ಅವರು ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದರು.

ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ಅವರು, ಕಳೆದ ಹಲವು ವರ್ಷಗಳಿಂದ ಸರ್ಕಾರ ನೀಡಿದ್ದ ಭರವಸೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದರು.

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ಮಣಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಚೀನಾದೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದರೂ, ಗಡಿ ವಿಚಾರದಲ್ಲಿ ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಚೀನಾದ ಆ್ಯಪ್‌ಗಳು ಮತ್ತು ಸರಕುಗಳ ಮೇಲೆ ನಿರ್ಬಂಧ ಹೇರಿದ ಬಳಿಕವೂ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿರುವುದು ಏಕೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅವರು ಹೇಳಿದರು.

ಬ್ರಿಕ್ಸ್‌ ವೇದಿಕೆಯಲ್ಲಿ ಭಾರತದ ರೂಪಾಯಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ವ್ಯವಹರಿಸಬಹುದಾದ ಕರೆನ್ಸಿಯಾಗಿ ರೂಪಿಸುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇಂದು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದ್ದು, ಡಾಲರ್ ಎದುರು ರೂಪಾಯಿ ಹೊಸ ತಳಮಟ್ಟಗಳನ್ನು ತಲುಪುತ್ತಿರುವುದು ಆರ್ಥಿಕ ನೀತಿಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಚೀನಾ ವಿಚಾರದಲ್ಲಿ ಕೇಂದ್ರದ ನಿಲುವೇನು?

ಚೀನಾ ವಿಚಾರದಲ್ಲೂ ಕೇಂದ್ರ ಸರ್ಕಾರದ ನಡೆ ಬಗ್ಗೆ ಗಂಭೀರ ಪ್ರಶ್ನೆಗಳಿವೆ. ಭಾರತದ ಪ್ರಧಾನ ಮಂತ್ರಿ ಹಾಗೂ ಚೀನಾ ಪ್ರಧಾನಿಯೊಂದಿಗೆ ಹಲವು ಬಾರಿ ಮಾತುಕತೆಗಳು ನಡೆದಿವೆ. ಗುಜರಾತ್‌ನಲ್ಲಿ ನಡೆದ ಭೇಟಿಯಿಂದ ಹಿಡಿದು ಮಹಾಬಲಿಪುರಂನಲ್ಲಿ ನಡೆದ ಮಾತುಕತೆಗಳವರೆಗೆ ಉಭಯ ರಾಷ್ಟ್ರಗಳ ನಾಯಕರು ಹಲವು ಸಂದರ್ಭಗಳಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ ಆ ಬಳಿಕ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸುವ ಬದಲು ಭಾರತದ ಹಕ್ಕು ಪ್ರತಿಪಾದಿಸುವ ಪ್ರದೇಶಗಳಲ್ಲಿ ಚೀನಾ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಅವರು ಹೇಳಿದರು.

ಭಾರತೀಯ ಸೇನೆಗೆ ಪ್ರಮುಖವಾಗಿದ್ದ ಗಸ್ತು ಪ್ರದೇಶಗಳ ಕುರಿತು ಕೂಡ ಪ್ರಶ್ನೆಗಳು ಉದ್ಭವಿಸಿವೆ. ಗಡಿ ಭಾಗದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಮತ್ತು ದೃಢ ನಿಲುವನ್ನು ಪ್ರದರ್ಶಿಸಬೇಕಿತ್ತು. ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ರಾಜಿ ಇರಬಾರದು ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ದೇಶದ ಶತ್ರು ರಾಷ್ಟ್ರಗಳ ವಿಚಾರದಲ್ಲಿ ಕಠಿಣ ನಿಲುವು ತಳೆಯುವುದಾಗಿ ಹೇಳಿಕೊಂಡಿದ್ದ ಕೇಂದ್ರ ಸರ್ಕಾರ, ದೊಡ್ಡ ಆರ್ಥಿಕ ಶಕ್ತಿಯ ರಾಷ್ಟ್ರದೊಂದಿಗೆ ಸಂಘರ್ಷಕ್ಕೆ ಇಳಿಯುವ ಪ್ರಶ್ನೆ ಎದುರಾದಾಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂಬ ಕೇಂದ್ರ ವಿದೇಶಾಂಗ ಸಚಿವರ ಹೇಳಿಕೆಗಳು ಸರ್ಕಾರದ ವಿದೇಶಾಂಗ ನೀತಿಯಲ್ಲಿನ ವೈರುಧ್ಯವನ್ನು ತೋರಿಸುತ್ತವೆ ಎಂದು ಅವರು ಟೀಕಿಸಿದರು.

‘56 ಇಂಚಿನ ಎದೆ’ ಯಾರಿಗೆ ತೋರಿಸಲು?

ಕೇಂದ್ರ ಸರ್ಕಾರದ ರಾಷ್ಟ್ರೀಯ ಭದ್ರತೆ ಕುರಿತ ರಾಜಕೀಯ ಹೇಳಿಕೆಗಳನ್ನು ಪ್ರಸ್ತಾಪಿಸಿದ ಸಚಿವರು, ‘56 ಇಂಚಿನ ಎದೆ’ ಎಂಬ ರಾಜಕೀಯ ಘೋಷಣೆ ಕೇವಲ ಕಾಂಗ್ರೆಸ್‌ ಅನ್ನು ಟೀಕಿಸಲು ಬಳಸುವುದಕ್ಕಾಗಿಯೇ ಅಥವಾ ದೇಶದ ಎದುರಾಳಿಗಳಿಗೂ ತನ್ನ ಸಾಮರ್ಥ್ಯವನ್ನು ತೋರಿಸಲು ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ದೇಶದ ಗಡಿ, ಸೇನೆಯ ಭದ್ರತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ದೇಶದ ಮುಂದೆ ಇಡಬೇಕು. ಕೇವಲ ರಾಜಕೀಯ ಘೋಷಣೆಗಳು ಮತ್ತು ಪ್ರಚಾರದಿಂದ ರಾಷ್ಟ್ರೀಯ ಭದ್ರತೆ ಖಾತ್ರಿಯಾಗುವುದಿಲ್ಲ ಎಂದು ಅವರು ಹೇಳಿದರು.

ʼವಂದೇ ಮಾತರಂʼ ವಿಚಾರದಲ್ಲೂ ಬಿಜೆಪಿ ವಿರುದ್ಧ ವಾಗ್ದಾಳಿ

ಇದೇ ಸಂದರ್ಭದಲ್ಲಿ ವಂದೇ ಮಾತರಂ ಗೀತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೇಶದ ರಾಷ್ಟ್ರೀಯ ಗೀತೆ ಅಥವಾ ರಾಷ್ಟ್ರಭಕ್ತಿಯ ಸಂಕೇತಗಳನ್ನು ಹೇಗೆ ಹಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಬಿಜೆಪಿ ಮಾತ್ರ ಹೊಂದಿದೆಯೇ ಎಂದು ಪ್ರಶ್ನಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮಹಾತ್ಮ ಗಾಂಧೀಜಿ ಹಾಗೂ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸೇರಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು ದೇಶದ ರಾಷ್ಟ್ರಭಾವನೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆಯನ್ನು ಬದಿಗೊತ್ತಿ ಬಿಜೆಪಿ ತನ್ನದೇ ಆದ ಮಾನದಂಡಗಳನ್ನು ದೇಶದ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಸೈದ್ಧಾಂತಿಕ ಹಿನ್ನೆಲೆಯ ಸಂಘಟನೆಗಳ ಕೊಡುಗೆ ಏನು ಎಂಬುದನ್ನೂ ಜನರು ಪ್ರಶ್ನಿಸಬೇಕಿದೆ. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಸೇನೆಯನ್ನು ಕಟ್ಟುವ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮತ್ತು ವಿನಾಯಕ ದಾಮೋದರ ಸಾವರ್ಕರ್‌ ಅವರ ಪಾತ್ರವೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಪೊಲೀಸ್ ವಾಹನ ವ್ಯವಸ್ಥೆ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಹೊಸ ಚಿಂತನೆ; ಬಾಡಿಗೆ ಮಾದರಿಯ ಸಾಧ್ಯತೆ ಪರಿಶೀಲನೆ

ಬ್ರಿಕ್ಸ್‌ ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶದ ಆರ್ಥಿಕತೆ, ರೂಪಾಯಿ ಮೌಲ್ಯ, ಚೀನಾದೊಂದಿಗಿನ ಸಂಬಂಧ, ಗಡಿ ಭದ್ರತೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ವ್ಯೂಹಾತ್ಮಕ ಸ್ಥಾನಮಾನ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಕೇಂದ್ರ ಸರ್ಕಾರ ತನ್ನ ನೀತಿಯನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.