Vishwavani Editorial: ಸಂಭ್ರಮದಿಂದ ಸಮಾಧಿಯವರೆಗೆ...
ಸಂಭ್ರಮಾಚರಣೆಗೆಂದು ತವಕಿಸುತ್ತಿದ್ದವರು ಸಮಾಧಿಯೆಡೆಗೆ ಸಾಗುವಂತಾಗಿದ್ದು ನಿಜಕ್ಕೂ ನೋವಿನ ಸಂಗತಿ. ಅಗಾಧ ಸಂಖ್ಯೆಯಲ್ಲಿ ನೆರೆದಿರುವ ಜನರಲ್ಲಿ ಆಕ್ರೋಶವೇ ತುಂಬಿರಲಿ ಅಥವಾ ಸಂಭ್ರಮವೇ ಕೆನೆಗಟ್ಟಿರಲಿ, ಅವರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಮತ್ತು ಅದಕ್ಕೆಂದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಉದ್ದೇಶಿತ ವಾತಾವರಣ ಹೇಗೆ ಬದಲಾಗಬಹುದು ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗಬಲ್ಲದು


ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಕ್ಕೆ ಸಿಲುಕಿ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಸುದ್ದಿಯನ್ನು ನೀವು ಈಗಾಗಲೇ ಓದಿರಬೇಕು. ಬೆಂಗಳೂರಿಗೆ ಆಗಮಿಸಿದ ವಿಜೇತ ಆರ್ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣ ವನ್ನು ಪ್ರವೇಶಿಸುವ ಸಂದರ್ಭದಲ್ಲಿ, ಸುತ್ತಮುತ್ತ ಜಮಾವಣೆಗೊಂಡಿದ್ದ ಅಗಾಧ ಸಂಖ್ಯೆಯ ಜನರನ್ನು ಪೊಲೀಸರು ನಿಯಂತ್ರಿಸಲಾಗದೆ ಈ ಕಾಲ್ತುಳಿತ ಸಂಭವಿಸಿತು ಎಂಬುದು ಲಭ್ಯ ಮಾಹಿತಿ.
ಇದನ್ನೂ ಓದಿ: Vishwavani Editorial: ಯಾವ ಹುತ್ತದಲ್ಲಿ ಯಾವ ಹಾವೋ?
ಒಟ್ಟಿನಲ್ಲಿ, ಸಂಭ್ರಮಾಚರಣೆಗೆಂದು ತವಕಿಸುತ್ತಿದ್ದವರು ಸಮಾಧಿಯೆಡೆಗೆ ಸಾಗುವಂತಾಗಿದ್ದು ನಿಜಕ್ಕೂ ನೋವಿನ ಸಂಗತಿ. ಅಗಾಧ ಸಂಖ್ಯೆಯಲ್ಲಿ ನೆರೆದಿರುವ ಜನರಲ್ಲಿ ಆಕ್ರೋಶವೇ ತುಂಬಿರಲಿ ಅಥವಾ ಸಂಭ್ರಮವೇ ಕೆನೆಗಟ್ಟಿರಲಿ, ಅವರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಮತ್ತು ಅದಕ್ಕೆಂದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಉದ್ದೇಶಿತ ವಾತಾವರಣ ಹೇಗೆ ಬದಲಾಗಬಹುದು ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗಬಲ್ಲದು.
ಕೆಲ ದಿನಗಳ ಹಿಂದೆ ತೆಲುಗು ನಟ ಅಲ್ಲು ಅರ್ಜುನ್ ಅವರ ಚಿತ್ರವೊಂದರ ಪೂರ್ವಭಾವಿ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತದ ದುರಂತ ಘಟನೆಯೂ ಇದಕ್ಕೆ ಮತ್ತೊಂದು ಉದಾಹರಣೆ ಆಗಬಲ್ಲದು. ದುರಂತಗಳು ಮತ್ತು ಅಪಘಾತಗಳು ಅಕಸ್ಮಾತ್ತಾಗಿ ಆಗುವಂಥವು ಎಂಬ ಅಭಿಪ್ರಾಯ ವನ್ನು ಒಪ್ಪೋಣ; ಆದರೆ, ಆರ್ಸಿಬಿ ತಂಡದ ವಿಜಯವು ಅಭಿಮಾನಿಗಳ ವಲಯದಲ್ಲಿ ‘ಸಮೂಹ ಸನ್ನಿ’ಯಂಥ ವಾತಾವರಣವನ್ನು ಹುಟ್ಟುಹಾಕಿದ್ದ ಸಮಯದಲ್ಲೇ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆ ಇದಾಗಿದ್ದುದರಿಂದ, ಜನಸಮೂಹದ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದ್ದವು ಎನಿಸುತ್ತದೆ.
ಒಟ್ಟಿನಲ್ಲಿ, ಇಂಥ ದುರ್ಘಟನೆಗಳು ನಡೆದ ನಂತರವಷ್ಟೇ ಇಂಥ ಕ್ರಮಗಳ ಅನಿವಾರ್ಯತೆಯ ಬಗ್ಗೆ ಆಲೋಚಿಸುವಂತಾಗುವುದು ಕೂಡ ಒಂದು ವಿಪರ್ಯಾಸವೇ.