100 ದಿನ ಪೂರೈಸಿದ ʻಬಿಗ್ ಬಾಸ್ʼ ಕನ್ನಡ ಸೀಸನ್ 12; ಇನ್ನೆಷ್ಟು ಸ್ಪರ್ಧಿಗಳಿದ್ದಾರೆ? ನಾಮಿನೇಟ್ ಆಗಿರುವವರು ಯಾರು?
Bigg Boss Kannada 12: ಬಿಗ್ ಬಾಸ್ ಕನ್ನಡ 12 ಸದ್ಯ 100 ದಿನಗಳನ್ನು ಪೂರೈಸಿದ್ದು, ಮನೆಯಲ್ಲಿ ಕೇವಲ 8 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಕಳೆದ ವಾರ ಸ್ಪಂದನಾ ಅವರು 99 ದಿನಗಳ ಕಾಲ ಮನೆಯಲ್ಲಿದ್ದು ಹೊರಬಂದಿದ್ದಾರೆ. ಈ ವಾರ ಕ್ಯಾಪ್ಟನ್ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಏಳೂ ಮಂದಿ ನಾಮಿನೇಟ್ ಆಗಿದ್ದು, ಫಿನಾಲೆ ಹಂತ ತಲುಪಲು ಎಲ್ಲರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
-
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಆರಂಭವಾಗಿ 100 ದಿನಗಳು ಪೂರೈಸಿವೆ. ಸೆ.28ರಂದು ಆರಂಭವಾದ ಈ ಶೋ ಇದೀಗ 100 ದಿನಗಳನ್ನು ಪೂರೈಸಿದ್ದು, ಫಿನಾಲೆಗೆ ಇನ್ನೇನು ಕೆಲ ದಿನಗಳು ಬಾಕಿ ಇವೆ. ಹೌದು, ಈ ಬಾರಿ ಬಿಗ್ ಬಾಸ್ 100 ದಿನಗಳು ಮಾತ್ರವಲ್ಲ, 112 ದಿನಗಳ ಕಾಲ ಪ್ರಸಾರವಾಗುತ್ತಿರುವುದು ವಿಶೇಷ.
ಸದ್ಯ ಯಾರೆಲ್ಲಾ ಮನೆಯೊಳಗೆ ಇದ್ದಾರೆ?
ಬಿಗ್ ಬಾಸ್ ಕನ್ನಡ 12 ಶೋ 100 ದಿನ ಪೂರೈಸಿದ್ದು, ಸದ್ಯ 8 ಮಂದಿ ಸ್ಪರ್ಧಿಗಳು ಮನೆಯೊಳಗೆ ಇದ್ದಾರೆ. 19 ಸ್ಪರ್ಧಿಗಳು, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು, ಇಬ್ಬರು ಅತಿಥಿಗಳು ಸೇರಿದಂತೆ ಒಟ್ಟು 24 ಮಂದಿ ಈ ಸೀಸನ್ನಲ್ಲಿ ಮನೆಯೊಳಗೆ ಬಂದಿದ್ದಾರೆ. ಅದರಲ್ಲೀಗ 8 ಮಂದಿ ಮಾತ್ರ ಉಳಿದುಕೊಂಡಿದ್ದು, ಬಿಗ್ ಬಾಸ್ ಮನೆಯ ಆಟದ ವೈಖರಿ ಮತ್ತಷ್ಟು ರೋಚಕವಾಗಿದೆ. ಧನುಷ್, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ, ರಕ್ಷಿತಾ, ರಾಶಿಕಾ ಶೆಟ್ಟಿ, ರಘು ಮತ್ತು ಧ್ರುವಂತ್ ಅವರು ಸದ್ಯ ಮನೆಯೊಳಗೆ ಇದ್ದು, ಇವರಲ್ಲಿ ಮುಂದಿನ ವಾರ ಯಾರು ಫಿಲಾನೆ ತಲುಪುತ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ನಾಮಿನೇಟ್ ಆಗಿರುವವರು ಯಾರು?
ಇನ್ನು, ಈ ವಾರ ಅಚ್ಚರಿಯ ನಾಮಿನೇಷನ್ ನಡೆದಿದೆ. ಕ್ಯಾಪ್ಟನ್ ಧನುಷ್ ಅವರನ್ನು ಹೊರುತಪಡಿಸಿ, ಗಿಲ್ಲಿ ನಟ, ಅಶ್ವಿನಿ, ಕಾವ್ಯ, ರಕ್ಷಿತಾ, ರಾಶಿಕಾ, ರಘು ಮತ್ತು ಧ್ರುವಂತ್ ಸೇರಿ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಹಾಗಾಗಿ, ಈ ವಾರ ಯಾರೇ ಎಲಿಮಿನೇಟ್ ಆದರೂ, ಬಿಗ್ ಬಾಸ್ ಆಟದಕ್ಕೆ ದೊಡ್ಡ ತಿರುವು ಸಿಗಲಿದೆ.
99ನೇ ದಿನಕ್ಕೆ ಸ್ಪಂದನಾ ಎಲಿಮಿನೇಟ್
ಇನ್ನು, ಬಿಗ್ ಬಾಸ್ ಮನೆಯಲ್ಲಿ 99 ದಿನಗಳ ಕಾಲ ಇದ್ದ ಸ್ಪಂದನಾ ಅವರು ಕಳೆದ ವಾರ ಎಲಿಮಿನೇಟ್ ಆಗಿದ್ದಾರೆ. ಹಲವು ದಿನಗಳಿಂದ ಅವರು ಎಲಿಮಿನೇಟ್ ಆಗುತ್ತಿಲ್ಲ, ಲಕ್ ಮೇಲೆ ಉಳಿದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
Bigg Boss Kannada 12: ಬಿಗ್ ಬಾಸ್ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್
ಆ ಬಗ್ಗೆ ಮಾತನಾಡಿರುವ ಸ್ಪಂದನಾ, "ಬಿಗ್ ಬಾಸ್ ಮನೆಗೆ ಹೋಗಬೇಕಾದರೆ ನೆಗೆಟಿವ್, ಪಾಸಿಟಿವ್ ಅಭಿಪ್ರಾಯ ಬರಬಹುದು ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡೇ ಹೋಗಿದ್ದೆ. ನಾನು ಸೋಶಿಯಲ್ ಮೀಡಿಯಾ ಕಾಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಮನೆಯಲ್ಲಿದ್ದ 13 ಜನರಲ್ಲೇ ಭಿನ್ನಾಭಿಪ್ರಾಯಗಳು ಇರೋದಾದ್ರೆ ಹೊರಗಡೆ ಅಷ್ಟು ಜನಕ್ಕೆ ಬೇರೆ ಬೇರೆ ಅಭಿಪ್ರಾಯ ಇರುವುದರಲ್ಲಿ ತಪ್ಪಿಲ್ಲ. ಅದೃಷ್ಟದಿಂದ ನಾನು ಉಳಿದುಕೊಂಡಿದ್ದೆ ಅನ್ನೋದು ತಪ್ಪು. ನನಗೆ ಲಕ್ ಇದ್ದಿದ್ದರೆ ನಾಮಿನೇಟ್ ಆಗುತ್ತಿರಲಿಲ್ಲ" ಅಂತ ಮಾಧ್ಯಮಗಳ ಜೊತೆ ಸ್ಪಂದನಾ ಹೇಳಿದ್ದಾರೆ.