ಏಪ್ರಿಲ್ 22ರಂದು ಭಕ್ತರಿಗಾಗಿ ಮತ್ತೆ ತೆರೆಯಲಿದೆ ಕೇದರನಾಥ ದೇವಾಲಯ; ಚಾರ್ ಧಾಮ್ ಯಾತ್ರೆ ಬಗ್ಗೆ ಇಲ್ಲಿದೆ ಮಾಹಿತಿ
Kedarnath Temple Reopen: ಚಳಿಗಾಲದ ವಿರಾಮದ ಬಳಿಕ (ಆರು ತಿಂಗಳ ನಂತರ) ಕೇದರನಾಥ ದೇವಾಲಯ ಮತ್ತೆ ಭಕ್ತರ ದರ್ಶನಕ್ಕೆ ತೆರೆಯಲು ಸಜ್ಜಾಗಿದೆ. ಏಪ್ರಿಲ್ 22ರಂದು ಬೆಳಗ್ಗೆ 8 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಜತೆಗೆ ಚಾರ್ ಧಾಮ್ ಯಾತ್ರೆಯ ವೇಳಾಪಟ್ಟಿಯೂ ಅಂತಿಮಗೊಂಡಿದೆ.
ಕೇದರನಾಥ ದೇವಾಲಯ (ಸಂಗ್ರಹ ಚಿತ್ರ) -
ಡೆಹ್ರಾಡೂನ್, ಫೆ. 15: ಉತ್ತರಾಖಂಡದಲ್ಲಿರುವ ಕೇದಾರನಾಥ ದೇವಾಲಯವು (Kedarnath Temple) ಏಪ್ರಿಲ್ 22ರಂದು ಭಕ್ತರಿಗೆ ಮತ್ತೆ ತೆರೆಯಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ತಿಳಿಸಿದ್ದಾರೆ. ಚಳಿಗಾಲದ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳ ಕಾಲ ಈ ದೇವಾಲಯವನ್ನು ಮುಚ್ಚಲಾಗಿತ್ತು. ಬದರೀನಾಥ-ಕೇದಾರನಾಥ ದೇವಸ್ಥಾನ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ್ ಗೌರ್ ಅವರು, ದೇವಸ್ಥಾನವನ್ನು ಪುನಃ ತೆರೆಯುವ ದಿನಾಂಕ ಮತ್ತು ಸಮಯವನ್ನು ಮಹಾಶಿವರಾತ್ರಿ ದಿನವೇ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಗವಾನ್ ಕೇದಾರನಾಥರ ಶೀತಕಾಲೀನ ಗದ್ದುಗೆ ಆಗಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಭಾನುವಾರ (ಫೆಬ್ರವರಿ 15) ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ವಿದ್ವಾಂಸರು ಮತ್ತು ಪುರೋಹಿತರು ಪಂಚಾಂಗ ಅಥವಾ ಹಿಂದೂ ಕ್ಯಾಲೆಂಡರ್ ವಾಚನದ ಮೂಲಕ ಆಚರಣೆಗಳು ಮತ್ತು ಪ್ರಾರ್ಥನೆಗಳ ನಂತರ ಭಾನುವಾರ ಮುಹೂರ್ತ (ಶುಭ ಸಮಯ)ವನ್ನು ಲೆಕ್ಕ ಹಾಕಿದರು.
ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದರನಾಥ ದೇವಾಲಯವನ್ನು ಏಪ್ರಿಲ್ 22ರಂದು ಬೆಳಗ್ಗೆ 8 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಕೇದಾರನಾಥ ದೇವಸ್ಥಾನದ ಪುನಃ ಪ್ರಾರಂಭದ ಘೋಷಣೆಯೊಂದಿಗೆ ಗಢ್ವಾಲ್ ಹಿಮಾಲಯ ಪ್ರದೇಶದಲ್ಲಿನ ಚಾರ್ ಧಾಮ್ ಯಾತ್ರೆಯ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.
ಬದರಿನಾಥ ಧಾಮ ಏಪ್ರಿಲ್ 23ರಂದು ಬಾಗಿಲು ತೆರೆಯಲಿದ್ದು, ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮ ಏಪ್ರಿಲ್ 19ರಂದು ತೆರೆಯಲಿವೆ. ದಿನಾಂಕಗಳನ್ನು ನಿರ್ಧರಿಸುವ ಮೊದಲು ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ರಾವಲ್ ಭೀಮಾಶಂಕರ್ ಲಿಂಗ್, ಕೇದಾರನಾಥ ಶಾಸಕಿ ಆಶಾ ನೌಟಿಯಾಲ್, ದೇವಸ್ಥಾನ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ಮತ್ತಿತರರು ಭಾಗವಹಿಸಿದ್ದರು.
ಚಕರ್ಪುರದ ವಂಖಂಡಿ ಮಹಾದೇವ ದೇವಸ್ಥಾನದಲ್ಲಿ ಜಲಾಭಿಷೇಕ ನೆರವೇರಿಸಿದ ನಂತರ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಏಪ್ರಿಲ್ 22ರಂದು ಕೇದಾರನಾಥ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರು. ಹಾಗೆಯೇ ಅದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಿದರು. ಉತ್ತರಾಖಂಡ ಸರ್ಕಾರವು ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಏಪ್ರಿಲ್ 22ರಂದು ಕೇದಾರನಾಥ ದೇವಾಲಯದ ದ್ವಾರಗಳು ತೆರೆಯಲ್ಪಡುತ್ತವೆ. ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ. ಉತ್ತರಾಖಂಡದ ದೇವಭೂಮಿಗೆ ಬರುವ ಎಲ್ಲ ಭಕ್ತರು ಸುರಕ್ಷಿತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಧಾಮಿ ಹೇಳಿದ್ದಾರೆ. ಶಿವನನ್ನು ಪೂಜಿಸುವ ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ ಎಂದು ಧಾಮಿ ತಿಳಿಸಿದ್ದಾರೆ. ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದು ಉತ್ತರಾಖಂಡ ಸಿಎಂ ಹೇಳಿದರು.