Vishwavani Editorial: ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ
ಅಂದಿನಿಂದಲೂ ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವು ಹದಗೆಟ್ಟಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು. ಈಗ, ಭಾರತದ ಗ್ರಹಿಕೆ ಮತ್ತು ನಿಲುವನ್ನೇ ಕೆನಡಾದ ಗುಪ್ತಚರ ಸಂಸ್ಥೆಯು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಭಾರತದ ಮಾತುಗಳಿಗೆ ಒಂದು ತೂಕ ಬಂದಂತಾಗಿದೆ


ಭಾರತದ ವಿರುದ್ಧ ಹೋರಾಡಲೆಂದು ಮತ್ತು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲೆಂದು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದ ನೆಲವನ್ನು ಭೂಮಿಕೆಯನ್ನಾಗಿಸಿಕೊಂಡಿದ್ದಾರೆ ಎಂಬ ಗ್ರಹಿಕೆಯೀಗ ಅಧಿಕೃತ ಮಾಹಿತಿಯಾಗಿ ಹೊರ ಬಿದ್ದಿದೆ. ಕೆನಡಾದ ಗುಪ್ತಚರ ಸಂಸ್ಥೆಯು ಈ ಕುರಿತು ನೀಡಿದ ವರದಿಯಲ್ಲಿ, ‘ಖಲಿಸ್ತಾನಿ ಪ್ರತ್ಯೇಕತಾ ಸಂಘಟನೆಗಳು ಮತ್ತು ಪಾಕಿಸ್ತಾನಿ ನಾಗರಿಕರು ಭಾರತದಲ್ಲಿ ಹಿಂಸಾಚಾರಗಳನ್ನು ಹುಟ್ಟು ಹಾಕಲು ಇಂಥ ಕಸರತ್ತಿನಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿರುವುದೇ ಇದಕ್ಕೆ ಸಾಕ್ಷಿ.
ಇದು ಭಾರತಕ್ಕೆ ರಾಜತಾಂತ್ರಿಕ ನೆಲೆಯಲ್ಲಿ ದಕ್ಕಿದ ಮಹತ್ವದ ಗೆಲುವು ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ತನ್ನ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉಗ್ರವಾದಿಗಳಿಗೆ ಕೆನಡಾ ದೇಶವು ಆಶ್ರಯ ನೀಡಿದೆ ಎಂದು ಭಾರತ ಸಾಕಷ್ಟು ವರ್ಷಗಳಿಂದಲೂ ಹೇಳಿಕೊಂಡೇ ಬಂದಿತ್ತು. ಆದರೆ 2023ರಲ್ಲಿ, ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪಿನ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತನಾದಾಗ, ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹತ್ಯೆಯ ಆರೋಪವನ್ನು ಭಾರತದ ತಲೆಗೆ ಕಟ್ಟಿದ್ದರು.
ಇದನ್ನೂ ಓದಿ: Vishwavani Editorial: ದುರದೃಷ್ಟಕರ ದುರಂತ
ಅಂದಿನಿಂದಲೂ ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವು ಹದ ಗೆಟ್ಟಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು. ಈಗ, ಭಾರತದ ಗ್ರಹಿಕೆ ಮತ್ತು ನಿಲುವನ್ನೇ ಕೆನಡಾದ ಗುಪ್ತಚರ ಸಂಸ್ಥೆಯು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಭಾರತದ ಮಾತುಗಳಿಗೆ ಒಂದು ತೂಕ ಬಂದಂತಾಗಿದೆ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ಶತಾಯಗತಾಯ ದಮನಿಸುವ ಭಾರತದ ಬದ್ಧತೆಯ ದನಿಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲ ಬಂದಂತಾಗಿದೆ ಎನ್ನಲಡ್ಡಿಯಿಲ್ಲ.
ಆದ್ದರಿಂದ, ಉಗ್ರವಾದದ ದಮನಕ್ಕೆ ಜಾಗತಿಕ ಸಮೂಹವು ಪರಸ್ಪರ ಕೈಜೋಡಿಸಬೇಕಾದ ಕಾಲ ವೀಗ ಸನ್ನಿಹಿತವಾಗಿದೆ. ಏಕೆಂದರೆ, ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಿಂದಾಗಿ ಭಾರತ ಮತ್ತು ಪಾಕಿಸ್ತಾನದ ಪ್ರಜೆಗಳು ಏನೆಲ್ಲಾ ಬೆಳವಣಿಗೆಗಳಿಗೆ ಸಾಕ್ಷಿಯಾಗು ವಂತಾಯಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಜಗತ್ತು ಶಾಂತಿ- ನೆಮ್ಮದಿಯ ಆಡುಂಬೊಲ ವಾಗಬೇಕು ಎಂದಾದಲ್ಲಿ, ಉಗ್ರವಾದಿಗಳ ದಮನವಾಗಲೇಬೇಕು.