Kannada Sahitya Parishat: ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇ.ಭ. ರಾಮಲಿಂಗ ಶೆಟ್ಟಿ ರಾಜೀನಾಮೆ
Kannada Sahitya Parishat: ಲೇಖಕ, ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರೂ ಕೂಡ ಆಗಿರುವ ನೇ. ಭ ರಾಮಲಿಂಗ ಶೆಟ್ಟಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನೇ.ಭ. ರಾಮಲಿಂಗ ಶೆಟ್ಟಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇ.ಭ. ರಾಮಲಿಂಗ ಶೆಟ್ಟಿ ಅವರು ರಾಜೀನಾಮೆ ನೀಡಿದ್ದರು. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಸರ್ವಾಧಿಕಾರ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದೇನೆʼ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ಇನ್ನೊಬ್ಬರು ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಅವರು ಕೂಡ ರಾಜೀನಾಮೆ ನೀಡಿದ್ದರು.
ರಾಮಲಿಂಗ ಶೆಟ್ಟಿ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ತಮ್ಮ ರಾಜೀನಾಮೆ ಪತ್ರದಲ್ಲಿ ಈ ಕುರಿತು ವಿವರ ನೀಡಿದ್ದಾರೆ:
"ಕರವೇ ಹೋರಾಟಗಾರ ಹಾಗೂ ಲೇಖಕ ಸಂಘಟಕರಾದ ನೇ.ಭ. ರಾಮಲಿಂಗ ಶೆಟ್ಟಿಯಾದ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅನೇಕ ಪುಣ್ಯಾತ್ಮರು, ಸಾಹಿತ್ಯ ಕ್ಷೇತ್ರದ ದಿಗ್ಗಜರು ಬಂದು ಕುಳಿತು ಸೇವೆ ಸಲ್ಲಿಸಿ ಹೋಗಿದ್ದಾರೆ. ಅಂತಹ ಜಾಗದಲ್ಲಿ ನಾನು ಕೂಡ ಕುಳಿತು ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ ಎಂಬ ಸಂತೋಷ ಸಂಭ್ರಮ ಜೊತೆಗೆ ಎಲ್ಲರೊಂದಿಗೆ ಬೆರೆಯುವ ಅವಕಾಶವೂ ಒದಗಿ ಬಂದಿತ್ತು. ಮಹೇಶ್ ಜೋಷಿ ಎಂಬ ಪ್ರಸ್ತುತ ಅಧ್ಯಕ್ಷರ ಜೊತೆ ಕೆಲಸ ಮಾಡಿದ್ದು, ಇವರ ಜೊತೆ ಇದ್ದದ್ದೇ ಕಹಿ ಘಟನೆಯೂ ಹೌದು. ಇವರಿಗೆ ಅಹಂಕಾರವಿರಬೇಕಿತ್ತು ಆದರೆ ದುರಹಂಕಾರವಿದೆ. ಅಧಿಕಾರವಿರಬೇಕಿತ್ತು. ಆದರೆ ಸರ್ವಾಧಿಕಾರವಿದೆ.
2017ರಿಂದ ನನ್ನ ಬದುಕನ್ನುˌ ನನ್ನ ವ್ಯಾಪಾರವನ್ನು ನನ್ನ ಸುಖˌ ಸಂತೋಷವನ್ನು ಎಲ್ಲವನ್ನು ತೊರೆದು ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡು ಇವರ ಗೆಲುವಿಗಾಗಿ ನಾನು ಇವರೊಂದಿಗೆ ಕೆಲಸ ಮಾಡಿದ್ದೆ ನೋವಿನ ಸಂಗತಿ. ಯಾವುದು ಕೂಡ ಶಾಶ್ವತವಲ್ಲ. ಅದು ಸಂಬಂಧವಿರಬಹುದು ಅಥವಾ ಅವಕಾಶವಿರಬಹುದು. ಒಟ್ಟಾರೆ ಅಕ್ಷರ ಲೋಕದ ಸಾಧಕರ ಈ ಪವಿತ್ರ ಸ್ಥಳದಿಂದ ನಾನು ನಿರ್ಗಮಿಸುತ್ತಿದ್ದೇನೆ.
2021ರಲ್ಲಿ ನಡೆದ ಕಸಾಪ ಚುನಾವಣೆಯಲ್ಲಿ ಮಾನ್ಯ ಜೋಶಿ ಅವರಿಗೆ ಕರವೇಯ ಸಾವಿರಾರು ಕಾರ್ಯಕರ್ತರು ಪರಿಷತ್ತಿನ ಅಜೀವ ಸದಸ್ಯರಾಗಿದ್ದವರು ತಮ್ಮ ಮತಗಳನ್ನು ನನ್ನ ಮನವಿಯಂತೆ ನೀಡಿದ್ದರು. ಜೊತೆಗೆ ಅಪಾರ ಪ್ರೀತಿ ಹಾಗೂ ಅಭಿಮಾನ ಹೊಂದಿದ್ದ ನನ್ನನ್ನು ಬೆಳಸಿದ್ದ ಸ್ನೇಹವಲಯದ, ನನ್ನ ಸಮುದಾಯದ ಅನೇಕರಿಗೆ ಕೋಟಿ ಕೋಟಿ ನಮಸ್ಕಾರಗಳು.
ಕನ್ನಡ ಸಾಹಿತ್ಯ ಪರಿಷತ್ತು ಈ ನಾಡಿನ ಸಾಕ್ಷಿ ಪ್ರಜ್ಞೆ. ನಮ್ಮದು ನಿಮ್ಮದು ಎಲ್ಲರದ್ದು ಹೌದು. ಬಂದು ಹೋಗುವವರದ್ದಲ್ಲ. ಉಳಿದದ್ದು ನಿಮಗೆ ಬಿಟ್ಟದ್ದು. ನಾನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಸನ್ಮಾನ್ಯ ಟಿ ಎ ನಾರಾಯಣಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷನಾಗಿ, ನಾಡಪರ ಹೋರಾಟಗಳನ್ನು ನಡೆಸುವ ಮೂಲಕ ಜೈಲುವಾಸವನ್ನು ಅನುಭವಿಸಿದ್ದೇನೆ. ಜೊತೆಗೆ ಕರವೇ ಹೋರಾಟಗಾರರ ಮೇಲಿರುವ ಅನೇಕ ಕೇಸುಗಳು ನನ್ನ ಪಾಲಿಗೆ ಇವೆ.
ನಾನು ಲೇಖಕನಾಗಿ 15ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಜೊತೆಗೆ ನಾಡಿನ ಅನೇಕ ಪತ್ರಿಕೆಗಳಲ್ಲಿ ನನ್ನ ಲೇಖನಗಳೂ ಸಹ ಪ್ರಕಟವಾಗಿವೆ. ಪ್ರಮುಖವಾಗಿ ಶ್ರೀ ಸಿದ್ದಗಂಗ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಕುರಿತ "ಶತಮಾನದ ಸಂತ" ಪುಸ್ತಕ ಅಲ್ಲದೆ ಪ್ರೊ.ಚಂಪಾ ಅವರ "ಆಜು ಬಾಜು", ˌಡಾ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ "ಮಳೆ ನಿಂತ ಮೇಲೆ",ˌ ಡಾ. ದೊಡ್ಡರಂಗೇಗೌಡರ "ಕನ್ನಡದ ರಥವನ್ನೆರಿದಾರೋ" ಈ ಕೃತಿಗಳು ಸಾಹಿತ್ಯ ಸಮ್ಮೇಳನಗಳ ಹಿನ್ನೆಲೆಯಲ್ಲಿ ಹೋರತಂದಂತವು. ಜೊತೆಗೆ ಮೂರು ಕವನ ಸಂಕಲನಗಳು ಪ್ರಕಟಗೊಂಡಿವೆ. ಅತ್ಯಂತ ಪ್ರಮುಖವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಮಾನ್ಯ ಎಚ್ ಡಿ. ದೇವೇಗೌಡರನ್ನು ಕುರಿತು ನಾನು ಬರೆದ "ಮಣ್ಣಿನ ಮಗ" ಪುಸ್ತಕವು ಸಹ ಪ್ರಕಟವಾಗಿ ಜನಪ್ರಿಯತೆ ಪಡೆದಿದೆ.
ನನ್ನ ಪರಿಚಯ ಸದ್ಯಕ್ಕಿಷ್ಟು ಸಾಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಮರಿಸುತ್ತಾ ಕೇಂದ್ರ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಪ್ರಕಟಿಸುತ್ತಿದ್ದೇನೆ." ಎಂದು ನೇ ಭ ರಾಮಲಿಂಗಶೆಟ್ಟಿ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Kannada Sahitya Sammelana: ಕನ್ನಡ ಭಾಷೆ ಸಂದಿಗ್ಧ ಪರಿಸ್ಥಿತಿಯಲ್ಲಿದೆ: ಡಾ. ಮಹೇಶ ಜೋಶಿ ಬೇಸರ