Tumkur News: ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಅಗ್ರಸ್ಥಾನ ಸಿಗಲಿದೆ: ಡಾ. ಜಿ.ಪರಮೇಶ್ವರ್
Tumkur News: ಆಧುನಿಕವಾಗಿ ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಯಾವುದೇ ದೇಶಕ್ಕೆ ಹೋದರೂ ಭಾರತದ ತಾಂತ್ರಿಕ ಪದವೀಧರರು ಸಿಗುತ್ತಾರೆ. ಸಂಶೋಧನಾ ಕೇಂದ್ರವಾದ ನಾಸಾದಲ್ಲಿ ಶೇ.20ರಷ್ಟು ವಿಜ್ಞಾನಿಗಳು ಭಾರತದವರಿದ್ದಾರೆ. ಹೀಗಾಗಿಯೇ ಪ್ರಪಂಚದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.


ತುಮಕೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬಂದೇ ಬರುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ನಗರದ (Tumkur News) ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘವು ನೂತನವಾಗಿ ನಿರ್ಮಿಸಿರುವ ಕಲ್ಪವೃಕ್ಷ ಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿ, ʼʼಆಧುನಿಕವಾಗಿ ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಯಾವುದೇ ದೇಶಕ್ಕೆ ಹೋದರೂ ಭಾರತದ ತಾಂತ್ರಿಕ ಪದವೀಧರರು ಸಿಗುತ್ತಾರೆ. ಸಂಶೋಧನಾ ಕೇಂದ್ರವಾದ ನಾಸಾದಲ್ಲಿ ಶೇ. 20ರಷ್ಟು ವಿಜ್ಞಾನಿಗಳು ಭಾರತದವರಿದ್ದಾರೆ. ಹೀಗಾಗಿಯೇ ಪ್ರಪಂಚದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುತ್ತಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಪಾಲಿಟೆಕ್ನಿಕ್ ಬಹುಮುಖ್ಯವಾದ ಅಂಗ. ಕರ್ನಾಟಕವು ತಾಂತ್ರಿಕ ಶಿಕ್ಷಣ ನೀಡುವುದರಲ್ಲಿ ಮುಂದೆ ಇದೆʼʼ ಎಂದರು.
ʼʼಸ್ವಾತಂತ್ರ್ಯದ ನಂತರ ನಮ್ಮ ಹಿರಿಯರು ದೂರದೃಷ್ಟಿ ಇಟ್ಟುಕೊಂಡು, ಬಲಿಷ್ಠ ಭಾರತ ಕಟ್ಟಲು ಹಲವು ಯೋಜನೆಗಳನ್ನು ನೀಡಿದ್ದಾರೆ. ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಶಿಕ್ಷಣ ಮತ್ತು ಕೈಗಾರಿಕೆಗೆ ಆದ್ಯತೆ ನೀಡಿದರು. ಯುವಕರನ್ನು ಕೈಗಾರಿಕೆಗೆ ಸೇರಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಿದರು. ದೇಶದಲ್ಲಿ ಇಂದಿಗೂ ಸಾವಿರಾರು ಪಾಲಿಟೆಕ್ನಿಕ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಜವಾಹರ್ ಲಾಲ್ ನೆಹರೂ ಉದ್ಘಾಟಿಸಿರುವ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಾವಿರಾರು ಯುವಕರಿಗೆ ಭವಿಷ್ಯ ಕಲ್ಪಿಸಿದೆʼʼ ಎಂದು ಹೇಳಿದರು.
ʼʼರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಹೊಂದಲು ಅವಕಾಶವಿದೆ. ಆದರೆ 60 ಸಾವಿರ ವಿದ್ಯಾರ್ಥಿಗಳು ಮಾತ್ರ ದಾಖಲಾಗುತ್ತಿದ್ದಾರೆ. ಡಿಪ್ಲೊಮಾ ತಕ್ಷಣ ಕೆಲಸ ಸಿಗುವ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಬೇಕು. ಸೈಬರ್ ಸೆಕ್ಯೂರಿಟಿ, ಡೇಟಾ ಮ್ಯಾನೇಜ್ಮೆಂಟ್, ಎಐ ತಂತ್ರಜ್ಞಾನಕ್ಕೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕುʼʼ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ಮಾತನಾಡಿ, ʼʼಹಳೆಯ ವಿದ್ಯಾರ್ಥಿಗಳಿಂದ ಈ ರೀತಿಯ ಶ್ರೇಷ್ಠ ಕೊಡುಗೆ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ದಿಕ್ಕು ತೋರಿಸುತ್ತದೆ. ಈ ಸಭಾಂಗಣ ಹಲವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿದೆʼʼ ಎಂದು ಹೇಳಿದರು. ʼʼತಾಂತ್ರಿಕ ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ. ಹಲವಾರು ಸಮಸ್ಯೆಗಳಿಗೆ ಪರಿಹಾರ ಕೊಡುವ ಮಾರ್ಗವೂ ಆಗಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕಾಗಿ ಉಪಯೋಗಿಸಬೇಕುʼʼ ಎಂದು ತಿಳಿಸಿದರು.
ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ʼʼವಿದ್ಯೆ ಎಂಬುದು ಬದುಕಿಗೆ ಬೆಳಕು ತೋರುವ ಶಕ್ತಿ. ಇಂತಹ ಸಭಾಂಗಣಗಳು ವಿದ್ಯಾರ್ಥಿಗಳಲ್ಲಿನ ಕೌಶಲ್ಯ, ಶಿಸ್ತು ಹಾಗೂ ಮೌಲ್ಯಾಧಾರಿತ ಶಿಕ್ಷಣದ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ತೋರಿದ ಬದ್ಧತೆ ನಿಜಕ್ಕೂ ಪ್ರೇರಣಾದಾಯಕ. ಶ್ರಮ, ನಿಷ್ಠೆ ಮತ್ತು ಗುರುಭಕ್ತಿ ಈ ಮೂರರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದುʼʼ ಎಂದು ಹೇಳಿದರು.
ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ʼʼಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾದುದು. ಇಂತಹ ಕೊಡುಗೆಗಳಿಂದ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಹಲವು ಐಟಿಐ ಕಾಲೇಜುಗಳು ಶೆಡ್ಗಳಲ್ಲಿ ತರಗತಿಗಳನ್ನು ನಡೆಸುತ್ತಿವೆʼʼ ಎಂದ ಅವರು ಹೊಸ ಕಟ್ಟಡಗಳನ್ನು ನಿರ್ಮಿಸಲು ಸಚಿವರಿಗೆ ಮನವಿ ಮಾಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮೇಜರ್ ಅನಿಲ್ ಕುಮಾರ್, ʼʼಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು. ಅವರ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಪ್ರಪಂಚದ ಮೂಲೆ-ಮೂಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆʼʼ ಎಂದು ತಿಳಿಸಿದರು.
ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಪ್ರಕಾಶ್ ಸಿ.ಎಸ್. ಅಧ್ಯಕ್ಷ ಗೋಪಾಲಕೃಷ್ಣ ಎನ್., ಕಾರ್ಯದರ್ಶಿ ರಮೇಶ್ ಸಿ.ಎಸ್., ಡಿಸಾ ಇಂಡಿಯಾ ಲಿಮಿಟೆಡ್ ಅಸೋಷಿಯೇಟ್ ವೈಸ್ ಪ್ರೆಸಿಡೆಂಟ್ ಸ್ಟೇಪಿಸ್ ಉದಯ್ ಕುಮಾರ್ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | NGEL Recruitment 2025: ಎಂಜಿನಿಯರಿಂಗ್ ಪದವೀಧರರಿಗೆ ಗುಡ್ನ್ಯೂಸ್; NGELನಲ್ಲಿದೆ 182 ಹುದ್ದೆ
ಇದೇ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ನಿಂದ ಹೊರತಂದಿರುವ ʼನೈದಿಲೆʼ ವಾರ್ಷಿಕ ಸಂಚಿಕೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪಾಲಿಟೆಕ್ನಿಕ್ ಕಾಲೇಜಿನ 2024-25ನೇ ವಾರ್ಷಿಕ ವರದಿಯನ್ನು ತೇಜಸ್ ವಾಚಿಸಿದರು. ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.