ಹೂವಿನ ಹಾಸಲ್ಲ ವಿಜಯ್ ಹಾದಿ
ವಿಜಯ್ ಮುಂದೆ ಇರುವ ಇನ್ನೊಂದು ಸಂಕಷ್ಟದ ಸಂಗತಿ ಎಂದರೆ ಕೊಟ್ಟ ಭರವಸೆ ಗಳನ್ನು ಈಡೇರಿಸುವ ಅನಿವಾರ್ಯತೆ. ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಪವನ್ ಚಿನ್ನ ಹಾಗೂ ರೇಶ್ಮೆ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನದುಂಗುರ ಹಾಗೂ ಕಿಟ್.
-
ತಮಿಳುನಾಡಿನಲ್ಲಿ ಸತತ ಐದು ದಿನಗಳ ಬಹುಮತದ ಕಸರತ್ತು ಮುಕ್ತಾಯವಾಗಿದ್ದು, ನಟ ಜೋಸೆಫ್ ವಿಜಯ್ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ಸಿಪಿಐ, ಸಿಪಿಎಂ, ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ ಸೂಚಿಸಿದ್ದು, ವಿಜಯ್ ಬೆಂಬಲಿಗ ಶಾಸಕರ ಸಂಖ್ಯೆ 121ಕ್ಕೇರಿ ಅವರು ಸರಕಾರ ರಚಿಸಲು ಮುಂದಾಗಿದ್ದಾರೆ.
ಬಹುಮತದ ಸಂಖ್ಯೆಯನ್ನೇನೋ ಅವರು ಸಂಪಾದಿಸಿದ್ದಾರೆ. ಆದರೆ ಅವರನ್ನು ಸಂಭಾಳಿಸಿ ಕೊಂಡು ಹೋಗುವ ಕಷ್ಟದ ಕೆಲಸ ವಿಜಯ್ ಮುಂದಿದೆ. ಮೈತ್ರಿಕೂಟ ಎಂದ ಮೇಲೆ ಒಬ್ಬೊಬ್ಬರ ಆಶಯ ಒಂದೊಂದು ಇರುತ್ತದೆ. ಅದಕ್ಕನುಗುಣವಾಗಿ ಅವರು ಹೆಜ್ಜೆ ಹಾಕಬೇಕಾಗುತ್ತದೆ. ಮೌಲ್ಯ ಸಿದ್ಧಾಂತಗಳಲ್ಲಿ ರಾಜಿ ಅನಿವಾರ್ಯವಿದೆ.
ತಮಿಳುನಾಡು ದ್ರಾವಿಡ ಆದ್ಯತೆಯ ಸಿದ್ಧಾಂತಕ್ಕೆ ಇದುವರೆಗೂ ಮಣೆ ಹಾಕಿದೆ. ದ್ರಾವಿಡ ಆದ್ಯತೆ ಒಳ್ಳೆಯದೇ. ಆದರೆ ಅದಕ್ಕಾಗಿ ಒಕ್ಕೂಟ ಸರ್ಕಾರದ ಜೊತೆಗೆ ಹಿಡಿದ ಸಂಘರ್ಷದ ಮಾದರಿ ಸಮರ್ಪಕವಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ಜೊತೆ ತಿಕ್ಕಾಟ ನಡೆಸಲಾಗುತ್ತಿತ್ತು.
ಇದನ್ನೂ ಓದಿ: Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು
ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಪುತ್ರ ಉದಯನಿಧಿ ಸ್ಟಾಲಿನ್ ನೇರಾನೇರ ಹಿಂದುತ್ವ ವಿರೋಧಿ ವಿಚಾರಗಳ ಜೊತೆಗೆ ಜೋಡಿಸಿಕೊಂಡಿದ್ದರು. ವಿಜಯ್ ಅವರದೇ ಆದರ್ಶದಲ್ಲಿ ಮುಂದುವರಿಯುತ್ತಾರೋ ಅಥವಾ ಹೊಸ ಹಾದಿ ಹಿಡಿಯುತ್ತಾರೋ ನೋಡಬೇಕಿದೆ.
ವಿಜಯ್ ಮುಂದೆ ಇರುವ ಇನ್ನೊಂದು ಸಂಕಷ್ಟದ ಸಂಗತಿ ಎಂದರೆ ಕೊಟ್ಟ ಭರವಸೆ ಗಳನ್ನು ಈಡೇರಿಸುವ ಅನಿವಾರ್ಯತೆ. ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಪವನ್ ಚಿನ್ನ ಹಾಗೂ ರೇಶ್ಮೆ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನದುಂಗುರ ಹಾಗೂ ಕಿಟ್.
ನಿರುದ್ಯೋಗಿ ಪದವಿಧರರಿಗೆ ಮಾಸಿಕ 4000 ರೂ., ಕೃಷಿ ಸಾಲ ಮನ್ನಾ, ಮಹಿಳೆಯರಿಗೆ ಉಚಿತ ಪ್ರಯಾಣ, 200 ಯುನಿಟ್ ವಿದ್ಯುತ್ ಉಚಿತ ಇತ್ಯಾದಿ ಇತ್ಯಾದಿ ಕಾಮನ ಬಿಲ್ಲನ್ನು ವಿಜಯ್ ತೋರಿಸಿದ್ದಾರೆ. ಆದರೆ ಇವನ್ನೆಲ್ಲ ಈಡೇರಿಸಲು ರಾಜ್ಯದ ಖಜಾನೆಯಲ್ಲಿ ಸಂಪನ್ಮೂಲ ಇದ್ದಂತಿಲ್ಲ. ಇದನ್ನು ವಿಜಯ್ ಎಲ್ಲಿಂದ ತರುತ್ತಾರೆ ನೋಡಬೇಕಿದೆ.
ತೆರಿಗೆ ಸಂಗ್ರಹ ಸಾಕಷ್ಟಿದ್ದರೂ ರಾಜ್ಯದಲ್ಲಿ ಬಡತನ ಹಾಗೂ ನಿರುದ್ಯೋಗವೂ ವ್ಯಾಪಕ ವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್ ತಮ್ಮ ಆಡಳಿತವನ್ನು ಮೊದಲಿನಿಂದ ಶುರು ಮಾಡಬೇಕಿದೆ. ಸಿನಿಮಾದ ಜನಪ್ರಿಯತೆಯಿಂದ ಸಿಕ್ಕಿದ ಗೆಲುವನ್ನು ದಕ್ಷ ಆಡಳಿತದ ಮೂಲಕ ದಕ್ಕಿಸಿಕೊಳ್ಳಬೇಕಿದೆ.