Tumakuru News: ಶಿರಾ ಕಾರ್ ಸ್ಫೋಟ; ನಾಡಬಾಂಬ್ ಕೊಟ್ಟಿದ್ದ ನಾಲ್ವರು ಅರೆಸ್ಟ್
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇತ್ತೀಚೆಗೆ ನಾಡಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನವಾದ ನಾಗೇಂದ್ರಗೆ ನಾಡಬಾಂಬ್ ಕೊಟ್ಟಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ವಿಶೇಷ ತನಿಖಾ ತಂಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿರಾ ಬಳಿ ಸ್ಫೋಟಗೊಂಡಿದ್ದ ಕಾರ್ -
ತುಮಕೂರು, ಜು. 2: ಶಿರಾ ತಾಲೂಕಿನ ಜೋಗಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇತ್ತೀಚೆಗೆ ನಾಡಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನವಾದ ನಾಗೇಂದ್ರಗೆ ನಾಡಬಾಂಬ್ ಕೊಟ್ಟಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ (Tumakuru News). ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್, ಸಂದೀಪ್ ಗೌಡ, ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ಬಂಧಿತರು.
ʼʼತುಮಕೂರಿನ ವಿಶೇಷ ತನಿಖಾ ತಂಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫರ್ನಾಂಡೀಸ್ ಬಳಿ ನಾಗೇಂದ್ರ ಕಚ್ಚಾ ಬಾಂಬ್ ಖರೀದಿಸಿದ್ದ. ಉಳಿದ ಮೂವರು ಸಹ ಬಾಂಬ್ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಫರ್ನಾಂಡೀಸ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಕುಮಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆʼʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.
ಫರ್ನಾಂಡೀಸ್ ಮೀನುಗಾರಿಕೆಗಾಗಿ ಕಚ್ಚಾ ಬಾಂಬ್ ತಯಾರಿಸಿ ಮಾರಾಟ ಮಾಡುತ್ತಿದ್ದ. ಈತನಿಂದ ಬಾಂಬ್ ಖರೀದಿಸಿದವರು ನದಿಯಲ್ಲಿ ಮೀನು ಹಿಡಿಯಲು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇವರು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮತ್ತಷ್ಟು ಮಾಹಿತಿ ಸಿಗಲಿದೆ.
ʼʼಕಾರು ಸ್ಫೋಟಕ್ಕೂ ಮುನ್ನ ನಾಗೇಂದ್ರ ಬಳಿ ಮೂರು ನಾಡಬಾಂಬ್ ಇದ್ದವು ಎಂಬುದು ತಿಳಿದು ಬಂದಿದೆ. ಪ್ರಕರಣದ ತನಿಖೆಗೆ 15ಕ್ಕೂ ಹೆಚ್ಚು ಸಿಬ್ಬಂದಿ ಇರುವ 3 ತಂಡಗಳನ್ನು ರಚಿಸಲಾಗಿತ್ತುʼʼ ಎಂದು ಕೆ.ವಿ. ಅಶೋಕ್ ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಬೆಂಗಳೂರಿನ ಜಯನಗರದ 1ನೇ ಬ್ಲಾಕ್ನಲ್ಲಿ ವಾಸವಾಗಿದ್ದ ರಮ್ಯಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. 6 ವರ್ಷಗಳಿಂದ ನಾಗೇಂದ್ರ ಹಾಗೂ ರಮ್ಯಾ ಪ್ರೀತಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದಾಗಿ ರಮ್ಯಾ ನಾಗೇಂದ್ರನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಶನಿವಾರ (ಜೂನ್ 27) ಬೆಳಗ್ಗೆ ರಮ್ಯಾಳ ರೂಂ ಬಳಿ ಬಂದಿದ್ದ ನಾಗೇಂದ್ರ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬೆಂಗಳೂರಿನಿಂದ ಅಂಕೋಲಾಕ್ಕೆ ಖಾಸಗಿ ಟ್ಯಾಕ್ಸಿಯೊಂದರಲ್ಲಿ ತೆರಳುತ್ತಿದ್ದ.
ಜೋಗಿಹಳ್ಳಿ ಬಳಿ ಬರುತ್ತಿದ್ದಂತೆ ಇಬ್ಬರ ನಡುವೆ ವೈಯಕ್ತಿಕ ವಿಚಾರವಾಗಿ ವಾಗ್ವಾದ ಶುರುವಾಗಿದ್ದು, ಮಾತಿನ ಚಕಮಕಿ ತಾರಕಕ್ಕೇರಿದಾಗ, ನಾಗೇಂದ್ರ ರಮ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ಗಾಬರಿಗೊಂಡ ರಮ್ಯಾ ತಕ್ಷಣವೇ ಚಲಿಸುವ ಕಾರಿನಿಂದ ಕೆಳಗಿಳಿದು ಜಿಗಿದಿದ್ದಾಳೆ. ತಕ್ಷಣ ಕ್ಯಾಬ್ ಚಾಲಕ ಪ್ರವೀಣ್ ಕುಮಾರ್ ನಾಯಕ ಕಾರನ್ನು ನಿಲ್ಲಿಸಿ ಆಕೆಯನ್ನು ರಕ್ಷಿಸಲು ಹೋಗಿದ್ದಾನೆ.
ತುಮಕೂರಿನ ಹಿರಿಯ ಪತ್ರಕರ್ತ ಎಂ. ಈಶ್ವರ್ ಅನಾರೋಗ್ಯದಿಂದ ನಿಧನ
ಸಜೀವ ದಹನವಾಗಿದ್ದ ನಾಗೇಂದ್ರ
ಕಾರಿನೊಳಗೆ ಏಕಾಂಗಿಯಾದ ನಾಗೇಂದ್ರ ತಕ್ಷಣವೇ ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ತಾನು ಮೊದಲೇ ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೆ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.