Vishwavani Editorial: ವಿನಾಶಕಾಲದಲ್ಲಿ ವಿಪರೀತ ಬುದ್ಧಿ
ಚೀನಾ ಈಗ ಅಮೆರಿಕದ ಕೃಷಿ ಉತ್ಪನ್ನಗಳ ನಾಶಕ್ಕೆ ಸಂಚು ಹೂಡಿದೆ ಎಂದು ತಿಳಿದು ಬಂದಿದೆ. ಇಂಥ ‘ಘನಕಾರ್ಯ’ವನ್ನು ಮಾಡಬಲ್ಲ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಚೀನಾದ ಇಬ್ಬರು ಸಂಶೋಧಕರನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆಯ ಅಧಿಕಾರಿಗಳು ಬಂಧಿಸಿರುವುದು ಈ ಮಾತಿಗೆ ಪುಷ್ಟಿ ನೀಡಿದೆ.


ಕುಂಬಾರನಿಗೆ ಒಂದು ವರ್ಷ, ದೊಣ್ಣೆಗೆ ಒಂದು ನಿಮಿಷ’ ಎಂಬುದು ನಮ್ಮ ನಡುವೆ ಚಾಲ್ತಿ ಯಲ್ಲಿರುವ ಜಾಣನುಡಿ. ಕಟ್ಟುವ ಕ್ರಿಯೆ ಎನ್ನುವಂಥದ್ದು- ಅದು ಸಂಸ್ಥೆಯೇ ಇರಲಿ, ಸಮಾಜವೇ ಇರಲಿ ಅಥವಾ ವ್ಯಕ್ತಿತ್ವವೇ ಇರಲಿ- ಪರಿಶ್ರಮವನ್ನು ಮತ್ತು ಬದ್ಧತೆಯನ್ನು ಬೇಡುವಂಥದ್ದು.
ಸುದೀರ್ಘ ಅವಧಿಯನ್ನು ತೆಗೆದುಕೊಳ್ಳುವಂಥದ್ದು, ಕೆಲ ನಿದರ್ಶನಗಳಲ್ಲಿ ಅಪಾರ ಪ್ರಮಾಣದ ಆರ್ಥಿಕ ಸಂಪನ್ಮೂಲವು ಅನಿವಾರ್ಯವಾಗುವಂಥದ್ದು. ಆದರೆ ಕೆಡಹುವ ಕ್ರಿಯೆಗೆ ಇಂಥ ಕಟ್ಟುಪಾಡುಗಳಿರುವುದಿಲ್ಲ. ಅದರಲ್ಲೂ ಕೆಡಹುವಿಕೆಗೆ ಒಳಗಾಗುವ ಉದ್ದೇಶಿತ ವಸ್ತು-ವಿಷಯವು ಬೇರೊಬ್ಬರದು ಆಗಿಬಿಟ್ಟರಂತೂ, ಅಲ್ಲೊಂದು ಪೈಶಾಚಿಕ ಉತ್ಸಾಹ ಮನೆ ಮಾಡಿರುತ್ತದೆ.
ಇದನ್ನೂ ಓದಿ: Vishwavani Editorial: ಸಂಭ್ರಮದಿಂದ ಸಮಾಧಿಯವರೆಗೆ...
ಅಮೆರಿಕದ ಅವಳಿ ಗೋಪುರಗಳಿಗೆ ಅಪ್ಪಳಿಸಿ ಧೂಳೆಬ್ಬಿಸುವಾಗ ಅಲ್ಖೈದಾ ಉಗ್ರರು, ಇತ್ತೀಚೆಗೆ ಪಹಲ್ಗಾಮ್ನಲ್ಲಿ 26 ಮಂದಿ ಅಮಾಯಕರ ಮಾರಣ ಹೋಮ ಮಾಡುವಾಗ ಪಾಕ್-ಪ್ರೇರಿತ ಉಗ್ರರು ತೋರಿದ್ದು ಇಂಥ ಪೈಶಾಚಿಕ ಉತ್ಸಾಹವನ್ನೇ. ಈ ಉದಾಹರಣೆಗಳು ನೆನಪಾಗುವುದಕ್ಕೆ ಕಾರಣ,
ಚೀನಾ ದೇಶವು ಇತ್ತೀಚಿನ ವರ್ಷಗಳಲ್ಲಿ ತೋರುತ್ತಾ ಬಂದಿರುವ ವಿಧ್ವಂಸಕ ಚಿತ್ತಸ್ಥಿತಿ. 2020ರ ವರ್ಷದಲ್ಲಿ ವಿಶ್ವದೆಲ್ಲೆಡೆ ಕರೋನಾ ಮಹಾಮಾರಿ ರುದ್ರನರ್ತನ ಮಾಡುವುದಕ್ಕೆ ಚೀನಾದ ವುಹಾನ್ ಲ್ಯಾಬ್ನಲ್ಲಿ ವೈರಾಣುಗಳ ಸೋರಿಕೆಯಾಗಿದ್ದೇ ಕಾರಣ ಎಂಬುದು ಗೊತ್ತಿರುವ ಸಂಗತಿಯೇ.
ಇದರಿಂದಾಗಿ ವಿಶ್ವದೆಲ್ಲೆಡೆಯ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ಅದೆಂಥಾ ದೊಡ್ಡ ಕದಲಿಕೆಯಾಯಿತು ಎಂಬುದನ್ನು ಮರೆಯಲಾಗದು. ಇದನ್ನು ಮಾಡಿದ್ದು ಸಾಲದೆಂಬಂತೆ ಚೀನಾ ಈಗ ಅಮೆರಿಕದ ಕೃಷಿ ಉತ್ಪನ್ನಗಳ ನಾಶಕ್ಕೆ ಸಂಚುಹೂಡಿದೆ ಎಂದು ತಿಳಿದು ಬಂದಿದೆ. ಇಂಥ ‘ಘನಕಾರ್ಯ’ವನ್ನು ಮಾಡಬಲ್ಲ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಚೀನಾದ ಇಬ್ಬರು ಸಂಶೋಧಕರನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆಯ ಅಧಿಕಾರಿಗಳು ಬಂಧಿಸಿರುವುದು ಈ ಮಾತಿಗೆ ಪುಷ್ಟಿ ನೀಡಿದೆ. ಈ ಶಿಲೀಂಧ್ರ ಸೋಂಕಿದ ಆಹಾರವನ್ನು ಒಂದೊಮ್ಮೆ ಜನ-ಜಾನುವಾರುಗಳು ಸೇವಿಸಿದರೆ ಅದರಲ್ಲಿನ ವಿಷಕಾರಿ ಅಂಶವು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.
ಒಟ್ಟಿನಲ್ಲಿ, ಮತ್ತೊಬ್ಬರು ನೆಮ್ಮದಿಯಾಗಿರುವುದನ್ನೂ ನೋಡಲು ಚೀನಾ ಬಯಸುವುದಿಲ್ಲ ಅಂತಾಯ್ತು