Landslides: ಭೂಕುಸಿತ, ಪ್ರವಾಹಕ್ಕೆ ತತ್ತರಿಸಿದ ಈಶಾನ್ಯ; ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟ ಜನ, ನೋಡಿದವರ ಮನ ಕಲಕುತ್ತೆ ಈ ಫೋಟೋ
ಕರಾವಳಿಯನ್ನು ಅಪ್ಪಳಿಸಿದ ರೆಮಲ್ ಚಂಡಮಾರುತದಿಂದ ಉಂಟಾದ ಘಟನೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ 27,000 ಮನೆಗಳು ಹಾನಿಗೊಳಗಾಗಿವೆ. ಈಶಾನ್ಯ ರಾಜ್ಯದಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತಕ್ಕೆ ಹಲವರು ಪ್ರಾಣ ಬಿಟ್ಟಿದ್ದಾರೆ. ಕೆಲವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.



ಮೇ ತಿಂಗಳಿನ ಅಂತ್ಯದಲ್ಲಿ ಭಾರೀ ಮಳೆಯಿಂದಾಗಿ ದೇಶದ ಹಲವೆಡೆ ಸಾಕಷ್ಟು ಹಾನಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದ ಪರಿಣಾಮವಾಗಿ ಈಶಾನ್ಯದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ. ಅಸ್ಸಾಂ, ಅರುಣಾಚಲ, ಮೇಘಾಲಯ, ಮಣಿಪುರ ಮತ್ತು ಮಿಜೋರಾಂ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ. ಅಸ್ಸಾಂನ 12 ಜಿಲ್ಲೆಗಳಲ್ಲಿ ಕನಿಷ್ಠ 60,000 ಜನರ ಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಐದು ಜನರು ಸಾವನ್ನಪ್ಪಿದರೆ, ಅರುಣಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಒಂಬತ್ತು ಜನರು ಅಸುನೀಗಿದರು.

ಹವಾಮಾನ ಕಚೇರಿಯು ಅಸ್ಸಾಂನ ಕೆಲವು ಭಾಗಗಳಿಗೆ ಆರೆಂಜ್ ಅಲರ್ಟ್ ಹಾಗೂ ಕೆಲ ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಅಸ್ಸಾಂನಲ್ಲಿ, ಕಳೆದ 24 ಗಂಟೆಗಳಲ್ಲಿ ಸತತ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಐದು ಜನರು ಸಾವನ್ನಪ್ಪಿದ್ದು, ಆರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. 10,000 ಕ್ಕೂ ಹೆಚ್ಚು ಜನರು ಅತಂತ್ರರಾಗಿದ್ದಾರೆ.

ಗುವಾಹಟಿಯ ಹೊರವಲಯದಲ್ಲಿರುವ ಬೋಂಡಾ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಜಯಂತ ಮಲ್ಲಾ ಬರುವಾ ಶುಕ್ರವಾರ ತಿಳಿಸಿದ್ದರು. ಗುವಾಹಟಿಯಲ್ಲಿ, 111 ಮಿಮೀ ಮಳೆ ದಾಖಲಾದ ನಂತರ, ಒಂದೇ ದಿನದಲ್ಲಿ ಸುರಿದ 67 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲಾಯಿತು. ಬ್ರಹ್ಮಪುತ್ರ ಸೇರಿದಂತೆ ಈಶಾನ್ಯದ ಅನೇಕ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಅರುಣಾಚಲ ಪ್ರದೇಶದ ಬಾನಾ ಮತ್ತು ಸೆಪ್ಪಾ ನಡುವಿನ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಘಟನೆಯಲ್ಲಿ, ಬ್ರೆಝಾ ಕಾರು ಭೂಕುಸಿತದಿಂದ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಜನರು ತಮ್ಮ ಮನೆಯನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ಜಲಬಂಧನವಾಗಿದ್ದ ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಪೊಲೀಸರು ರಕ್ಷಸಿಸುತ್ತಿದ್ದಾರೆ.