ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿಕಿತ್ಸೆಗಾಗಿ 8 ಲಕ್ಷ ರುಪಾಯಿ ಸಾಲ ಮಾಡಿ ಏರ್ ಅಂಬುಲೆನ್ಸ್ ಏರಿದ್ದ ಜಾರ್ಖಂಡ್ ದಂಪತಿ ಅಪಘಾತದಲ್ಲಿ ಸಾವು

ಜಾರ್ಖಂಡ್‌ನಲ್ಲಿ ನಡೆದ ಭೀಕರ ಏರ್ ಅಂಬುಲೆನ್ಸ್ ಅಪಘಾತದಲ್ಲಿ ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದ ದಂಪತಿ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಲತೇಹರ್ ನಿವಾಸಿ ಸಂಜಯ್ ಕುಮಾರ್ ಅಗ್ನಿ ಅವಘಡದಲ್ಲಿ ತೀವ್ರವಾಗಿ ಸುಟ್ಟಗಾಯಗಳಿಗೆ ಒಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಗೆ ತೆರಳುತ್ತಿದ್ದಾಗ ವಿಮಾತ ಪತನವಾಗಿದೆ.

ಚಿಕಿತ್ಸೆಗೆ ಸಾಲ ಮಾಡಿ ವಿಮಾನ ದುರಂತದಲ್ಲಿ ದಂಪತಿ ಸಾವು

ಏರ್ ಅಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ರೋಧನೆ -

Profile
Sushmitha Jain Feb 24, 2026 8:41 PM

ರಾಂಚಿ, ಫೆ. 24: ಜಾರ್ಖಂಡ್‌ನಲ್ಲಿ ನಡೆದ ಭೀಕರ ಏರ್ ಅಂಬುಲೆನ್ಸ್ ಅಪಘಾತವು ಒಂದು ಕುಟುಂಬದ ಬದುಕನ್ನೇ ಕಿತ್ತುಕೊಂಡಿದೆ. ಚಿಕಿತ್ಸೆಗಾಗಿ ದೆಹಲಿಗೆ ತೆರಳಲು ಬರೋಬ್ಬರಿ 8 ಲಕ್ಷ ರುಪಾಯಿ ಸಾಲ ಮಾಡಿ ಚಾರ್ಟರ್ ವಿಮಾನವನ್ನು ಬಾಡಿಗೆಗೆ ಪಡೆದಿದ್ದ 41 ವರ್ಷದ ಸಂಜಯ್ ಕುಮಾರ್ ಮತ್ತು ಅವರ ಪತ್ನಿ ಅರ್ಚನಾ ದೇವಿ, ವಿಮಾನ ಪತನಗೊಂಡು ದುರಂತ ಅಂತ್ಯ ಕಂಡಿದ್ದಾರೆ. ಜಾರ್ಖಂಡ್‌ನ ಚಾತ್ರಾ ಜಿಲ್ಲೆಯಲ್ಲಿ ನಡೆದ ಈ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ಜಾರ್ಖಂಡ್‌ನ ಲತೇಹರ್ ನಿವಾಸಿ ಸಂಜಯ್ ಕುಮಾರ್ ತಮ್ಮ ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಕಳೆದ ಸೋಮವಾರ (ಫೆಬ್ರವರಿ 16) ಸಂಭವಿಸಿದ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡದಲ್ಲಿ ತೀವ್ರವಾಗಿ ಸುಟ್ಟ ಗಾಯಕ್ಕೆ ಒಳಗಾಗಿದ್ದರು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಸಂಜಯ್ ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಸ್ಥಳೀಯ ಚಿಕಿತ್ಸಾ ಆಯ್ಕೆಗಳು ವಿಫಲವಾದವು. ಹೀಗಾಗಿ, ಹೆಚ್ಚಿನ ಮತ್ತು ಅತ್ಯಾಧುನಿಕ ಚಿಕಿತ್ಸೆಗಾಗಿ ದೆಹಲಿಯ ಪ್ರತಿಷ್ಠಿತ ಸಿರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲು ಕುಟುಂಬ ನಿರ್ಧರಿಸಿತು.

ಜಾರ್ಖಂಡ್‌ನಲ್ಲಿ ನಡೆದ ಭೀಕರ ಏರ್ ಅಂಬುಲೆನ್ಸ್‌ ಪತನ:



ಸಾಲ ಮಾಡಿ ವಿಮಾನ ಬಾಡಿಗೆ

ಸಂಜಯ್ ಅವರ ಸಹೋದರ ಅಜಯ್ ತಿಳಿಸಿರುವಂತೆ, ಚಿಕಿತ್ಸಾ ವೆಚ್ಚಕ್ಕಾಗಿ ಕುಟುಂಬವು ಆಸ್ತಿ ಮತ್ತು ಜಮೀನನ್ನು ಮಾರಾಟ ಮಾಡಲು ಸಹ ಸಿದ್ಧವಾಗಿತ್ತು. ಆದರೆ ಅಂತಿಮವಾಗಿ ಸ್ನೇಹಿತರು ಮತ್ತು ಹಿತೈಷಿಗಳಿಂದ ಸುಮಾರು 8 ಲಕ್ಷ ರುಪಾಯಿ ಸಾಲವಾಗಿ ಪಡೆದು, ದೆಹಲಿ ಮೂಲದ 'ರೆಡ್‌ಬರ್ಡ್ ಏರ್‌ವೇಸ್' ಸಂಸ್ಥೆಯ ಬೀಚ್‌ಕ್ರಾಫ್ಟ್ C90 ವಿಮಾನವನ್ನು ಏರ್ ಅಂಬುಲೆನ್ಸ್ ಆಗಿ ಬಾಡಿಗೆಗೆ ಪಡೆದುಕೊಂಡಿತ್ತು.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಅಪಘಾತದ ವಿವರ

ಸೋಮವಾರ ರಾತ್ರಿ ರಾಂಚಿಯಿಂದ ದೆಹಲಿಗೆ ಹೊರಟಿದ್ದ ಈ ವಿಮಾನವು ಟೇಕ್‌ಆಫ್‌ ಆದ ಕೆಲವೇ ಸಮಯದ ನಂತರ ಚಾತ್ರಾ ಜಿಲ್ಲೆಯಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಏಳು ಮಂದಿಯೂ ಬಲಿಯಾಗಿದ್ದಾರೆ. ಮೃತರನ್ನು ರೋಗಿ ಸಂಜಯ್ ಕುಮಾರ್, ಅವರ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ ಕುಮಾರ್, ಪೈಲಟ್‌ಗಳಾದ ವಿವೇಕ್ ವಿಕಾಸ್ ಭಗತ್ ಮತ್ತು ಸವರಾಜದೀಪ್ ಸಿಂಗ್, ವೈದ್ಯ ಡಾ. ವಿಕಾಸ್ ಕುಮಾರ್ ಗುಪ್ತಾ ಮತ್ತು ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ.

ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿಕೊಳ್ಳಲು ಸರ್ವಸ್ವವನ್ನೂ ಪಣಕ್ಕಿಟ್ಟು ಸಾಲ ಮಾಡಿ ವಿಮಾನವೇರಿದ್ದ ದಂಪತಿ, ಗಮ್ಯಸ್ಥಾನ ತಲುಪುವ ಮೊದಲೇ ಸಾವನ್ನಪ್ಪಿರುವುದು ಇಡೀ ಜಿಲ್ಲೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಪ್ರಾಣ ಉಳಿಸಿಕೊಳ್ಳುವ ಹೋರಾಟದಲ್ಲಿದ್ದ ಕುಟುಂಬ ಈಗ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದೆ.