MLA S R Srinivas: ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ದಾನ ಶ್ರೇಷ್ಠ ದಾನ : ಶಾಸಕ ಎಸ್.ಆರ್.ಶ್ರೀನಿವಾಸ್
ಶಿಕ್ಷಣ ಎಂಬುದು ಅಗತ್ಯ ಎಂಬ ಮನವರಿಕೆ ಪೋಷಕರಲ್ಲಿ ಮೂಡಿದೆ. ನಗರದಲ್ಲಿ ಬಾಡಿಗೆ ಮನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಗ್ರಾಮೀಣ ಭಾಗದಿಂದ ನಗರದತ್ತ ವಲಸೆ ಹೋಗುವ ಮುನ್ನ ಸರ್ಕಾರಿ ಶಾಲೆಯ ಬಗ್ಗೆ ಅವಲೋಕಿಸಬೇಕಿದೆ. ಸರ್ಕಾರ ಸಕಲ ಸವಲತ್ತು ನೀಡಿ ಓದುವ ವಾತಾವರಣ ಸೃಷ್ಟಿ ಮಾಡುತ್ತದೆ.


ಗುಬ್ಬಿ: ಜಾಗತಿಕ ಯುಗದಲ್ಲಿ ಎಲ್ಲಾ ರಂಗದಲ್ಲೂ ಅಂಕ ಗಳಿಕೆಯೇ ಮಾನದಂಡವಾಗಿದೆ. ಆ ಕಾರಣ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಸರ್ಕಾರ, ಪೋಷಕರು, ಸಮುದಾಯ ಎಲ್ಲರೂ ಒತ್ತು ನೀಡಿ ದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ದಾನ ಶ್ರೇಷ್ಠ ದಾನ ಎನಿಸಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಲ್ ಕೆಜಿ ಯುಕೆಜಿ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಇಲಾಖೆಗೆ ಸರ್ಕಾರ 33 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟು ಅಭಿವೃದ್ದಿ ಮಾಡುತ್ತಿದೆ. ಎಲ್ಲಾ ರೀತಿಯ ಸವಲತ್ತು, ಬಿಸಿಯೂಟ, ಹಾಲು ಮೊಟ್ಟೆ ಇನ್ನಿತರ ಪೌಷ್ಟಿಕ ಆಹಾರ ನೀಡುತ್ತಿದೆ. ಎಲ್ಲವೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ಅನುತ್ಪಾದಕ ಇಲಾಖೆ ಎನ್ನುವ ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲ ವೃದ್ಧಿ ಮಾಡುತ್ತದೆ ಎಂಬುದು ಸರ್ಕಾರಕ್ಕೆ ತಿಳಿದ ಹಿನ್ನಲೆ ವ್ಯಯ ಮಾಡಲಾಗಿದೆ ಎಂದರು.
ಶಿಕ್ಷಣ ಎಂಬುದು ಅಗತ್ಯ ಎಂಬ ಮನವರಿಕೆ ಪೋಷಕರಲ್ಲಿ ಮೂಡಿದೆ. ನಗರದಲ್ಲಿ ಬಾಡಿಗೆ ಮನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಗ್ರಾಮೀಣ ಭಾಗದಿಂದ ನಗರದತ್ತ ವಲಸೆ ಹೋಗುವ ಮುನ್ನ ಸರ್ಕಾರಿ ಶಾಲೆಯ ಬಗ್ಗೆ ಅವಲೋಕಿಸಬೇಕಿದೆ. ಸರ್ಕಾರ ಸಕಲ ಸವಲತ್ತು ನೀಡಿ ಓದುವ ವಾತಾವರಣ ಸೃಷ್ಟಿ ಮಾಡುತ್ತದೆ. ಇದಕ್ಕೂ ಮುಖ್ಯವಾಗಿ ಅರ್ಹ ಶಿಕ್ಷಣ ಪಡೆದ ಶಿಕ್ಷಕರನ್ನು ನೀಡಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಬಗ್ಗೆ ತಿಳಿದು ಮಕ್ಕಳನ್ನು ಇಲ್ಲಿಯೇ ಓದಿಸಿ ಎಂದು ಮನವಿ ಮಾಡಿ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ, ಯಕೆಜಿ ಪ್ರಾರಂಭ ಮಾಡಿರುವುದು ಸುಗ್ಗನಪಾಳ್ಯ ನಂತರದಲ್ಲಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಆರಂಭವಾಗಿದೆ. ಇಲ್ಲಿ ಗ್ರಾಮಸ್ಥರ ಸಹಕಾರ ಮೆಚ್ಚುವಂತದ್ದು. 92 ಮಂದಿ ಜನರ ಆರ್ಥಿಕ ನೆರವು ಜೊತೆಗೆ ಶಾಲಾ ವಾಹನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಸ್ಥಳೀಯ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಸಹಕಾರ ಕೂಡಾ ಅನನ್ಯವಾಗಿದೆ ಎಂದರು.
ಕೇಂದ್ರದ ರಕ್ಷಣಾ ಇಲಾಖೆಯ ಸಿಬ್ಬಂದಿ ಹಾಗೂ ಹಳೆವಿದ್ಯಾರ್ಥಿ ರಘುನಾಥ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮಾತೃ ಭಾಷೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ನೆಲೆಸಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. 1949 ರಲ್ಲಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿತ್ತು. ಅಂದು ಮರಳಿನ ಬರವಣಿಗೆ ಮೂಲಕ ಶಿಕ್ಷಣ ಆರಂಭಿಸಿ ಇಂದು ಕಂಪ್ಯೂಟರ್ ಶಿಕ್ಷಣದವರೆಗೆ ಬೆಳೆದಿದೆ. ನಂತರ ಪ್ರೌಢಶಾಲೆ ಶಿಕ್ಷಣಕ್ಕೆ ಚಿದಂಬರಾಶ್ರಮಕ್ಕೆ ಹೋಗಬೇಕಿತ್ತು. ಅಲ್ಲಿ ನಮ್ಮ ಶಾಸಕರು ಶೌರ್ಯ ಪ್ರಶಸ್ತಿ ಪಡೆದ ಬಗ್ಗೆ ಇಂದಿಗೂ ಪ್ರಸ್ತಾಪವಿದೆ. ನಂತರದಲ್ಲಿ ನಮ್ಮೂರಿನಲ್ಲಿ ಪ್ರೌಢಶಾಲೆ ಆರಂಭಿಸಲಾಗಿತ್ತು ಎಂದು ಇಲ್ಲಿನ ಇತಿಹಾಸ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್, ಎಸ್ ಡಿಎಂಸಿ ಅಧ್ಯಕ್ಷ ಗೋವಿಂದರಾಜು, ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಮಹೇಂದ್ರಕುಮಾರ್, ಭಾಗ್ಯಮ್ಮ, ಶಿವಣ್ಣ, ಮಾಜಿ ಸದಸ್ಯ ದಿನಕರ್ ಮೂರ್ತಿ, ಉದಯಕುಮಾರ್, ಗ್ರಾಪಂ ಪಿಡಿಓ ಶೇಖರ್, ದೈಹಿಕ ಪರಿವೀಕ್ಷಕ ರಮೇಶ್, ಇಸಿಓ ನಿಜಾನಂದಮೂರ್ತಿ, ಸಿಆರ್ ಪಿ ಶಶಿಕಲಾ, ಬಿಆರ್ ಪಿ ರಾಜಲಕ್ಷ್ಮಿ, ಮುಖಂಡರಾದ ಆನಂದರವಿ, ಕೃಷ್ಣೋಜಿರಾವ್, ಶಿವಾಜೀರಾವ್, ಬಿದರೆ ಯತೀಶ್, ನಿವೃತ್ತ ಶಿಕ್ಷಕರಾದ ಶಿವರಾಮ ಯ್ಯ, ಶಾಂತಪ್ಪ, ಕೆಂಪನಂಜಯ್ಯ,ನರಸಿಯಪ್ಪ , ಗಂಗಾಧರ್, ಮುಖ್ಯಶಿಕ್ಷಕರಾದ ಯೋಗಾನಂದ, ಲಕ್ಷ್ಮಣ್ ಇತರರು ಇದ್ದರು