IND vs SA: ಎರಡನೇ ಟೆಸ್ಟ್ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ರಿಷಭ್ ಪಂತ್! ವಿಡಿಯೊ
Rishabh Pant Crying: ರಿಷಭ್ ಪಂತ್ ಗುವಾಹಟಿಯನ್ನು ತಮ್ಮ ಅದೃಷ್ಟದ ಮೈದಾನವೆಂದು ಪರಿಗಣಿಸಿದ್ದರು, ಅಲ್ಲಿ ಅವರು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು ಮತ್ತು ಮೊದಲ ಬಾರಿ ಇದೇ ಜಾಗದಲ್ಲಿ ನಾಯಕತ್ವವನ್ನು ಪಡೆದರು. ಇದೀಗ ಅವರ ನಾಯಕತ್ವದಲ್ಲಿಯೇ ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಪಂದ್ಯದ ಬಳಿಕ ಅವರು ಕಣ್ಣೀರಿಟ್ಟಿದ್ದಾರೆ.
ಗುವಾಹಟಿ ಟೆಸ್ಟ್ ಸೋಲಿನ ಬಳಿಕ ಕಣ್ನೀರಿಟ್ಟ ರಿಷಭ್ ಪಂತ್. -
ಗುವಾಹಟಿ: ಇಲ್ಲಿ ನಡೆದಿದ್ದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ (India) ಹೀನಾಯ ಸೋಲು ಅನುಭವಿಸಿತು. ಈ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್ ಗಳಿಂದ ಸೋತಿದ್ದು, ಇದು ಆತಿಥೇಯರ ಟೆಸ್ಟ್ ಇತಿಹಾಸದಲ್ಲಿ ಅತಿ ದೊಡ್ಡ ಸೋಲು. ಇನ್ನೂ ಮುಜುಗರದ ಸಂಗತಿಯೆಂದರೆ, ದಕ್ಷಿಣ ಆಫ್ರಿಕಾ 25 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಹರಿಣ ಪಡೆ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ (Rishabh Pant) ಭಾರತ ತಂಡವನ್ನು ಮುನ್ನಡೆಸಿದ್ದರು. ಗುವಾಹಟಿ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೆ ಪಂತ್ ಅತ್ಯಂತ ಭಾವುಕರಾಗಿ ಕಾಣಿಸಿಕೊಂಡರು. ಮೈದಾನದಲ್ಲಿರುವ ಅವರ ಹಲವಾರು ಫೋಟೋಗಳು ವೈರಲ್ ಆಗಿದ್ದು, ಪಂತ್ ತಮ್ಮ ಕಣ್ಣುಗಳಿಂದ ಬರುತ್ತಿದ್ದ ಕಣ್ಣೀರನ್ನು ಒರೆಸುತ್ತಿರುವುದನ್ನು ತೋರಿಸುತ್ತಿದೆ.
ಈ ಟೆಸ್ಟ್ ಪಂದ್ಯದ ಆರಂಭದವರೆಗೂ ರಿಷಭ್ ಪಂತ್ ಗುವಾಹಟಿಯನ್ನು ಅದೃಷ್ಟಶಾಲಿ ಮತ್ತು ವಿಶೇಷ ಮೈದಾನವೆಂದು ಪರಿಗಣಿಸಿದ್ದರು. 2018 ರಲ್ಲಿ ಪಂತ್ ಇದೇ ಅಂಗಣದಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದೀಗ ಇದೇ ಅಂಗಣದಲ್ಲಿ ಮೊದಲ ಬಾರಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಪಂದ್ಯದ ಮೊದಲ ದಿನದ ಟಾಸ್ ವೇಳೆ ಪಂತ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ, ಗುವಾಹಟಿ ಮೈದಾನವು ಯಾವಾಗಲೂ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದು ಹೇಳಿದ್ದರು. ಆದರೆ, ಇದೀಗ ಫಲಿತಾಂಶದ ನಂತರ ಈ ಭಾವನೆ ಇನ್ನಷ್ಟು ಕಾಡಿರಬಹುದು, ಏಕೆಂದರೆ ಪಂತ್ ನಾಯಕತ್ವದ ಇಂತಹ ಅವಮಾನಕರ ಚೊಚ್ಚಲ ಪಂದ್ಯವನ್ನು ಎಂದಿಗೂ ಊಹಿಸಿರಲಿಲ್ಲ. ಇದರಿಂದ ಪಂತ್ ನಿರಾಶೆಗೊಂಡಂತೆ ಕಂಡುಬಂದರು. ಈ ನಿರಾಶೆಯಿಂದಾಗಿ ಅವರು ಕಣ್ಣೀರು ಹಾಕುತ್ತಿದ್ದರು ಮತ್ತು ಈ ನಿರಾಶೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
IND vs SA: ಭಾರತದಲ್ಲಿ 27 ಟೆಸ್ಟ್ ವಿಕೆಟ್ ಕಿತ್ತು ವಿಶ್ವದಾಖಲೆ ಬರೆದ ಸೈಮನ್ ಹಾರ್ಮರ್!
ಬ್ಯಾಟಿಂಗ್ನಲ್ಲಿಯೂ ರಿಷಭ್ ಪಂತ್ ವಿಫಲ
ಗಾಯದಿಂದ ಗುಣಮುಖರಾದ ಬಳಿಕ ರಿಷಭ್ ಪಂತ್, ಈ ಟೆಸ್ಟ್ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ರಿಷಭ್ ಪಂತ್ ಅವರು ತಮ್ಮ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಅವರು ಕೆಲ ತಿಂಗಳುಗಳು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಮೊದಲ ಸರಣಿಯಲ್ಲಿ ಅವರು ವಿಫಲರಾಗಿದ್ದಾರೆ. ಇವರು ಈ ಸರಣಿಯಲ್ಲಿ ಆಡಿದ ನಾಲ್ಕೂ ಇನಿಂಗ್ಸ್ಗಳಿಂದ ಕ್ರಮವಾಗಿ 2 (13), 27 (24), 7 (8), ಮತ್ತು 13 (16) ರನ್ಗಳನ್ನು ಗಳಿಸಿದ್ದರು. ಈ ಸರಣಿಯಲ್ಲಿ ಅವರ ಒಟ್ಟು ಮೊತ್ತ ನಾಲ್ಕು ಇನ್ನಿಂಗ್ಸ್ಗಳಲ್ಲಿ 12.25ರ ಸರಾಸರಿಯಲ್ಲಿ 49 ರನ್ಗಳು ಮಾತ್ರ. ಪಂತ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವು ಟೀಮ್ ಇಂಡಿಯಾದ ವೈಫಲ್ಯಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.
Rishabh Pant crying after biggest loss margin of 408 runs.
— Naishadh Jhaveri (@naishadhjhaveri) November 26, 2025
I like Rishabh Pant, don't like to see him fail as a captain. He has already shown the ability to rise up in life and now in cricket, I believe he will too. #INDvsSA #INDvSA #SAvIND pic.twitter.com/SzFa4TWEdm
ಪಂತ್ ಶಾಟ್ ಆಯ್ಕೆಯ ಬಗ್ಗೆ ಟೀಕೆ
ರಿಷಭ್ ಪಂತ್ ರನ್ಗಳ ಕೊರತೆಗೆ ಮಾತ್ರವಲ್ಲದೆ, ಶಾಟ್ ಆಯ್ಕೆಗೂ ಮಾಜಿ ಆಟಗಾರರಿಂದ ಟೀಕೆಗಳನ್ನು ಎದುರಿಸಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಗುವಾಹಟಿ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ ಮಾರ್ಕೊ ಯೆನ್ಸನ್ ಬೌಲಿಂಗ್ನಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸುವಾಗ ಅವರು ಔಟಾದ ರೀತಿ ಕ್ರಿಕೆಟ್ ತಜ್ಞರು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಬಣ್ಣಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್, ಪಂತ್ ಅವರ ಬ್ಯಾಟಿಂಗ್ನ ಅಭಿಮಾನಿ ಎಂದು ಪರಿಗಣಿಸಲ್ಪಟ್ಟಿದ್ದರೂ, "ಮೆದುಳಿನ ಮಂದಗತಿ" ಎಂಬ ಪದವನ್ನು ಬಳಸಿದ್ದರು.