ಆರ್ಎಸ್ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
Petrol Bomb Attack on RSS Office: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿದ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಇಬ್ಬರು ದುಷ್ಕರ್ಮಿಗಳು ಶಂಕಿತ ಪೆಟ್ರೋಲ್ ಬಾಂಬ್ಗಳನ್ನು ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ತೋರಿಸಿದೆ.
ಘಟನೆಯ ಸಿಸಿಟಿವಿ ದೃಶ್ಯದ ಫೋಟೋ -
ರಾಂಚಿ, ಜೂ.17: ದುಷ್ಕರ್ಮಿಗಳ ಗುಂಪೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿದ ಘಟನೆ ಜಾರ್ಖಂಡ್ (Jharkhand)ನ ರಾಂಚಿಯಲ್ಲಿ ನಡೆದಿದೆ. ಮಂಗಳವಾರ-ಬುಧವಾರ (ಜೂ.16-17) ಮಧ್ಯರಾತ್ರಿ 12:30 ರ ಸುಮಾರಿಗೆ ಚುಟಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಆರ್ಎಸ್ಎಸ್ ಕಚೇರಿ ಆವರಣದ ಮೇಲೆ ಪೆಟ್ರೋಲ್ ಬಾಂಬ್ಗಳೆಂದು ಶಂಕಿಸಲಾದ ಎರಡು ಅನುಮಾನಾಸ್ಪದ ಬಾಟಲಿಗಳನ್ನು ಎಸೆಯಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಇಬ್ಬರು ದುಷ್ಕರ್ಮಿಗಳು ಶಂಕಿತ ಪೆಟ್ರೋಲ್ ಬಾಂಬ್ಗಳನ್ನು ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ತೋರಿಸಿದೆ. ಮಧ್ಯರಾತ್ರಿ 12:38 ಕ್ಕೆ ಈ ಘಟನೆ ನಡೆದಿದೆ. ಒಬ್ಬ ದುಷ್ಕರ್ಮಿ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ.
ಈ ಘಟನೆಯು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ರಾಂಚಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪೊಲೀಸರು ಘಟನೆಯ ತನಿಖೆ ಮುಂದುವರಿಸಿರುವುದರಿಂದ ಆ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇಲ್ಲಿದೆ ಸಿಸಿಟಿವಿ ವಿಡಿಯೊ:
#WATCH | CCTV visuals show two youth hurling petrol bombs at RSS office in Ranchi, Jharkhand. The attack happened at 1238 hours.
— ANI (@ANI) June 17, 2026
(Visuals source: RSS office) pic.twitter.com/OCJlf4J029
ಮಂಗಳವಾರ (ಜೂನ್ 16-17) ತಡರಾತ್ರಿ ಇಬ್ಬರು ಆರೋಪಿಗಳು ಆರ್ಎಸ್ಎಸ್ ಕಚೇರಿಗೆ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಎಸೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಎರಡೂ ಬಾಟಲಿಗಳು ಗೋಡೆಯ ಸಮೀಪ ಬಿದ್ದಿವೆ. ಘಟನೆಯಲ್ಲಿ ಆರ್ಎಸ್ಎಸ್ ಕಚೇರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ಕೂಡಲೇ, ಬಿಜೆಪಿ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಸೇರಿದಂತೆ ಹಲವಾರು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದರು.
ಕೇರಳಂನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿತ್ತು ದಾಳಿ
ಬಿಜೆಪಿ ಕಾರ್ಯಕರ್ತರ ವಿರುದ್ಧ ನಡೆದಿದ್ದ ದಾಳಿಯಲ್ಲಿ ಇಬ್ಬರು ಗಾಯಗೊಂಡ ಘಟನೆ ಕೇರಳಂನ ಮಲಪ್ಪುರಂನ ವಂಡೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಸ್ಥಳೀಯ ಸಿಪಿಎಂ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂದು ಪಕ್ಷ ಆರೋಪಿಸಿತ್ತು. ಗಾಯಗೊಂಡವರನ್ನು ಕಪ್ಪಿಲ್ ನಿವಾಸಿಗಳಾದ ವಿಶಾಖ್ ಮತ್ತು ಜಿತಿನ್ ಎಂದು ಗುರುತಿಸಲಾಗಿದೆ. ಕಪ್ಪಿಲ್ ಪಟ್ಟಣದಲ್ಲಿ ಈ ಘಟನೆ ನಡೆದಿತ್ತು.
ಘಟನೆಯಲ್ಲಿ ಇಬ್ಬರ ಕೈಗಳಿಗೂ ಗಾಯಗಳಾಗಿದ್ದವು. ಪ್ರಥಮ ಚಿಕಿತ್ಸೆಗಾಗಿ ವಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪೆರಿಂಥಲ್ಮನ್ನದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಪಿಎಂ ವಾರ್ಡ್ ಸದಸ್ಯನೊಬ್ಬನ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ವಂದೂರು ಪಂಚಾಯತ್ ವಾರ್ಡ್ 24 ಸದಸ್ಯ ಸಲಾಂ ಮತ್ತು ಸಿಪಿಎಂ ಕಾರ್ಯಕರ್ತ ಜಿತು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆಂದು ಪಕ್ಷ ಹೇಳಿತ್ತು.