ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯ ದಾಳಿಗೆ 6 ಮಂದಿ ಬಲಿ; ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯೊಂದರ ದಾಳಿಯಿಂದ ಕಳೆದ 2 ವಾರಗಳಲ್ಲಿ 6 ಮಂದಿ ಬಲಿಯಾಗಿದ್ದಾರೆ. ಕಡಿತಕ್ಕೊಳಗಾದವರು ಆ್ಯಂಟಿ-ರೇಬಿಸ್‌ ಚಿಕಿತ್ಸೆ ಪಡೆದುಕೊಂಡಿದ್ದರೂ ಪ್ರಯೋಜವಾಗಿಲ್ಲ. ಲಿಂಬೈ ಗ್ರಾಮದ 3 ಕಡೆಗಳಲ್ಲಿ ಈಗಲೂ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯ ದಾಳಿಗೆ 6 ಮಂದಿ ಬಲಿ

ಗ್ರಾಮಸ್ಥರಿಂದ ಪ್ರತಿಭಟನೆ.

Profile Ramesh B Jun 3, 2025 4:19 PM

ಭೋಪಾಲ್‌: ಮಧ್ಯ ಪ್ರದೇಶದಲ್ಲಿ (Madhya Pradesh) ನಿಗೂಢ ಪ್ರಾಣಿಯೊಂದರ ದಾಳಿಯಿಂದ ಕಳೆದ 2 ವಾರಗಳಲ್ಲಿ 6 ಮಂದಿ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಭೀತಿ ಮನೆ ಮಾಡಿದೆ. ಬರ್ವಾನಿ ಜಿಲ್ಲೆಯಲ್ಲಿ ಈ ನಿಗೂಢ ಪ್ರಾಣಿಯ ಹಾವಳಿ ಕಂಡುಬಂದಿದ್ದು, ಸಂತ್ರಸ್ತರು ಆ್ಯಂಟಿ-ರೇಬಿಸ್‌ ಚಿಕಿತ್ಸೆ ಪಡೆದುಕೊಂಡಿದ್ದರೂ ಪ್ರಯೋಜವಾಗಿಲ್ಲ (Rabies Vaccine). ಮೇ 5ರ ರಾತ್ರಿ ಈ ನಿಗೂಢ ಪ್ರಾಣಿಯ ದಾಳಿ ಆರಂಭವಾಗಿದೆ. ಅಂದು ಮುಂಜಾನೆ 1ರಿಂದ 5 ಗಂಟೆಯ ನಡುವಿನಲ್ಲಿ ಲಿಂಬೈ ಗ್ರಾಮದಲ್ಲಿ ಈ ನಿಗೂಢ ಪ್ರಾಣಿ ಸುಮಾರು 17 ಮಂದಿಯ ಮೇಲೆ ದಾಳಿ ನಡೆಸಿದ್ದು, ಈಗಲೂ ಮುಂದುವರಿದಿದೆ. ಇದುವರೆಗೆ ಆ ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಿಲ್ಲ. ಲಿಂಬೈ ಗ್ರಾಮದ 3 ಕಡೆಗಳಲ್ಲಿ ಈಗಲೂ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಂಗಳ ಗುಡಿಸುತ್ತಿದ್ದಾಗ ತನ್ನ ಮೇಲೆ ಪ್ರಾಣಿ ಎರಗಿತ್ತು ಎಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.

ಈ ಪ್ರಾಣಿ ನೋಡಲು ನಾಯಿ ರೀತಿ ಕಂಡು ಬಂದಿದೆ ಎಂದು ಹಲವರು ತಿಳಿಸಿದ್ದಾರೆ. ಇನ್ನು ಕೆಲವರು ಇದು ಕತ್ತೆ ಕಿರುಬನ ಲಕ್ಷಣ ಹೊಂದಿದೆ ಎಂದಿದ್ದಾರೆ. ಯಾವುದೇ ಸದ್ದು ಗದ್ದಲವಿಲ್ಲದೆ ನೆರಳನಂತೆ ಬಂದು ದಾಳಿ ನಡೆಸಿದೆ ಎಂದು ಬದುಕುಳಿದವರಲ್ಲಿ ಒಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ನಡುರಸ್ತೆಯಲ್ಲಿ ಆನೆಯ ಮೇಲೆ ದಾಳಿ ಮಾಡಿದ ಕುದುರೆ; ಶಾಕಿಂಗ್‌ ವಿಡಿಯೊ ವೈರಲ್

ಎಲ್ಲ 17 ಸಂತ್ರಸ್ತರಿಗೆ ಬರ್ವಾನಿ ಮತ್ತು ಇಂದೋರ್‌ನಲ್ಲಿ ರೇಬೀಸ್ ನಿರೋಧಕ ಲಸಿಕೆಗಳನ್ನು ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2ರ ನಡುವೆ ಅವರಲ್ಲಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಅಸಾಧಾರಣ ಕಡಿತದ ಗಾಯವನ್ನು ಗಮನಿಸಿ ಇಂದೋರ್‌ನ ಎಂ.ವೈ.ಆಸ್ಪತ್ರೆಯ ವೈದ್ಯರು ಅಚ್ಚರಿಗೊಳಗಾಗಿದ್ದಾರೆ. ಇದುವರೆಗೆ ಇಂತಹ ಗಾಯ ಕಂಡುಬಂದಿಲ್ಲ ಎಂದಿದ್ದಾರೆ.

ವೈದ್ಯಕೀಯ ಪರೀಕ್ಷೆಯ ದೃಷ್ಟಿಯಿಂದ ಮೃತರ ಅಂಗಾಂಗಗಳು, ಮೆದುಳಿನ ಅಂಗಾಂಶ ಮತ್ತು ಗಂಟಲಿನ ಬಯಾಪ್ಸಿಗಳನ್ನು ವಿವರವಾದ ವಿಶ್ಲೇಷಣೆಗಾಗಿ ದೆಹಲಿಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. "ವರದಿ ಬಂದ ಬಳಿಕವಷ್ಟೇ ಸಾವಿಗೆ ಕಾರಣವಾದ ಅಂಶ ಯಾವುದು ಎನ್ನುವುದು ಗೊತ್ತಾಗಲಿದೆ. ರೇಬೀಸ್‌ನಿಂದ ಇವರು ಮೃತಪಟ್ಟಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆʼʼ ಎಂದು ಇಂದೋರ್‌ನ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅರಣ್ಯ ಇಲಾಖೆ ಈ ನಿಗೂಢ ಪ್ರಾಣಿಗಾಗಿ ಹುಡುಕಾಟ ನಡೆಸುತ್ತಿದ್ದರೂ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. "ನಾಡಿನಲ್ಲಿ ಯಾವುದೇ ಪ್ರಾಣಿಯ ಹೆಜ್ಜೆ ಗುರುತು ಮೂಡಿಲ್ಲ. ಗ್ರಾಮದಿಂದ ಕೇವಲ 4.5 ಕಿ.ಮೀ. ದೂರದಲ್ಲಿ ಕಾಡಿದೆ. ಅಲ್ಲಿಂದ ಯಾವುದಾದರೂ ಜೀವಿ ದಾಳಿ ಮಾಡಿರಬಹುದು. ಸ್ಥಳೀಯರು ನೀಡಿದ ಸುಳಿವುಗಳ ಮೇಲೆ ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅದು ನಾಯಿಯಂತೆ ಕಾಣುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಅದಕ್ಕಿಂತ ವಿಭಿನ್ನವಾಗಿರುವಂತೆ ಭಾಸವಾಗುತ್ತಿದೆʼʼ ಎಂದು ಡಿಎಎಫ್‌ಒ ಆಶಿಶ್ ಬನ್ಸೋದ್ ತಿಳಿಸಿದ್ದಾರೆ.

ಅದಾಗ್ಯೂ ಶೀ‍ಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಅರಣ್ಯ ರಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಡ್ರೋನ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನರಭಕ್ಷಕ ತೋಳಗಳು ಕಾಣಿಸಿಕೊಂಡು ಭೀತಿಯ ವಾತಾವಣ ನಿರ್ಮಾಣವಾಗಿತ್ತು. ಇದರ ದಾಳಿಗೆ ಹಲವರು ಬಲಿಯಾಗಿದ್ದರು. ಈ ಕಹಿ ಘಟನೆ ಮರೆಯಾಗುವ ಮುನ್ನ ಇದೀಗ ಮತ್ತೊಂದು ಜೀವಿಯ ಹಾವಳಿ ಎದುರಾಗಿದೆ.