Mukesh Ambani: ಜಿಯೋ ಆರಂಭ ಅತಿದೊಡ್ಡ ಅಪಾಯದ ನಿರ್ಧಾರವಾಗಿತ್ತು ಎಂದ ಮುಕೇಶ್ ಅಂಬಾನಿ; ಕಾರಣವೇನು?
Mukesh Ambani: ರಿಲಯನ್ಸ್ ಜಿಯೋದೊಂದಿಗೆ 2016ರಲ್ಲಿ ಟೆಲಿಕಾಂ ಉದ್ಯಮಕ್ಕೆ ವಾಪಸ್ ಆಗಿದ್ದು ನನ್ನ ಜೀವನದ ಅತಿ ದೊಡ್ಡ ರಿಸ್ಕ್ ಆಗಿತ್ತು ಎಂದು ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ. ಮೆಕ್ ಕಿನ್ಸೆ ಆ್ಯಂಡ್ ಕೋ ಜತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ತಿಳಿಸಿದ್ದಾರೆ.


ನವದೆಹಲಿ: ರಿಲಯನ್ಸ್ ಜಿಯೋದೊಂದಿಗೆ 2016ರಲ್ಲಿ ಟೆಲಿಕಾಂ ಉದ್ಯಮಕ್ಕೆ ವಾಪಸ್ ಆಗಿದ್ದು ನನ್ನ ಜೀವನದ ಅತಿ ದೊಡ್ಡ ರಿಸ್ಕ್ ಆಗಿತ್ತು ಎಂದು ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಬಣ್ಣಿಸಿದ್ದಾರೆ. ಮೆಕ್ ಕಿನ್ಸೆ ಆ್ಯಂಡ್ ಕೋ ಜತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ತಿಳಿಸಿದ್ದಾರೆ. ಒಂದು ವೇಳೆ ವಿಶ್ಲೇಷಕರು ನುಡಿದಿದ್ದ ಭವಿಷ್ಯವು ನಿಜವಾಗಿದ್ದರೂ ಪರವಾಗಿಲ್ಲ, ಭಾರತವು ಡಿಜಿಟಲ್ ಪರಿವರ್ತನೆ ಆಗುವುದರಲ್ಲಿನ ಜಿಯೋದ ಪಾತ್ರದ ಕಾರಣಕ್ಕೆ ಅದು ಬೆಲೆ ಬಾಳುವಂಥದ್ದೇ ಎಂದು ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ 4ಜಿ ಮೊಬೈಲ್ ನೆಟ್ವರ್ಕ್ಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ತನ್ನದೇ ನೂರಾರು ಕೋಟಿ ಡಾಲರ್ಗಳನ್ನು ಹೂಡಿಕೆ ಮಾಡುತ್ತಿತ್ತು - ಭಾರತವು ಅತ್ಯಂತ ಮುಂದುವರಿದ ಡಿಜಿಟಲ್ ತಂತ್ರಜ್ಞಾನಕ್ಕೆ ಸಿದ್ಧವಾಗಿಲ್ಲದ ಕಾರಣ ಕೆಲವು ವಿಶ್ಲೇಷಕರು ಇದು ಆರ್ಥಿಕವಾಗಿ ಉಪಯೋಗ ಆಗದಿರಬಹುದು ಎಂದು ಭಾವಿಸಿದ್ದರು. ಆದರೆ ನಮ್ಮ ಆಡಳಿತ ಮಂಡಳಿಗೆ ಹೇಳಿದ್ದೆ, ‘ತುಂಬ ಕೆಟ್ಟ ಪರಿಸ್ಥಿತಿ ಅಂದರೆ ಏನಾಗಬಹುದು, ನಾವು ಹೆಚ್ಚಿನ ಲಾಭವನ್ನು ಗಳಿಸುವುದಿಲ್ಲ. ಹಾಗಾದರೆ ಏನೂ ತೊಂದರೆ ಇಲ್ಲ. ಏಕೆಂದರೆ ಅದು ನಮ್ಮ ಸ್ವಂತ ಹಣ. ಆದರೆ ನಂತರದಲ್ಲಿ ರಿಲಯನ್ಸ್ ಆಗಿ, ಇದು ನಾವು ಭಾರತದಲ್ಲಿ ಮಾಡಿದ ಅತ್ಯುತ್ತಮ ಉಪಕಾರವಾಗಿರುತ್ತದೆ. ಏಕೆಂದರೆ ನಾವು ಭಾರತವನ್ನು ಡಿಜಿಟಲೈಸ್ ಮಾಡಲಿದ್ದೇವೆ. ಮತ್ತು ಆ ಮೂಲಕ ಭಾರತವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದ್ದಾಗಿ ಅಂಬಾನಿ ತಿಳಿಸಿದರು.
2016ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋ ಉಚಿತ ವಾಯ್ಸ್ ಕರೆಗಳು ಮತ್ತು ಅತ್ಯಂತ ಕಡಿಮೆ ಬೆಲೆಯ ಡೇಟಾವನ್ನು ಒದಗಿಸುವ ಮೂಲಕ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿ ಉಂಟು ಮಾಡಿದೆ. ಪ್ರತಿಸ್ಪರ್ಧಿಗಳು ಸಹ ಬೆಲೆಗಳನ್ನು ಕಡಿತಗೊಳಿಸಲು ಮತ್ತು ದೇಶಾದ್ಯಂತ ಶೀಘ್ರವಾದ ಡಿಜಿಟಲ್ ಅಳವಡಿಕೆಗೆ ಜಿಯೋ ಕಾರಣವಾಯಿತು ಎಂದಿದ್ದಾರೆ.
ಜಿಯೋ ಮಾರುಕಟ್ಟೆಗೆ ಬರುವ ಮುಂಚೆ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ದುಬಾರಿಯಾಗಿತ್ತು ಮತ್ತು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಿರಲಿಲ್ಲ. ಜಿಯೋದ ಪ್ರವೇಶವು ದರ ಸಮರಕ್ಕೆ ಕಾರಣವಾಯಿತು, ಇದು ಡೇಟಾದ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿತು. ಗ್ರಾಮೀಣ ಮತ್ತು ಅಲ್ಲಿಯ ತನಕ ಸಂಪರ್ಕ ದೊರೆಯದ ಪ್ರದೇಶಗಳನ್ನು ಒಳಗೊಂಡಂತೆ ಲಕ್ಷಾಂತರ ಭಾರತೀಯರಿಗೆ ಇಂಟರ್ನೆಟ್ ಸಂಪರ್ಕವನ್ನು ಕೈಗೆಟುಕುವಂತೆ ಮಾಡಿತು.
ಇದರಿಂದಾಗಿಯೇ ಹೆಚ್ಚೆಚ್ಚು ಇಂಟರ್ನೆಟ್ ತಲುಪುವುದಕ್ಕೆ ಸಾಧ್ಯವಾಯಿತು. ಭಾರತವು ಈಗ 80 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಇದು ಜಾಗತಿಕವಾಗಿ ಅತಿದೊಡ್ಡ ಆನ್ಲೈನ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕೈಗೆಟುಕುವ ಡೇಟಾವು ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿರುವುದರಿಂದ, ಕಡಿಮೆ ಆದಾಯದ ಮನೆಗಳಿಂದ ಮೊದಲ ಬಾರಿಗೆ ಇಂಟರ್ನೆಟ್ ಬಳಕೆದಾರರನ್ನು ಆನ್ಲೈನ್ಗೆ ತರುವ ಮತ್ತು ಇ-ಕಾಮರ್ಸ್, ಫಿನ್ಟೆಕ್, ಎಡ್ಟೆಕ್ ಮತ್ತು ಮನರಂಜನೆಯಂತಹ ಡಿಜಿಟಲ್ ಸೇವೆಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದರಿಂದ ಇದು ಡಿಜಿಟಲ್ ಸೇರ್ಪಡೆಯನ್ನು ವೇಗಗೊಳಿಸಿದೆ ಎಂದರು.
ʼನಮಗೆ ವ್ಯಾಪಕತೆ ಮುಖ್ಯವಾದ ಕಾರಣ ನಾವು ಯಾವಾಗಲೂ ದೊಡ್ಡ ಅಪಾಯಗಳನ್ನು ತೆಗೆದುಕೊಂಡಿದ್ದೇವೆ. ಇಲ್ಲಿಯವರೆಗೆ ನಾವು ತೆಗೆದುಕೊಂಡ ದೊಡ್ಡ ಅಪಾಯವೆಂದರೆ ಜಿಯೋ. ಆ ಸಮಯದಲ್ಲಿ, ನಾವು ಹೂಡಿಕೆ ಮಾಡುತ್ತಿದ್ದದ್ದು ನಮ್ಮ ಸ್ವಂತ ಹಣ ಮತ್ತು ನಾನು ಬಹುಪಾಲು ಷೇರುದಾರನಾಗಿದ್ದೆ. ನಮಗೆ ತೀರಾ ಕೆಟ್ಟದ್ದು ಅಂತೇನಾದರೂ ಆಗಿದ್ದಲ್ಲಿ ಹಣಕಾಸು ದೃಷ್ಟಿಯಿಂದ ಲಾಭದಾಯಕ ಆಗದೇ ಹೋಗಬಹುದಿತ್ತು. ಯಾಕೆಂದರೆ ಕೆಲವು ವಿಶ್ಲೇಷಕರ ಪ್ರಕಾರವಾಗಿ ಭಾರತವು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಕ್ಕೆ ಸಿದ್ಧವಾಗಿಲ್ಲ ಎಂದು ಭಾವಿಸಿದ್ದರುʼ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಹೇಳಿದರು.
ಜಿಯೋ ಇಂದು ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, 47 ಕೋಟಿಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು 5ಜಿ, ಕ್ಲೌಡ್ ಮತ್ತು ಎಐ ಸೇವೆಗಳಲ್ಲಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ. ʼದಿನದ ಕೊನೆಗೆ, ನೀವು ಈ ಜಗತ್ತಿಗೆ ಏನೂ ತೆಗೆದುಕೊಂಡು ಬರುವುದಿಲ್ಲ ಹಾಗೂ ನಿಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನೀವು ಬಿಟ್ಟು ಹೋಗುವುದು ಒಂದು ಸಂಸ್ಥೆ ಮಾತ್ರ. ಇದನ್ನು ನಾವು ನಂಬುತ್ತೇವೆʼ ಎಂದು ಅವರು ಹೇಳಿದರು.
ತಮ್ಮ ತಂದೆ ಧೀರೂಭಾಯಿ ಅಂಬಾನಿ ಅವರ ಮಾತುಗಳನ್ನು ನೆನಪಿಸಿಕೊಂಡ ಮುಕೇಶ್ ಅಂಬಾನಿ ʼನನ್ನ ತಂದೆ ನನಗೆ ಹೇಳುತ್ತಿದ್ದರು, ರಿಲಯನ್ಸ್ ಒಂದು ಪ್ರಕ್ರಿಯೆ. ಇದು ಶಾಶ್ವತವಾದ ಸಂಸ್ಥೆ. ರಿಲಯನ್ಸ್ ನಿಮ್ಮನ್ನು ಮತ್ತು ನನ್ನನ್ನು ಮೀರಿ ಇರುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕುʼ ಎನ್ನುತ್ತಿದ್ದರು. ಅದು ಅವರಿಗೆ ನನ್ನ ಬದ್ಧತೆ - ರಿಲಯನ್ಸ್ ನಮ್ಮನ್ನು ಮೀರಿ ಉಳಿಯುತ್ತದೆ. 2027ರಲ್ಲಿ ರಿಲಯನ್ಸ್ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತದೆ. ಆದರೆ 100 ವರ್ಷಗಳನ್ನು ಪೂರೈಸಿದ ನಂತರವೂ ರಿಲಯನ್ಸ್ ಭಾರತ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ. ಮತ್ತು ಅದು ಆಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು. ಭವಿಷ್ಯದ ವ್ಯವಹಾರಗಳಲ್ಲಿ ನಂಬಿಕೆ ಇಡುವ ಮನಸ್ಥಿತಿ ಇರಬೇಕು ಎಂದು ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | EPFO: ಇಪಿಎಫ್ಒ ಖಾತೆಯಿಂದ 5 ಲಕ್ಷ ರೂ. ವರೆಗೆ ಮುಂಗಡ ಹಣ ಪಡೆಯಲು ಅವಕಾಶ