ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !
ಮೂರು ದಶಕದ ಹಿಂದೆ ಯಾವುದಾದರೂ ಊರಿಗೆ ಹೋದರೆ ಆ ಊರಿನ ವಿಶೇಷತೆ ಕಣ್ಣಿಗೆ ಕಾಣುತ್ತಿತ್ತು. ಹೆಂಚಿನ ಮನೆ ಇರಬಹುದು, ಹೂವು, ಹಣ್ಣು, ಜನರು ಮಾತಾಡುವ ರೀತಿ, ಅವರು ನೀಡುವ ಪ್ರೀತಿ, ಹೀಗೆ ಒಟ್ಟಾರೆ ಆ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದ ಒಂದಷ್ಟು ವಿಶೇಷತೆಯನ್ನು ಅನುಭವಿಸಿ ಬರುತ್ತಿದ್ದೆವು. ಇವತ್ತಿಗೆ ಶಿವಮೊಗ್ಗದ ಬಡಾವಣೆ, ಬೆಂಗಳೂರಿನ ಬಡಾವಣೆ, ಮೈಸೂರಿನ ಬಡಾವಣೆ ಎಲ್ಲವೂ ಒಂದೇ ಆಗಿ ಬಿಟ್ಟಿದೆ. ಶೆಟ್ಟರ ದಿನಸಿ ಅಂಗಡಿಗಳು ಕಣ್ಮರೆಯಾಗಿವೆ.