Black magic: ದೆವ್ವ ಬಿಡಿಸಲು ಮಹಿಳೆಗೆ ಮದ್ಯ ಕುಡಿಸಿ, ಬೀಡಿ ಸೇದುವಂತೆ ಒತ್ತಾಯ: ತಂದೆಯಿಂದ ದೂರು
ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ಹೇಳಿ ಆಕೆಗೆ ಮದ್ಯ ಕುಡಿಸಿ, ಬೀಡಿ ಸೇದುವಂತೆ ಒತ್ತಾಯಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಆಕೆಗೆ ದೈಹಿಕ ಮತ್ತು ಮಾನಸಿಕ ಚಿತ್ರ ಹಿಂಸೆ ನೀಡಲಾಗಿದೆ ಎಂದು ಮಹಿಳೆಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಚಿತ್ರಹಿಂಸೆ (ಸಾಂದರ್ಭಿಕ ಚಿತ್ರ). -
ತಿರುವನಂತಪುರಂ: ಮಾಟ ಮಂತ್ರದ (Black magic) ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ (Evict Ghost) ಎಂದು ಹೇಳಿ ಅದನ್ನು ಬಿಡಿಸಲು ಮದ್ಯ ಕುಡಿಸಿ, ಬೀಡಿ ಸೇದುವಂತೆ ಒತ್ತಾಯಿಸಿರುವ ಘಟನೆ ಕೇರಳದ (Kerala) ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ ಆಕೆಗೆ ಹಲವಾರು ಗಂಟೆಗಳ ಕಾಲ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಆಕೆಯ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಮಹಿಳೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದೆವ್ವ ಹಿಡಿದಿದೆ ಎಂದು ಹೇಳಿ ಮಹಿಳೆಯೊಬ್ಬರನ್ನು ಆಕೆಯ ಗಂಡ ಮತ್ತು ಕುಟುಂಬದವರು ಸೇರಿ ಮಾಂತ್ರಿಕನ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ದೇಹದಿಂದ ದೆವ್ವವನ್ನು ಹೊರಹಾಕಲು ಮಾಂತ್ರಿಕನಿಂದ ಮಹಿಳೆಗೆ ಹಲವು ಗಂಟೆಗಳ ಚಿತ್ರಹಿಂಸೆ ನೀಡಲಾಗಿದೆ.
ಇದನ್ನೂ ಓದಿ: Ragging Case: ಸೈನಿಕ ಶಾಲೆಯ ವಿದ್ಯಾರ್ಥಿ ಶವವಾಗಿ ಪತ್ತೆ; ರ್ಯಾಗಿಂಗ್ ಎಂದು ದೂರು ದಾಖಲಿಸಿದ ಕುಟುಂಬ
ಬಳಿಕ ಮಹಿಳೆಯ ಮಾನಸಿಕ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಶುಕ್ರವಾರ ಮಾಂತ್ರಿಕ ಶಿವದಾಸ್ (54), ಮಹಿಳೆಯ ಸಂಗಾತಿ ಅಖಿಲ್ ದಾಸ್ (26) ಮತ್ತು ಅವರ ತಂದೆ ದಾಸ್ (54)ನನ್ನು ಬಂಧಿಸಿದ್ದಾರೆ.
ಮಹಿಳೆಯ ತಂದೆ ನೀಡಿರುವ ದೂರಿನ ಪ್ರಕಾರ, ಸಂಗಾತಿಯ ತಾಯಿ ಮಾಂತ್ರಿಕನನ್ನು ಕರೆತಂದು ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿದ್ದರು. ಮಹಿಳೆಯ ದೇಹವು ಆಕೆಯ ಮೃತ ಸಂಬಂಧಿಕರ ದುಷ್ಟಶಕ್ತಿಗಳಿಂದ ಆವರಿಸಲ್ಪಟ್ಟಿದೆ ಎಂದು ಅವರು ಆರೋಪಿಸಿದ್ದರು. ವಿಧಿವಿಧಾನಗಳು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಿ ಮಧ್ಯ ರಾತ್ರಿವರೆಗೆ ನಡೆದಿದೆ. ಕೊನೆಯಲ್ಲಿ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ. ಮಹಿಳೆಗೆ ಮದ್ಯ ನೀಡಿ, ಬಲವಂತವಾಗಿ ಬೀಡಿ ಸೇದುವಂತೆ ಮಾಡಲಾಗಿದೆ. ಪವಿತ್ರ ಬೂದಿಯನ್ನು ಕುಡಿಸಿದ್ದಾರೆ. ಹಲವಾರು ರೀತಿಯ ದೈಹಿಕ ಹಿಂಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bomb threat: ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ : ಮಹಿಳಾ ಟೆಕ್ಕಿ ಆರೆಸ್ಟ್
ಪ್ರಕರಣದ ಪ್ರಮುಖ ಆರೋಪಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ತಿರುವಲ್ಲಾದ ಮುತ್ತೂರು ಪ್ರದೇಶದಲ್ಲಿ ಬಂಧಿಸಲಾಗಿದೆ. ಸಹ ಆರೋಪಿಯಾಗಿರುವ ಸಂಗಾತಿಯ ತಾಯಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ, ಕತ್ತು ಸೀಳಿ ಕೊಲೆ
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಆಕೆಯ ಸಹೋದರ ಮೂವರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದರು ಎನ್ನಲಾಗಿತ್ತು. ಬಾಲಕಿಯ ಶವ ಆಕೆಯ ಮನೆಯ ಸಮೀಪದ ತೋಟದಲ್ಲಿ ಪತ್ತೆಯಾಗಿತ್ತು. ಬಾಲಕಿಯ ಗಂಟಲು ಸೀಳಿ, ಕೈಕಾಲುಗಳನ್ನು ಮುರಿದು, ಮೂಗಿಗೆ ಮರಳು ಮತ್ತು ಅಂಟು ತುಂಬಿಸಿ ಹತ್ಯೆ ಮಾಡಲಾಗಿದೆ. ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಮಾಡಿ, ಅನಂತರ ಆಕೆಯನ್ನು ಕೊಂದು ಶವವನ್ನು ಎಸೆದು ಹೋಗಿದ್ದಾರೆ ಎಂದು ಆಕೆಯ ಕುಟುಂಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.