ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ: ವಿಶ್ವ ದಾಖಲೆ ಬರೆದ 'ಒಂದು ಜಗತ್ತು ಒಂದು ಕುಟುಂಬ' ಸಾಂಸ್ಕೃತಿಕ ಮಹೋತ್ಸವ
Sri Sathya Sai Baba Birth Centenary: ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಚಿಕ್ಕಬಳ್ಳಾಪುರದ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ಸಂಪನ್ನವಾಯಿತು. ಇದೇ ವೇಳೆ 1 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ವಿಶ್ವದ ಅತಿ ದೀರ್ಘ ಸಾಂಸ್ಕೃತಿಕ ಉತ್ಸವ ಎಂದು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದ್ದು ವಿಶೇಷ.
ಫಿಜಿ ಅಧ್ಯಕ್ಷ ರಟು ನಖಿಮಾ ಲಾಲಬಲವು ಅವರೊಂದಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ -
ಚಿಕ್ಕಬಳ್ಳಾಪುರ, ನ. 23: ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ (Sri Sathya Sai Baba birth centenary) ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬʼ ವಿಶ್ವ ಸಾಂಸ್ಕೃತಿಕ ಮಹೋತ್ಸವವು 400ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು. ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದಲ್ಲಿ ವಿಶ್ವದ 60 ದೇಶಗಳ 450 ಕಲಾವಿದರು, 70 ಗಾಯಕರು ಮತ್ತು 200 ವಿದ್ಯಾರ್ಥಿಗಳಿದ್ದರು. ಆಕರ್ಷಕ ಲೇಸರ್ ಲೈಟ್ ಶೋ ಎಲ್ಲರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಕಲಾವಿದರು 'ಒಂದು ಜಗತ್ತು ಒಂದು ಕುಟುಂಬ' ವಿಶೇಷ ಹಾಡನ್ನು ಪ್ರಸ್ತುತಪಡಿಸಿದರು.
ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ನಿಮಿತ್ತ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ವಿಶ್ವದ ಅತಿದೀರ್ಘ ಸಾಂಸ್ಕೃತಿಕ ಉತ್ಸವ ಎಂದು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿತು. ಫಿಜಿ ಅಧ್ಯಕ್ಷ ರತು ನೈಕಮಾ ಲಾಲಬಲವು ಅವರ ಸಮಕ್ಷಮದಲ್ಲಿ ಸತ್ಯ ಸಾಯಿ ಬಾಬಾ ಅವರ 21 ಅಡಿ ಎತ್ತರ ಮಾರ್ಬಲ್ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ಇದು ರೋಬೋಟ್ ಮೂಲಕ ಕೆತ್ತಲಾಗಿರುವ ವಿಶ್ವದ ಅತಿ ಎತ್ತರದ ಮಾರ್ಬಲ್ ವಿಗ್ರಹ. ಮುದ್ದೇನಹಳ್ಳಿಯಲ್ಲಿರುವ 600 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆಯ ಕೇಂದ್ರ ಭಾಗದಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ.
ಅಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ʼʼಗುರುಗಳ ಮಾತಿನಂತೆ ನಡೆಯುವುದೇ ನಾವು ಅವರಿಗೆ ಕೊಡಬಹುದಾದ ಅತ್ಯುತ್ತಮ ಗುರುದಕ್ಷಿಣೆ. ಸತ್ಯ ಸಾಯಿ ಬಾಬಾ ಅವರ ಮಾತು ಮತ್ತು ಅವರ ಚೈತನ್ಯ ಬೇರೆ ಬೇರೆ ಅಲ್ಲ. ಅವರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಅವರನ್ನು ಪಡೆಯಬಹುದು. ಭಗವಾನ್ ಸತ್ಯ ಸಾಯಿ ಬಾಬಾ ಅವರು ಸದಾ ನಮ್ಮೊಡನೆ ಇರುವ ಜೀವಂತ ವಾಸ್ತವ. ಹುಟ್ಟು-ಸಾವುಗಳ ಬಂಧನ ಅವರಿಗೆ ಇಲ್ಲ. ಅವರು ನಮ್ಮಿಂದ ಒಂದು ಆಲೋಚನೆ ಅಥವಾ ಪ್ರಾರ್ಥನೆಯಷ್ಟು ದೂರವಿದ್ದಾರೆ ಅಷ್ಟೇ. ಅವರು ನಿಮ್ಮಲ್ಲಿ, ನನ್ನಲ್ಲಿ, ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಗಳಲ್ಲಿ ಕಾಣಿಸಿಕೊಳ್ಳುತ್ತಾರೆʼʼ ಎಂದರು.
ಒಂದು ಜಗತ್ತು ಒಂದು ಕುಟುಂಬ ಸಾಕಾರಗೊಳಿಸಲು ಮಾಧ್ಯಮದ ಸಹಕಾರ ಅಗತ್ಯ : ಸದ್ಗುರು ಶ್ರೀ ಮಧುಸೂದನ ಸಾಯಿ
ನಮ್ಮ ಪಾಲಿಗೆ ದೊಡ್ಡ ಗೌರವ
ಫಿಜಿ ಅಧ್ಯಕ್ಷ ರಟು ನಖಿಮಾ ಲಾಲಬಲವು ಮಾತನಾಡಿ, 'ʼಅಧ್ಯಾತ್ಮ ಪುರುಷ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಪಾಲಿಗೆ ದೊಡ್ಡ ಗೌರವ. ನಮ್ಮ ಸಂಸ್ಕೃತಿಗಳು ಬೇರೆಯಾಗಿದ್ದರೂ ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನವು ನಮ್ಮೆಲ್ಲರನ್ನೂ ಆಧ್ಯಾತ್ಮಿಕವಾಗಿ ಬೆಸೆಯುತ್ತದೆʼ' ಎಂದು ಹೇಳಿದರು.
ಶ್ರೀ ಮಧುಸೂದನ ಸಾಯಿ ಅವರ ಎಕ್ಸ್ ಪೋಸ್ಟ್:
It was a joy to welcome Sri Madhu Pandit Dasa @madhupanditdasa, President of ISKCON Bangalore and Chairman of the Global Hare Krishna Movement.
— Sri Madhusudan Sai (@sri_madhu_sai) November 23, 2025
An IIT Bombay alumnus who chose the path of devotion, he has dedicated his life to service through initiatives like the Akshaya Patra… pic.twitter.com/uBhm1B3GJF
ಪ್ರೀತಿಗೆ ದೇಶ, ಭಾಷೆ ಮತ್ತು ಹಿನ್ನೆಲೆಗಳ ಗಡಿ ಇಲ್ಲ
ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಹಾರ್ಟ್ ಟು ಹಾರ್ಟ್ ಫೌಂಡೇಶನ್ನ ಟ್ರಸ್ಟಿ ಸುನಿಲ್ ಗವಾಸ್ಕರ್ ಮಾತನಾಡಿ, 'ʼ100 ದೇಶಗಳಿಂದ ಬಂದ ಜನರು ಸತ್ಯ ಸಾಯಿ ಗ್ರಾಮದಲ್ಲಿ ಸೇವೆಗಾಗಿ ಒಗ್ಗೂಡಿರುವುದನ್ನು ನೋಡಿದಾಗ, ಪ್ರೀತಿಗೆ ದೇಶ, ಭಾಷೆ ಮತ್ತು ಹಿನ್ನೆಲೆಗಳ ಗಡಿ ಇಲ್ಲ ಎನ್ನುವುದು ಮನವರಿಕೆಯಾಗುತ್ತದೆ. ನಾವು ಜನಿಸಿದ ಕಾಲಕ್ಕಿಂತಲೂ ಹೆಚ್ಚಿನ ಮಟ್ಟದ ಪ್ರೀತಿ, ಸಹಾನುಭೂತಿ, ಮನವೀಯತೆಯು ಜಗತ್ತಿನಲ್ಲಿ ನೆಲೆಸುವಂತೆ ಮಾಡಿಯೇ ನಾವು ತೆರಳಬೇಕು. ನಾವು ಇಲ್ಲಿ ಬಿಟ್ಟು ಹೋಗಬೇಕಿರುವ ನಿಜವಾದ ಪರಂಪರೆ ಇದುʼ' ಎಂದು ಆಶಯ ವ್ಯಕ್ತಪಡಿಸಿದರು.
ಸತ್ಯ ಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಡಾ ಶ್ರೀನಿವಾಸ್, ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ, ಬೆಂಗಳೂರಿನ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಇಸ್ಕಾನ್ ಅಧ್ಯಕ್ಷ ಪದ್ಮಶ್ರೀ ಪುರಸ್ಕೃತ ಮಧು ಪಂಡಿತ ದಾಸ, ಶ್ರೀಲಂಕಾದ ಬೌದ್ಧ ಸಂಸ್ಥೆ ಜೇತವನರಾಮ ಗುರು ಥಿರೋ - ವೆನ್ ನಿವರ್ಥಪ ಥಿರೋ, ಶ್ರೀಲಂಕಾದ ಮಾಜಿ ಕ್ರಿಕೆಟರ್ ಮತ್ತು ಉದ್ಯಮಿ ಅರವಿಂದ್ ಡಿಸಿಲ್ವಾ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ನೂರಾರು ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು.
ವಿಶ್ವ ಸಾಂಸ್ಕೃತಿಕ ಮಹೋತ್ಸವದ ಮೆಲುಕು
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿ ಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಆಗಸ್ಟ್ 16ರಿಂದ ನವೆಂಬರ್ 23ರವರೆಗೆ ನಡೆದ ಈ ಉತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ಕಲೆ, ನೃತ್ಯ ಮತ್ತು ಸೇವಾ ಉಪಕ್ರಮಗಳೊಂದಿಗೆ 100 ದೇಶಗಳನ್ನು ಒಂದು ವೇದಿಕೆಯಲ್ಲಿ ಬೆಸೆಯಿತು. 100 ಮಾನವತಾವಾದಿಗಳು, 140ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ನಾಯಕರನ್ನು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಯಿತು. 45ಕ್ಕೂ ಹೆಚ್ಚು ಜಾಗತಿಕ ಚಿಂತಕರು, ಮಾಧ್ಯಮ, ಪತ್ರಿಕೋದ್ಯಮ ಮತ್ತು ನ್ಯಾಯದಾನ ಕ್ಷೇತ್ರದ ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ಆರೋಗ್ಯ ಮತ್ತು ಶಿಕ್ಷಣ ಪ್ರಜಾಸತ್ತಾತ್ಮಕ ಹಕ್ಕುಗಳಾಗಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ಸಾಂಸ್ಕೃತಿಕ ಮಹೋತ್ಸವದ ಸಂದರ್ಭದಲ್ಲಿ 126 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರ ಸಮರ್ಪಿಸಲಾಯಿತು. 600 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಉಚಿತ, ಖಾಸಗಿ ಆಸ್ಪತ್ರೆಯು ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಇದು ಎಲ್ಲರಿಗೂ ಆರೋಗ್ಯ ಸೇವೆಯು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವೆನಿಸಿದೆ.
140ಕ್ಕೂ ಹೆಚ್ಚು ಕಾರ್ಪೊರೇಟ್ ಮತ್ತು ಸಾಮಾಜಿಕ ಉದ್ಯಮಗಳಿಗೆ ‘ಸಿಎಸ್ಆರ್ ಸರ್ಕಲ್ ಹಾನರ್ ಪುರಸ್ಕಾರ’ ನೀಡಲಾಯಿತು. ಆರೋಗ್ಯ ರಕ್ಷಣೆ, ಶಿಕ್ಷಣ, ಪರಿಸರ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಧರ್ಮದ ಏಕತೆ, ಕ್ರೀಡೆ ಮತ್ತು ಯೋಗ, ಸಂಗೀತ ಮತ್ತು ಲಲಿತಕಲೆಗಳ ವಿಭಾಗಗಳಲ್ಲಿ ಸಾಧನೆ ಮಾಡಿದ 100 ದೇಶಗಳ 100 ಮಾನವತಾವಾದಿಗಳನ್ನು ಉತ್ಸವದಲ್ಲಿ ಗೌರವಿಸಲಾಯಿತು.