Viral News: ನಾಲ್ಕು ಕೋಟಿ ಮೊತ್ತದ ಆಸ್ತಿಪತ್ರವನ್ನು ದೇವಸ್ಥಾನಕ್ಕೆ ನೀಡಿದ ನಿವೃತ್ತ ಸೈನಿಕ; ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ
ತಮಿಳುನಾಡಿನ (Tamil Nadu) ತಿರುವಣ್ಣಾಮಲೈ (Thiruvannamalai) ಜಿಲ್ಲೆಯ ಅರುಲ್ಮಿಗು ರೇಣುಗಾಂಬಾಳ್ ಅಮ್ಮನ್ (Arulmigu Renugambal Amman) ದೇವಸ್ಥಾನಕ್ಕೆ 65 ವರ್ಷದ ನಿವೃತ್ತ ಸೈನಿಕ ಎಸ್. ವಿಜಯನ್, 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿರುವ ಘಟನೆ ನಡೆದಿದೆ.


ತಿರುವಣ್ಣಾಮಲೈ: ತಮಿಳುನಾಡಿನ (Tamil Nadu) ತಿರುವಣ್ಣಾಮಲೈ (Thiruvannamalai) ಜಿಲ್ಲೆಯ ಅರುಲ್ಮಿಗು ರೇಣುಗಾಂಬಾಳ್ ಅಮ್ಮನ್ (Arulmigu Renugambal Amman) ದೇವಸ್ಥಾನಕ್ಕೆ 65 ವರ್ಷದ ನಿವೃತ್ತ ಸೈನಿಕ ಎಸ್. ವಿಜಯನ್, 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿರುವ ಘಟನೆ ನಡೆದಿದೆ. ತನ್ನ ಮಕ್ಕಳಿಂದ ಆಸ್ತಿ ವಿವಾದದಲ್ಲಿ ಅವಮಾನಿತನಾದ ಬಳಿಕ ವಿಜಯನ್ ಈ ನಿರ್ಧಾರ ಕೈಗೊಂಡಿದ್ದಾರೆ (Viral News) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಶವಪುರಂ ಗ್ರಾಮದ ವಿಜಯನ್, ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆಸ್ತಿಯ ವಿಷಯದಲ್ಲಿ ವರ್ಷಗಟ್ಟಲೆ ಜಗಳವಾಡಿದ್ದರು. ಕುಟುಂಬದಿಂದ ಕಡೆಗಣನೆ ಮತ್ತು ನೋವು ಅನುಭವಿಸಿದ ಅವರು, ಈ ನಿರ್ಧಾರ ಕೈಗೊಂಡಿದ್ದಾರೆ. ಈಗ ಕುಟುಂಬವು ಆಸ್ತಿಯನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿದೆ. ವಿಜಯನ್ ದೇವಸ್ಥಾನಕ್ಕೆ ಎರಡು ಆಸ್ತಿ ದಾಖಲೆಗಳನ್ನು ನೀಡಿದ್ದು ಒಂದು 3 ಕೋಟಿ ರೂ. ಮೌಲ್ಯದ, ದೇವಸ್ಥಾನದ ಬಳಿಯಿರುವ ಆಸ್ತಿ ಮತ್ತು ಇನ್ನೊಂದು 1 ಕೋಟಿ ರೂ. ಮೌಲ್ಯದ್ದು.
ಜೂನ್ 24ರಂದು, ದೇವಸ್ಥಾನದ ಸಿಬ್ಬಂದಿ ಮಧ್ಯಾಹ್ನ 12:30ಕ್ಕೆ ಹುಂಡಿ ತೆರೆದಾಗ, 4 ಕೋಟಿ ರೂ. ಮೌಲ್ಯದ ಮೂಲ ಆಸ್ತಿ ದಾಖಲೆಗಳು ಸಿಕ್ಕಿವೆ. ದೇವಸ್ಥಾನದ 11 ಹುಂಡಿಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ 4-5 ಸಿಬ್ಬಂದಿ ಎಣಿಕೆ ಮಾಡುವ ಸಂಪ್ರದಾಯವಿದೆ. ಗರ್ಭಗುಡಿಯ ಮುಂದಿನ ಹುಂಡಿಯಲ್ಲಿ ನಾಣ್ಯಗಳು, ಕರೆನ್ಸಿಗಳ ಜೊತೆಗೆ ಈ ದಾಖಲೆಗಳು ಕಂಡುಬಂದವು. ಒಂದು ಕೈಬರಹದ ಟಿಪ್ಪಣಿಯಲ್ಲಿ ವಿಜಯನ್, ಆಸ್ತಿಯನ್ನು ತಾನು ಸ್ವಇಚ್ಛೆಯಿಂದ ದಾನ ಮಾಡಿರುವುದಾಗಿ ತಿಳಿಸಿದ್ದರು.
ಇಂತಹ ಘಟನೆ ಇಲ್ಲಿ ಮೊದಲ ಬಾರಿಗೆ ನಡೆದಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಸಿಲಂಬರಸನ್ ಹೇಳಿದ್ದಾರೆ. ಹುಂಡಿಯಲ್ಲಿ ದಾಖಲೆಗಳನ್ನಿಟ್ಟರೆ ಆಸ್ತಿ ದೇವಸ್ಥಾನಕ್ಕೆ ಸೀದಾ ಸಿಗುವುದಿಲ್ಲ ಕಾನೂನುಬದ್ಧವಾಗಿ ದಾನವನ್ನು ನೋಂದಾಯಿಸಬೇಕು ಎಂದರು. ವಿಜಯನ್, ರೇಣುಗಾಂಬಾಳ್ ಅಮ್ಮನ ಭಕ್ತರಾಗಿದ್ದು, ಕಳೆದ 10 ವರ್ಷಗಳಿಂದ ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದ ಒಂಟಿಯಾಗಿ ಬದುಕುತ್ತಿದ್ದರು. ಮಕ್ಕಳಿಂದ ಯಾವುದೇ ಬೆಂಬಲ ಸಿಗಲಿಲ್ಲ, ಇತ್ತೀಚೆಗೆ ಆಸ್ತಿಯನ್ನು ತಮಗೆ ಕೊಡುವಂತೆ ಒತ್ತಾಯಿಸಿದ್ದರು.
ಈ ಸುದ್ದಿಯನ್ನೂ ಓದಿ: UP Horror: ಮಗಳ ತಲೆಯನ್ನೇ ಕತ್ತರಿಸಿ ಕಾಲುವೆಗೆಸೆದ ಹೆತ್ತ ತಾಯಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ದಾಖಲೆಗಳು 10 ಸೆಂಟ್ಸ್ ಜಮೀನು ಮತ್ತು ದೇವಸ್ಥಾನದ ಬಳಿಯ ಒಂದು ಮಹಡಿಯ ಮನೆಗೆ ಸಂಬಂಧಿಸಿವೆ. ಇವುಗಳನ್ನು ತಕ್ಷಣ ವಾಪಸ್ ಕೊಡಲಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ನಾನು ಕಾನೂನುಬದ್ಧವಾಗಿ ಆಸ್ತಿಯನ್ನು ದೇವಸ್ಥಾನಕ್ಕೆ ನೋಂದಾಯಿಸುತ್ತೇನೆ. ನನ್ನ ಮಕ್ಕಳು ನನ್ನ ದೈನಂದಿನ ಅಗತ್ಯಗಳಿಗೂ ಅವಮಾನಿಸಿದರು" ಎಂದು ವಿಜಯನ್ ಹೇಳಿದ್ದಾರೆ.