ತಿರುಮಲಕ್ಕೆ ಬರುವ ಭಕ್ತರ ಕಾವಲು ಕಾಯಲಿದೆ ರೋಬೊಟಿಕ್ ನಾಯಿ
ತಿರುಮಲ ದೇವಾಲಯದ ಸುತ್ತಮುತ್ತ ಕಾಡು ಪ್ರಾಣಿಗಳ ಚಲನೆಯ ಬಗ್ಗೆ ನಿಗಾ ವಹಿಸಲು ರೋಬೊಟಿಕ್ ನಾಯಿಯನ್ನು ಪರಿಚಯಿಸಲು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮುಂದಾಗಿದೆ. ಈ ಕುರಿತು ಈಗಾಗಲೇ ಪರಿಶೀಲನೆಯನ್ನು ನಡೆಸಲಾಗಿದೆ. ಭಕ್ತರಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಲು ಈ ಯೋಜನೆಯನ್ನು ಮಾಡಿರುವುದಾಗಿ ಟಿಟಿಡಿ ತಿಳಿಸಿದೆ.
ಸಂಗ್ರಹ ಚಿತ್ರ -
ಹೈದರಾಬಾದ್: ತಿರುಮಲ ಬೆಟ್ಟದ (Tirumala hills) ಮೇಲಿರುವ ಬಾಲಾಜಿ ಶ್ರೀ ವೆಂಕಟರಮಣ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanam) ಮುಂದಾಗಿದೆ. ತಿರುಮಲ ಬೆಟ್ಟಗಳಲ್ಲಿ ಕಾಲ್ನಡಿಗೆಯಲ್ಲಿ ಬರುವಾಗ ಉಂಟಾಗುವ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟುವ ಸಲುವಾಗಿ ಸುತ್ತಮುತ್ತ ಕಾಡಿನಲ್ಲಿರುವ ವನ್ಯಜೀವಿಗಳ ಚಲನವಲನಗಳ ಮೇಲೆ ನಿಗಾ ಇಡಲು ಸುಧಾರಿತ ರೋಬೊಟಿಕ್ ನಾಯಿಯನ್ನು (Robotic dog) ಬಳಸಲು ನಿರ್ಧರಿಸಲಾಗಿದೆ. ಇದರ ಕಾರ್ಯಕ್ಷಮತೆ ಬಗ್ಗೆ ಈಗಾಗಲೇ ಟಿಟಿಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಟಿಟಿಡಿ ವಕ್ತಾರರು, ವೆಂಕಟೇಶ್ವರ ದೇವಸ್ಥಾನದ ಆಡಳಿತ ಸಂಸ್ಥೆಯಾದ ತಿರುಮಲ ತಿರುಪತಿ ದೇವಸ್ಥಾನಗಳು ಶೇಷಾಚಲಂ ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಚಲನವಲನಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಹೊಂದಿರುವ ನಾಲ್ಕು ಕಾಲಿನ ರೋಬೊಟಿಕ್ ನಾಯಿಯನ್ನು ನಿಯೋಜಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಮಾನವನ ಸಂಚಾರಕ್ಕೆ ಸೀಮಿತವಾಗಿರುವ ಅಪಾಯಕಾರಿಯಾದ ಭೂಪ್ರದೇಶದಲ್ಲಿ ಕಣ್ಗಾವಲುಗಾಗಿ ಇದರ ಕ್ಷಮತೆಯನ್ನು ಟಿಟಿಡಿ ನಿಯೋಗವು ಪರಿಶೀಲನೆ ನಡೆಸಿದೆ. ಮುಖ್ಯವಾಗಿ ಅರಣ್ಯ ಪ್ರದೇಶದ ಚಾರಣ ಮಾರ್ಗದಲ್ಲಿ ಮಾನವ-ಪ್ರಾಣಿ ಸಂಘರ್ಷಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಸುಧಾರಿತ ರೋಬೋಟಿಕ್ ತಂತ್ರಜ್ಞಾನದ ಬಳಕೆಯಿಂದ ವನ್ಯಜೀವಿಗಳ ಚಲನವಲನಗಳ ನೈಜ ಸಮಯದ ಮೇಲ್ವಿಚಾರಣೆ ಮಾಡಬಹುದು. ಇದು ಅರಣ್ಯ ಪ್ರದೇಶಗಳಿಂದ ತಿರುಮಲ ದೇವಾಲಯಕ್ಕೆ ಬರುವ ಭಕ್ತರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
TTD explores advanced Robot Dog technology for real-time wildlife monitoring and enhanced devotee safety in Tirumala. Equipped with AI, thermal cameras, LiDAR and smart sensors, it can detect wildlife and send live geo-tagged alerts.#TTD #Tirumala #RobotDog #DevoteeSafety pic.twitter.com/wO25X3W91K
— Tirumala Tirupati Devasthanams (@TTDevasthanams) August 21, 2026
ಹೇಗಿದೆ ರೋಬೊಟಿಕ್ ನಾಯಿ?
ರೋಬೊಟಿಕ್ ನಾಯಿಯಲ್ಲಿ ರೋಬೋಟ್ ಆಪ್ಟಿಕಲ್ ಮತ್ತು ಥರ್ಮಲ್ ಇಮೇಜಿಂಗ್ ಕೆಮರಾಗಲಿವೆ. ಇದು 360 ಡಿಗ್ರಿ ಲಿಡಾರ್, ಬಹು ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಹೊಂದಿದೆ. ಹೀಗಾಗಿ ಕತ್ತಲು ಅಥವಾ ಮಂಜಿನಂತಹ ಕಡಿಮೆ ಗೋಚರತೆಯ ಪರಿಸ್ಥಿತಿಯಲ್ಲೂ ಕೂಡ ವನ್ಯಜೀವಿಗಳ ಪತ್ತೆ ಮತ್ತು ಟ್ರ್ಯಾಕಿಂಗ್ ಮಾಡುತ್ತದೆ.
ಇದರಲ್ಲಿರುವ ಕೃತಕ ಬುದ್ದಿಮತ್ತೆಯು ದೊಡ್ಡ ಪ್ರಾಣಿಗಳು, ಮನುಷ್ಯರು, ವಾಹನಗಳು ಮತ್ತು ಸಾಕು ಪ್ರಾಣಿಗಳನ್ನು ಗುರುತಿಸಲಿದೆ. ವನ್ಯಜೀವಿಗಳ ಚಲನೆಯನ್ನು ಪತ್ತೆ ಹಚ್ಚಿ ಎಚ್ಚರಿಕೆಗಳನ್ನು ಕಳುಹಿಸಲಿದೆ. ಇದರಿಂದ ತಕ್ಷಣ ನಿಯಂತ್ರಣ ಕೊಠಡಿ ಮೂಲಕ ಗಸ್ತು ಸಿಬ್ಬಂದಿಯ ನಿಯೋಜನೆ ಸಾಧ್ಯವಾಗುವುದು.
ಅಲಿಪಿರಿ-ತಿರುಮಲ ಪಾದಚಾರಿ ಮಾರ್ಗದ ಪಕ್ಕದಲ್ಲಿರುವ ಅರಣ್ಯ ಪ್ರದೇಶಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ರೋಬೊಟಿಕ್ ನಾಯಿಯನ್ನು ನಿಯೋಜಿಸಲು ಟಿಟಿಡಿ ನಿರ್ಧರಿಸಿದ್ದು, ಇಲ್ಲಿ ಹೆಚ್ಚಾಗಿ ಅಪಾಯಕಾರಿ ಚಿರತೆಗಳು ಓಡಾಡುತ್ತವೆ. ಇದರಿಂದ ಭಕ್ತರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲು ಸಾಧ್ಯವಾಗುವುದು.
ಸೆಪ್ಟೆಂಬರ್ನಲ್ಲಿ ನಡೆಯಲಿರುವ ತಿರುಮಲ ಬ್ರಹ್ಮೋತ್ಸವಗಳ ಸಮಯದಲ್ಲಿ ಇದನ್ನು ಪರೀಕ್ಷಿಸಲಾಗುವುದು. ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಸಿಸಿಟಿವಿ ಕೆಮರಾ, ಪಾದಚಾರಿ ಗಸ್ತು ಮತ್ತು ಅರಣ್ಯ ಕಣ್ಗಾವಲುಗಳು ಕೂಡ ಇರಲಿದೆ. ರೋಬೊಟಿಕ್ ನಾಯಿಯು ಮೊಬೈಲ್ ಮಾನಿಟರಿಂಗ್ ಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.
ಮಗನನ್ನು ಕಾಪಾಡಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಘಟನೆ ನೋಡಿ ತಾಯಿಯೂ ಆತ್ಮಹತ್ಯೆ!
ಕಾರ್ಯಕ್ಷಮತೆ ಪರಿಶೀಲನೆ
ತಿರುಮಲದ ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿ ರೋಬೊಟಿಕ್ ನಾಯಿಯ ಕಾರ್ಯಕ್ಷಮತೆಯನ್ನು ಇತ್ತೀಚೆಗೆ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧುರಿ ಸೇರಿದಂತೆ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಟಿಟಿಡಿ ಹೇಳಿದೆ.