ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi Chhattisgarh Visit: ಮಾವೋವಾದಕ್ಕೆ ಉತ್ತೇಜನ ನೀಡಿದ್ದೇ ಕಾಂಗ್ರೆಸ್‌ ಆಡಳಿತ: ಛತ್ತೀಸ್‌ಗಢದಲ್ಲಿ ಮೋದಿ ವಾಗ್ದಾಳಿ

Narendra Modi: ʼʼಕಾಂಗ್ರೆಸ್‌ನ ನೀತಿಗಳಿಂದಾಗಿ ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಲ್ಲಿ ದಶಕಗಳಿಂದ ಮಾವೋವಾದಕ್ಕೆ ಪ್ರೋತ್ಸಾಹ ದೊರೆತ್ತಿತ್ತು. ಇದೀಗ ಛತ್ತೀಸ್‌ಗಢದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಹೊಸ ಯುಗ ಕಂಡುಬರುತ್ತಿದೆʼʼ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾವೋವಾದಕ್ಕೆ ಉತ್ತೇಜನ ನೀಡಿದ್ದೇ ಕಾಂಗ್ರೆಸ್‌: ಮೋದಿ

ನರೇಂದ್ರ ಮೋದಿ.

Profile Ramesh B Mar 30, 2025 9:33 PM

ರಾಯ್‌ಪುರ: ʼʼಕಾಂಗ್ರೆಸ್‌ನ ನೀತಿಗಳಿಂದಾಗಿ ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಲ್ಲಿ ದಶಕಗಳಿಂದ ಮಾವೋವಾದಕ್ಕೆ ಪ್ರೋತ್ಸಾಹ ದೊರೆತಿದೆ. ಇದೀಗ ಛತ್ತೀಸ್‌ಗಢದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಹೊಸ ಯುಗ ಕಂಡುಬರುತ್ತಿದೆʼʼ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯ ಮೊಹಭಟ್ಟಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು (PM Modi Chhattisgarh Visit). ʼʼಮಾವೋವಾದಿ ಹಿಂಸಾಚಾರದಲ್ಲಿ ಅನೇಕ ತಾಯಂದಿರು ತಮ್ಮ ಪ್ರೀತಿಯ ಪುತ್ರರನ್ನು ಮತ್ತು ಅನೇಕ ಸಹೋದರಿಯರು ತಮ್ಮ ಸಹೋದರರನ್ನು ಕಳೆದುಕೊಂಡಿದ್ದಾರೆʼʼ ಎಂದು ನೋವು ವ್ಯಕ್ತಪಡಿಸಿದರು.

"ದಶಕಗಳಿಂದ ಕಾಂಗ್ರೆಸ್‌ನ ನೀತಿಗಳಿಂದಾಗಿ ಛತ್ತೀಸ್‌ಗಢ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾವೋವಾದಕ್ಕೆ ಪ್ರೋತ್ಸಾಹ ಸಿಕ್ಕಿತು. ಯಾವ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿದಿದೆಯೋ ಅಲ್ಲಿ ಮಾವೋವಾದವು ಪ್ರವರ್ಧಮಾನಕ್ಕೆ ಬಂತು. 60 ವರ್ಷಗಳ ಕಾಲ ಸರ್ಕಾರ ನಡೆಸಿದ ಪಕ್ಷ (ಕಾಂಗ್ರೆಸ್‌) ಏನು ಮಾಡಿದೆ? ಅದು ಅಂತಹ ಜಿಲ್ಲೆಗಳನ್ನು ಹಿಂದುಳಿದಿದೆ ಎಂದು ಘೋಷಿಸಿ ತನ್ನ ಜವಾಬ್ದಾರಿಯಿಂದ ದೂರ ಸರಿಯಿತಷ್ಟೇ" ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಹೇಳಿದ್ದೇನು ಎನ್ನುವುದನ್ನು ನೋಡಿ:



ಈ ಸುದ್ದಿಯನ್ನೂ ಓದಿ: Mann ki Baat: ಜಲ ಸಂರಕ್ಷಣೆ, ಸ್ಟಾರ್ಟ್‌ ಅಪ್‌, ಕ್ರೀಡೆ, ; ಮನ್‌ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದೇನು?

ಛತ್ತೀಸ್‌ಗಢದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 33,700 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿ ಮಾತನಾಡಿದರು. "ನೀವು (ಛತ್ತೀಸ್‌ಗಢ) ಕೂಡ ನಕ್ಸಲ್ ಭೀತಿಯಿಂದ ಬಳಲಿದ್ದೀರಿ. ಹಿಂದಿನ ಕಾಂಗ್ರೆಸ್ ಸರ್ಕಾರವು ಬಡ ಬುಡಕಟ್ಟು ಜನರ ಸೌಲಭ್ಯಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ" ಎಂದು ಅವರು ಹೇಳಿದರು.

ಸ್ವಚ್ಛ ಭಾರತ ಅಭಿಯಾನ ಮತ್ತು ಆಯುಷ್ಮಾನ್ ಭಾರತ್ ಮುಂತಾದ ಕೇಂದ್ರದ ಯೋಜನೆಗಳನ್ನು ಅವರು ಬಿಡಿಸಿ ಹೇಳಿದರು. ಇದು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡುತ್ತದೆ. ಡಬಲ್ ಎಂಜಿನ್‌ ಸರ್ಕಾರದ ಅಡಿಯಲ್ಲಿ ಛತ್ತೀಸ್‌ಗಢದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ ಎಂದು ಮೋದಿ ಹೇಳಿದರು. "ಅಭಿವೃದ್ಧಿ ಯೋಜನೆಗಳಿಂದಾಗಿ ಮಾವೋವಾದ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಹೊಸ ಯುಗ ಕಂಡುಬರುತ್ತಿದೆ" ಎಂದು ತಿಳಿಸಿದರು. ಬಿಜೆಪಿ ಸರ್ಕಾರವು ಜನರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲಕ್ಷಾಂತರ ಜನರ ಮನೆ ಹೊಂದುವ ಕನಸು ಕಾಗದದ ಮೇಲೆಯೇ ಉಳಿದಿತ್ತು ಎಂದು ಟೀಕಿಸಿದ ಮೋದಿ, "ಹಿಂದಿನ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲಿ ಬಡ ಜನರ ವಸತಿ ಕನಸುಗಳು ಕಡತಗಳ ರಾಶಿಯಲ್ಲಿ ಮರೆಯಾಗಿದ್ದವು. ಆದರೆ ಬಿಜೆಪಿ ಸರ್ಕಾರ ಈ ಕನಸನ್ನು ಈಡೇರಿಸಿದೆ. ನಮ್ಮ ಸರ್ಕಾರವು ಮನೆಗಳನ್ನು ನಿರ್ಮಿಸುವುದಲ್ಲದೆ, ಅಲ್ಲಿ ವಾಸಿಸುವ ಜನರ ಬದುಕನ್ನು ಹಸನಾಗಿಸುತ್ತಿದೆ" ಎಂದು ತಿಳಿಸಿದರು.

ಮೋದಿ ಅವರು ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ 33,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಲ್ಲಿ ಬಡವರಿಗೆ ಮನೆಗಳು, ಶಾಲೆಗಳು, ರಸ್ತೆಗಳು, ರೈಲ್ವೆಗಳು, ವಿದ್ಯುತ್ ಮತ್ತು ಅನಿಲ ಪೈಪ್‌ಲೈನ್‌ಗಳು ಸೇರಿವೆ. 2024ರ ಲೋಕಸಭಾ ಚುನಾವಣೆಯ ನಂತರ ರಾಜ್ಯಕ್ಕೆ ಮೋದಿ ನೀಡಿದ ಮೊದಲ ಭೇಟಿ ಇದು.