ವೈರಲ್ ಆಡಿಯೋ ಕೇಸ್; ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ನಿರ್ಬಂಧಿಸಿದ ನ್ಯಾಯಾಲಯ
ದಾವಣಗೆರೆ ಉಪ ಚುನಾವಣೆ ವಿಚಾರದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನ ಹಾನಿಕರ ಸುದ್ದಿಗಳ ಪ್ರಸಾರಕ್ಕೆ ಬೆಂಗಳೂರಿನ ನ್ಯಾಯಾಲಯವು ಮಂಗಳವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ದಾವಣಗೆರೆ ಉಪ ಚುನಾವಣೆ (Davanagere Byelection) ವಿಚಾರದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನ ಹಾನಿಕರ ಸುದ್ದಿಗಳ ಪ್ರಸಾರಕ್ಕೆ ಬೆಂಗಳೂರಿನ ನ್ಯಾಯಾಲಯವು ಮಂಗಳವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ. ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನ ಹಾನಿಕರ ಸುದ್ದಿ, ಲೇಖನ, ಆಡಿಯೋ ವಿಡಿಯೋ, ಚಿತ್ರ ಗಳನ್ನು ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲ ತಾಣ, ಡಿಜಿಟಲ್, ಆನ್ ಲೈನ್, ವೆಬ್ ಪೋರ್ಟಲ್, ವಾಟ್ಸ್ ಆಪ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ, ಅಪ್ ಲೋಡ್, ಪೋಸ್ಟ್, ಮರು ಪೋಸ್ಟ್ ಮಾಡದಂತೆ 57ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (ಸಿಸಿಎಚ್-58) ಮೇಯೋ ಹಾಲ್) ಮಧ್ಯಂತರ ನಿರ್ಬಂಧಕಾದೇಶ ನೀಡಿದೆ.
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಸಿ ಭಾನುಮತಿ ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ. ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಲಾಗಿದೆ.
ದಾವೆ ಆಲಿಸಿದ ನ್ಯಾಯಾಧೀಶರು, ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ದಾವೆದಾರರಾದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಯಾವುದೇ ರೀತಿಯ , ಲೇಖನ, ಆಡಿಯೋ ವಿಡಿಯೋ, ಚಿತ್ರ ಗಳನ್ನು ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣ, ಡಿಜಿಟಲ್, ಆನ್ ಲೈನ್, ವೆಬ್ ಪೋರ್ಟಲ್, ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ, ಅಪ್ ಲೋಡ್, ಪೋಸ್ಟ್, ಮರು ಪೋಸ್ಟ್ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ. ಜಮೀರ್ ಅಹ್ಮದ್ ಪರ ವಕೀಲ ಶೇಕ್ ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿದ್ದಾರೆ.
ಏನಿದು ಘಟನೆ?
ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್ನಲ್ಲಿ ಆಡಿಯೋ ಒಂದು ರಿಲೀಸ್ ಆಗಿತ್ತು. ಆಡಿಯೋ ಕ್ಲಿಪ್ನಲ್ಲಿ, ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಬಗ್ಗೆ ಇಬ್ಬರೂ ಉರ್ದು ಭಾಷೆಯಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಏಪ್ರಿಲ್ 9 ರಂದು ಮತದಾನದ ದಿನದಂದು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿತ್ತು.