ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮರಗಳಿಗೆ ಕೊಡಲಿ ಬೀಳದಿರಲಿ

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ದೇವನಹಳ್ಳಿ ಯಲ್ಲಿ ಹೊಸ ವಸತಿ ರಹಿತ ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕಾಗಿ 626 ಮರಗಳನ್ನು ಕಡಿಯಲು ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಕೋರಿದೆ. ಇದು 600 ಕೈದಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸ ಲಾದ ಪ್ರಸ್ತಾವಿತ ಕೇಂದ್ರ ಜೈಲು ಸಂಕೀರ್ಣದ ಭಾಗವಾಗಿದೆ.

ಮರಗಳಿಗೆ ಕೊಡಲಿ ಬೀಳದಿರಲಿ

Profile Ashok Nayak Jun 10, 2025 6:50 AM

ಕೇವಲ ನಾಲ್ಕು ದಿನಗಳ ಹಿಂದೆ ( ಜೂನ್ 6) ವಿಶ್ವ ಪರಿಸರ ದಿನದಂದು ನಮ್ಮ ನಾಯಕರೆಲ್ಲರೂ ಪರಿಸರ ಸಂರಕ್ಷಣೆಯ ಬಗ್ಗೆ ಅತೀವ ಕಳಕಳಿ ತೋರಿಸಿದ್ದಾರೆ. ಈ ಕಳಕಳಿ ಕೇವಲ ಭಾಷಣಕ್ಕೆ ಸೀಮಿತ ಎನ್ನುವುದು ಈಗ ಸ್ಪಷ್ಟವಾಗಿದೆ. ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ಎರಡು ಯೋಜನೆಗಳಿಗಾಗಿ ಸುಮಾರು ಒಂದು ಸಾವಿರ ಮರಗಳಿಗೆ ಕತ್ತರಿ ಹಾಕಲು ಸರಕಾರ ಮುಂದಾಗಿರು ವುದು ದುರದೃಷ್ಟಕರ.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ದೇವನಹಳ್ಳಿ ಯಲ್ಲಿ ಹೊಸ ವಸತಿ ರಹಿತ ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕಾಗಿ 626 ಮರಗಳನ್ನು ಕಡಿಯಲು ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಕೋರಿದೆ. ಇದು 600 ಕೈದಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾದ ಪ್ರಸ್ತಾವಿತ ಕೇಂದ್ರ ಜೈಲು ಸಂಕೀರ್ಣದ ಭಾಗವಾಗಿದೆ.

ಇದೇ ವೇಳೆ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರವು 368 ಮರಗಳನ್ನು ಕಡಿಯಲು ಮತ್ತೊಂದು ಪ್ರಸ್ತಾವನೆ ಮುಂದಿಟ್ಟಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಎದುರು ಎಂಟೂವರೆ ಎಕರೆ ವಿಸ್ತೀರ್ಣದಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ಖಾಲಿ ಜಾಗವನ್ನು ಖಾಸಗಿ ಡೆವಲಪರ್‌ಗಳಿಗೆ 60 ವರ್ಷಗಳಿಗೆ ಲೀಸ್ ಕೊಡುವ ಯೋಜನೆ ಇದು.

ಇದನ್ನೂ ಓದಿ: Vishwavani Editorial: ಸಂಭ್ರಮದಿಂದ ಸಮಾಧಿಯವರೆಗೆ...

ಲೀಸ್‌ನಿಂದ ಬರುವ 300 ಕೋಟಿ ರು. ಮೊತ್ತವನ್ನು ಬೆಂಗಳೂರಿನ ಸಬರ್ಬನ್ ರೇಲ್ವೆ ಮಾರ್ಗದ ನಿರ್ಮಾಣಕ್ಕೆ ಬಳಸುವ ‘ದೂರದೃಷ್ಟಿ’ ಯೋಜನೆ ರೂಪಿಸಿದವರ ನಗರಾಭಿವೃದ್ಧಿ ‘ಕಾಳಜಿ’ಯನ್ನು ಮೆಚ್ಚಲೇಬೇಕು. ದೇವನಹಳ್ಳಿಯಲ್ಲಿ ಜೈಲು ನಿರ್ಮಾಣ ಸಂಬಂಧ ಬಿಬಿಎಂಪಿ 2025ರ ಏಪ್ರಿಲ್‌ನಲ್ಲಿ ಸಾರ್ವಜನಿಕ ಪ್ರತಿಕ್ರಿಯೆ ಆಹ್ವಾನಿಸಿತ್ತು. ಇದೀಗ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ, 2025ರ ಮೇ 31ರಂದು ಸಾರ್ವಜನಿಕ ಸೂಚನೆಯನ್ನು ಹೊರಡಿಸಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ನಾಗರಿಕರಿಗೆ ಹತ್ತು ದಿನಗಳ ಕಾಲಾವಕಾಶ ನೀಡಿದೆ.

ಎತ್ತಿನ ಹೊಳೆ, ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿದಂತೆ ಹತ್ತಾರು ಯೋಜನೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಮರಗಳನ್ನು ಉರುಳಿಸಲಾಗಿದೆ. ಇದಕ್ಕೆ ಪರ‍್ಯಾಯವಾಗಿ ಗಿಡಗಳನ್ನು ನೆಡಲಾಗಿದೆ ಎಂದು ಸರಕಾರ ನ್ಯಾಯಾಲಯದ ಮುಂದೆ ವಾಗ್ದಾನ ಮಾಡಿದೆ. ಆದರೆ ಎಲ್ಲೂ ಹೊಸ ಅರಣ್ಯ ಸೃಷ್ಟಿಯಾದ ಉದಾಹರಣೆಗಳಿಲ್ಲ. ಬೆಳೆದು ನಿಂತ ಮರಗಳನ್ನು ಉರುಳಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶವನ್ನು ಬರಡಾಗಿಸುವ ಈ ಯೋಜನೆಗಳನ್ನು ಸರಕಾರ ಕೈ ಬಿಡಬೇಕು.

ಕೇವಲ ಒಂದು ಮರ ಉಳಿಸಲು ತನ್ನ ರೈಲ್ವೆ ಮಾರ್ಗವನ್ನು ಬದಲಿಸಿದ ಜಪಾನ್ ದೇಶದ ಉದಾಹರಣೆ ನಮ್ಮ ಆಡಳಿತದ ಕಣ್ತೆರೆಸಬೇಕು.