ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manjunath Kodampalli Column: ಮತಾಂತರಿಗಳಿಗೆ ಮಾತೃಹೃದಯದ ಯಾಚನೆ, ತರವೇ ?

800 ವರ್ಷಗಳ ಮುಸ್ಲಿಮರ ಆಕ್ರಮಣ ಮತ್ತು ದಬ್ಬಾಳಿಕೆಗಳಿದ್ದಾಗಲೂ, 200 ವರ್ಷಗಳ ನಿರಂಕುಶ ಬ್ರಿಟಿಷ್ ಆಡಳಿತವಿದ್ದಾಗಲೂ, ತಾರತಮ್ಯಗಳನ್ನು ಅನುಭವಿಸಿಯೂ ಯಾವ ಸಮುದಾಯಗಳು ಹಿಂದೂ ಧರ್ಮವನ್ನು ತೊರೆದಿಲ್ಲವೋ ಆ ಸಮುದಾಯಗಳಿಗೆ ನ್ಯಾಯಯುತವಾಗಿ ಸೌಲಭ್ಯಗಳು ಸಿಗಬೇಕು. ಇದು ಸಂವಿಧಾನಬದ್ಧವೂ ಹೌದು, ಡಾ.ಬಾಬಾಸಾಹೇಬರ ಆಶಯ ಕೂಡ.

ಮತಾಂತರಿಗಳಿಗೆ ಮಾತೃಹೃದಯದ ಯಾಚನೆ, ತರವೇ ?

Profile Ashok Nayak Jun 4, 2025 7:45 AM

ಜಾತಿಜಿಜ್ಞಾಸೆ

ಮಂಜುನಾಥ ಕೊಂಡಪಳ್ಳಿ

ಕರ್ನಾಟಕ ಸರಕಾರವು ಒಳಮೀಸಲಾತಿಯನ್ನು ಜಾರಿ ಮಾಡಲಾಗದೆ, ಆಯೋಗ, ಸಮೀಕ್ಷೆ, ಅಂತಿಮ ದಿನಾಂಕದ ಮೇಲೆ ದಿನಾಂಕ ಘೋಷಿಸುತ್ತ ಕಾಲದೂಡುತ್ತಿದೆ. ದೊಡ್ಡ ದೊಡ್ಡ ನಾಯಕರು “ಹಿಂದೂ ಧರ್ಮದಲ್ಲಿಯೇ ಇರುವ ಈ ಜಾತಿ ಪರಿಗಣಿಸಬೇಡಿ, ಆ ಜಾತಿ ಪರಿಗಣಿಸ ಬೇಡಿ" ಎಂದು ಉದ್ದುದ್ದ ಹೇಳಿಕೆ ಕೊಡುತ್ತಿದ್ದಾರೆ. ಎಲ್ಲದಕ್ಕೂ ಸಂವಿಧಾನಬದ್ಧವಾದ ಮಾನದಂಡ ಗಳಿವೆ, ಅದರ ಪ್ರಕಾರ ಅದು ನಡೆಯುತ್ತದೆ.

ಆದರೆ ಅನ್ಯ ರಿಲಿಜನ್ನುಗಳಿಗೆ ಮತಾಂತರವಾಗಿಯೂ ಇನ್ನೂ ಇಲ್ಲಿಯ ಸೌಲಭ್ಯ ಪಡೆಯು ತ್ತಿರುವವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇವೆಲ್ಲದರ ನಡುವೆ ಆಯೋಗದ ಅಧ್ಯಕ್ಷರು “ಮತಾಂತರಿಗಳನ್ನು ಮಾತೃ ಹೃದಯದಿಂದ ನೋಡಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಕಟವಾದರೂ, ಮುಖ್ಯವಾಹಿನಿಯಲ್ಲಿ ಅಷ್ಟೊಂದು ಚರ್ಚೆಯಾಗ ದಿರುವುದು ವಿಪರ್ಯಾಸ.

ವಿದೇಶಿ ಸೆಮೆಟಿಕ್ ರಿಲಿಜನ್ನುಗಳಿಗೆ ಮತಾಂತರಗೊಂಡವರಿಗೂ ಅನುಸೂಚಿತ ಜಾತಿಗಳಿಗಿರುವ ಸೌಲಭ್ಯ ಕೊಡಿಸುವ ಪ್ರಯತ್ನ ನಿನ್ನೆ ಮೊನ್ನೆಯದಲ್ಲ. 2006ರಲ್ಲಿ ನ್ಯಾ. ಸಾಚಾರ್ ಆಯೋಗದ ವರದಿಯನ್ನು ಸರಕಾರ ಅಂಗೀಕರಿಸಿದ ನಂತರ ನಡೆದ ಚರ್ಚೆಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ “ಅಲ್ಪಸಂಖ್ಯಾತರು ಈ ದೇಶದ ಸಂಪನ್ಮೂಲಗಳಿಗೆ ಮೊದಲ ಹಕ್ಕುದಾರರು ಎಂಬುದು ನಮ್ಮ ಸರಕಾರದ ನೀತಿಯಾಗಿದೆ.

ಯಾವುದೇ ಆದರೂ ಮೊದಲ ಫಲಾನುಭವಿಗಳು ಅವರಾಗಿರಬೇಕು ಎಂಬುದು ನಮ್ಮ ಬಯಕೆ" ಎಂದು ಸದನದ ಹೇಳಿದ್ದರು. ಅದರ ಮುಂದುವರಿದ ಭಾಗವೇ ಇದು ಎಂದು ಜನಮಾನಸದಲ್ಲಿ ಸಂಶಯ ಎದ್ದಿದೆ. ತುಷ್ಟೀಕರಣ ಆಧರಿತ ಶೇ.4ರ ಮೀಸಲಾತಿಯನ್ನು ಇಲ್ಲಿ ಉದಾಹರಿಸಬಹುದು. ಈ ವಿಷಯ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಕೆಲಸ ಈ ಲೇಖನದ್ದು.

ಇದೇ ತಂತ್ರದ ಭಾಗವಾಗಿ 2004ರಲ್ಲಿ ಸುಪ್ರೀಂ ಕೋರ್ಟಿಗೆ PIL ಸಲ್ಲಿಕೆಯಾಗಿತ್ತು (WP(C) 180/2004 ). ಜತೆಗೆ ದಲಿತ ಮುಸ್ಲಿಂ, ದಲಿತ ಕ್ರಿಶ್ಚಿಯನ್ ಎಂಬ ಪದಗಳನ್ನು ಹರಿಬಿಡಲಾಯಿತು. ಸರ್ವೋಚ್ಚ ನ್ಯಾಯಾಲಯ ಇದಕ್ಕೆ ಅಧ್ಯಯನದ ವರದಿ ಕೇಳಿತು. ನ್ಯಾ.ರಂಗನಾಥ ಮಿಶ್ರಾ ಆಯೋಗ ರಚನೆ ಯಾಯಿತು. ಆ ವರದಿಯು “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಾಪ್ತಿಯನ್ನು ಸಂಪೂರ್ಣವಾಗಿ ಧರ್ಮದ ಕೊಂಡಿಯಿಂದ ಬೇರ್ಪಡಿಸಬೇಕು, ಧರ್ಮವನ್ನು ತಟಸ್ಥವಾಗಿ ಮಾಡಬೇಕು.

ಈ ಮೂಲಕ ಕ್ರಿಶ್ಚಿಯನ್, ಮುಸ್ಲಿಂ, ಜೈನ, ಪಾರ್ಸಿಗಳನ್ನು ಇಲ್ಲಿ ಸೇರಿಸಬಹುದು" ಎಂದು ಹೇಳಿತು. ವಿಚಿತ್ರವೆಂದರೆ ಈ ರಿಲಿಜನ್ನುಗಳಲ್ಲಿ ಯಾವುದೇ ಜಾತಿಗಳಿಲ್ಲ, ತಾರತಮ್ಯವಿಲ್ಲ, ಅಸ್ಪೃಶ್ಯತೆ ಇಲ್ಲ, ಸಮಾನತೆ-ಸೋದರತೆ ಈ ರಿಲಿಜನ್ನುಗಳ ವಿಶೇಷ ಎಂಬುದೇ ಆಯಾ ಧಾರ್ಮಿಕ ಮುಖಂಡರ ‘ಸೆಲ್ಲಿಂಗ್ ಪಾಯಿಂಟ್’.

ಪರಿಶಿಷ್ಟ ಜಾತಿಗಳು ಯಾವುವು? ಎಂದು ತಿಳಿದುಕೊಳ್ಳಲು ಇತಿಹಾಸಕ್ಕೆ ಹೋಗಬೇಕು. ಈ ಪದ ಮೊದಲು ಕಾಣಿಸಿಕೊಂಡದ್ದು 1935ರಲ್ಲಿ. 1936ರಲ್ಲಿ ಅಂದಿನ ಸರಕಾರ, ಪರಿಶಿಷ್ಟ ಜಾತಿಗಳ ಆದೇಶವನ್ನು ಈ ಕಾಯ್ದೆಯ ಅಡಿಯಲ್ಲಿ ಹೊರಡಿಸಿತು. 1880ರಲ್ಲಿ ಬ್ರಿಟಿಷರ ಆಡಳಿತದ ಜನಗಣತಿಯ ಆಯುಕ್ತನಾಗಿದ್ದ ಸರ್ ಡೆಂಜಿಲ್ಲ್ ಇಬ್ಬೆಟ್ಸನ್ ತನ್ನ ಜನಗಣತಿಯಲ್ಲಿ, ಹಿಂದೂ ಧರ್ಮದಲ್ಲಿರುವ, ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿರುವ, ಸಮಾಜದ ಮುಖ್ಯ ವಾಹಿನಿ ಯಲ್ಲಿರದ, ಅತಿ ಹಿಂದುಳಿದ ವರ್ಗಗಳನ್ನು ಗುರುತಿಸಿ, ಅವುಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗಳಿಗೆ ಸೇರಿಸಬೇಕೆಂದು ಹೇಳಿದನು. ಈ ವರ್ಗಗಳ ಹಿಂದೂ ಹಿನ್ನೆಲೆಯನ್ನು ಗುರುತಿಸಿ, ಶತ ಪ್ರತಿಶತ ಹಿಂದುಗಳಾಗಿರುವವರನ್ನು ಮಾತ್ರ ಈ ಪರಿಧಿಗೆ ಆರಿಸಿಕೊಳ್ಳಲಾಯಿತು. ಹೀಗಾಗಿ ಮಾನದಂಡಗಳು 1880ರಷ್ಟು ಹಿಂದೆಯೇ ಸ್ಪಷ್ಟವಾಗಿವೆ. 1931ರಲ್ಲಿ ಅಂದಿನ ಜನಗಣತಿ ಆಯುಕ್ತ ಜಿ.ಎಸ್. ಹಟ್ಟನ್ ತನ್ನ ವರದಿಯಲ್ಲಿ ಈ ವರ್ಗಗಳನ್ನು ಗುರುತಿಸುವ ಮಾನದಂಡಗಳನ್ನು ವಿವರವಾಗಿ ದಾಖಲಿ ಸಿದ್ದಾನೆ.

ಅಸ್ಪೃಶ್ಯತೆಯು ಹಿಂದೂ ಧಾರ್ಮಿಕ ವ್ಯವಸ್ಥೆಯ ಕಳಂಕವಾಗಿದೆ, ಹೀಗಾಗಿ 1936 ಮತ್ತು 1950ರಲ್ಲಿ ಹಿಂದೂ ಧರ್ಮಧಾರಿತ ವ್ಯವಸ್ಥೆಯ ಆಧಾರದಿಂದ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ತಯಾರಿಸ ಲಾಯಿತು. 1950ರ ಕಾಯ್ದೆಗೆ 1956ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಮೂಲಕ ಸಿಖ್ಖರನ್ನೂ ಈ ವ್ಯಾಪ್ತಿಗೆ ಒಳಗೊಳಿಸಲಾಯಿತು. 1930 ಮತ್ತು 1950ರಲ್ಲಿ ಬಳಸಿದ ಮಾನದಂಡ ಗಳ ಅಡಿಯಲ್ಲಿಯೇ ಸಿಖ್ಖರಲ್ಲಿಯ ಜಾತಿಗಳನ್ನು ಗುರುತಿಸಿ ಸೇರಿಸಲಾಯಿತು. 1990ರಲ್ಲಿ 1950ರ ಪರಿಶಿಷ್ಟ ಜಾತಿಗಳ ಕಾಯ್ದೆಗೆ ಮತ್ತೆ ತಿದ್ದುಪಡಿ ಮಾಡಿ ಬೌದ್ಧರನ್ನು ಪರಿಶಿಷ್ಟ ಜಾತಿಗಳ ವ್ಯಾಪ್ತಿಗೆ ತರಲಾಯಿತು.

ಎಲ್ಲ ತಿದ್ದುಪಡಿಗಳಿಗೆ ಭಾರತದ ಸಂವಿಧಾನದ 25ನೆಯ ಪರಿಚ್ಛೇದ ವಿವರಣೆ-2 ಸಹಾಯಕವಾಗಿದೆ. ಭಾರತದ ಸಂವಿಧಾನದ 25ನೆಯ ಪರಿಚ್ಛೇದ ವಿವರಣೆ-2 ಈ ಕೆಳಗಿನಂತಿದೆ. ವಿವರಣೆ-2:- (2) ನೆಯ ಖಂಡದ (ಬಿ) ಉಪಖಂಡದಲ್ಲಿನ ಹಿಂದೂಗಳನ್ನು ಕುರಿತ ಉಖದಲ್ಲಿ ಸಿಖ್, ಜೈನ ಅಥವಾ ಬೌದ್ಧ ಧರ್ಮಾವಲಂಬಿಗಳು ಸೇರಿರುವರೆಂದು ಅರ್ಥೈಸತಕ್ಕದ್ದು ಮತ್ತು ಹಿಂದೂ ಧಾರ್ಮಿಕ ಸಂಸ್ಥೆ ಗಳನ್ನು ಕುರಿತ ಉಲ್ಲೇಖವನ್ನು ತದನುಸಾರವಾಗಿ ಅರ್ಥೈಸತಕ್ಕದ್ದು.

15(4), 16(೪), 46, 31 ಪರಿಚ್ಛೇದಗಳ ಅನ್ವಯ ಸಂವಿಧಾನಾತ್ಮಕವಾಗಿ ಪರಿಶಿಷ್ಟರಿಗೆ ವಿಶೇಷ ರಕ್ಷಣೆ ಮತ್ತು ಸೌಲಭ್ಯಗಳಿವೆ. ಹಿಂದೂ ಧರ್ಮದಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯದ ಆಚರಣೆಗಳ ಆಧಾರದ ಮೇಲೆ ಇವುಗಳನ್ನು ಗುರುತಿಸಲಾಗಿದೆ. ಈಗಾಗಲೇ 1936ರ ಆದೇಶದ ಹಿಂದೂ ಧರ್ಮದ ಅಡಿಯಲ್ಲಿಯ ಜಾತಿಗಳನ್ನು ನಿಗದಿಪಡಿಸಲಾಗಿದೆ. ಭೌಗೋಳಿಕ ವಿಶಿಷ್ಟತೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡಗಳಿಗೂ ರಕ್ಷಣೆ, ಆರಕ್ಷಣೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗಿದೆ.

ಇದೇ ಪರಿಚ್ಛೇದಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿ ಸಲು ಅವಕಾಶ ಮಾಡಿಕೊಟ್ಟಿವೆ. 1950ರ ಪರಿಶಿಷ್ಟ ಜಾತಿಗಳಿಗೆ ಸಂಬಂಧಪಟ್ಟ ಆದೇಶದ ಸಾಂವಿ ಧಾನಿಕ ಸಿಂಧುತ್ವವನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡಿದೆ.

1986ರಲ್ಲಿ ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು (ರಿಟ್ ಅರ್ಜಿ ಸಂಖ್ಯೆ 9995/83 ಸೂಸೈ ವರ್ಸಸ್ ಭಾರತ ಸರಕಾರ ಮತ್ತು ಇತರರು). ಇದರ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ತೀರ್ಪಿನ 7ನೆಯ ಪ್ಯಾರಾದಲ್ಲಿ “ಜಾತಿ ವ್ಯವಸ್ಥೆಯು ಹಿಂದೂ ಧರ್ಮದ ಸಾಮಾಜಿಕ ಸಂರಚನೆಯ ವೈಶಿಷ್ಟ್ಯ ಎಂಬುದನ್ನು ಈಗ ಅಲ್ಲಗಳೆಯಲು ಸಾಧ್ಯವಿಲ್ಲ.

ಹಿಂದೂ ಮತ್ತು ಸಿಖ್ ಸಮುದಾಯಗಳಲ್ಲಿ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳು, ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ದುರ್ಬಲತೆ ಮುಂತಾದ ಸಮಸ್ಯೆಗಳಿಂದ ಬಳಲಿವೆ. ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ಸ್ಥೂಲವಾಗಿ ಹೇಳಬಹುದು. ಪರಿಶಿಷ್ಟ ಜಾತಿಗಳು ಅಸ್ಪೃಶ್ಯತೆಯ ಆಚರಣೆಯಿಂದ ಸಮಾಜದ ಮುಖ್ಯವಾಹಿನಿಯಿಂದ ಹೊರಗಿಡಲ್ಪಟ್ಟದ್ದರಿಂದ ಹಿಂದುಳಿದ ವರ್ಗಗಳಾಗಿವೆ ಎಂಬುದನ್ನು ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಕಾಲದಿಂದಲೂ ಚರ್ಚಿಸಲಾಗುತ್ತಿದೆ ಮತ್ತು ಇದು ಸಮರ್ಥನೀಯವಾಗಿದೆ.

ಅಸ್ಪೃಶ್ಯತೆಯ ಅನಿಷ್ಟ ಪದ್ದತಿಯನ್ನು ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಯಾವ ಧರ್ಮಗಳಲ್ಲಿಯೂ ಗುರುತಿಸಲಾಗಿಲ್ಲ; ಅಷ್ಟೇ ಅಲ್ಲದೆ ಮತಾಂತರವಾದವರನ್ನು ಹಿಂದಿನ ಪೀಡಿತ ವರ್ಗದಂತೆ ಪರಿಗಣಿಸಲಾಗುವುದಿಲ್ಲ. ಹೊಸ ಧರ್ಮವು ಅವರಿಗೆ ಸಮಾನತೆ ನೀಡಿದರೆ, ಹಳೆಯ ಪೀಡನೆಯ ಲಾಭವೇಕೆ?" ಎಂದು ಹೇಳಿದೆ. Prafull Goradia vs Union of India (2011) ಪ್ರಕರಣ ದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ ಎಂಬ ತೀರ್ಪು ಬಂದಿದೆ.

800 ವರ್ಷಗಳ ಮುಸ್ಲಿಮರ ಆಕ್ರಮಣ ಮತ್ತು ದಬ್ಬಾಳಿಕೆಗಳಿದ್ದಾಗಲೂ, 200 ವರ್ಷಗಳ ನಿರಂಕುಶ ಬ್ರಿಟಿಷ್ ಆಡಳಿತವಿದ್ದಾಗಲೂ, ತಾರತಮ್ಯಗಳನ್ನು ಅನುಭವಿಸಿಯೂ ಯಾವ ಸಮುದಾಯಗಳು ಹಿಂದೂ ಧರ್ಮವನ್ನು ತೊರೆದಿಲ್ಲವೋ ಆ ಸಮುದಾಯಗಳಿಗೆ ನ್ಯಾಯಯುತವಾಗಿ ಸೌಲಭ್ಯಗಳು ಸಿಗಬೇಕು. ಇದು ಸಂವಿಧಾನಬದ್ಧವೂ ಹೌದು, ಡಾ.ಬಾಬಾಸಾಹೇಬರ ಆಶಯ ಕೂಡ.

1950ರ ಸುಪ್ರೀಂ ಕೋರ್ಟ್ ಆದೇಶವು ಹಿಂದುಗಳು ಯಾರು ಎಂದು ಸ್ಪಷ್ಟವಾಗಿ ವ್ಯಾಖ್ಯಾ ನಿಸಿದ್ದರೂ, ಈ ಬಗ್ಗೆ ಹಲವು ನ್ಯಾಯಾಲಯಗಳು ತೀರ್ಪುಗಳನ್ನು ನೀಡಿದಾಗಲೂ, ಅನ್ಯಮತೀ ಯರು ಸುಳ್ಳು ಪ್ರಮಾಣಪತ್ರಗಳನ್ನು ಪಡೆದು ಪ್ರಯೋಜನಗಳನ್ನು ಅನುಭವಿಸು ತ್ತಿರುವುದು ನಿಜವೇ ಆಗಿದೆ. ಈ ಅಕ್ರಮಗಳನ್ನು ಸಕ್ರಮವಾಗಿ ಮಾಡುವ ತಂತ್ರವೇ ‘ಮಾತೃಹೃದಯದ ಯಾಚನೆ’ ಅಂದುಕೊಳ್ಳಬಹುದೇ?

“ಜಾತಿ ಇಲ್ಲದ ಧರ್ಮಕ್ಕೆ ಬನ್ನಿ, ಸಮಾನತೆಯ ತೋಟಕ್ಕೆ ಬನ್ನಿ" ಎಂದು ಕೈಬೀಸಿ ಕರೆದ ಮಿಷನರಿ ಗಳು ಇಂದು ತಮ್ಮಲ್ಲಿ ಅದೇ ತಾರತಮ್ಯ ಎಸಗುತ್ತಿವೆ; ಇವರಿಗೆ ಬೇರೆ ಚರ್ಚುಗಳು ಅಥವಾ ಚರ್ಚು ಗಳಲ್ಲಿ ಬೇರೆ ಆವರಣಗಳು, ಪ್ರತ್ಯೇಕವಾದ ಸ್ಮಶಾನಗಳು ಇವೆ ಎಂದರೆ ನಂಬಬೇಕಾಗಿದೆ. ಮಸ್ಲಿಮ ರಲ್ಲಿಯೂ ಇದೇ ರೀತಿಯ ತಾರತಮ್ಯಗಳಿವೆ.

ಒಂದು ಕಡೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಾತಿಗಳನ್ನು ಕೊಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ಬರೆದುಕೊಟ್ಟು, ಇನ್ನೊಂದು ಕಡೆ ದಲಿತ ಕ್ರೈಸ್ತರಿಗೆ ಮತ್ತು ದಲಿತ ಮುಸಲ್ಮಾನರಿಗೆ ಪರಿಶಿಷ್ಟ ಜಾತಿಯ ಜನರಿಗಿರುವ ಸೌಲಭ್ಯವನ್ನು ಸರಕಾರದಿಂದ ಒದಗಿಸಿ ಎನ್ನುತ್ತಿzರೆ. ಇದು ಇಬ್ಬಗೆಯ ನೀತಿ ಅಲ್ಲವೇ?

(ಲೇಖಕರು ಸಾಮಾಜಿಕ ಹೋರಾಟಗಾರರು)