Crime News: ಅತ್ತಿಗೆಯ ಶಿರಚ್ಛೇದ ಮಾಡಿ ತಲೆಯೊಂದಿಗೆ ರಸ್ತೆಯಲ್ಲಿ ಓಡಾಡಿದ ಪಾಪಿಯ ಬಂಧನ
West Bengal News: ಪಶ್ಚಿಮ ಬಂಗಾಳದ ಬಸಂತಿಯಲ್ಲಿ ಭೀಕರ ಕೊಲೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಅತ್ತಿಗೆಯ ತಲೆಯನ್ನು ಕಡಿದು, ಕೈಯಲ್ಲಿ ತಲೆ ಮತ್ತು ಆಯುಧವನ್ನು ಹಿಡಿದು ರಸ್ತೆಯಲ್ಲಿ ಅಲೆದಾಡಿದ್ದಾನೆ. ಕೊನೆಗೆ ಬಸಂತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಆರೋಪಿ ಬಿಮಲ್ ಮೊಂಡಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ಕಾರಣವನ್ನು ಪತ್ತೆ ಮಾಡಲು ವಿಚಾರಣೆ ನಡೆಸುತ್ತಿದ್ದಾರೆ.

ಸಾಂಧರ್ಬಿಕ ಚಿತ್ರ.

ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿಯಲ್ಲಿ ಭೀಕರ ಕೊಲೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆರೋಪಿ ತನ್ನ ಅತ್ತಿಗೆಯ ತಲೆಯನ್ನು ಕಡಿದು (Beheading), ಕೈಯಲ್ಲಿ ತಲೆ ಮತ್ತು ಆಯುಧವನ್ನು ಹಿಡಿದು ರಸ್ತೆಯಲ್ಲಿ ಅಲೆದು ನಂತರ ಬಸಂತಿ (Basanti) ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಆರೋಪಿ ಬಿಮಲ್ ಮೊಂಡಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ಕಾರಣವನ್ನು ಪತ್ತೆ ಮಾಡಲು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಸತಿ ಮೊಂಡಲ್ ಆರೋಪಿಯ ಹಿರಿಯ ಸಹೋದರನ ಪತ್ನಿ. ಪೊಲೀಸರ ಶಂಕೆಯಂತೆ, ಕುಟುಂಬದ ಜಗಳವೇ ಈ ಭೀಕರ ಕೃತ್ಯಕ್ಕೆ ಕಾರಣವಿರಬಹುದು.
“ಕುಟುಂಬದ ಕಲಹವು ಈ ಘೋರ ಕೊಲೆಗೆ ದಾರಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಶರಣಾಗುವಾಗ ಯಾವುದೇ ಪಶ್ಚಾತ್ತಾಪ ತೋರಲಿಲ್ಲ. ಆತ ಕಡಿದ ತಲೆ ಮತ್ತು ಕೊಲೆಯ ಆಯುಧವನ್ನು ಹಿಡಿದಿದ್ದ. ಆತನ ವರ್ತನೆಯಿಂದ ಆತ ಸಾಮಾನ್ಯ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ತೋರುತ್ತದೆ” ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kidnap Case: ಚಿನ್ನದ ಮೇಲಿನ ವ್ಯಾಮೋಹ; ಅಜ್ಜನಿಂದಲೇ 2 ವರ್ಷದ ಮೊಮ್ಮಗನ ಅಪಹರಣ
“ಆರೋಪಿಯ ಕೋಪ ತೀವ್ರವಾಗಿತ್ತು. ಯಾರೂ ಆತನನ್ನು ತಡೆಯಲು ಧೈರ್ಯ ಮಾಡಲಿಲ್ಲ. ರಸ್ತೆಯಲ್ಲಿ ತಲೆಯನ್ನು ಹಿಡಿದು ನಡೆಯುತ್ತಿದ್ದಾಗ ಆತ ಸತಿ ಮೊಂಡಲ್ರನ್ನು ಶಪಿಸುತ್ತಿದ್ದ. ವರ್ಷಗಳಿಂದ ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿದ್ದೇನೆ ಎಂದು ಕಿರುಚಾಡುತ್ತಿದ್ದ. ಕೆಲವು ಪಾದಚಾರಿಗಳು ಈ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. “ಕಳೆದ ಕೆಲವು ದಿನಗಳಿಂದ ಸತಿ ಮತ್ತು ಬಿಮಲ್ ನಡುವೆ ಆಗಾಗ ಜಗಳವಾಗುತ್ತಿತ್ತು. ಆತ ಆಕೆಗೆ ಬೆದರಿಕೆಯೂ ಹಾಕಿದ್ದ. ಆದರೆ, ಕುಟುಂಬದ ವಿವಾದ ಇಂತಹ ಭಯಾನಕ ಕೃತ್ಯದಲ್ಲಿ ಕೊನೆಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲʼʼ ಎಂದು ನೆರೆ ಮನೆಯವರೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸುತ್ತಿದ್ದು, ಕೊಲೆಗೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕುಟುಂಬದ ಜಗಳಗಳನ್ನು ಸಾಮರಸ್ಯದಿಂದ ಬಗೆಹರಿಸುವ ಅಗತ್ಯವನ್ನು ಒತ್ತಿ ಹೇಳಿದೆ.