ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajakkala Girish Bhat Column: ಪಂಪ: ಮನುಷ್ಯ ಜಾತಿಯೊಂದೇ ? ಅಥವಾ ಅಸ್ಪ್ರಶ್ಯತೆಯೋ ಇದೆಯೇ ?

ಜಾತಿಭೇದ ನಿರಾಕರಣೆಯ ಆಶಯವುಳ್ಳ ಅದೇ ಹೆಸರಿನ ನಾಟಕವನ್ನೂ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ಧ್ಯೇಯವಾಕ್ಯವಾಗಿ ಬಳಸಿಕೊಳ್ಳುತ್ತದೆ. ಆ ಸಾಲನ್ನು ಸಂದರ್ಭದಿಂದ ಪ್ರತ್ಯೇಕಿಸಿ ಅದನ್ನೊಂದು ಧ್ಯೇಯವಾಕ್ಯವಾಗಿ ಇಟ್ಟುಕೊಂಡರೆ ತಪ್ಪೇನಿಲ್ಲ. ಆದರ್ಶವಾಕ್ಯವೇ ಹೌದು ಅದು. ಆದರೆ, ಪಂಪನು ಮನುಷ್ಯ ಸಮಾನತೆಯನ್ನು ಸಾರಲು ಈ ವಾಕ್ಯವನ್ನು ಹೇಳಿದನೇ? ಸ್ಪಷ್ಟ ಉತ್ತರ ‘ಇಲ್ಲ’ ಎನ್ನುವುದೇ.

ಪಂಪ: ಮನುಷ್ಯ ಜಾತಿಯೊಂದೇ ? ಅಥವಾ ಅಸ್ಪ್ರಶ್ಯತೆಯೋ ಇದೆಯೇ ?

Profile Ashok Nayak Jun 7, 2025 10:11 AM

ಜಾತಿ ಜಿಜ್ಞಾಸೆ

ಅಜಕ್ಕಳ ಗಿರೀಶ್‌ ಭಟ್

ಆದಿಕವಿ ಪಂಪನು ಜನ್ಮದಿಂದ ಬಂದ ಕುಲವನ್ನು ಧಿಕ್ಕರಿಸಿದ್ದಾನೆ" ಎನ್ನುವುದು ಕನ್ನಡದಲ್ಲಿ ಒಂದು ಅತ್ಯಂತ ಪ್ರಸಿದ್ಧವೂ ಜನಪ್ರಿಯವೂ ಆದ ಕಥನ. ಇದಕ್ಕೆ ಕಾರಣವಾದ ಸಾಲುಗಳ ಪೈಕಿ ಮುಖ್ಯವಾದುದು ‘ಆದಿಪುರಾಣ’ದಲ್ಲಿ ಬರುವ “ಮನುಷ್ಯಜಾತಿ ತಾನೊಂದೆವಲಂ" ಎಂಬುದು. ಅಲ್ಲದೆ ಪಂಪಭಾರತದಲ್ಲಿ ದ್ರೋಣ, ಭೀಷ್ಮ ಮೊದಲಾದವರ ಮಾತುಗಳಿಗೆ ಎದುರಾಗಿ ಕರ್ಣನು ಕುಲದ ಬಗ್ಗೆ ಆಡುವ ಮಾತುಗಳೂ ಇವೆ.

ಆದರೆ ಆದಿಪುರಾಣವನ್ನು ಓದುವಾಗ, ಕುಲದ ಬಗ್ಗೆ ಪಂಪನ ನಿಲುವು ಏನಾಗಿತ್ತು ಎಂಬ ಹೊಸ ಪ್ರಶ್ನೆ ಬರುತ್ತದೆ. ಪಂಪನ ಆದಿಪುರಾಣದಲ್ಲಿ ಇರುವ “ಮನುಷ್ಯಜಾತಿ ತಾನೊಂದೆವಲಂ" ಎನ್ನುವ ಸಾಲನ್ನು “ಮನುಷ್ಯರ ನಡುವಿನ ಸಮಾನತೆಯನ್ನು ಸಾರಿದ ಸಾಲು" ಎಂದು ಪರಿಗಣಿಸಿ ದಿನನಿತ್ಯ‌ ವೆಂಬಂತೆ ಗೋಷ್ಠಿಗಳಲ್ಲಿ, ಸಮ್ಮೇಳನಗಳಲ್ಲಿ, ಬರವಣಿಗೆಗಳಲ್ಲಿ ಉಲ್ಲೇಖಿಸಲಾಗುತ್ತದೆ.

ಜಾತಿಭೇದ ನಿರಾಕರಣೆಯ ಆಶಯವುಳ್ಳ ಅದೇ ಹೆಸರಿನ ನಾಟಕವನ್ನೂ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ಧ್ಯೇಯವಾಕ್ಯವಾಗಿ ಬಳಸಿಕೊಳ್ಳುತ್ತದೆ. ಆ ಸಾಲನ್ನು ಸಂದರ್ಭದಿಂದ ಪ್ರತ್ಯೇಕಿಸಿ ಅದನ್ನೊಂದು ಧ್ಯೇಯವಾಕ್ಯವಾಗಿ ಇಟ್ಟುಕೊಂಡರೆ ತಪ್ಪೇನಿಲ್ಲ. ಆದರ್ಶವಾಕ್ಯವೇ ಹೌದು ಅದು. ಆದರೆ, ಪಂಪನು ಮನುಷ್ಯ ಸಮಾನತೆಯನ್ನು ಸಾರಲು ಈ ವಾಕ್ಯವನ್ನು ಹೇಳಿದನೇ? ಸ್ಪಷ್ಟ ಉತ್ತರ ‘ಇಲ್ಲ’ ಎನ್ನುವುದೇ.

ಇದನ್ನೂ ಓದಿ: Roopa Gururaj Column: ಕಕುದ್ರುಮನೆಂಬ ನಕಲಿ ರಾಜ

ವಸ್ತುತಃ ಮನುಷ್ಯರೆಲ್ಲ ಒಂದೇ ಅಲ್ಲ ಎನ್ನುವುದನ್ನು ಸೂಚಿಸುವ ಪದ್ಯದಲ್ಲಿ ಬರುವ ಸಾಲು ಅದು. ಈ ಬಗ್ಗೆ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಿ.ಆರ್. ವೆಂಕಟರಮಣ ಐತಾಳ್, ಕೆ.ವಿ. ಅಕ್ಷರ, ರಾಜಾರಾಮ ಹೆಗ್ಡೆ ಮುಂತಾದವರೆಲ್ಲ ಬರೆದಿದ್ದಾರೆ. ಅವುಗಳ ಬೆಳಕಿನಲ್ಲಿ, ಪಂಪಭಾರತದ ಕೆಲವಂಶಗಳನ್ನೂ ಇಟ್ಟುಕೊಂಡು ಮತ್ತಷ್ಟು ವಿಸ್ತರಿಸಿ ನಾನೂ ಬರೆದಿದ್ದೇನೆ.

ನನ್ನದೇ ಹೆಸರಿನ ಯುಟ್ಯೂಬ್ ವಾಹಿನಿಯಲ್ಲೂ ಮೂರು ವರ್ಷಗಳ ಹಿಂದೆ ಈ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದೆ. ಒಂದೆರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಮಂಜುನಾಥ ಕೊಳ್ಳೇಗಾಲ ಅವರೂ “ಮನುಷ್ಯಜಾತಿ ತಾನೊಂದೆವಲಂ.." ಎಂಬ ಸಾಲು ಇರುವ ಪದ್ಯದ ಸರಿಯಾದ ಅರ್ಥ ವಿವರಿಸಿ ಸುದೀರ್ಘ ಲೇಖನವನ್ನು ಬರೆದಿದ್ದಾರೆ.

ಪಂಪಭಾರತದಲ್ಲಿ ಪಂಪ ಕರ್ಣನನ್ನು ಹೊಗಳುತ್ತಾನೆ ನಿಜ. ಆದರೆ ಅಲ್ಲಿ ಕುಲದ ವ್ಯಾಖ್ಯಾನ ಮುಖ್ಯವಾಗಿ ಆಗುವುದು ಪಾತ್ರಗಳ ಮೂಲಕ. ಪಂಪನ ನೇರ ನಿರೂಪಣೆಯ ಮೂಲಕ ಅಲ್ಲ. ಹೀಗೆ, ಪಾತ್ರದ ಮೂಲಕ ಹೇಳುವುದು ಮತ್ತು ಕವಿ ತನ್ನದೇ ಮಾತುಗಳಾಗಿ ಹೇಳುವುದರ ನಡುವೆ ಅಗಾಧ ವ್ಯತ್ಯಾಸವಿದೆ. ಸಾಹಿತ್ಯಾಭ್ಯಾಸಿಗಳಿಗೆಲ್ಲ ಗೊತ್ತಿರುವ ಸಂಗತಿ ಇದು. ಪಾತ್ರದ ಬಾಯಿಯಲ್ಲಿ ಕೃತಿಕಾರನೊಬ್ಬ ಹೇಳಿಸಿದ ಮಾತುಗಳೆಲ್ಲ ಆ ಕೃತಿಕಾರನ ಮಾತುಗಳೇ ಆಗಬೇಕಿಲ್ಲ; ಅಥವಾ ಅವು ಕೃತಿಕಾರನ ಅಭಿಪ್ರಾಯಗಳೇ ಆಗಬೇಕಿಲ್ಲ.

ಉದಾಹರಣೆಗೆ ಭೀಮ-ದುರ್ಯೋಧನರ ನಡುವಿನ ‘ಗದಾಯುದ್ಧ’ದ ಬಗ್ಗೆ ನಾಟಕ ಬರೆದರೆ ಅದರಲ್ಲಿ ಭೀಮನ ಮೂಲಕ ನಾಟಕಕಾರ ಹೇಳಿಸುವ ಮಾತುಗಳು ಮತ್ತು ದುರ್ಯೋಧನನ ಮೂಲಕ ಹೇಳಿಸುವ ಮಾತುಗಳು ಪರಸ್ಪರ ವಿರುದ್ಧವಿರಬಹುದು. ಓದುಗರು ಅಥವಾ ವಿಮರ್ಶ ಕರು ಅವರವರಿಗೆ ಬೇಕಾದಂತೆ ಇದು ನಾಟಕಕಾರನ ನಿಲುವು ಎಂದು ಹೇಳಿದರೆ ಅರ್ಥವುಂಟೇ? ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನೋಡಿದರೆ ಹಲವು ಪಾತ್ರಗಳ ಮಾತುಗಳು ಬರುತ್ತವೆ.

ಅವೆಲ್ಲವೂ ಕುವೆಂಪು ಅವರ ನಿಲುವನ್ನು ಹೇಳುತ್ತವೆ ಎನ್ನಲಾದೀತೆ? ಒಂದು ಕೃತಿಯಲ್ಲಿ ಬರುವ ಪಾತ್ರದ ಮಾತಿನಲ್ಲಿ ವ್ಯಕ್ತವಾದುದು ಕೃತಿಕಾರನ ಅಭಿಪ್ರಾಯ ಆಗಿರಲೂಬಹುದು; ಆಗಿಲ್ಲದೆಯೂ ಇರಬಹುದು. ನಿರ್ಣಾಯಕವಾಗಿ ಹೇಳಲು ಕಷ್ಟ. ಸಾಂದರ್ಭಿಕವಾದ ಇತರ ಮಾತುಗಳ ಮೂಲಕ ಮತ್ತು ಕೃತಿಕಾರ ನಿರ್ಮಿಸುವ ಸನ್ನಿವೇಶಗಳ ಮೂಲಕ ನಾವು ಕೆಲವು ಸಲ ಒಂದು ನಿರ್ಣಯಕ್ಕೆ ಬರಬಹುದು ಅಷ್ಟೆ. ಆದರೆ ಕೃತಿಯ ನಿರೂಪಕನ ಮಾತುಗಳಲ್ಲಿಯೇ ಬಂದ ಅಭಿಪ್ರಾಯವನ್ನು ಅಥವಾ ವ್ಯಕ್ತವಾದ ನಿಲುವನ್ನು ಕೃತಿಕಾರನ ಮಾತು, ಅಭಿಪ್ರಾಯ ಮತ್ತು ನಿಲುವು ಎಂಬುದಾಗಿ ಸ್ಪಷ್ಟವಾಗಿಯೇ ಹೇಳಬಹುದು.

ಆದಿಪುರಾಣದಲ್ಲಿ ಬರುವ “ಮನುಷ್ಯಜಾತಿ ತಾನೊಂದೆವಲಂ" ಎಂಬುದು ಆದಿದೇವನ ಮಗನಾದ ಭರತ ಚಕ್ರವರ್ತಿಯ ಮಾತು. ಇದು ಪಾತ್ರದ ಮಾತಿರಲಿ ಅಥವಾ ಕಾವ್ಯದ ನಿರೂಪಕನಾದ ಪಂಪನ ಮಾತೇ ಇರಲಿ, ಒಟ್ಟಿನಲ್ಲಿ ಪದ್ಯದ ಸಂದರ್ಭವನ್ನು ನೋಡಿದರೆ ಗೊತ್ತಾಗುವಂತೆ ಇದು ಮನುಷ್ಯ ರೆಲ್ಲ ಸಮಾನರು ಎಂದು ಹೇಳುವ ಮಾತಲ್ಲ; ಬದಲಾಗಿ ಹೆಚ್ಚುಕಡಿಮೆ ಅದಕ್ಕೆ ವಿರುದ್ಧವಾದು ದನ್ನು ಹೇಳುವ ಸಾಲು ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ “ಪಂಪ ಹುಟ್ಟನ್ನು ಆಧರಿಸಿದ ಕುಲದ ಕಲ್ಪನೆಯನ್ನು ಧಿಕ್ಕರಿಸಿದ್ದಾನೆ" ಎನ್ನಲು ಇದು ಆಧಾರವಾಗುವುದಿಲ್ಲ.

***

ಇದೀಗ ಆದಿಪುರಾಣದಲ್ಲಿ ಪಂಪ ಏನು ಹೇಳುತ್ತಾನೆ ಎಂದು ನೋಡೋಣ. ಆದಿಪುರಾಣದ ‘ಕರ್ಮಭೂಮಿ ನಿಯೋಗ’ ಎನ್ನುವ ಎಂಟನೆಯ ಆಶ್ವಾಸದಲ್ಲಿ ಪ್ರಜಾಪತಿಯು ಪ್ರಜೋಪಜೀವನ ನಿಮಿತ್ತವಾಗಿ, ವರ್ಣಗಳನ್ನು ವಿಭಾಗಿಸಿದ ಅಥವಾ ಪಡೆದ/ ಸೃಷ್ಟಿಸಿದ ಬಗ್ಗೆ ಬರುತ್ತದೆ. ಅಲ್ಲಿ ಹೇಳಲಾದ ಈ ಮುಂದಿನ ಸಾಲುಗಳನ್ನು ನೋಡಿ: “..ತನ್ನ ಪಡೆದ ಸಕಲ ಕ್ಷತ್ರಿಯ ವಣಿಕ್ ಶೂದ್ರ ರೆಂಬ ಮೂರುಂ ವರ್ಣಂಗಳೋಳಂ- ಕ್ಷತ್ರತ್ರಾಣಾದಿ ಗುಣೋಪೇತಮಪ್ಪ ನಿಖಿಳ ಕ್ಷತ್ರಿಯ ಸಮೂಹಕ್ಕೆ ಶಸ್ತ್ರಕರ್ಮಮುಮಂ, ವಣಿಗ್ವಂಶಕ್ಕೆ ಪಾಶುಪಾಲ್ಯ- ಕೃಷಿ-ಪಣ್ಯ ಕರ್ಮಂಗಳುಮಂ, ಸ್ಪೃಶ್ಯಾಸ್ಪೃಶ್ಯರುಗಳುಮೆಂದಿರ್ತೆರದ ಶೂದ್ರ ಸಂತತಿಗೆ ಶುಶ್ರೂಷಾ ನಿಯೋಗಂಗಳುಮಂ ಯಥಾಯೋಗ್ಯ ಉಪದೇಶಂಗೆಯ್ದು, ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗೊಳ್ ನಣ್ಪುಮಂ ಕೊಳ್-ಕೊಡೆಯುಮಂ ನಿಯೋಜಿಸಿ.." ಅಂದರೆ, ವರ್ಣಗಳನ್ನು ವಿಭಾಗಿಸಿದ್ದು ಮಾತ್ರವಲ್ಲ, ಶೂದ್ರವರ್ಣದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯರೆಂಬ ಎರಡು ವಿಭಾಗಗಳನ್ನೂ ಮಾಡಲಾಯಿತು.

ಅಲ್ಲದೆ, ಯಾವ ಬಗೆಯಲ್ಲೂ ವರ್ಣಸಂಕರವಾಗದಂತೆ, ಎಲ್ಲ ವರ್ಣದವರೂ ತಮ್ಮ ತಮ್ಮ ವರ್ಣ/ ಜಾತಿಗಳ ಒಳಗೆಯೇ ವಿವಾಹವಾಗತಕ್ಕದ್ದು ಎಂಬ ನಿಯಮ ಮಾಡಲಾಯಿತು. ಅಷ್ಟೇ ಅಲ್ಲ, ಮುಂದೆ ಅದೇ ಆಶ್ವಾಸದಲ್ಲಿ, ವೃಷಭದೇವನು ವರ್ಣಗಳನ್ನು ಮತ್ತಷ್ಟು ವ್ಯವಸ್ಥೆಗೊಳಿಸಿದ ಬಗ್ಗೆ ಪಂಪ ಹೇಳುತ್ತಾನೆ.

ದ್ವಿಜ ವರ್ಣಕ್ಕೆ ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ, ಯಜನ, ಯಾಜನ ಎಂಬ ವೃತ್ತಿಗಳನ್ನು ಹಾಗೂ ಕ್ಷತ್ರಿಯರಿಗೆ ಸತ್ಯ, ತ್ಯಾಗ, ಪ್ರಜಾಪಾಲನ, ಶರಣಾಗ ತರಕ್ಷಣ, ಪ್ರಹರಣಕ್ಷಮ ಇತ್ಯಾದಿ ಗುಣಾಚರಣೆಗಳನ್ನು ನಿಯಮಿಸಲಾಯಿತು. ವೈಶ್ಯ ಅಥವಾ ವಣಿಗ್ ವಂಶಕ್ಕೆ ವರ್ತನೆ-ವ್ಯಾಪಾರ ಹಾಗೂ ಶೂದ್ರರಿಗೆ ಇತರ ವರ್ಣಗಳ ಶುಶ್ರೂಷೆಯ ಕಾರ್ಯ ನಿಗದಿಪಡಿಸಿದ ಬಗ್ಗೆ ಪಂಪ ಹೇಳುತ್ತಾನೆ.

ಇನ್ನು ಹೀಗೆ ರೂಪಿಸಲಾದ ನಿಯಮಗಳನ್ನು ಮೀರಿದವರಿಗೆ ‘ಧಿಕ್ಕಾರ’ ಹಾಕಬೇಕು ಮತ್ತು ಅಂಥವ ರನ್ನು ದಂಡದಿಂದ ದಂಡಿಸುವುದೆಂದೂ ವೃಷಭದೇವ ಪ್ರಕಟಿಸಿದ. ದಂಡಿಸುವ ದಂಡಧರರು ಇಲ್ಲದಿದ್ದರೆ ಜನರು ತಮ್ಮ ವೃತ್ತಿಗಳನ್ನು ಅತಿಕ್ರಮಿಸಬಹುದು; ಮತ್ಸ್ಯ ನ್ಯಾಯವಾದೀತು ಎಂಬ ಕಾರಣದಿಂದ ದಂಡಧರರನ್ನು ಕೂಡ ವೃಷಭದೇವ ನೇಮಿಸಿದ ಬಗ್ಗೆ ಉಲ್ಲೇಖ ಬರುತ್ತದೆ.

ಅಂದರೆ ವರ್ಣಸಂಕರ ಆಗದಂತೆ ನೋಡಿಕೊಳ್ಳುವುದು ಕೂಡ ದಂಡಧರರ ಕೆಲಸವಾಗುತ್ತದೆ. ಒಟ್ಟಿನಲ್ಲಿ ಪಂಪ ಹೇಳುವಂತೆ, ಆಯಾ ವರ್ಣದವರು ತಮಗೆ ನಿಯಮಿಸಿದ ವೃತ್ತಿಗಳನ್ನು ಮಾತ್ರ ಮಾಡತಕ್ಕದ್ದು ಮತ್ತು ಯಾವುದೇ ಕಾರಣಕ್ಕೂ ಪ್ರತ್ಯೇಕ ವರ್ಣಗಳ ನಡುವೆ ವಿವಾಹ ಸಂಬಂಧ ವಾಗಬಾರದು, ವರ್ಣಸಂಕರವಾಗಬಾರದು ಎನ್ನುವ ನಿಯಮವನ್ನು ಮಾಡಲಾಯಿತು.

***

ಇದೀಗ ನಮ್ಮೆದುರು ಬರುವ ಅತಿಮುಖ್ಯ ಪ್ರಶ್ನೆಯನ್ನು ಎತ್ತಿಕೊಳ್ಳುವ: ಪಂಪ ನಿಷ್ಠಾವಂತ ಜೈನನಾಗಿದ್ದನೆ? ಕನ್ನಡದ ಅನೇಕ ವಿದ್ವಾಂಸರು ಪಂಪನು ಜೈನ ತತ್ತ್ವಗಳನ್ನು ನಂಬಿದ್ದ ಬಗ್ಗೆ ಮಾತ್ರವಲ್ಲ, ಆತ ವೈದಿಕರಿಗೆ ವಿರುದ್ಧವಾಗಿದ್ದ ಎಂಬ ಅಭಿಪ್ರಾಯವನ್ನೂ ನೀಡಿದ್ದಾರೆ. ವೈದಿಕರು ಪ್ರತಿಪಾದಿಸುತ್ತಿದ್ದ ‘ಅಸಮಾನತೆ’ಗೆ ವಿರುದ್ಧವಾಗಿ ಪಂಪನ “ಮನುಷ್ಯಜಾತಿ ಒಂದೇ" ಎನ್ನುವ ಸಾಲು ಹಾಗೂ ಪಂಪಭಾರತದಲ್ಲಿ ಬರುವ ಕುಲದ ಕುರಿತಾದ ಸಾಲುಗಳು ಬಂದಿವೆ ಎಂಬುದಾಗಿ ವ್ಯಾಖ್ಯಾನಿಸಿ ಅಂಥ ಸಾಲುಗಳನ್ನು ಪದೇಪದೆ ಉಲ್ಲೇಖಿಸುತ್ತಾರೆ.

ಅಲ್ಲದೆ ತನ್ನ ಹಿರಿಯರ ಹೋಮಧೂಮದ ಬಗ್ಗೆ ಪಂಪ ಹೇಳಿದ ಸಾಲುಗಳನ್ನು ನಮ್ಮ ವಿದ್ವಾಂಸರು ಅಪವ್ಯಾಖ್ಯಾನ ಮಾಡುವ ಮೂಲಕ, ಆತ ಶುದ್ಧ ಜೈನನಾಗಿದ್ದುದರಿಂದ ವೈದಿಕರ ಯಜ್ಞವನ್ನು ವಿರೋಽಸಿದ್ದಾನೆಂಬ ಕಥನವನ್ನು ಕೂಡ ಜನಪ್ರಿಯಗೊಳಿಸಿದ್ದಾರೆ. ಪಂಪಭಾರತದಲ್ಲಿ ಕೃಷ್ಣನ ಪಾತ್ರವನ್ನು ಗೌಣಗೊಳಿಸಲು ಕೂಡ ಆತ ಜೈನನಾಗಿದ್ದುದು ಮತ್ತು ವೈದಿಕತೆಯ ಬಗ್ಗೆ ಅವನಿಗೆ ಒಲವು ಇಲ್ಲದೆ ಇದ್ದುದು ಕಾರಣ ಎಂಬ ವ್ಯಾಖ್ಯಾನವಿದೆ.

ಎಂ.ಎಂ. ಕಲ್ಬುರ್ಗಿಯವರ ಸಹಿತ ಕೆಲವು ವಿದ್ವಾಂಸರು ಪಂಪನು ತನ್ನ ಜೈನನಿಷ್ಠೆಯನ್ನು ಎತ್ತಿ ಹಿಡಿದುದಕ್ಕಾಗಿ ವೈದಿಕರ ಸಿಟ್ಟಿಗೆ ಒಳಗಾಗಿದ್ದ ಎಂದು ಮುಂತಾಗಿ ಊಹೆಗಳನ್ನು ಕೂಡ ಹರಿಬಿಟ್ಟಿ ದ್ದಾರೆ. ನಲವತ್ತು-ನಲವತ್ತೊಂದರ ಪ್ರಾಯದೊಳಗೆ ಎರಡು ಮಹಾಕಾವ್ಯಗಳನ್ನು ಬರೆದ ಬಳಿಕ ಆತ ಬರೆದುದು ಸಿಗದೆ ಇರಲು ಕೂಡ ಪಂಪ-ವೈದಿಕ ಸಂಘರ್ಷವೇ ಕಾರಣವಿರಬೇಕು ಎಂಬಲ್ಲಿ ಯವರೆಗೆ ಊಹೆಯನ್ನು ಬೆಳೆಸಿದ್ದಾರೆ.

ಪಂಪನು ಯಜ್ಞವಿರೋಧಿಯಾಗಿದ್ದ ಎಂಬುದು ಚರ್ಚಾರ್ಹ. ಅದು ಪ್ರತ್ಯೇಕ ಸಂಗತಿ. ಆ ವಿಚಾರದ ಚರ್ಚೆ ಸದ್ಯಕ್ಕೆ ಅಗತ್ಯವಿಲ್ಲ. ಈಗ ಕನ್ನಡದ ಹೆಚ್ಚಿನ ಎಲ್ಲಾ ವಿದ್ವಾಂಸರು ಹೇಳುವಂತೆ “ಪಂಪ ವೇದಪಾರಮ್ಯವನ್ನು ಒಪ್ಪಿರಲಿಲ್ಲ, ಆತ ನಿಷ್ಠಾವಂತ ಜೈನನಾಗಿದ್ದ" ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.

ಹೀಗೆ, ಒಂದು ವೇಳೆ ಆತ ನಿಷ್ಠಾವಂತ ಜೈನನಾಗಿದ್ದರೆ, ಜೈನ ಪುರಾಣಗಳಲ್ಲಿ ವೃಷಭದೇವನು ವರ್ಣಗಳನ್ನು ಸೃಷ್ಟಿಸಿದ್ದನ್ನು, ಶೂದ್ರರೊಳಗೆ ಸ್ಪೃಶ್ಯ, ಅಸ್ಪೃಶ್ಯರೆಂಬ ವಿಭಾಗಗಳನ್ನು ಮಾಡಿ ದುದನ್ನು, ವರ್ಣ ಸಂಕರವಾಗದಂತೆ ನೋಡಿಕೊಳ್ಳುವ ನಿಯಮವನ್ನು, ಅತಿಕ್ರಮಿಸಿದವರನ್ನು ದಂಡಧರರು ಶಿಕ್ಷಿಸಬೇಕೆಂಬುದನ್ನು- ಹೀಗೆ ವೃಷಭ ದೇವನ ಎಲ್ಲ ನಿಯಮಗಳನ್ನೂ ಒಪ್ಪಿದ್ದಾನೆಂದಾಗುತ್ತದೆ.

ಅಂದರೆ, ‘ಹುಟ್ಟಿನಿಂದ ಬರುವ’ ವರ್ಣವನ್ನೇ, ‘ಸ್ಪೃಶ್ಯಾಸ್ಪೃಶ್ಯತೆ’ಯನ್ನೇ ಪಂಪನೂ ಎತ್ತಿಹಿಡಿ ದಂತಾಯಿತು. ಹಾಗಿದ್ದರೆ ಪಂಪ ಯಾವ ಮನುಷ್ಯಜಾತಿಯನ್ನು ‘ತಾನೊಂದೆವಲಂ’ ಎಂದು ಹೇಳಿದುದು?! ಹಾಗೆ ನೋಡಿದರೆ ಹೀಗೆ ವರ್ಣವಿಭಾಗ ಮತ್ತು ಅಸ್ಪೃಶ್ಯತೆಯ ಕುರಿತಾದ ಮಾತುಗಳು ಕಾವ್ಯದೊಳಗಿನ ಪಾತ್ರಗಳ ಬಾಯಲ್ಲಿ ಬರುವ ಮಾತುಗಳೂ ಅಲ್ಲ!

ಕಾವ್ಯವನ್ನು ನಿರೂಪಿಸುವ ಪಂಪನ ಬಾಯಲ್ಲೇ ಬಂದ ಮಾತುಗಳು. “ಇಲ್ಲ, ಪಂಪ ಪೂರ್ತಿ ಜೈನನಾಗಿರಲಿಲ್ಲ, ವೈದಿಕತೆ ಅವನಲ್ಲಿ ಉಳಿದಿತ್ತು; ಆದ್ದರಿಂದ ವರ್ಣಗಳು ಮತ್ತು ಸ್ಪೃಶ್ಯ-ಅಸ್ಪೃಶ್ಯ ಎಂಬ ವಿಭಾಗಗಳ ಬಗ್ಗೆ ಹೇಳುತ್ತಾನೆ" ಎಂದು ವಾದಿಸಲು ಅವಕಾಶವಿಲ್ಲ. ಯಾಕೆಂದರೆ, ಇಲ್ಲಿ ಪಂಪ ಹೇಳುವುದು ‘ವೈದಿಕ’ ತಾತ್ತ್ವಿಕತೆಯನ್ನಲ್ಲ. ಅವನಿಗಿಂತ ಪೂರ್ವದಲ್ಲಿ ಜಿನಸೇನರೂ ಹೇಳಿದ್ದ ಜೈನ ತಾತ್ತ್ವಿಕತೆಯನ್ನು.

ವರ್ಣ ಮತ್ತು ಅಸ್ಪೃಶ್ಯತೆ ಬಗ್ಗೆ ಆದಿಪುರಾಣದಲ್ಲಿ ಹೇಳಲಾದ ಮಾತುಗಳು ಪೂರ್ವಪುರಾಣದಲ್ಲಿ ಜಿನಸೇನರು ಹೇಳಿದ್ದೇ ಹೌದು. ಆದರೆ, ಅದೇರೀತಿ “ಮನುಷ್ಯಜಾತಿ ತಾನೊಂದೆವಲಂ" ಎಂಬುದು ಕೂಡ ಜಿನಸೇನರ ಸಾಲಿನ ಅನುವಾದವೇ ಆಗಿದೆಯಲ್ಲ? ಅದು ಒಂದುವೇಳೆ ಕನ್ನಡ ವಿದ್ವಾಂಸರು ಭಾವಿಸುವಂತೆ ಸಮಾನತೆಯ ತತ್ತ್ವವೇ ಆಗಿದ್ದರೆ, ಅದರ ಕೀರ್ತಿ ಕೂಡ ಜಿನಸೇನರಿಗೇ ಹೋಗ ಬೇಕಲ್ಲ?! ಅಲ್ಲಿ ಆ ಕೀರ್ತಿಯನ್ನು ನಮ್ಮ ಪ್ರಗತಿಪರರು ಪಂಪನಿಗೇ ಕೊಟ್ಟಿದ್ದಾರೆ, ಜಿನಸೇನರಿಗಲ್ಲ!

ಪಂಪನು ಸಮಾನತೆಯ ಹರಿಕಾರ ಎಂಬ, ಕನ್ನಡ ವಿದ್ವಾಂಸರ ತರ್ಕವನ್ನು ಸಂಪೂರ್ಣವಾಗಿ ಹೊಡೆದುಹಾಕುವ ಬಹುಮುಖ್ಯವಾದ ಅಂಶವನ್ನು ಇದೀಗ ನೋಡಿ. ವೃಷಭದೇವನು ವರ್ಣ ವ್ಯವಸ್ಥೆ ಮಾಡಿದ ಬಗ್ಗೆ ಹೇಳುವ ಸಂದರ್ಭದ ಒಂದು ಪದ್ಯದಲ್ಲಿ ಪಂಪನು “ವರ್ಣಗಳು ಮುಖ, ತೋಳು, ತೊಡೆ ಮತ್ತು ಪಾದದಲ್ಲಿ ಹುಟ್ಟಿದವು" ಎನ್ನುವ ವೈದಿಕ ಮಂತ್ರವನ್ನು ಲೇವಡಿ ಮಾಡುತ್ತಾನೆ.

ಇಂಥ ಹುಸಿಯನ್ನು ಹೇಳುವವರು ಅಥವಾ ನಂಬುವವರು ಕುಮತಿಗಳು ಎನ್ನುತ್ತಾನೆ. ಅಂದರೆ, ವರ್ಣಗಳು ಹೇಗೆ ಹುಟ್ಟಿದವು ಎನ್ನುವ ಬಗ್ಗೆ ವೈದಿಕರು ಹೇಳುವುದನ್ನು ಲೇವಡಿ ಮಾಡುತ್ತಾನೆ. ಈ ಬಗ್ಗೆ ಆದಿಪುರಾಣವನ್ನು ಸಂಪಾದಿಸಿದ ಎಲ್. ಬಸವರಾಜು ಅವರ ಟಿಪ್ಪಣಿ ಗಮನಾರ್ಹವಾಗಿದೆ. ಈ ಪದ್ಯ “ಧೋರಣೆಯಿಂದ ಪಂಪನದೇ ಆಗಿದೆ“ ಎಂದು ಅವರು ಹೇಳುತ್ತಾರೆ. “ಅಲ್ಲಿ ವೈದಿಕರನ್ನು ಅವನು ‘ಕುಮತಿಗಳ್’ ಎಂದೇ ಜರಿಯುತ್ತಿರುವನು. (ಜಿನಸೇನರ) ಪೂರ್ವಪುರಾಣದಲ್ಲಿ ಈ ಮಾತುಗಳಿಲ್ಲ...". ಇದನ್ನು ಗಮನಿಸಿದ ನಂತರ ನೀವು ವರ್ಣವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಹೊಣೆಯನ್ನು ಜಿನಸೇನರ ಮೇಲೆ ಹೊರಿಸಲೂ ಸಾಧ್ಯವಿಲ್ಲ!

ಪಂಪನ ಮೇಲೆಯೇ ಹೊರಿಸಬೇಕಾಗುತ್ತದೆ. ಪಂಪ ಹೀಗೆ ವೈದಿಕರನ್ನು ಲೇವಡಿ ಮಾಡಿದ್ದು ಯಾಕೆ? ಯಾಕೆಂದರೆ, ವೈದಿಕರು ಹೇಳಿದ ರೀತಿಯಲ್ಲಿ ವರ್ಣಗಳು ನಿರ್ಮಾಣವಾದುದಲ್ಲ; ಬದಲಾಗಿ ವರ್ಣಗಳು ವೃಷಭದೇವನಿಂದ ನಿರ್ಮಾಣವಾದುದು ಎಂಬುದನ್ನು ಮತ್ತಷ್ಟು ದೃಢಪಡಿಸಲು ವೈದಿಕರನ್ನು ಲೇವಡಿ ಮಾಡುತ್ತಿದ್ದಾನೆ. ಅಂದರೆ, ವರ್ಣಗಳನ್ನು ವ್ಯವಸ್ಥೆಗೊಳಿಸಿದ ಜೈನ ತಾತ್ತ್ವಿಕತೆ ಯನ್ನು ಅವನು ದೃಢವಾಗಿ ಸಮರ್ಥಿಸುತ್ತಿದ್ದಾನೆ.

ಹೀಗಾಗಿ, ಜೈನತತ್ತ್ವವಾಗಿ ವರ್ಣಗಳ ವಿಭಾಗ, ಶೂದ್ರರಲ್ಲಿ ಸ್ಪೃಶ್ಯ-ಅಸ್ಪೃಶ್ಯವೆಂಬ ಒಳ ವಿಭಾಗ ಹಾಗೂ ವರ್ಣಸಂಕರವಾಗಬಾರದು ಎಂಬ ನಿಯಮ ಇವೆಲ್ಲವನ್ನೂ ಪಂಪನು ಸಂಪೂರ್ಣವಾಗಿ ಒಪ್ಪಿದ್ದಾನೆಂದಾಯಿತು. ಈ ಲೇಖನದಲ್ಲಿ ಈವರೆಗೆ ಹೇಳಿದುದನ್ನು ಹೀಗೆ ಸಂಗ್ರಹಿಸಬಹುದು: ಮೊದಲನೆಯದಾಗಿ, “ಮನುಷ್ಯಜಾತಿ ತಾನೊಂದೆವಲಂ" ಎಂಬ ಸಾಲು ಮನುಷ್ಯರ ಸಮಾನತೆಯ ಬಗ್ಗೆ ಹೇಳುವ ಸಾಲು ಅಲ್ಲ.

ಎರಡನೆಯದಾಗಿ, ಪಂಪಭಾರತದಲ್ಲಿ ಕರ್ಣನ ಪಾತ್ರವನ್ನು ಎತ್ತಿಹಿಡಿದಿದ್ದಾನಾದರೂ, “ಕುಲದ ಮಾತನ್ನು ಯಾಕೆ ಉಗ್ಗಡಿಸುತ್ತೀರಿ? ಛಲವೇ ಕುಲ, ಅಭಿಮಾನವೇ ಕುಲ" ಎಂದು ಮುಂತಾಗಿ ಬರುವ ಮಾತುಗಳು ಪಂಪನು ಪಾತ್ರಗಳ ಬಾಯಲ್ಲಿ ಹೇಳಿಸುವ ಮಾತುಗಳೇ ಹೊರತು ಅವು ನೇರವಾಗಿ ಕವಿ ಹೇಳುವ ಮಾತುಗಳಲ್ಲ. ಅಲ್ಲಿ ಕರ್ಣನ ಮಾತಿಗೆ ವಿರುದ್ಧವಾದ ರೀತಿಯ ಮಾತುಗಳನ್ನು ದ್ರೋಣ, ಅಶ್ವತ್ಥಾಮ ಮುಂತಾದ ಪಾತ್ರಗಳು ಹೇಳುತ್ತವೆ ಎನ್ನುವುದನ್ನೂ ಗಮನಿಸಬೇಕು.

ಮೂರನೆಯದಾಗಿ, ಪಂಪನು ನಿಷ್ಠಾವಂತ ಜೈನನಾಗಿದ್ದ ಎಂಬುದನ್ನು ಪರಿಗಣಿಸಿದರೆ ಜೈನಪುರಾಣ ಹೇಳುವ ವರ್ಣ ವ್ಯವಸ್ಥೆಯನ್ನು ಒಪ್ಪಿದ್ದ ಎನ್ನಬೇಕಾಗುತ್ತದೆ. ನಾಲ್ಕನೆಯದಾಗಿ, ಪಂಪನು ತನ್ನ ಪಾತ್ರಗಳ ಮೂಲಕ ಅಲ್ಲ, ಜಿನಸೇನರ ಮಾತುಗಳ ಅನುವಾದದ ಮೂಲಕ ಅಲ್ಲ, ಬದಲಾಗಿ ತಾನು ಹೊಸದಾಗಿ ಸೇರಿಸಿದ ತನ್ನ ಮಾತುಗಳಲ್ಲೇ, ‘ವೈದಿಕರು ಮಾಡಿದ ವರ್ಣವ್ಯವಸ್ಥೆ’ಯನ್ನು ಲೇವಡಿ ಮಾಡುವ ಮೂಲಕ, ವೃಷಭದೇವನು ಮಾಡಿದ ವರ್ಣವ್ಯವಸ್ಥೆಯನ್ನು ಮತ್ತಷ್ಟು ಸ್ಪಷ್ಟವಾಗಿ ಸಮರ್ಥಿಸಿದ್ದಾನೆ.

ವೃಷಭದೇವನ ವರ್ಣವ್ಯವಸ್ಥೆಯನ್ನು ಸಮರ್ಥಿಸಿದ್ದಾನೆ ಎಂದರೆ ಅದಕ್ಕೆ ಸಂಬಂಧಿಸಿದ ನಿಯಮ ಗಳನ್ನು, ಸ್ಪೃಶ್ಯ-ಅಸ್ಪೃಶ್ಯ ಎಂಬ ವಿಭಾಗವನ್ನು ಹಾಗೂ ವರ್ಣಸಂಕರವಾಗದಂತೆ ನೋಡಿಕೊಳ್ಳ ಬೇಕು ಎನ್ನುವುದನ್ನು ಸಮರ್ಥಿಸಿದ್ದಾನೆ ಎಂದು ಸ್ಪಷ್ಟವಾಗುತ್ತದೆ. ಹೀಗಿರುವಾಗ “ಪಂಪನು ಮನುಷ್ಯಸಮಾನತೆಯನ್ನು ಸಾರಿದವನು" ಎಂದು ಹೇಳಲು ಹೇಗೆ ಸಾಧ್ಯ? ಈ ಮೇಲೆ ವಿವರಿಸಲಾದ ವಾಸ್ತವ ಸಂಗತಿಗಳನ್ನು ಈಚಿನ ಸುಮಾರು ಎಂಬತ್ತು ತೊಂಬತ್ತು ವರ್ಷಗಳ ಅವಧಿಯ ‘ಪಂಪ ವಿದ್ವಾಂಸರು’ ಕಡೆಗಣಿಸಿದ್ದಾರೆ ಅಥವಾ ಮರೆಮಾಚಿದ್ದಾರೆ.

ಹಾಗೆ ಮರೆಮಾಚಿ, ಪಂಪನು ಹುಟ್ಟನ್ನು ಆಧರಿಸಿದ ಕುಲವನ್ನು ಧಿಕ್ಕರಿಸಿದ್ದಾನೆ ಎಂದು ಹೇಳುತ್ತ ಬಂದಿದ್ದಾರೆ. ಯಾಕೆಂದರೆ, “ತನ್ನ ಪೂರ್ವಜರಂತೆಯೇ ಪಂಪನೂ ಬ್ರಾಹ್ಮಣ ಜಾತಿಯನ್ನು ತ್ಯಜಿಸಿ ‘ಪ್ರಗತಿಪರ’ನಾಗಿದ್ದನು" ಎಂದು ಈ ವಿದ್ವಾಂಸರು ನಿರಂತರವಾಗಿ ಮಂಡಿಸುತ್ತಿರುವ ಪ್ರಗತಿಪರ ಕಥನಕ್ಕೆ ಈ ವಾಸ್ತವ ಸಂಗತಿಗಳು ಹೊಂದುವುದಿಲ್ಲ.

(ಲೇಖಕರು ಹಿರಿಯ ಸಾಹಿತಿ)