ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ನ್ಯಾಯದಾನದ ವಿಚಾರದಲ್ಲಿ ಈಗಲೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ನಂಬಿಕೆ ಇಟ್ಟಿ ದ್ದೇವೆ. ಅಂತಿಮವಾಗಿ ನ್ಯಾಯಕ್ಕೆ ಜಯ, ಸತ್ಯಕ್ಕೆ ಗೆಲುವು ಎಂಬ ನಂಬಿಕೆಯನ್ನು ಇಂದಿಗೂ ಕಾಪಿಟ್ಟು ಕೊಳ್ಳಲು ಕಾರಣ ನ್ಯಾಯಾಂಗದ ಮೇಲಿನ ಭರವಸೆ. ಆದರೆ ನ್ಯಾಯಾಂಗವೂ ಕೂಡ ಇತರ ಅಂಗಗಳಂತೆ ಕಲುಷಿತವಾದರೆ ಏನು ಮಾಡಬೇಕು ?

ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ಲೋಕಮತ

ಸೀಜರ್‌ನ ಹೆಂಡತಿ ಸಂಶಯಾತೀತಳಾಗಿರಬೇಕೆನ್ನುವುದು ಹಳೆಯ ನುಡಿಗಟ್ಟು. ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು, ಅದರಲ್ಲೂ ಉನ್ನತ ಸ್ಥಾನದಲ್ಲಿರುವವರು ತಾವು ಮಾತ್ರವಲ್ಲದೆ ತಮ್ಮ ಕುಟುಂಬದವರೂ ಸಹ ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ನಡೆದುಕೊಳ್ಳಬೇಕೆನ್ನುವುದು ಈ ಮಾತಿನ ತಾತ್ಪರ್ಯ. ರಾಮಾಯಣದಲ್ಲಿ ಸೀತೆಯನ್ನು ಕಾಡಿಗೆ ಕಳುಹಿಸುವ ಮೂಲಕ ಶ್ರೀರಾಮ ನೇ ಆಳುವವರ ನಡವಳಿಕೆ ಹೇಗಿರಬೇಕೆಂದು ಸಾರಿದ ಅತ್ಯುನ್ನತ ಆದರ್ಶ ನಮ್ಮ ಮುಂದಿದೆ. ಆದರೆ ಸದ್ಯದ ನಮ್ಮ ಆಡಳಿತಗಾರರಿಗೆ ಈ ನಿಯಮಗಳನ್ನು ಅನ್ವಯಿಸಿದರೆ ಎಲ್ಲರನ್ನೂ ಮನೆಗೆ ಕಳುಹಿಸ ಬೇಕಾಗುತ್ತದೆ. ಈ ವಿಷಯ ಒತ್ತಟ್ಟಿಗಿರಲಿ.

ನ್ಯಾಯದಾನದ ವಿಚಾರದಲ್ಲಿ ಈಗಲೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಅಂತಿಮವಾಗಿ ನ್ಯಾಯಕ್ಕೆ ಜಯ, ಸತ್ಯಕ್ಕೆ ಗೆಲುವು ಎಂಬ ನಂಬಿಕೆಯನ್ನು ಇಂದಿಗೂ ಕಾಪಿಟ್ಟುಕೊಳ್ಳಲು ಕಾರಣ ನ್ಯಾಯಾಂಗದ ಮೇಲಿನ ಭರವಸೆ. ಆದರೆ ನ್ಯಾಯಾಂಗವೂ ಕೂಡ ಇತರ ಅಂಗಗಳಂತೆ ಕಲುಷಿತವಾದರೆ ಏನು ಮಾಡಬೇಕು ?

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣವು ನ್ಯಾಯಾಂಗದ ಮೇಲಿನ ನಮ್ಮ ನಂಬಿಕೆಗೆ ಮತ್ತೊಮ್ಮೆ ಏಟು ನೀಡಿದೆ. ಈ ಪ್ರಕರಣ ದೇಶದ ನ್ಯಾಯಾಂಗ ವಲಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದರೂ ಸಾರ್ವಜನಿಕವಾಗಿ ಇನ್ನು ಹೆಚ್ಚಿನ ಚರ್ಚೆಗೊಳಪಟ್ಟಿಲ್ಲ.

ನ್ಯಾಯಾಂಗದ ನಡವಳಿಕೆ ಮೇಲೆ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಹಿಂಜರಿಕೆಯೂ ಇದಕ್ಕೆ ಪ್ರಮುಖ ಕಾರಣ. ಆದರೆ ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ನ್ಯಾಯವನ್ನು ಎತ್ತಿ ಹಿಡಿಯುವ ಅವಕಾಶ ಇರುವುದು ನ್ಯಾಯಾಂಗಕ್ಕೆ. ಈ ಕಾರಣದಿಂದಲೇ ಜೂಲಿಯಸ್ ಸೀಜರ್ ತನ್ನ ಎರಡನೇ ಹೆಂಡತಿ ಪಾಂಪೆಯಾಳಲ್ಲಿ ಕಾಣ ಬಯಸಿದ್ದ ನೈತಿಕ ಪರಿಶುದ್ಧತೆ, ಪಾರದರ್ಶಕತೆ, ಪ್ರಾಮಾಣಿಕತೆ, ವಿಶ್ವಾಸ ಮತ್ತು ನಂಬಿಕೆಯನ್ನು ನ್ಯಾಯಾಂಗದಲ್ಲೂ ಬಯಸುತ್ತೇವೆ.

ಇದನ್ನೂ ಓದಿ: Lokesh Kaayarga Column: ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ಅದು ಇಲ್ಲ ಎಂದಾದರೆ ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ. ‘ಆಗಿದ್ದೆಲ್ಲವೂ ಒಳ್ಳೆಯದ್ದಕ್ಕೆ’ ಎಂಬ ಗೀತಾವಾಕ್ಯದಲ್ಲಿ ನಂಬಿಕೆ ಇಡುವುದಾದರೆ ಕಳೆದ ಮಾರ್ಚ್ 14ರ ರಾತ್ರಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಗೆ ಬೆಂಕಿ ಬಿದ್ದ ಘಟನೆ ಯನ್ನು ಇದೇ ಸಾಲಿಗೆ ಸೇರಿಸಬಹುದು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಕೋಣೆಯ ಪೂರ್ತಿ ಭಾಗಶ: ಸುಟ್ಟುಹೋದ ನೋಟುಗಳ ರಾಶಿಯನ್ನು ಕಂಡು ಬೆಚ್ಚಿ ಬಿದ್ದಿದ್ದರು.

ಅಧಿಕಾರಿಗಳ ಪ್ರಕಾರ ಅಲ್ಲಿ ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ನೋಟುಗಳನ್ನು ಪೇರಿಸಿಡ ಲಾಗಿತ್ತು. ನ್ಯಾಯಮೂರ್ತಿ ಈ ದುಡ್ಡಿನ ಒಡೆತನವನ್ನು ಒಪ್ಪಿಕೊಂಡು ಅದರ ಮೂಲವನ್ನು ತಿಳಿಸಿದ್ದರೆ ಪ್ರಕರಣ ಅಲ್ಲಿಗೇ ಮುಗಿದು ಹೋಗು ತ್ತಿತ್ತು. ಆದರೆ ನ್ಯಾಯಮೂರ್ತಿ ವರ್ಮಾ ಇದರ ಮಾಲೀಕ ನಾನಲ್ಲ ಎನ್ನುವಲ್ಲಿಂದ ನೂರಾರು ಪ್ರಶ್ನೆಗಳು ತಟ್ಟನೇ ಎದ್ದು ನಿಂತಿದ್ದವು.

ಈ ದುಡ್ಡು ತಮಗೆ ಇಲ್ಲವೇ ತಮ್ಮ ಕುಟುಂಬ ಸದಸ್ಯರಿಗೆ ಸೇರಿದ್ದಲ್ಲ. ಇದು ತಮ್ಮನ್ನು ಸಿಲುಕಿಸಲು ನಡೆಸಿದ ಪಿತೂರಿ’ ಎಂದು ನ್ಯಾಯಮೂರ್ತಿ ವರ್ಮಾ ಸಮಜಾಯಿಸಿ ನೀಡಿದ ಬಳಿಕ ಸರಣಿ ಘಟನಾ ವಳಿಗಳು ತೆರೆದುಕೊಂಡವು. ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರು ಪ್ರಾಥಮಿಕ ವಿಚಾರಣೆಗೆ ಆದೇಶ ನೀಡಿದರು.

ವಿಚಾರಣೆ ಮಧ್ಯೆಯೇ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಅಲ್ಲಿನ ಬಾರ್ ಕೌನ್ಸಿಲ್ ವಿರೋಧದ ನಡುವೆ ವರ್ಗಾಯಿಸಲಾಯಿತು. ಈ ಮಧ್ಯೆ ಅವರ ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಲಾಯಿತು. ನ್ಯಾ.ವರ್ಮಾ ಅವರನ್ನು ಎಲ್ಲ ರೀತಿಯ ನ್ಯಾಯಾಂಗ ಕೆಲಸಗಳಿಂದ ಹೊರಗಿಡಲಾಯಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ರಚಿಸಿ ಈ ಪ್ರಕರಣದ ತನಿಖೆಗೆ ಆದೇಶ ಹೊರಡಿಸಿದರು. ಈಗ ಆಂತರಿಕ ಸಮಿತಿ ತನ್ನ ವರದಿ ನೀಡಿದೆ. ಆದರೆ ಸುಪ್ರೀಂಕೋರ್ಟ್ ಈ ವರದಿಯನ್ನು ಬಹಿರಂಗಪಡಿಸಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿ ಯನ್ನೂ ತಿರಸ್ಕರಿಸಿದೆ. ಸಮಿತಿ ಮುಂದೆ ನ್ಯಾಯಮೂರ್ತಿ ವರ್ಮಾ ಅವರು ಹಣದ ಮೂಲದ ಬಗ್ಗೆ ಸಮರ್ಪಕ ವಿವರಣೆಯನ್ನು ನೀಡಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡುವಂತೆ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೀಡಿದ ಸಲಹೆ ಯನ್ನೂ ಅವರು ನಿರಾಕರಿಸಿದ್ದಾರೆ ಎಂಬ ವರದಿಗಳಿವೆ. ಪ್ರಕರಣ ಈಗ ಸುಪ್ರೀಂಕೋರ್ಟ್ ವ್ಯಾಪ್ತಿ ಯನ್ನೂ ದಾಟಿ ಸಂಸತ್ತಿನ ಅವಗಾಹನೆಗೆ ಬಂದಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಆಂತರಿಕ ತನಿಖಾ ಸಮಿತಿಯ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

ರಾಷ್ಟ್ರಪತಿಯವರು ಈ ಶಿಫಾರಸನ್ನು ರಾಜ್ಯಸಭೆಯ ಅಧ್ಯಕ್ಷರು ಮತ್ತು ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿದ್ದಾರೆ. ಇದೀಗ ನ್ಯಾಯಮೂರ್ತಿ ವರ್ಮಾ ವಿರುದ್ಧ ಇಂಪೀಚ್‌ಮೆಂಟ್ ಅಥವಾ ಮಹಾ ಭಿಯೋಗ ಪ್ರಕ್ರಿಯೆ ನಡೆಸಬೇಕೇ ಬೇಡವೇ ಎಂದು ಸಂಸತ್ತು ನಿರ್ಧರಿಸಬೇಕಾಗಿದೆ. ಮುಂಬರುವ ಮುಂಗಾರು ಅಧಿವೇಶನದಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧ ಮಹಾಭಿಯೋಗ ನಿರ್ಣಯ ವನ್ನು ಮಂಡಿಸುವ ಸಾಧ್ಯತೆಯಿದೆ.

ದೀರ್ಘ ದಂಡ ಪ್ರಕ್ರಿಯೆ: ಭಾರತದ ಇತಿಹಾಸದಲ್ಲಿ ಇದುವರೆಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಯಾವುದೇ ನ್ಯಾಯಮೂರ್ತಿಗಳನ್ನು ಮಹಾಭಿಯೋಗದ ಮೂಲಕ ಪದಚ್ಯುತಿ ಗೊಳಿಸಿಲ್ಲ. ನ್ಯಾಯಮೂರ್ತಿ ವಿ.ರಾಮಸ್ವಾಮಿ, ಸೌಮಿತ್ರ ಸೇನ್ ಮತ್ತು ಇತರರ ವಿರುದ್ಧ ಇಂಪೀಚ್‌ ಮೆಂಟ್ ಪ್ರಕ್ರಿಯೆ ಪ್ರಾರಂಭವಾಗಿದ್ದರೂ, ಪದಚ್ಯುತಿಯಾಗುವ ಮುನ್ನವೇ ಅವರು ರಾಜೀನಾಮೆ ನೀಡಿದ್ದರು. ಒಂದು ವೇಳೆ ನ್ಯಾ.ಯಶವಂತ್ ವರ್ಮಾ ಮಹಾಭಿಯೋಗದ ಮೂಲಕ ಪದಚ್ಯುತಿ ಗೊಂಡರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಆದರೆ ಈ ಹಿಂದಿನ ಪ್ರಕರಣಗಳನ್ನು ಗಮನಿಸಿದರೆ ಈ ಸಾಧ್ಯತೆ ತೀರಾ ಕಡಿಮೆ. ಭಾರತದಲ್ಲಿ ಅಧಿಕಾರಿಗಳನ್ನು, ಚುನಾಯಿತ ಪ್ರತಿನಿಧಿಗಳನ್ನು ಸುಲಭವಾಗಿ ಸುಲಭವಾಗಿ ವಜಾಗೊಳಿಸ ಬಹುದು. ಆದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ವಜಾ ಗೊಳಿಸುವ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾದುದು.

ಸಂವಿಧಾನದ ರಕ್ಷಕನಾಗಿ ಕೆಲಸ ಮಾಡುವ ಅಂಗಕ್ಕೆ ಸ್ಥಾನ ಭ್ರಷ್ಟತೆಯ ಎಳ್ಳಷ್ಟೂ ಭಯ ಇರಬಾರ ದೆಂಬ ಕಾರಣಕ್ಕೆ ಈ ಪ್ರಕ್ರಿಯೆಯನ್ನು ಜಟಿಲಗೊಳಿಸಲಾಗಿದೆ. ಮಹಾಭಿಯೋಗ ಪ್ರಕ್ರಿಯೆ ಯನ್ನು ಪ್ರಾರಂಭಿಸಲು ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಬೇಕು. ಸ್ಪೀಕರ್ ಅಥವಾ ಅಧ್ಯಕ್ಷರು ನಿರ್ಣಯವನ್ನು ಪರಿಶೀಲಿಸಿ ಆರೋಪಗಳು ಗಂಭೀರವಾಗಿದ್ದರೆ, ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಪ್ರಸಿದ್ಧ ಕಾನೂನು ತಜ್ಞರನ್ನೊಳ ಗೊಂಡ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸುತ್ತಾರೆ.

ಆರೋಪಿತ ನ್ಯಾಯಮೂರ್ತಿಯು ಸಮಿತಿ ಮುಂದೆ ಹಾಜರಾಗಿ ತನ್ನನ್ನು ಸಮರ್ಥನೆ ಮಾಡಿ ಕೊಳ್ಳಬಹುದು. ಸಮಿತಿಯು ನ್ಯಾಯಮೂರ್ತಿಯನ್ನು ದೋಷಿ ಇಲ್ಲವೇ ನಿರ್ದೋಷಿ ಎಂದು ಘೋಷಿಸುತ್ತದೆ. ಸಮಿತಿಯು ನ್ಯಾಯಮೂರ್ತಿಯನ್ನು ದೋಷಿಯೆಂದು ಪರಿಗಣಿಸಿದರಷ್ಟೇ ಮಹಾಭಿಯೋಗ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ.

ಎರಡೂ ಸದನ ಗಳಲ್ಲಿ ಕನಿಷ್ಠ ಮೂರನೇ ಎರಡರಷ್ಟು ಬಹುಮತದಿಂದ ಈ ನಿರ್ಣಯ ಅಂಗೀಕಾರ ವಾಗಬೇಕು. ಆ ಬಳಿಕವಷ್ಟೇ ಈ ನಿರ್ಣಯವನ್ನು ರಾಷ್ಟ್ರಪತಿಯವರಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಯವರು ನ್ಯಾಯಮೂರ್ತಿಯನ್ನು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ. ನ್ಯಾಯಮೂರ್ತಿ ವರ್ಮಾ ಅವರ ಮೇಲಿನ ಆರೋಪಗಳ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ನೇಮಿಸಿದ ಆಂತರಿಕ ಸಮಿತಿ ತನಿಖೆ ನಡೆಸಿ ವರದಿ ನೀಡಿರುವುದರಿಂದ ಮತ್ತೊಮ್ಮೆ ಹೊಸ ಸಮಿತಿ ರಚಿಸಬೇಕೇ ಬೇಡವೇ ಎಂದು ಸಂಸತ್ತು ತೀರ್ಮಾನಿಸಬೇಕಾಗಿದೆ.

ದೇಶದ ಇತಿಹಾಸದಲ್ಲಿ ಇದುವರೆಗೆ ಯಾವುದೇ ನ್ಯಾಯಮೂರ್ತಿಯನ್ನು ಮಹಾಭಿಯೋಗದ ಮೂಲಕ ಪದಚ್ಯುತಿಗೊಳಿಸಿಲ್ಲ ಎಂದರೆ ಯಾವುದೇ ಎಲ್ಲ ನ್ಯಾಯಮೂರ್ತಿಗಳೂ ಅಕಳಂಕಿತ ರಾಗಿದ್ದರೆಂದು ಅರ್ಥವಲ್ಲ. ವಜಾ ಪ್ರಕ್ರಿಯೆ ಅತ್ಯಂತ ಕಠಿಣವಾಗಿರುವ ಕಾರಣಕ್ಕೆ ಮತ್ತು ಕೊನೆಯ ವರೆಗೂ ರಾಜೀನಾಮೆ ಬಿಸಾಕುವ ಅವಕಾಶ ಮುಕ್ತವಾಗಿರುವ ಕಾರಣಕ್ಕೆ ಇದುವರೆಗೂ ಯಾವುದೇ ನ್ಯಾಯಮೂರ್ತಿ ವಜಾ ಹಂತದ ತನಕ ಸಾಗಿ ಬಂದಿಲ್ಲ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸಿದ್ದ ನ್ಯಾಯ ಮೂರ್ತಿ ವಿ. ರಾಮಸ್ವಾಮಿ ವಿರುದ್ಧ 1993ರಲ್ಲಿ ಲೋಕಸಭೆಯಲ್ಲಿ ಮಹಾಭಿಯೋಗ ನಿರ್ಣಯದ ಮೇಲೆ ಮತದಾನ ನಡೆದಿತ್ತು.

ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮತದಾನದಿಂದ ದೂರ ಉಳಿದ ಕಾರಣ ನಿರ್ಣಯಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ. ನ್ಯಾಯಮೂರ್ತಿ ರಾಮಸ್ವಾಮಿ ನಿವೃತ್ತಿವರೆಗೂ ತಮ್ಮ ಹುದ್ದೆಯಲ್ಲಿ ಮುಂದುವರಿದರು. ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೇನ್ ಅವರ ಮೇಲೂ ಹಣದುರುಪಯೋಗದ ಆರೋಪ ಕೇಳಿ ಬಂದಿತ್ತು. 2011ರಲ್ಲಿ ರಾಜ್ಯಸಭೆ ಸೌಮಿತ್ರ ಸೇನ್ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಅಂಗೀಕರಿಸಿತ್ತು.

ಲೋಕಸಭೆಯಲ್ಲೂ ಚರ್ಚೆ ಆರಂಭವಾಗುವ ಹೊತ್ತಿಗೆ ನ್ಯಾಯಮೂರ್ತಿ ಸೇನ್ ಅವರು ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದರು. ಇದೇ ರೀತಿ ಭೂ ಕಬಳಿಕೆ, ಭ್ರಷ್ಟಾಚಾರ ಮತ್ತು ಆಡಳಿ ತಾತ್ಮಕ ದುರ್ನಡತೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊತ್ತಿದ್ದ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರು ಮಹಾಭಿಯೋಗ ಪ್ರಕ್ರಿಯೆ ನಡುವೆಯೇ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹೊಣೆಗಾರಿಕೆ ಮತ್ತು ಪಾರದರ್ಶಕತೆ ಪ್ರಶ್ನೆ: ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನಡೆ ಸಂಶಯಾಸ್ಪದವಾಗಿದೆ ಎಂದು ಹೇಳುವಂತಿಲ್ಲ. ಆದರೆ ನ್ಯಾಯಾಂಗದ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತ ಚರ್ಚೆಯನ್ನು ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮುಖ್ಯವಾಗಿ ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ಇಂತಹ ಗಂಭೀರ ಪ್ರಕರಣಗಳಲ್ಲಿ ತನಿಖಾ ಸಮಿತಿಯ ವಿವರಗಳನ್ನು ಸುಪ್ರೀಂಕೋರ್ಟ್ ಸಾರ್ವಜನಿಕರ ಮುಂದೆ ಬಿಚ್ಚಿಡಬೇಕಿತ್ತು.

ಗೌಪ್ಯತೆಯನ್ನು ಮುಂದಿಟ್ಟು ಮುಚ್ಚಿಡಬಾರದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ನ್ಯಾಯ ಮೂರ್ತಿ ವರ್ಮಾ ಅವರ ಪ್ರತಿಕ್ರಿಯೆಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿದ್ದರೆ ನಿಖಾ ವರದಿಯನ್ನು ಬಹಿರಂಗಪಡಿಸಲು ಗೌಪ್ಯತೆ ಅಡ್ಡಿಯಾಗಿದ್ದೇಕೆ ಎಂಬ ಪ್ರಶ್ನೆ ನ್ಯಾಯಾಂಗದ ವಲಯದಲ್ಲಿಯೇ ಕೇಳಿ ಬಂದಿದೆ. ನ್ಯಾಯಮೂರ್ತಿ ವರ್ಮಾ ವಿರುದ್ಧ ಎಫ್‌ ಐಆರ್ ದಾಖಲಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಾಂಗದೊಳಗಿನ ತನಿಖೆಯು ಅಪರಾಧ ಪ್ರಕ್ರಿಯೆಗಿಂತ ಪ್ರತ್ಯೇಕವಾಗಿ ನಡೆಯುತ್ತದೆ ಎನ್ನುವುದು ಸರ್ವೋಚ್ಚ ನ್ಯಾಯಾಲಯದ ಅಭಿಮತ. ಆದರೆ ನ್ಯಾಯಾಂದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ನೇರ ಆರೋಪಗಳಿದ್ದಾಗ ಇತರ ಸಾರ್ವಜನಿಕ ಸೇವಕರಂತೆ ಅಪರಾಧದ ನೇರ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕೆಂಬ ಆಗ್ರಹ ಕೇಳಿ ಬಂದಿದೆ.

ನಗದು ಪತ್ತೆಯಾದ ತಕ್ಷಣವೇ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅವರ ಮೂಲ ಹೈಕೋರ್ಟ್ ಅಲಹಾಬಾದ್‌ಗೆ ವರ್ಗಾಯಿಸಿದ ವಿಚಾರದಲ್ಲೂ ಸುಪ್ರೀಂಕೋರ್ಟ್ ವಿವರಣೆ ನ್ಯಾಯಾಂಗ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಅಲ್ಲಿಗೆ ವರ್ಗಾಯಿಸಿದ ಬಳಿಕ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯಗಳನ್ನು ನೀಡದಿರಲು ಆದೇಶಿಸಲಾಗಿತ್ತು. ಮುಖ್ಯವಾಗಿ ಆಂತರಿಕ ವರದಿಯ ಗೌಪ್ಯತೆ ನ್ಯಾಯಾಂಗದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ನಿಜ.

ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ನಿರ್ವಹಿಸುವುದು ಅತ್ಯಗತ್ಯವಾಗಿತ್ತು. ಸಾರ್ವಜನಿಕರು ನ್ಯಾಯಾಂಗ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಮೇಲೆ ವಿಶ್ವಾಸ ಇಡಲು ಸಾಧ್ಯವಾಗದಿದ್ದರೆ, ನ್ಯಾಯಾಂಗದ ಮೇಲಿನ ನಂಬಿಕೆಗೂ ಚ್ಯುತಿ ಉಂಟಾಗಲಿದೆ.

ಭ್ರಷ್ಟಾಚಾರದ ಕಳಂಕ: ನ್ಯಾಯಾಧೀಶರ ಮೇಲಿನ ಹಣಕಾಸುಅಕ್ರಮಗಳ ಆರೋಪಗಳು ಸಾರ್ವಜನಿಕರ ನಂಬಿಕೆಗೆ ನೇರವಾಗಿ ಧಕ್ಕೆ ತರುತ್ತವೆ. ಇತರ ಸರಕಾರಿ ನೌಕರರಂತೆ ನ್ಯಾಯಾ ಧೀಶರನ್ನೂ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ತನಿಖೆಗೊಳಪಡಿಸಬೇಕೆಂಬ ಮಾತು ಈ ಪ್ರಕರಣದಿಂದಾಗಿ ಮತ್ತಷ್ಟು ಬಲವಾಗಿ ಕೇಳಿಬಂದಿವೆ. ನ್ಯಾಯಾಂಗವು ತನ್ನದೇ ಸದಸ್ಯರ ವಿರುದ್ಧದ ಆರೋಪಗಳನ್ನು ತಾನೇ ನಿರ್ವಹಿಸಿದರೆ ಪಕ್ಷಪಾತ ಅಥವಾ ರಕ್ಷಣೆಯ ಸಾಧ್ಯತೆಯ ಬಗ್ಗೆ ಸಾರ್ವ ಜನಿಕರಲ್ಲಿ ಸಂದೇಹ ಮೂಡುವುದು ಸ್ವಾಭಾವಿಕ.

ಬಹುಶ: ಸಾರ್ವಜನಿಕರ ಈ ಸಂದೇಹವನ್ನು ಪರಿಹರಿಸುವ ಉದ್ದೇಶದಿಂದಲೇ ವರ್ಮಾ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಆಸ್ತಿ ವಿವರಗಳನ್ನು ಘೋಷಿಸಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಸುಪ್ರೀಂ ಕೋರ್ಟ್‌ನ 33 ಹಾಲಿ ನ್ಯಾಯಮೂರ್ತಿಗಳಲ್ಲಿ 21 ನ್ಯಾಯಮೂರ್ತಿಗಳು ಮೇ ಮೊದಲ ವಾರ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಅದರ ವಿವರಗಳನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಹಿಂದೆ ನ್ಯಾಯಾ ಧೀಶರು ತಮ್ಮ ಆಸ್ತಿ ಮತ್ತು ಸಾಲಗಳನ್ನು ಸಾರ್ವಜನಿಕವಾಗಿ ಘೋಷಿಸುವುದು ಕಡ್ಡಾಯ ವಾಗಿರಲಿಲ್ಲ. ಒಟ್ಟಾರೆಯಾಗಿ, ನ್ಯಾಯಮೂರ್ತಿ ವರ್ಮಾ ಪ್ರಕರಣವು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತಲೇ, ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಸಾರಿ ಹೇಳಿದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರ ನೇಮಕದಿಂದ ಹಿಡಿದು ನಿವೃತ್ತಿ ನಂತರದಲ್ಲಿ ಸ್ವೀಕರಿಸುವ ಹುದ್ದೆಗಳ ತನಕ ವಿವೇಚನಾಯುಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಮುಖ್ಯವಾಗಿ ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಯಲ್ಲಿ ಕೇಳಿ ಬರುತ್ತಿರುವ ಆರೋಪಗಳನ್ನು ದೂರ ಮಾಡಬೇಕಾಗಿದೆ.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಽಕಾರ ಸ್ವೀಕರಿಸಿದ ಬಿ.ಆರ್. ಗವಾಯಿ ಅವರು ತಾವು ನಿವೃತ್ತಿ ಬಳಿಕ ಯಾವುದೇ ಹುದ್ದೆ ಅಲಂಕರಿಸುವುದಿಲ್ಲ ಎಂದು ಹೇಳಿರುವುದು ನಿಜಕ್ಕೂ ಮಾದರಿ ನಡೆ. ಸೀಜರನ ಹೆಂಡತಿ ಸಂಶಯಾತೀತಳಾಗಿರಬೇಕೆಂಬ ಮಾತು ನಿಜವಾಗಬೇಕಾದರೆ ನ್ಯಾಯಾಂಗದ ಅತ್ಯುನ್ನತ ಮಟ್ಟದಲ್ಲಿ ಈ ರೀತಿಯ ತ್ಯಾಗ ಮತ್ತು ದಿಟ್ಟ ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ.