ವಿಶ್ವಕರ್ಮ ಜಯಂತಿ ಶಬ್ದ ಬಳಕೆ ಎಷ್ಟು ಸರಿ?
ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದ, ಸೃಷ್ಟಿಗೂ ಮುನ್ನವೇ ಇದ್ದ ಪರಮಶಕ್ತಿಗೆ ಹುಟ್ಟು ಮತ್ತು ಸಾವುಗಳ ಮಿತಿಯಿಲ್ಲ. ದೇವಶಿಲ್ಪಿಗೆ ಭೌತಿಕ ಜನನವನ್ನು ಕಲ್ಪಿಸುವ 'ಜಯಂತಿ' ಪದಕ್ಕಿಂತ, ಆತನ ಅದೃಶ್ಯ ತತ್ವವನ್ನು ಮತ್ತು ಕೌಶಲ್ಯವನ್ನು ಆರಾಧಿಸುವ 'ವಿಶ್ವಕರ್ಮ ಪೂಜೆ' ಅಥವಾ 'ವಿಶ್ವಕರ್ಮ ಮಹೋತ್ಸವ' ಎಂಬ ಪದ ಬಳಕೆ ಹೆಚ್ಚು ಸೂಕ್ತ ಹಾಗೂ ಅರ್ಥಗರ್ಭಿತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
-
ಭಗವಾನ್ ವಿಶ್ವಕರ್ಮರು ಕೇವಲ ಒಂದು ಸಮುದಾಯದ ಆರಾಧ್ಯ ದೈವವಲ್ಲ, ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಸಕಲ ಕಲೆ, ವಾಸ್ತುಶಿಲ್ಪ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ಮೂಲಾಧಾರ. ಪ್ರತಿವರ್ಷ ನಾವು ಅತ್ಯಂತ ಭಕ್ತಿ-ಭಾವಗಳಿಂದ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತೇವೆ ಹಾಗೂ ಕಾಯಕವನ್ನು ಪೂಜಿಸುತ್ತೇವೆ. ಆದರೆ, 'ಜಯಂತಿ' ಎಂಬ ಪದಬಳಕೆಯ ಕುರಿತು ಒಂದು ಗಂಭೀರ ವಾದ ತಾತ್ವಿಕ ಚಿಂತನೆ ನಡೆಯಬೇಕಿದೆ.
'ಜಯಂತಿ' ಎಂದರೆ ಏನು?
'ಜಯಂತಿ' ಎಂಬ ಪದವು ಸಂಸ್ಕೃತದ 'ಜನ್ಮ' ಅಥವಾ ಹುಟ್ಟಿನಿಂದ ಬಂದಿದೆ. ಸಾಮಾನ್ಯವಾಗಿ ಯಾವುದೇ ಮಹಾನ್ ವ್ಯಕ್ತಿ, ದಾರ್ಶನಿಕ ಅಥವಾ ದೇವರ ಅವತಾರವು ಭೂಮಿಯ ಮೇಲೆ ಜನ್ಮ ತಾಳಿದ ದಿನದ ನೆನಪಿಗಾಗಿ ಜಯಂತಿಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: Vishwakarma: ಜನವರಿ 6ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ
ಆದರೆ, ಭಗವಾನ್ ವಿಶ್ವಕರ್ಮರ ವಿಚಾರದಲ್ಲಿ 'ಜಯಂತಿ' ಎಂಬ ಪದದ ಬಳಕೆಯ ಬಗ್ಗೆ ಒಂದು ತಾತ್ವಿಕ ಮತ್ತು ವಿಮರ್ಶಾತ್ಮಕ ಚರ್ಚೆಯಿದೆ. ವೇದ ಉಪನಿಷತ್ತುಗಳ ಪ್ರಕಾರ ವಿಶ್ವಕರ್ಮನು 'ಸ್ವಯಂ ಭೂ' ಅಂದರೆ ತನ್ನಷ್ಟಕ್ಕೆ ತಾನೇ ಉದ್ಭವಿಸಿದವನು.
ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದ, ಸೃಷ್ಟಿಗೂ ಮುನ್ನವೇ ಇದ್ದ ಪರಮಶಕ್ತಿಗೆ ಹುಟ್ಟು ಮತ್ತು ಸಾವುಗಳ ಮಿತಿಯಿಲ್ಲ. ದೇವಶಿಲ್ಪಿಗೆ ಭೌತಿಕ ಜನನವನ್ನು ಕಲ್ಪಿಸುವ 'ಜಯಂತಿ' ಪದಕ್ಕಿಂತ, ಆತನ ಅದೃಶ್ಯ ತತ್ವವನ್ನು ಮತ್ತು ಕೌಶಲ್ಯವನ್ನು ಆರಾಧಿಸುವ 'ವಿಶ್ವಕರ್ಮ ಪೂಜೆ' ಅಥವಾ 'ವಿಶ್ವಕರ್ಮ ಮಹೋತ್ಸವ' ಎಂಬ ಪದ ಬಳಕೆ ಹೆಚ್ಚು ಸೂಕ್ತ ಹಾಗೂ ಅರ್ಥಗರ್ಭಿತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದಾಗ್ಯೂ, ಆ ಪರಮಶಕ್ತಿಯು ಮನುಕುಲಕ್ಕೆ ಕೌಶಲ್ಯವನ್ನು ಧಾರೆಯೆರೆಯಲು ಸಾಂಕೇತಿಕವಾಗಿ ಪ್ರಕಟವಾದ ದಿನವನ್ನು 'ಜಯಂತಿ' ಎಂದು ಕರೆಯುವ ವಾಡಿಕೆ ಸಮಾಜದಲ್ಲಿ ಬೆಳೆದು ಬಂದಿದೆ.
ಕರ್ನಾಟಕ ಸರ್ಕಾರಕ್ಕೆ ಒಕ್ಕೊರಲಿನ ಮನವಿ: ಸನ್ಮಾನ್ಯ ಕರ್ನಾಟಕ ಸರ್ಕಾರವು ಶ್ರಮಿಕ ವರ್ಗವನ್ನು ಗೌರವಿಸುವ ನಿಟ್ಟಿನಲ್ಲಿ ಅಧಿಕೃತವಾಗಿ ಭಗವಾನ್ ವಿಶ್ವಕರ್ಮರ ದಿನವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಆದರೆ, ವೇದ-ಉಪನಿಷತ್ತುಗಳ ಮೂಲ ಆಶಯದಂತೆ ಹಾಗೂ ಪರಮ ಶಕ್ತಿಯ ಅನಾದಿ-ಅನಂತ ಸ್ವರೂಪವನ್ನು ಗೌರವಿಸುವ ದೃಷ್ಟಿಯಿಂದ, ಈ ಸರ್ಕಾರಿ ಆಚರಣೆಯ ಹೆಸರನ್ನು ಸೂಕ್ತವಾಗಿ ಮಾರ್ಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಸೃಷ್ಟಿಗೂ ಮುನ್ನವೇ ಇದ್ದ, ಕಾಲಾತೀತನಾದ ದೇವಶಿಲ್ಪಿಗೆ ಹುಟ್ಟು-ಸಾವುಗಳಿಲ್ಲದಿರುವುದರಿಂದ, ಸರ್ಕಾರಿ ದಾಖಲೆಗಳಲ್ಲಿ ಹಾಗೂ ಅಧಿಕೃತ ಆಚರಣೆಗಳಲ್ಲಿ 'ವಿಶ್ವಕರ್ಮ ಜಯಂತಿ' ಎಂಬ ಪದದ ಬದಲಾಗಿ 'ವಿಶ್ವಕರ್ಮ ಮಹೋತ್ಸವ', 'ವಿಶ್ವಕರ್ಮ ಪೂಜಾ ಮಹೋತ್ಸವ' ಅಥವಾ 'ವಿಶ್ವಕರ್ಮ ದಿನ' ಎಂದು ಅಧಿಕೃತವಾಗಿ ಘೋಷಿಸಿ, ಬಳಸಬೇಕು. ಈ ಮೂಲಕ ಆದಿ ಸೃಷ್ಟಿಕರ್ತನ ನೈಜ ತತ್ವಕ್ಕೆ ಮತ್ತು ಶ್ರಮ ಸಂಸ್ಕೃತಿಗೆ ಸರ್ಕಾರವು ತಾತ್ವಿಕ ಹಾಗೂ ಶಾಸ್ತ್ರೋಕ್ತ ಗೌರವವನ್ನು ಸಲ್ಲಿಸಬೇಕಾಗಿ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನವು ವಿನಮ್ರವಾಗಿ ವಿನಂತಿ ಮಾಡುತ್ತಿದೆ.