ಬರೋಬ್ಬರಿ 12 ವರ್ಷಗಳ ಬಳಿಕ ಆಂಧ್ರಪ್ರದೇಶಕ್ಕೆ ಅಧಿಕೃತ ರಾಜಧಾನಿ ಘೋಷಣೆ
ಬರೋಬ್ಬರಿ 12 ವರ್ಷಗಳ ಬಳಿಕ ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಘೋಷಿಸಿದ್ದಾರೆ. 2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಹುಟ್ಟಿಕೊಂಡಿತ್ತು.
ಸಂಗ್ರಹ ಚಿತ್ರ -
ಅಮರಾವತಿ: ಬರೋಬ್ಬರಿ 12 ವರ್ಷಗಳ ಬಳಿಕ ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಆಂಧ್ರಪ್ರದೇಶದ (Andhra Pradesh) ರಾಜಧಾನಿ ಅಮರಾವತಿ ಎಂದು ಘೋಷಿಸಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯೊಂದಿಗೆ ಸಿಎಂ ನಾಯ್ಡು ಅವರು X ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆ, 2026 ಏಪ್ರಿಲ್ 6, 2026 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದ ನಂತರ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿತು.
2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಹುಟ್ಟಿಕೊಂಡಿತ್ತು. ಅಂದಿನಿಂದ, ಹತ್ತು ವರ್ಷಗಳ ಕಾಲ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಇದೀಗ ಅದರ ಅವಧಿ ಮುಗಿದಿದ್ದು, ಅಮರಾವತಿಯನ್ನು ಅಧಿಕೃತ ರಾಜಧಾನಿಯನ್ನಾಗಿ ಘೋಷಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ನಾಯ್ಡು, ನಮ್ಮ ರಾಜಧಾನಿಯ ಬಹುದಿನಗಳ ಕನಸನ್ನು ನನಸಾಗಿಸುವ ಮೂಲಕ ಆಂಧ್ರಪ್ರದೇಶ ಪುನರ್ವಿಂಗಡಣೆ (ತಿದ್ದುಪಡಿ) ಕಾಯ್ದೆ, 2026ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ದಯೆಯಿಂದ ಒಪ್ಪಿಗೆ ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ನನ್ನ ಜನರ ಪರವಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇದು ಆಂಧ್ರಪ್ರದೇಶದ ನನ್ನ ಜನರಿಗೆ, ವಿಶೇಷವಾಗಿ ಅಮರಾವತಿಯ ನನ್ನ ರೈತರಿಗೆ ಸಿಕ್ಕ ಜಯ ಎಂದು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಔಪಚಾರಿಕವಾಗಿ ಗುರುತಿಸುವುದನ್ನು ಉಪ ಮುಖ್ಯಮಂತ್ರಿ ಮತ್ತು ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ವಾಗತಿಸಿದರು, ವರ್ಷಗಳ ಅನಿಶ್ಚಿತತೆಯ ನಂತರ ರಾಜ್ಯಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದು ಬಣ್ಣಿಸಿದರು.
ವಿರೋಧ ಏನಿತ್ತು?
ವೈಎಸ್ ಜಗನ್ ಅವರ ವೈಎಸ್ಆರ್ಸಿಪಿ (YSRCP) ಪಾರ್ಟಿಯು, ಅಮರವಾತಿಯನ್ನು ರಾಜಧಾನಿ ಎಂದು ಘೋಷಿಸಲು ವಿರೋಧಿಸುತ್ತಲೇ ಬಂತು. ಅದಲ್ಲದೇ, ಇತ್ತೀಚೆಗೆ ’ಮಾವಿಗುನ್ ಪ್ರದೇಶಾಭಿವೃದ್ದಿ’ ಎನ್ನುವ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದು, ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಯಿತು.