ಮೀನು ಹಿಡಿಯಲು ತೆರಳಿದವರಿಗೆ ಎದುರಾಯ್ತು ಶಾಕ್; ಪಶ್ಚಿಮ ಬಂಗಾಳದ ಕೊಳವೊಂದರಲ್ಲಿ ಬಂದೂಕು ಪತ್ತೆ
Gun Recovered from Pond: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕೊಳವೊಂದರಲ್ಲಿ ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ಸುತ್ತಿದ ದೇಶೀಯ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಜಲಮೂಲಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟಿರಬಹುದಾದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅದು ದೇಶೀಯ ನಿರ್ಮಿತ ಸಣ್ಣ ರಿವಾಲ್ವರ್ ಎಂದು ಗುರುತಿಸಲಾಗಿದೆ.
ಪಶ್ಚಿಮ ಬಂಗಾಳದ ಕೊಳವೊಂದರಲ್ಲಿ ಬಂದೂಕು ಪತ್ತೆ -
ಕೋಲ್ಕತ್ತಾ, ಜೂ. 14: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ಕೊಳವೊಂದರಲ್ಲಿ ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ಸುತ್ತಿದ ದೇಶೀಯ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ (Gun Recovered from Pond). ಆ ಆಯುಧ ಕೊಳದಲ್ಲಿ ಹೇಗೆ ಸೇರಿತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂದೇಶ್ಖಾಲಿ ಮತ್ತು ಬಸಂತಿ ಕೊಳಗಳಿಂದ ಇದೇ ರೀತಿಯ ಬಂದೂಕುಗಳು ಪತ್ತೆಯಾಗಿರುವ ಘಟನೆ ನಡೆದ ಕೆಲವು ದಿನಗಳ ನಂತರ ಗೋಸಾಬಾದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಜಲಮೂಲಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟಿರಬಹುದಾದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಕೊಳದ ಮಾಲಕ ಅಮ್ಜೇದ್ ಸರ್ದಾರ್ ತನ್ನ ಪುತ್ರಿಯೊಂದಿಗೆ ಬೆಲ್ತಾಲಾದ ತೆರೆದ ಹೊಲಗಳ ಮಧ್ಯೆ ಇರುವ ಕೊಳದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ನೀರಿನಲ್ಲಿ ನಡೆಯುತ್ತಿದ್ದಾಗ, ಬಾಲಕಿಯ ಪಾದಕ್ಕೆ ಗಟ್ಟಿಯಾದ ವಸ್ತುವೊಂದು ತಗುಲಿದ ಅನುಭವವಾಯಿತು. ಕುತೂಹಲದಿಂದ ಆ ವಸ್ತುವನ್ನು ಹೊರತೆಗೆದಾಗ ಪ್ಲಾಸ್ಟಿಕ್ನಲ್ಲಿ ಸುತ್ತಿದ ಬಂದೂಕು ಕಂಡುಬಂತು.
ತಕ್ಷಣವೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಯಿತು. ಅಧಿಕಾರಿಗಳು ಸ್ಥಳಕ್ಕೆ ತಲುಪಿ ಆಯುಧವನ್ನು ವಶಪಡಿಸಿಕೊಂಡರು. ಅದು ದೇಶೀಯ ನಿರ್ಮಿತ ಸಣ್ಣ ರಿವಾಲ್ವರ್ ಎಂದು ಗುರುತಿಸಲಾಗಿದೆ. ಬಳಿಕ ಪೊಲೀಸರು ಹೆಚ್ಚುವರಿ ಶಸ್ತ್ರಾಸ್ತ್ರಗಳು ಅಥವಾ ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲಿಸಲು ಹತ್ತಿರದ ಹಲವು ಕೊಳಗಳಲ್ಲಿ ಶೋಧ ನಡೆಸಿದರು. ಆದರೆ ಬೇರೇನೂ ಪತ್ತೆಯಾಗಲಿಲ್ಲ.
ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು
ಬಂದೂಕು ಕೊಳದಲ್ಲಿ ಹೇಗೆ ಬಂತು ಎಂಬುದನ್ನು ಕಂಡುಹಿಡಿಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸಿಕ್ಕಿಬೀಳುವ ಭಯ ಅಥವಾ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಅಪರಾಧಿಗಳು ಅದನ್ನು ಕೊಳಕ್ಕೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಳದಲ್ಲಿ ಅಡಗಿಕೊಂಡಿದ್ದ ಕಳ್ಳ
ಭೋಪಾಲ್: ಶಂಕಿತ ಕಳ್ಳನೊಬ್ಬ ಸುಮಾರು ಐದು ಗಂಟೆಗಳ ಕಾಲ ಕೊಳದಲ್ಲಿ ಅಡಗಿಕೊಂಡಿದ್ದಂತಹ ಘಟನೆ ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿತ್ತು. ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಗಳ ಪ್ರಕಾರ, ಆರೋಪಿಯು ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ನೀರಿಗೆ ಹಾರಿ ಟೊಳ್ಳಾದ ಕಮಲದ ಕಾಂಡದ ಮೂಲಕ ಉಸಿರಾಡುತ್ತಾ ನೀರಿನಲ್ಲಿ ಮುಳುಗಿದ್ದ. ಡೈವರ್ಗಳು ಹುಡುಕಾಡಿ ಪತ್ತೆಹಚ್ಚಿದ ನಂತರ ಅಂತಿಮವಾಗಿ ಅವನನ್ನು ಬಂಧಿಸಲಾಯಿತು.
ಈ ಎರಡೂ ಘಟನೆಗಳು ಸಂಪೂರ್ಣವಾಗಿ ಭಿನ್ನವಾಗಿದ್ದರೂ, ಕೊಳಗಳು ಮತ್ತು ಜಲಮೂಲಗಳನ್ನು ಕೆಲವೊಮ್ಮೆ ಸಾಕ್ಷ್ಯಗಳನ್ನು ಮರೆಮಾಡಲು ಅಥವಾ ಪೊಲೀಸರಿಂದ ತಪ್ಪಿಸಲು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಎತ್ತಿ ತೋರಿಸಿದೆ ಎನ್ನುವುದು ಸ್ಥಳೀಯರ ಮಾತು. ಇನ್ನು ಗೋಸಾಬಾದಲ್ಲಿ ಪತ್ತೆಯಾದ ಬಂದೂಕನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ಮೂಲ ಮತ್ತು ಯಾವುದೇ ಸಂಭಾವ್ಯ ಅಪರಾಧಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.