ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವ ಪರೇಡ್‌ 2026: ಮಹಾರಾಷ್ಟ್ರದ ಟ್ಯಾಬ್ಲೋಗೆ ಪ್ರಥಮ ಸ್ಥಾನ; ಯಾರಿಗೆಲ್ಲ ಪ್ರಶಸ್ತಿ?

Republic Day Parade 2026: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ಯಾಬ್ಲೋ ಪ್ರದರ್ಶನ ಫಲಿತಾಂಶ ಪ್ರಕಟವಾಗಿದೆ. ಗಣೇಶೋತ್ಸವವನ್ನು ಪ್ರದರ್ಶಿಸಿದ ಮಹಾರಾಷ್ಟ್ರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡರೆ, 150 ವರ್ಷ ಪೂರೈಸಿದ 'ವಂದೇ ಮಾತರಂ' ಗೀತೆಯನ್ನು ಪರಿಚಯಿಸಿದ ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರ ಸಚಿವಾಲಯಗಳು ಮತ್ತು ಇಲಾಖೆಗಳ ವಿಭಾಗದಲ್ಲಿ ವಿಜೇತವಾಯಿತು. ಇನ್ನು ಭಾರತೀಯ ನೌಕಾಪಡೆಯು ಅತ್ಯುತ್ತಮ ಪಥಸಂಚಲನ ತಂಡವಾಗಿ ಹೊರಹೊಮ್ಮಿತು.

ಗಣರಾಜ್ಯೋತ್ಸವ ಪರೇಡ್: ಮಹಾರಾಷ್ಟ್ರದ ಟ್ಯಾಬ್ಲೋಗೆ ಪ್ರಥಮ ಸ್ಥಾನ

ಪ್ರಥಮ ಸ್ಥಾನ ಪಡೆದ ದೆಹಲಿಯ ಟ್ಯಾಬ್ಲೋ -

Ramesh B
Ramesh B Jan 29, 2026 11:01 PM

ದೆಹಲಿ, ಜ. 29: ದೆಹಲಿ ಗಣರಾಜ್ಯೋತ್ಸವ ಆಚರಣೆಯ ಪ್ರಧಾನ ಆಕರ್ಷಣೆ ಸ್ತಬ್ಧಚಿತ್ರಗಳ ಮೆರವಣಿಗೆ. ಗಣರಾಜ್ಯೋತ್ಸವ ದಿನದಂದು ದೆಹಲಿಯ ಕರ್ತವ್ಯ ಪಥದಲ್ಲಿ ಪ್ರತಿವರ್ಷ ವಿವಿಧ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ, ವಿವಿಧ ಇಲಾಖೆಗಳ, ಸಚಿವಾಲಯಗಳ ಮಹತ್ವ ಸಾರುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ (Republic Day Parade 2026). ಈ ಪೈಕಿ ಉತ್ತಮ ಟ್ಯಾಬ್ಲೋಗಳಿಗೆ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ. ಈ ಬಾರಿಯ ಸ್ತಬ್ಧಚಿತ್ರಗಳ ಫಲಿತಾಂಶ ಪ್ರಕಟವಾಗಿದ್ದು ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತೀಯ ನೌಕಾಪಡೆಯು ಅತ್ಯುತ್ತಮ ಪಥಸಂಚಲನ ತಂಡವಾಗಿ ಆಯ್ಕೆಯಾಗಿದೆ.

ಗಣೇಶೋತ್ಸವವನ್ನು ಪ್ರದರ್ಶಿಸಿದ ಮಹಾರಾಷ್ಟ್ರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡರೆ, 150 ವರ್ಷ ಪೂರೈಸಿದ 'ವಂದೇ ಮಾತರಂ' ಗೀತೆಯನ್ನು ಪರಿಚಯಿಸಿದ ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರ ಸಚಿವಾಲಯಗಳು ಮತ್ತು ಇಲಾಖೆಗಳ ವಿಭಾಗದಲ್ಲಿ ವಿಜೇತವಾಯಿತು.

ಗಣರಾಜ್ಯೋತ್ಸವ ಸ್ತಬ್ಧಚಿತ್ರಗಳ ಫಲಿತಾಂಶ:



ಯಾರಿಗೆಲ್ಲ ಪ್ರಶಸ್ತಿ?

ಅತ್ಯುತ್ತಮ ಪಥಸಂಚಲನ ತಂಡವಾಗಿ ಆಯ್ಕೆಯಾದ ನೌಕಾಪಡೆಯ ಪಥ ಸಂಚಲನದಲ್ಲಿ 144 ಯುವ ಸಿಬ್ಬಂದಿ ಇದ್ದರು. 3 ಸೇವೆಗಳಲ್ಲಿ ಅತ್ಯುತ್ತಮ ಕವಾಯತು ವಿಭಾಗದಲ್ಲಿಯೂ ನೌಕಾಪಡೆಯ ಕವಾಯತು ಅಗ್ರ ಸ್ಥಾನಿ ಎನಿಸಿಕೊಂಡಿತು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಮತ್ತು ಇತರ ಸಹಾಯಕ ಪಡೆಗಳ ಅತ್ಯುತ್ತಮ ಕವಾಯತು ವಿಭಾಗದಲ್ಲಿ ದೆಹಲಿ ಪೊಲೀಸ್ ತುಕಡಿಯು ಪ್ರಶಸ್ತಿ ಪಡೆದುಕೊಂಡಿತು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋ ವಿಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಎರಡನೇ ಬಹುಮಾನ ಗಳಿಸಿದರೆ, ಮೂರನೇ ಸ್ಥಾನದಲ್ಲಿದೆ ಕೇರಳ ಇದೆ.

ಧ್ವಜ ಹಿಡಿದು ಹೆಜ್ಜೆ ಹಾಕಿದ ಶ್ವಾನಗಳು; ಗಣರಾಜ್ಯೋತ್ಸವದ ವಿಶೇಷ ಮೆರವಣಿಗೆ ಹೇಗಿತ್ತು ನೋಡಿ!

ಮಹಾರಾಷ್ಟ್ರಕ್ಕೆ ಏಕೆ ಮೊದಲ ಸ್ಥಾನ?

ಮಹಾರಾಷ್ಟ್ರದ ಗಣೇಶೋತ್ಸವ ಟ್ಯಾಬ್ಲೋ ಆಧುನಿಕತೆ ಮತ್ತು ಸಂಪ್ರದಾಯದ ಮಿಶ್ರಣವನ್ನು ಪ್ರಸ್ತುತಪಡಿಸುವ ಮೂಲಕ ಮೊದಲ ಸ್ಥಾನ ಗಳಿಸಿತು. ಮಹಾರಾಷ್ಟ್ರ ಗಣೇಶ ಹಬ್ಬವನ್ನು ಸ್ವಾವಲಂಬನೆಯ ಸಂಕೇತವೆಂದು ಚಿತ್ರಿಸಿದ್ದು ಗಮನ ಸೆಳೆಯಿತು. ಜತೆಗೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ಮಹಿಳಾ ನೃತ್ಯಗಾರರ ತಂಡವನ್ನು ಪರಿಚಯಿಸಲಾಯಿತು. ಟ್ಯಾಬ್ಲೋದ ಎರಡೂ ಬದಿಗಳಲ್ಲಿ ಲೆಜಿಮ್ ಎಂಬ ಜಾನಪದ ನೃತ್ಯ ಪ್ರದರ್ಶಿಸಲಾಯಿತು.

ಸಂಸ್ಕೃತಿ ಸಚಿವಾಲಯದ ಟ್ಯಾಬ್ಲೋ 'ವಂದೇ ಮಾತರಂ' ಗೀತೆಯ 150 ವರ್ಷಗಳ ಭವ್ಯತೆಯನ್ನು ಸಾರಿ ಹೇಳಿತು. ಬಂಕಿಮ್ ಚಂದ್ರ ಚಟರ್ಜಿ ರಚನೆಯ ಈ ಗೀತೆಯ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುಪಡಿಸಲಾಯಿತು. ಒಂದೂವರೆ ಶತಮಾನದ ಇತಿಹಾಸವನ್ನು ಜೆನ್‌ ಝೀ ಸಮುದಾಯ ಪ್ರತಿನಿಧಿಸಿದ್ದು ವಿಶೇಷ. 'ವಂದೇ ಮಾತರಂ: ದಿ ಸೋಲ್-ಕ್ರೈ ಆಫ್ ಎ ನೇಷನ್' ಎಂಬ ಥೀಮ್‌ನೊಂದಿಗೆ, ಟ್ಯಾಬ್ಲೋದ ಮುಂಭಾಗದಲ್ಲಿ 'ವಂದೇ ಮಾತರಂ' ಗೀತೆಯ ಹಸ್ತಪ್ರತಿಯನ್ನು ರಚಿಸಲಾಗುತ್ತಿರುವುದನ್ನು ಚಿತ್ರಿಸಿದ್ದರೆ, ಅದರ ಕೆಳಭಾಗದಲ್ಲಿರುವ ಫಲಕ ಚಟರ್ಜಿ ಅವರ ಚಿತ್ರವನ್ನು ಒಳಗೊಂಡಿತ್ತು.

ಜನಪ್ರಿಯ ಆಯ್ಕೆ

MyGov ಪೋರ್ಟಲ್‌ನಲ್ಲಿ ನಡೆಸಿದ ಆನ್‌ಲೈನ್ ಸಮೀಕ್ಷೆಯ ಆಧಾರದ ಮೇಲೆ ನಡೆಸುವ 'ಜನಪ್ರಿಯ ಆಯ್ಕೆ' ವಿಭಾಗದಲ್ಲಿ ಆಯಾ ಕೆಟಗರಿಯಲ್ಲಿ ಅಸ್ಸಾಂ ರೆಜಿಮೆಂಟ್, ಗುಜರಾತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೊದಲ ಸ್ಥಾನ ಪಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 30ರಂದು ದೆಹಲಿಯ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ನಡೆಯಲಿದೆ. ಈ ಬಾರಿ ಕರ್ನಾಟಕದ ಟ್ಲಾಬ್ಲೋ ಸ್ಪರ್ಧಿಸಿರಲಿಲ್ಲ.