ʻಅಂದು ಚಿನ್ನ ದಾನ ಮಾಡಿದ್ವಿ, ಇಂದು ಇಂಧನ ಉಳಿಸೋಣʼ; ಪ್ರಧಾನಿ ಮೋದಿ ಉಳಿತಾಯ ಮಂತ್ರಕ್ಕೆ ನಟ ಕಮಲ್ ಹಾಸನ್ ಬೆಂಬಲ
ಜಾಗತಿಕ ಉದ್ವಿಗ್ನತೆ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಇಂಧನ ಉಳಿತಾಯದ ಕರೆಗೆ ನಟ, ರಾಜಕಾರಣಿ ಕಮಲ್ ಹಾಸನ್ ಬೆಂಬಲ ಸೂಚಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಾಲ್ಕು ನಿಮಿಷಗಳ ವಿಡಿಯೋ ಹಂಚಿಕೊಂಡಿರುವ ಅವರು, ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಜವಾಬ್ದಾರಿಯು ಪಕ್ಷ ರಾಜಕಾರಣಕ್ಕಿಂತ ಮಿಗಿಲಾಗಿರಬೇಕು ಎಂದಿದ್ದಾರೆ.
-
ಜಾಗತಿಕ ಉದ್ವಿಗ್ನತೆ ಹಾಗೂ ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯದ ಕರೆ ನೀಡಿದ್ದರು. ಇದಿಗ ನಟ, ರಾಜಕಾರಣಿ ಕಮಲ್ ಹಾಸನ್ ಅವರು ಪ್ರಧಾನಿಯ ಈ ಮನವಿಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ನಾಲ್ಕು ನಿಮಿಷಗಳ ವೀಡಿಯೋವನ್ನು ಹಂಚಿಕೊಂಡಿರುವ ಅವರು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಜವಾಬ್ದಾರಿಯು ಪಕ್ಷ, ರಾಜಕಾರಣಕ್ಕಿಂತ ಮಿಗಿಲಾಗಿರಬೇಕು ಎಂದು ಹೇಳಿದ್ದಾರೆ.
ಒಗ್ಗಟ್ಟಾಗಿ ಜವಾಬ್ದಾರಿಯನ್ನು ಪ್ರದರ್ಶಿಸಬೇಕು
ಇನ್ಸ್ಟಾಗ್ರಾಮ್ನಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿರುವ ಕಮಲ್ ಹಾಸನ್, "ಇರಾನ್ ಯುದ್ಧದ ಪರಿಣಾಮಗಳ ಬಗ್ಗೆ ತೀವ್ರ ಕಳಕಳಿ ಹೊಂದಿರುವ ಒಬ್ಬ ಭಾರತೀಯನಾಗಿ ನಾನು ಮಾತನಾಡುತ್ತಿದ್ದೇನೆ. ತೈಲ ಬೆಲೆಗಳು ಏರುತ್ತಿವೆ, ಸಮುದ್ರ ವ್ಯಾಪಾರ ಮಾರ್ಗಗಳು ಬಂದ್ ಆಗಿವೆ. ನಮ್ಮ ಅಡುಗೆಮನೆ ಮತ್ತು ಮನೆಗಳಿಗೆ ಶಕ್ತಿ ನೀಡುವ ಇಂಧನ, ನಮ್ಮ ಹೊಲಗಳು ಮತ್ತು ಬೆಳೆಗಳಿಗೆ ಪೋಷಣೆ ನೀಡುವ ಗೊಬ್ಬರ ಹಾಗೂ ನಮ್ಮ ಕೈಗಾರಿಕೆ ಮತ್ತು ವಾಹನಗಳನ್ನು ಓಡಿಸುವ ಇಂಧನ.. ಹೀಗೆ ಎಲ್ಲವೂ ದುಬಾರಿಯಾಗುತ್ತಿವೆ" ಎಂದು ಹೇಳಿದ್ದಾರೆ.
Thug Life Movie: ಕಮಲ್ ಹಾಸನ್-ಮಣಿರತ್ನಂ ಜೋಡಿಯ ʼಥಗ್ಸ್ ಲೈಫ್ʼ ಚಿತ್ರದ ಸಾಂಗ್ ರಿಲೀಸ್
ಈ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು
ಸಿಂಗಾಪುರವನ್ನು ಉದಾಹರಣೆಯಾಗಿ ನೀಡಿದ ಕಮಲ್ ಹಾಸನ್, "ಈಗಾಗಲೇ 60ಕ್ಕೂ ಹೆಚ್ಚು ದೇಶಗಳು ಇಂಧನ ಉಳಿತಾಯದ ನಿಯಮಗಳನ್ನು ಜಾರಿಗೆ ತಂದಿವೆ. ಮುಂದಿನ ಕಠಿಣ ದಿನಗಳಿಗೆ ಸಿದ್ಧರಾಗಿರುವಂತೆ ಸಿಂಗಾಪುರದ ಪ್ರಧಾನಿ ಅಲ್ಲಿನ ಜನರಿಗೆ ಇತ್ತೀಚೆಗೆ ಕರೆ ನೀಡಿರುವುದನ್ನು ನಾವು ಕೇಳಿದ್ದೇವೆ. ಭಾರತವು ಅದಕ್ಕಿಂತ ದೊಡ್ಡ ದೇಶವಾಗಿರುವುದರಿಂದ ನಾವು ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಕಠಿಣ ಸಂದರ್ಭಗಳಲ್ಲಿ ರಾಷ್ಟ್ರೀಯ ಜವಾಬ್ದಾರಿಯು ಪಕ್ಷ ರಾಜಕಾರಣಕ್ಕಿಂತ ಮಿಗಿಲಾಗಿರಬೇಕು" ಎಂದು ಎಚ್ಚರಿಸಿದ್ದಾರೆ.
ಸೈನ್ಯಕ್ಕಾಗಿ ಚಿನ್ನ ತ್ಯಾಗ ಮಾಡಿದ್ದೆವು
ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ನೆನಪಿಸಿಕೊಂಡ ಕಮಲ್ ಹಾಸನ್, "ಸರ್ಕಾರಗಳು ಬರಬಹುದು, ಹೋಗಬಹುದು ಆದರೆ ದೇಶ ಶಾಶ್ವತವಾಗಿ ಉಳಿಯುತ್ತದೆ. 1962ರ ಚೀನಾ ಯುದ್ಧದ ಸಮಯದಲ್ಲಿ ಗಡಿಯಲ್ಲಿರುವ ಸೈನಿಕರನ್ನು ಬೆಂಬಲಿಸಲು ಭಾರತದ ಕುಟುಂಬಗಳು ತಮ್ಮ ಮನೆಗಳಲ್ಲಿದ್ದ ಚಿನ್ನವನ್ನು ದಾನ ಮಾಡಿದ್ದವು. 1965ರಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಾರಕ್ಕೆ ಒಂದು ಹೊತ್ತಿನ ಊಟವನ್ನು ಬಿಡುವಂತೆ ನಾಗರಿಕರಲ್ಲಿ ಕೇಳಿಕೊಂಡಿದ್ದರು. ಇಂದು ಭಾರತಕ್ಕೆ ಅಂತಹ ದೊಡ್ಡ ತ್ಯಾಗದ ಅಗತ್ಯವಿಲ್ಲ. ನಮ್ಮ ಪೋಷಕರು ದೇಶಕ್ಕಾಗಿ ನಮಗಿಂತ ಹೆಚ್ಚಿನದನ್ನು ಮಾಡಿದಾಗ, ನಮ್ಮಿಂದ ಇಷ್ಟನ್ನು ಮಾಡಲು ಸಾಧ್ಯವಿಲ್ಲವೇ.." ಎಂದು ಪ್ರಶ್ನೆ ಮಾಡಿದ್ದಾರೆ.
ಕಮಲ್ ಹಾಸನ್ ಹಂಚಿಕೊಂಡ ವಿಡಿಯೋ
India has overcome wars, shortages, and global crises before - through unity and shared sacrifice. This moment calls for the same national spirit again. 🇮🇳 pic.twitter.com/Mi56m0I4pD
— Kamal Haasan (@ikamalhaasan) May 22, 2026
ಭಾರತ ಇನ್ನಷ್ಟು ಬಲಿಷ್ಠವಾಗಲಿದೆ
"ಇಂದು ಉಳಿಸುವ ಪ್ರತಿ ಯುನಿಟ್ ಇಂಧನವು ನಾಳಿನ ಭಾರತವನ್ನು ಬಲಪಡಿಸುತ್ತದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜಾಗತಿಕ ರಾಜಕೀಯವು ರಸ್ತೆಯಲ್ಲಿ ನಡೆಯುವ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರ ಮೇಲೆಯೂ ಪರಿಣಾಮ ಬೀರುತ್ತದೆ. ಆದರೆ ನಾವೆಲ್ಲರೂ ಒಟ್ಟಾಗಿ ಈ ಬಿಕ್ಕಟ್ಟನ್ನು ಎದುರಿಸಿದರೆ, ಭಾರತ ಖಂಡಿತವಾಗಿಯೂ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ. ಜೈ ಹಿಂದ್.." ಎಂದು ಕಮಲ್ ಹಾಸನ್ ಅವರು ತಿಳಿಸಿದ್ದಾರೆ.