Upendra Limaye: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಪೇಂದ್ರ ಲಿಮಯೆ ಎಂಟ್ರಿ...ಯಾವ ಸಿನಿಮಾ?
ಮರಾಠಿಯ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಉಪೇಂದ್ರ ಲಿಮಯೆ ಈಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ʼಸಂಕ್ರಾಂತಿಕಿ ವಸ್ತುನ್ನಾಮ್ʼ ಸಿನಿಮಾ ಗೆಲುವಿನ ಬಳಿಕ ಅವರು ಈಗ ಸಾಲು ಸಾಲು ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕಿಶೋರ್ ಭಾರ್ಗವ್ ಕನ್ನಡ ಚಿತ್ರಪ್ರೇಮಿಗಳಿಗೆ ಇವರನ್ನು ಪರಿಚಯಿಸಲು ಹೊರಟಿದ್ದಾರೆ.

ಉಪೇಂದ್ರ ಲಿಮಯೆ

ಬೆಂಗಳೂರು: ಮರಾಠಿ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಉಪೇಂದ್ರ ಲಿಮಯೆ (Upendra Limaye) ಈಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ʼಸಂಕ್ರಾಂತಿಕಿ ವಸ್ತುನ್ನಾಮ್ʼ ತೆಲುಗು ಸಿನಿಮಾ ಗೆಲುವಿನ ಬಳಿಕ ಅವರು ಈಗ ಸಾಲು ಸಾಲು ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಉಪೇಂದ್ರ ಲಿಮಯೆ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಹೆಜ್ಜೆ ಇಡುತ್ತಿದ್ದು, ನಿರ್ದೇಶಕ ಕಿಶೋರ್ ಭಾರ್ಗವ್ ಕನ್ನಡ ಚಿತ್ರಪ್ರೇಮಿಗಳಿಗೆ ಇವರನ್ನು ಪರಿಚಯಿಸಲು ಹೊರಟಿದ್ದಾರೆ.
ರಾಮ್ ಗೋಪಾಲ್ ವರ್ಮಾ ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿ ಕನ್ನಡದಲ್ಲಿ ʼಸ್ಟಾಕರ್ʼ ಎಂಬ ಸಿನಿಮಾ ನಿರ್ದೇಶಿಸಿದ್ದ ಕಿಶೋರ್ ಭಾರ್ಗವ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ʼಕವಲುದಾರಿʼ, ʼಆಪರೇಷನ್ ಅಲುಮೇಲಮ್ಮʼ ಸಿನಿಮಾಗಳ ಖ್ಯಾತಿಯ ರಿಷಿ ನಾಯಕನಾಗಿ ಅಭಿನಯಿಸುತ್ತಿದ್ದು, ಉಪೇಂದ್ರ ಲಿಮಯೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನು ಓದಿ: Bollywood Movie: ಓಟಿಟಿಯಲ್ಲಿ ಲಭ್ಯವಿದ್ದರೂ ಕುಟುಂಬ ಸಮೇತ ವೀಕ್ಷಿಸಲು ಸೂಕ್ತವಲ್ಲದ ಬಾಲಿವುಡ್ ಸಿನಿಮಾಗಳಿವು
ಕನ್ನಡ ಚಿತ್ರರಂಗದ ಪದಾರ್ಪಣೆ ಬಗ್ಗೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ಉಪೇಂದ್ರ ಲಿಮಯೆ, ʼʼಕನ್ನಡ ನನ್ನ ತಾಯಿ ಭಾಷೆ ಹಾಗೂ ಪ್ರೀತಿ ಭಾಷೆ. ನಾನು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚಿತ್ರದ ಕಂಟೆಂಟ್ ಚೆನ್ನಾಗಿದೆ. ಕಿಶೋರ್ ಭಾರ್ಗವ್ ಪ್ರಾಮಿಸಿಂಗ್ ಡೈರೆಕ್ಟರ್. ಒಂದೊಳ್ಳೆ ತಂಡದ ಜತೆ, ಒಂದೊಳ್ಳೆ ಕಥೆಯಲ್ಲಿ ಅದ್ಭುತ ಪಾತ್ರ ಮಾಡುತ್ತಿದ್ದೇನೆʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.
ಹ್ಯಾಂಗೆಸ್ ಸಾಯಿ ವಿಷನ್ ಹಾಗೂ ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸದ್ಯ ʼಪ್ರೊಡಕ್ಷನ್-2ʼ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಕಿಶೋರ್ ಭಾರ್ಗವ್ ಮತ್ತು ಸೋಮಶೇಖರ್ ಎನ್ ಕರಡಿ ಕಥೆ ಬರೆದಿದ್ದು, ಶ್ರೀಶ್ ತೋಮರ್ ಛಾಯಾಗ್ರಹಣ, ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಹಾಗೂ ಸ್ಮಿತಾ ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಕ್ಟೋಬರ್ ಎರಡನೇ ವಾರದಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.