TMC: ಭವಾನಿಪುರ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
Mamata Banerjee: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಟಿಎಂಸಿಗೆ, ಮಮತಾ ಬ್ಯಾನರ್ಜಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭವಾನಿಪುರ ಕ್ಷೇತ್ರದಲ್ಲಿ ಸೋತ ಮಮತಾ ಬ್ಯಾನರ್ಜಿ ಫಲಿತಾಂಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತಾ, ಜೂ. 15: ಸತತ 15 ವರ್ಷ ಆಡಳಿತ ನಡೆಸಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ನ (Trinamool Congress) ಆಳ್ವಿಕೆ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಬಿಜೆಪಿ (BJP) ಸರ್ಕಾರ ರಚಿಸಿದ್ದು, ಸುವೇಂದು ಅಧಿಕಾರಿ (Suvendu Adhikari) ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಇತ್ತ ಅಧಿಕಾರ ಕಳೆದುಕೊಂಡ ಟಿಎಂಸಿಗೆ ಶಾಕ್ ಮೇಲೆ ಶಾಕ್ ಎದುರಾಗಿದ್ದು, ಹಲವರು ನಾಯಕರು, ಶಾಸಕರು ಮತ್ತು ಸಂಸದರು ಪಕ್ಷ ತೊರೆದಿದ್ದಾರೆ. ಈ ಮಧ್ಯೆ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಲ್ಲಿನ ತಮ್ಮ ಸೋಲನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಭವಾನಿಪುರ ಕ್ಷೇತ್ರದ ಫಲಿತಾಂಶವನ್ನು ಮರುಪರಿಶೀಲಿಸಬೇಕೆಂದು ಅವರು ಕೋಲ್ಕತಾ ಹೈಕೋರ್ಟ್ನಲ್ಲಿ ಮಂಗಳವಾರ (ಜೂನ್ 16) ಅರ್ಜಿ ಸಲ್ಲಿಸಿದ್ದಾರೆ.
ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಒಂದು ಕಾಲದ ತಮ್ಮ ಆತ್ಮೀಯ, ಈಗ ಎದುರಾಳಿಯಾಗಿರುವ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ 15,105 ಮತಗಳ ಅಂತರದಿಂದ ಸೋತಿದ್ದರು.
ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ:
🛑#BigBreakingNews#TMC chairperson #MamataBanerjee has filed a petition at Calcutta high court challenging the election result of #Bhawanipur assembly constituency. #WestBengalElection #WestBengalLegislativeAssemblyelection2026 #BJP #Bhabanipur #Kolkata #CalcuttaHighCourt pic.twitter.com/a1rg4LDIDN
— Rajesh Saha (@Journo_Rajesh) June 16, 2026
ವರ್ಷಗಳಿಂದ ತಮ್ಮದೇ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಎದುರಾದ ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಮಮತಾ ಬ್ಯಾನರ್ಜಿ ಖುದ್ದಾಗಿ ಕೋಲ್ಕತಾ ಹೈಕೋರ್ಟ್ನ ರಿಜಿಸ್ಟ್ರಿಗೆ ಭೇಟಿ ನೀಡಿ ಫಲಿತಾಂಶವನ್ನು ಪ್ರಶ್ನಿಸುವ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡೆ ರಾಜ್ಯದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ನ್ಯಾಯಾಲಯದ ಕದ ತಟ್ಟುತ್ತಿರುವುದು 2ನೇ ಬಾರಿ
ವಿಶೇಷ ಎಂದರೆ ಮೇ 4ರಂದು ಪ್ರಕಟಗೊಂಡ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ಹೈಕೋರ್ಟ್ ಮೆಟ್ಟಿಲೇರುತ್ತಿರುವುದು ಇದು 2ನೇ ಬಾರಿ. ಈ ಹಿಂದೆ ಅವರು ಮೇ 14ರಂದು ಕೋರ್ಟ್ಗೆ ತೆರಳಿದ್ದರು. ಚುನಾವಣೆ ನಂತರ ಭುಗಿಲೆದ್ದ ಹಿಂಸಾಚಾರದ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು ಅವರು ತೆರಳಿದ್ದರು. ಆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ 'ಕಳ್ಳ ಕಳ್ಳ' ಎನ್ನುವ ಘೋಷಣೆ ಕೇಳಿ ಬಂದಿತ್ತು. ಆ ಘಟನೆಯ ಸುಮಾರು ಒಂದು ತಿಂಗಳ ನಂತರ, ಮಮತಾ ಬ್ಯಾನರ್ಜಿ ಮತ್ತೆ ಹೈಕೋರ್ಟ್ಗೆ ಹಾಜರಾದರು. ಅವರ ಜತೆ ತೃಣಮೂಲ ಕಾಂಗ್ರೆಸ್ ಶಾಸಕ ಕುನಾಲ್ ಘೋಷ್ ಮತ್ತು ನಾಯಕ ಡೋಲಾ ಸೇನ್ ಇದ್ದರು.
ಟಿಎಂಸಿಯ ಪ್ರಮುಖ ಹುದ್ದೆಯಿಂದ ಸಾಯೋನಿ ಘೋಷ್, ಮಾಲಾ ರಾಯ್ ವಜಾ; ಮಮತಾ ಬ್ಯಾನರ್ಜಿ ದೃಢ ನಿರ್ಧಾರ
ಮಮತಾ ಪರ ವಕೀಲರು ಹೇಳಿದ್ದೇನು?
ಮಮತಾ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿ, ʼʼಭವಾನಿಪುರದ ಸೋಲನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದಾರೆʼʼ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಈ ಪ್ರಕರಣ ಸದ್ಯ ಗಮನ ಸೆಳೆದಿದೆ. 2021ರ ವಿಧಾನಸಭಾ ಚುನಾವಣೆಯಲ್ಲೂ ನಂದ್ರಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋಲುಂಡಿದ್ದರು. ಆಗಲೂ ಮಮತಾ ಸೋಲನ್ನು ಪ್ರಶ್ನಿಸಿ ಕೋರ್ಟ್ ಕದ ತಟ್ಟಿದ್ದರು. ಆ ಪ್ರಕರಣ ಈಗಲೂ ಪೆಂಡಿಂಗ್ನಲ್ಲಿದ್ದು, ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.