ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಒಬ್ಬರು ನನ್ನ ವಿದಾಯವನ್ನು ಕೇಳಿದ್ದರುʼ: ಕಠಿಣ ದಿನಗಳನ್ನು ನೆನೆದು ಭಾವುಕರಾದ ಕರುಣ್‌ ನಾಯರ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜೂನ್‌ 20 ರಂದು ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿವೆ. ಈ ಸರಣಿಯಲ್ಲಿ ಕನ್ನಡಿಗ ಕರುಣ್‌ ನಾಯರ್‌ 7 ವರ್ಷಗಳ ಬಳಿಕ ಭಾರತ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಇದೀಗ ಅವರು ತಮ್ಮ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

ಕಠಿಣ ದಿನಗಳನ್ನು ನೆನೆದು ಭಾವುಕರಾದ ಕರುಣ್‌ ನಾಯರ್‌!

ಕಠಿಣ ದಿನಗಳನ್ನು ಸ್ಮರಿಸಿದ ಕರುಣ್‌ ನಾಯರ್‌.

Profile Ramesh Kote Jun 16, 2025 9:47 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ (IND vs ENG) ಆಡುವ ಮೂಲಕ ಬರೋಬ್ಬರಿ ಏಳು ವರ್ಷಗಳ ಬಳಿಕ ಭಾರತ ತಂಡವನ್ನು (India) ಪ್ರತಿನಿಧಿಸಲು ಎದುರು ನೋಡುತ್ತಿರುವ ಕನ್ನಡಿಗ ಕರುಣ್‌ ನಾಯರ್‌ (Karun Nair), ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಫ್ರಾಂಚೈಸಿ ಲೀಗ್‌ಗಳನ್ನು ಆಡಿ ಆರ್ಥಿಕವಾಗಿ ಸದೃಡರಾಗಿ ಎಂದು ಒಮ್ಮೆ ಭಾರತೀಯ ಕ್ರಿಕೆಟಿಗರು ನೀಡಿದ್ದ ಸಲಹೆಯನ್ನು ಇದೀಗ ಕರುಣ್‌ ನಾಯರ್‌ ಬಹಿರಂಗಪಡಿಸಿದ್ದಾರೆ. ವಿದರ್ಭ ತಂಡದ ಪರ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರ ಫಲವಾಗಿ ಕರುಣ್‌ ನಾಯರ್‌, ಇಂಗ್ಲೆಂಡ್‌ ಪ್ರವಾಸದ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೂನ್‌ 20 ರಂದು ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಮೊದಲನೇ ಟೆಸ್ಟ್‌ ಆಡಲು ಕರುಣ್‌ ಎದುರು ನೋಡುತ್ತಿದ್ದಾರೆ.

ಡೈಲಿ ಮೇಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಕರುಣ್‌ ನಾಯರ್‌, "ಭಾರತೀಯ ಪ್ರಮುಖ ಕ್ರಿಕೆಟಿಗರೊಬ್ಬರು ನನಗೆ ಕರೆ ಮಾಡಿ, ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕಾದ ಅಗತ್ಯವಿದೆ ಹಾಗೂ ಲೀಗ್‌ಗಳಲ್ಲಿ ಗಳಿಸುವ ಹಣ ನಿಮ್ಮನ್ನು ಸುರಕ್ಷಿತವಾಗಿಸುತ್ತದೆ ಎಂದು ಹೇಳಿದ್ದು, ನನಗೆ ಇನ್ನೂ ನೆನಪಿದೆ. ಇದನ್ನು ಮಾಡುವುದು ನನಗೆ ತುಂಬಾ ಸುಲಭವಾಗಿತ್ತು. ಆದರೆ ಹಣ ಏನೇ ಇರಲಿ, ಅಷ್ಟು ಸುಲಭವಾಗಿ ಬಿಟ್ಟುಕೊಟ್ಟರೆ ನನ್ನನ್ನು ನಾನೇ ಕೆಣಕಿಕೊಳ್ಳುತ್ತೇನೆಂದು ನನಗೆ ತಿಳಿದಿತ್ತು," ಎಂದು ಎರಡು ವರ್ಷಗಳ ಹಿಂದಿನ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

IND vs ENG: ಎಂಎಸ್ ಧೋನಿ ಅಲ್ಲ! ನಾಯಕನಾಗಿ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕಿಂಗ್‌!

"ಭಾರತ ತಂಡದ ಪರ ಮತ್ತೆ ಆಡುವುದನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಎರಡು ವರ್ಷಗಳ ಹಿಂದಷ್ಟೇ ಆ ಘಟನೆ ನಡೆದಿತ್ತು. ಈಗ ನಾನು ಎಲ್ಲಿದ್ದೇನೆಂದು ನೋಡಿ. ಇದು ಮೋಜಿನಿಂದ ಕೂಡಿದೆ. ಆದರೆ, ನಾನು ಹೇಗೆ ಚೆನ್ನಾಗಿದೇನೆಂದು ನನಗೆ ಮಾತ್ರ ಗೊತ್ತಿತ್ತು," ಎಂದು ಕರುಣ್‌ ನಾಯರ್‌ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಳಿಕ ಕರುಣ್‌ ನಾಯರ್‌, ತಮ್ಮ ತವರು ರಾಜ್ಯ ತಂಡವಾದ ಕರ್ನಾಟಕದಲ್ಲಿಯೂ ಸ್ಥಾನವನ್ನು ಕಳೆದುಕೊಂಡಿದ್ದರು. ವಿದರ್ಭಗೆ ವಲಸೆ ಬಂದಿದ್ದ ಕರುಣ್ ಕಳೆದ ಎರಡು ವರ್ಷಗಳಿಂದ ಸ್ಥಿರ‌ ಪ್ರದರ್ಶನವನ್ನು ತೋರುತ್ತಾ ಬಂದಿದ್ದಾರೆ. ಅವರು ಮೂರೂ ಸ್ವರೂಪದಲ್ಲಿಯೂ ರನ್‌ ಹೊಳೆ ಹರಿಸಿದ್ದರು. ಅಲ್ಲದೆ, ಇಂಗ್ಲೆಂಡ್‌ ಲಯನ್ಸ್‌ ವಿರುದ್ದ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬಹುತೇಕ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.

IND vs ENG: ಸೆಹ್ವಾಗ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್!

ಕರುಣ್‌ ನಾಯರ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ಹೆಡ್‌ ಕೋಚ್‌

ಕರುಣ್‌ ನಾಯರ್‌ ಅವರ ಅದ್ಭುತ ಕಮ್‌ಬ್ಯಾಕ್‌ ಬಗ್ಗೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಟಿವಿ ಜೊತೆ ಮಾತನಾಡಿದ್ದ ಅವರು, "ನೀವು ಎಷ್ಟೇ ರನ್ ಗಳಿಸಿದ್ದರೂ, ಅತ್ಯಂತ ಮುಖ್ಯವಾದ ವಿಷಯವೆಂದರೆ ಎಂದಿಗೂ ಸಾಯದ ಮನೋಭಾವ, ಎಂದಿಗೂ ಬಿಟ್ಟುಕೊಡದ ಮನಸ್ಥಿತಿ. ಅದೇ ನಿಮ್ಮನ್ನು ಮತ್ತೆ ತಂಡಕ್ಕೆ ಕರೆತಂದಿದೆ. ಇದು ಇಡೀ ಜಗತ್ತಿಗೆ ಸ್ಫೂರ್ತಿ ನೀಡುವ ವಿಷಯ," ಎಂದು ಹೇಳಿದ್ದರು.

ಇಂಗ್ಲೆಂಡ್‌ನಲ್ಲಿ ಆಡಿದ ಅನುಭವವನ್ನು ಕರುಣ್‌ ನಾಯರ್‌ ಹೊಂದಿದ್ದಾರೆ. ಇದು ತಂಡದ ಪಾಲಿಗೆ ಒಳ್ಳೆಯ ಸಂಗತಿ ಎಂದು ಹೇಳುವ ಮೂಲಕ ಗೌತಮ್‌ ಗಂಭೀರ್‌, ಕರುಣ್‌ ನಾಯರ್‌ ಅವರನ್ನು ಆಡಿಸುವ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಕರುಣ್‌ ನಾಯರ್‌ ಅವರು 2023 ಹಾಗೂ 2024ರ ಕೌಂಟಿ ಚಾಂಪಿಯನ್‌ಷಿಪ್‌ ಸೀಸನ್‌ಗಳಲ್ಲಿ 10 ಪಂದ್ಯಗಳಿಂದ 52.57ರ ಸರಾಸರಿಯಲ್ಲಿ 736 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು ಸ್ಮರಣೀಯ ದ್ವಿಶತಕ ಕೂಡ ಸೇರ್ಪಡೆಯಾಗಿದೆ.