ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Telangana Murder Case: ತೆಲಂಗಾಣ ಕೊಲೆ ಪ್ರಕರಣ; ರಾಜ ರಘುವಂಶಿ ಹತ್ಯೆಯಂತೆಯೇ ಪ್ಲ್ಯಾನ್ ಮಾಡಿದ್ದ ಪತ್ನಿ, ಆಕೆಯ ಪ್ರಿಯಕರ

ಇತ್ತೀಚಿಗೆ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯದಲ್ಲಿ ನಡೆದ ಹನಿಮೂನ್ ಕೊಲೆ ಪ್ರಕರಣ ಈಗ ತೆಲಂಗಾಣದ ಕೊಲೆಯ ರಹಸ್ಯ ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದೆ. ವಿವಾಹವಾದ ಒಂದು ತಿಂಗಳ ಬಳಿಕ ತೆಲಂಗಾಣದಲ್ಲಿ ತೇಜೇಶ್ವರ್ ಎಂಬಾತನ ಕೊಲೆಯಾಗಿದ್ದು, ಇದರಲ್ಲಿ ಆತನ ಪತ್ನಿ ಐಶ್ವರ್ಯ ಮತ್ತು ಆಕೆಯ ಪ್ರಿಯಕರ ತಿರುಮಲ್ ರಾವ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ತೆಲಂಗಾಣ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಹೈದರಾಬಾದ್: ಇತ್ತೀಚಿಗೆ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯದಲ್ಲಿ (Meghalaya) ನಡೆದ ಹನಿಮೂನ್ ಕೊಲೆ ಪ್ರಕರಣ (Honeymoon murder case) ಈಗ ತೆಲಂಗಾಣದ ಕೊಲೆ ರಹಸ್ಯವನ್ನು (Telangana Murder Case) ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದೆ. ವಿವಾಹವಾದ ಒಂದು ತಿಂಗಳ ಬಳಿಕ ತೆಲಂಗಾಣದಲ್ಲಿ ತೇಜೇಶ್ವರ್ ಎಂಬಾತನ ಕೊಲೆಯಾಗಿದ್ದು, ಇದರಲ್ಲಿ ಆತನ ಪತ್ನಿ ಐಶ್ವರ್ಯಾ ಮತ್ತು ಆಕೆಯ ಪ್ರಿಯಕರ ತಿರುಮಲ್ ರಾವ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಮೇಘಾಲಯದಲ್ಲಿ ನಡೆದ ರಾಜ ರಘುವಂಶಿ ಹತ್ಯೆಯಂತೆ ತೇಜೇಶ್ವರ್ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಗಡ್ವಾಲ್ ಪೊಲೀಸ್ ಮುಖ್ಯಸ್ಥ ಟಿ. ಶ್ರೀನಿವಾಸ ರಾವ್, ʼʼಇಂದೋರ್‌ನ ರಾಜ ರಘುವಂಶಿಯಂತೆಯೇ ತೇಜೇಶ್ವರ್ ಅವರನ್ನು ಕೊಲ್ಲಲು ಅವರ ಪತ್ನಿ ಐಶ್ವರ್ಯಾ ಮತ್ತು ಆಕೆಯ ಪ್ರಿಯಕರ ತಿರುಮಲ್ ರಾವ್ ಸಂಚು ರೂಪಿಸಿದ್ದರು. ಬೈಕ್‌ನಲ್ಲಿ ಹೊರಗೆ ಕರೆದುಕೊಂಡು ಹೋಗುವಂತೆ ತೇಜೇಶ್ವರ್ ಮನವೊಲಿಸಿದ ಐಶ್ವಯಾ ದಾರಿ ಮಧ್ಯೆ ಹಂತಕರಿಂದ ದಾಳಿಯ ನಡೆಸುವ ಸಂಚು ರೂಪಿಸಿದ್ದಳು. ಬಳಿಕ ತಾನು ತಿರುಮಲ್ ರಾವ್ ಜತೆ ಓಡಿ ಹೋಗುವ ಯೋಜನೆ ರೂಪಿಸಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆʼʼ ಎಂದು ತಿಳಿಸಿದ್ದಾರೆ.

ʼʼರಾಜ ರಘುವಂಶಿ ಪ್ರಕರಣವು ಇದೇ ರೀತಿ ನಡೆದಿತ್ತು. ಮೇಘಾಲಯದಲ್ಲಿ ರಾಜನ ಶವ ಪತ್ತೆಯಾಗಿದ್ದು, ಆ ಬಳಿಕ ಪತ್ನಿ ಸೋನಮ್ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ಅಂತಿಮವಾಗಿ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸಿದರು. ಐಶ್ವರ್ಯಾ ಮತ್ತು ತಿರುಮಲ್ ರಾವ್ ಇದೇ ರೀತಿ ಯೋಜನೆ ಹಾಕಿದ್ದರೂ ಬಳಿಕ ಅದನ್ನು ಕೈಬಿಟ್ಟಿದ್ದರುʼʼ ಎಂದು ಅವರು ಹೇಳಿದ್ದಾರೆ.

ಐಶ್ವರ್ಯಾ ತನ್ನ ಪತಿಯ ಬೈಕ್‌ನಲ್ಲಿ ಜಿಪಿಎಸ್ ಅಳವಡಿಸಿದ್ದು, ಇದರಿಂದ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಳು. ಇದಕ್ಕಾಗಿ ನೆರೆ ಮನೆಯ ಮೋಹನ್ ಎಂಬಾತನನ್ನು ನೇಮಿಸಿಕೊಂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಐಶ್ವರ್ಯಾ, ತಿರುಮಲ್ ರಾವ್ ಸಂಚಿನ ಬಗ್ಗೆ ತಿಳಿದಿದ್ದ ಆಕೆಯ ತಾಯಿ ಸುಜಾತಾ, ಮೂವರು ಬಾಡಿಗೆ ಹಂತಕರಾದ ನಾಗೇಶ್, ಪರಶುರಾಮ್, ರಾಜೇಶ್ ಸೇರಿದ್ದಾರೆ.

ಏನಾಗಿತ್ತು?

ತೆಲಂಗಾಣದ ಗಡ್ವಾಲ್‌ನಲ್ಲಿ ತೇಜೇಶ್ವರ್ ಕಾಣೆಯಾದ ಮೂರು ದಿನಗಳ ಬಳಿಕ ಅವರ ಶವ ಜೂನ್ 21ರಂದು ಆಂಧ್ರ ಪ್ರದೇಶದ ನಂದ್ಯಾಲ್ ಜಿಲ್ಲೆಯ ಪಣ್ಯಂನಲ್ಲಿರುವ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತನ ಮುಂಗೈಯಲ್ಲಿದ್ದ 'ಅಮ್ಮ' ಎಂಬ ಹಚ್ಚೆಯಿಂದ ಗುರುತು ಪತ್ತೆ ಮಾಡಲಾಗಿತ್ತು.

ಈ ಕೊಲೆಯಲ್ಲಿ ನವವಿವಾಹಿತನ ಪತ್ನಿ ಐಶ್ವರ್ಯಾ ಕೈವಾಡವಿರುವ ಬಗ್ಗೆ ಕುಟುಂಬ ಅನುಮಾನ ವ್ಯಕ್ತಪಡಿಸಿದ್ದರಿದ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದರು. ಐಶ್ವರ್ಯಾ ಬ್ಯಾಂಕ್ ಮ್ಯಾನೇಜರ್ ತಿರುಮಲ್ ಜತೆ ಸಂಬಂಧ ಹೊಂದಿರುವುದು ತಿಳಿದಿತ್ತು. ಆದರೆ ತೇಜೇಶ್ವರ್ ತಾನು ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಎಲ್ಲರ ಮನವೊಲಿಸಿ ಮದುವೆಯಾಗಿದ್ದ. ತೇಜೇಶ್ವರ್ ಕಾಣೆಯಾದಾಗ ಆಕೆಯಲ್ಲಿ ಕೊಂಚವೂ ಬೇಸರವಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ತೇಜೇಶ್ವರ್ ಸಹೋದರ ತೇಜವರ್ಧನ್ ಪೊಲೀಸರಿಗೆ ತಮ್ಮ ಸಂದೇಹವನ್ನು ತಿಳಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀದರಿಗೆ ತೇಜೇಶ್ವರ್ ಮೇಲೆ ಐದು ಬಾರಿ ದಾಳಿಯ ಪ್ರಯತ್ನ ನಡೆದಿರುವುದು ತಿಳಿದು ಬಂದಿತ್ತು.

ತಾಯಿ-ಮಗಳ ತ್ರಿಕೋನ ಪ್ರೀತಿ

ಐಶ್ವರ್ಯಾ ತಾಯಿ ಸುಜಾತಾ ಬ್ಯಾಂಕೇತರ ಹಣಕಾಸು ಕಂಪನಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಳು. ಅಲ್ಲಿ ತಿರುಮಲ್ ರಾವ್‌ನನ್ನು ಭೇಟಿಯಾಗಿದ್ದಳು. ಅವರ ಮಧ್ಯೆ ಸಂಬಂಧ ಏರ್ಪಟ್ಟಿತ್ತು. 2016ರಲ್ಲಿ ಆಕೆ ರಜೆಯ ಮೇಲೆ ಹೋದಾಗ ತನ್ನ ಬದಲಿಗೆ ಐಶ್ವರ್ಯಾಳನ್ನು ಕೆಲಸಕ್ಕೆ ಕಳುಹಿಸಿದ್ದಳು. ಐಶ್ವರ್ಯಾ ಕೂಡ ತಿರುಮಲ್ ಜತೆ ಸಂಬಂಧ ಬೆಳೆಸಿದ್ದಳು. ತಿರುಮಲ್ 2019ರಲ್ಲಿ ಬೇರೆ ವಿವಾಹವಾಗಿದ್ದು, ಆತ ಹೆಂಡತಿಯನ್ನು ಕೊಲ್ಲಲು ಆತ ಯೋಜನೆ ಮಾಡಿಕೊಂಡಿದ್ದ ಎನ್ನುವುದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಈ ನಡುವೆ ಸುಜಾತಾ ತನ್ನ ಮಗಳಿಗೆ ತಿರುಮಲ್ ಜತೆ ಸಂಬಂಧ ಕೊನೆಗೊಳಿಸಿ ತೇಜೇಶ್ವರ್‌ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು. ಆರಂಭದಲ್ಲಿ ಐಶ್ವರ್ಯಾ ನಿರಾಕರಿಸಿದಳು. ಆದರೆ ಅವಳ ಮನವೊಲಿಸುವಲ್ಲಿ ಸುಜಾತಾ ಯಶಸ್ವಿಯಾದಳು. ಮದುವೆಯ ದಿನಾಂಕ ನಿಗದಿಯಾದ ಬಳಿಕ ನಾಪತ್ತೆಯಾದ ಐಶ್ವರ್ಯಾ ಬಳಿಕ ದಿಢೀರನೆ ಪ್ರತ್ಯಕ್ಷಗೊಂಡು ತೇಜೇಶ್ವರ್‌ನನ್ನು ಮದುವೆಯಾಗುವುದಾಗಿ ಹೇಳಿದಳು. ವರದಕ್ಷಿಣೆ ನೀಡಲು ಹಣವಿಲ್ಲದ ಕಾರಣ ತಾನು ಅಜ್ಞಾತವಾಗಿ ಇರಬೇಕಾಯಿತು ಎಂದು ತೇಜೇಶ್ವರ್ ಮನೆಯವರಿಗೆ ಹೇಳಿದ್ದಳು. ಮೇ 18ರಂದು ತೇಜೇಶ್ವರ್ ಮತ್ತು ಐಶ್ವರ್ಯಾ ಮದುವೆ ನಡೆಯಿತು.

ಕೊಲೆ ಯೋಜನೆ

ಮದುವೆಯಾದ ಮೇಲೂ ಐಶ್ವರ್ಯ ತಿರುಮಲ್ ಜೊತೆ ಸಂಪರ್ಕದಲ್ಲಿದ್ದಳು. ಆತನೊಂದಿಗೆ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಫೆಬ್ರವರಿ ಮತ್ತು ಜೂನ್ ನಡುವೆ ಅವರಿಬ್ಬರು 2,000 ಕ್ಕೂ ಹೆಚ್ಚು ಪರಸ್ಪರ ಫೋನ್ ಕರೆಗಳನ್ನು ಮಾಡಿದ್ದಾರೆ.

ಭೂಮಾಪಕ ಮತ್ತು ನೃತ್ಯ ಶಿಕ್ಷಕನಾಗಿದ್ದ ತೇಜೇಶ್ವರ್ ನನ್ನು ಕೊಲೆಗಾರರು ಭೂಮಿ ಸಮೀಕ್ಷೆ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಕಾರಿನಲ್ಲೇ ತಲೆಗೆ ಗುಂಡು ಹೊಡೆದು, ಗಂಟಲು ಕತ್ತರಿಸಿ, ಅನಂತರ ಹೊಟ್ಟೆಗೆ ಚೂರಿಯಿಂದ ಇರಿದು ಕೊಂದಿದ್ದಾರೆ. ಬಳಿಕ ಆತನ ಶವವನ್ನು ಕಾಲುವೆಗೆ ಎಸೆದು ಹೋಗಿದ್ದರು. ಹಂತಕರು ತಿರುಮಲ್ ರಾವ್ ಹೇಳಿರುವಂತೆ ಎಲ್ಲ ಕಾರ್ಯವನ್ನು ಮಾಡಿದ್ದಾರೆ. ಹಂತಕರಿಗೆ ಪರಾರಿಯಾಗಲು ಕೂಡ ತಿರುಮಲ್ ಸಹಾಯ ಮಾಡಿದ್ದಾನೆ ಎಂದು ಗಡ್ವಾಲ್ ಪೊಲೀಸ್ ಮುಖ್ಯಸ್ಥ ಟಿ.ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ತೇಜೇಶ್ವರ್‌ನನ್ನು ಪತ್ತೆಹಚ್ಚಲು ಆತನ ಸೆಲ್ ಫೋನ್ ಸಿಗ್ನಲ್‌ಗಳನ್ನು ಪೊಲೀಸರು ಬಳಸಿದ್ದು, ಬಳಿಕ ಕಾಲುವೆಯಲ್ಲಿ ಶವವನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Karnataka High Court: ಸಚಿವ ಡಿ.ಸುಧಾಕರ್ ವಿರುದ್ಧ ದಾಖಲಾಗಿದ್ದ ಎಸ್‌ಸಿ- ಎಸ್‌ಟಿ ದೌರ್ಜನ್ಯ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ತೇಜೇಶ್ವರ್ ಕೊಂದ ಬಳಿಕ ತಿರುಮಲ್ ಮತ್ತು ಐಶ್ವರ್ಯಾ ಪರಾರಿಯಾಗುವ ಯೋಜನೆ ರೂಪಿಸಿದ್ದರು. ಇದಕ್ಕಾಗಿ ತಿರುಮಲ್ 20 ಲಕ್ಷ ರೂ. ಸಾಲ ಪಡೆದು ಲಡಾಖ್‌ಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದ. ಅಲ್ಲಿಂದ ಅವರು ಅಂಡಮಾನ್‌ಗೆ ತೆರಳುವ ಯೋಜನೆ ಇತ್ತು. ತೇಜೇಶ್ವರ್ ಹತ್ಯೆಯ ಬಳಿಕ ಯಾರಿಗೂ ಅನುಮಾನ ಬಾರದೇ ಇರಲಿ ಎಂದು ಐಶ್ವರ್ಯಾ ತನ್ನ ಅತ್ತೆಯ ಮನೆಯಲ್ಲೇ ಇದ್ದಳು.

ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದ ತಿರುಮಲ್ ರಾವ್‌ನ ತಂದೆ ತಮ್ಮ ಮಗನನ್ನು ಪೊಲೀಸರಿಂದ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ.