BBK 13: ʻಬಿಗ್ ಬಾಸ್ʼ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಎಂಟ್ರಿ: ‘ಸಿಂಪತಿ ಬೇಡವೇ ಬೇಡ’ ಎಂದ ನಟ!
ಬಿಗ್ ಬಾಸ್ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಪ್ರವೇಶಿಸುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ನಟರಾಗಿ ಗುರುತಿಸಿಕೊಂಡಿರುವ ಇವರು ಮೂರನೇ ಸ್ಪರ್ಧಿಯಾಗಿ ಆಗಮಿಸಿ, ಜನರ ಅನಗತ್ಯ ಅನುಕಂಪ ತಮಗೆ ಬೇಡವೆಂದು ಎಂದು ಖಡಕ್ಕಾಗಿ ಹೇಳಿದ್ದಾರೆ.
-
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ನ 13ನೇ ಆವೃತ್ತಿಗೆ ನಟ ಹಾಗೂ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ 3ನೇ ಸ್ಪರ್ಧಿಯಾಗಿ ಅದ್ಧೂರಿ ಪ್ರವೇಶ ಪಡೆದಿದ್ದಾರೆ. ವೇದಿಕೆಯ ಮೇಲೆ ಹಾಡು ಹೇಳುವ ಮೂಲಕ ತಮ್ಮ ವಿಶಿಷ್ಟ ಶೈಲಿಯಲ್ಲಿ ಪರಿಚಯಿಸಿಕೊಂಡ ಅವಿನಾಶ್, ಪ್ರೇಕ್ಷಕರ ಹಾಗೂ ಕಿಚ್ಚ ಸುದೀಪ್ ಅವರ ಗಮನ ಸೆಳೆದರು.
‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ನಟಿಸಿದ್ದ ಅವಿನಾಶ್
ರಂಗಭೂಮಿಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ಮುಂಬೈನಲ್ಲಿ ನಡೆದಿದ್ದ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರತಿಭೆ. ಬೆಳ್ಳಿತೆರೆಯಲ್ಲಿ ‘ದಯವಿಟ್ಟು ಗಮನಿಸಿ’ ಹಾಗೂ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರಗಳಲ್ಲಿ ನಟಿಸಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದರು.
ಅವಿನಾಶ್ ಪತ್ನಿ ಪ್ರಿಯಾ
ಅವಿನಾಶ್ ಅವರ ಪತ್ನಿ ಪ್ರಿಯಾ ಕೂಡ ಖ್ಯಾತ ನಟಿಯಾಗಿದ್ದು, ಇತ್ತೀಚೆಗೆ ತೆರೆಕಂಡ ದುನಿಯಾ ವಿಜಯ್ ನಟನೆಯ ‘ಭೀಮ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಗಿರಿಜಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಪತಿಯನ್ನು ಬಿಗ್ ಬಾಸ್ ಮನೆಗೆ ಪ್ರೀತಿಯಿಂದ ಬೀಳ್ಕೊಟ್ಟ ಪ್ರಿಯಾ, "ಮದುವೆಯಾಗಿ 12 ವರ್ಷ ಆಗಿದೆ. ಕಳೆದ ಒಂದು ವರ್ಷದಲ್ಲಿ ಪತಿಯಿಂದ ಒಂದು ದಿನವೂ ದೂರ ಉಳಿದಿರಲಿಲ್ಲ, ಈಗ ಅವರನ್ನು ಬಿಟ್ಟಿರಬೇಕಾಗಿದೆ" ಎಂದು ವೇದಿಕೆಯಲ್ಲಿ ಹೇಳಿದರು ಪ್ರಿಯಾ.
ಜನರ ಸಿಂಪತಿ ಬೇಡ
ಬಿಗ್ ಬಾಸ್ ಮನೆಯೊಳಗಿನ ತಮ್ಮ ಮುಂದಿನ ಪಯಣದ ಬಗ್ಗೆ ಮಾತನಾಡಿದ ಅವಿನಾಶ್, "ನನಗೆ ಯಾವುದೇ ದುರಹಂಕಾರ, ಸೊಕ್ಕು, ಗಾಂಚಾಲಿ ಅಥವಾ ಜನರ ಸಿಂಪತಿ ಬೇಡ. ಆದರೆ ಆಟಕ್ಕಾಗಿ ಸ್ವಲ್ಪ ಕಿತಾಪತಿ, ಹಠ, ತಲೆಹರಟೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ ಗುಣವನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದೇನೆ" ಎಂದು ನೇರ ಮಾತುಗಳನ್ನಾಡಿದರು. ಈ ರಿಯಾಲಿಟಿ ಶೋ ಮೂಲಕ ತಮ್ಮ ಬದುಕನ್ನು ಹೊಸದಾಗಿ ಆರಂಭಿಸುವ ಸಂಕಲ್ಪ ಮಾಡಿದ್ದು, ರಂಗಭೂಮಿಯ ಈ ಪ್ರತಿಭೆ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯ ಆಟ ಪ್ರದರ್ಶಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.